Advertisement

ಸಮೂಹ ಕಲಾ ಸಂಘಟನೆಗೆ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿ

12:30 AM Jan 18, 2019 | |

ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿ (ರಿ.), ಅಂಬಲಪಾಡಿ ಸಂಸ್ಥೆಯ ಆಶ್ರಯದಾತರಾಗಿದ್ದ ನಿ.ಬೀ ಅಣ್ಣಾಜಿ ಬಲ್ಲಾಳರ ನೆನಪಿನಲ್ಲಿ ಪ್ರತಿ ವರ್ಷ ನೀಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಗೆ ಈ ವರ್ಷ ಉಡುಪಿಯ ಸಮೂಹ ಸಂಘಟನೆ ಭಾಜನವಾಗಿದೆ. ಧರ್ಮದರ್ಶಿ ಡಾ| ನಿ.ಬೀ ವಿಜಯ ಬಲ್ಲಾಳರು ತಮ್ಮ ತೀರ್ಥರೂಪರ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪಿಸಿದ್ದಾರೆ. 

Advertisement

ಪ್ರೊ| ಉದ್ಯಾವರ ಮಾಧವ ಆಚಾರ್ಯರು ಸ್ಥಾಪಿಸಿದ ಸಮೂಹ ಕಲಾ ಸಂಘಟನೆಗೆ ವಿಶಿಷ್ಟ ಸ್ಥಾನವಿದೆ. 1980ರಲ್ಲಿ ಆರಂಭಗೊಂಡ ಈ ಸಂಸ್ಥೆ ನಿರಂತರ ಕ್ರಿಯಾಶೀಲವಾಗಿ ಹೊಸ ಹೊಸ ರಂಗಪ್ರಯೋಗಗಳ ಮೂಲಕ ಕಲಾರಸಿಕರನ್ನು ತಟ್ಟುತ್ತಾ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದೆ. 

ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯರ ಸೃಷ್ಟಿಶೀಲ ಮನಸ್ಸು ಹೊಸ ಹೊಸ ಸಾಧ್ಯತೆಗಳನ್ನು ಯೋಚಿಸುತ್ತಾ ರಂಗಪಠ್ಯವನ್ನು ಸಿದ್ಧಪಡಿಸಿ ನಿರ್ದೇಶಿಸುತ್ತಾ ಬಂದಿದೆ. ಯಕ್ಷಗಾನ (ತೆಂಕು- ಬಡಗು) ಹಾಡು, ಕುಣಿತಗಳನ್ನು ನಾಟಕಕ್ಕೆ ಜೋಡಿಸಿ ಹೊಸ ಆಯಾಮ ಕಲ್ಪಿಸುತ್ತಾರೆ. ಅಂತೆಯೇ ಭರತನಾಟ್ಯವನ್ನು ಪರಿಣಾಮಕಾರಿಯಾಗಿ ಅಳವಡಿಸಿದ್ದಾರೆ. ಶುದ್ಧ ನಾಟಕವನ್ನು ನೇರವಾಗಿ ಬಳಸುವಂತೆ ಮಹಾ ಕಾವ್ಯಗಳನ್ನು, ಖಂಡ ಕಾವ್ಯಗಳನ್ನು, ಸಮೂಹದ ಹಾಡಿಗೆ ದುಡಿಸಿಕೊಳ್ಳುತ್ತಾರೆ. ಬರೇ ಹಾಡಿರುವಾಗ ಉತ್ಛ ಕಂಠದಲ್ಲಿ ಅದಕ್ಕೆ ಕೊಂಡಿಯಾಗಿ ಬರುವ ಅವರ ಮಾತುಗಳು ಬೇರೆಡೆ ಕಾಣ ಸಿಗದ ವಿಶಿಷ್ಟ ಅನುಭವ ನೀಡುತ್ತವೆ. ಯಕ್ಷಗಾನದ ಹಾಡುಗಳಿಗೆ ಅಂಬಲಪಾಡಿ ಕೆ.ಜೆ ಸಹೋದರರು, ಭಾವಗೀತೆಗೆ ಹಿರಿಯ ಗಮಕಿ ಎಚ್‌. ಚಂದ್ರಶೇಖರ ಕೆದ್ಲಾಯರು ಕಂಠವಾಗಿದ್ದಾರೆ. ಈವರೆಗೆ 65 ರಂಗ ಪ್ರಯೋಗಗಳು ಪ್ರಸ್ತುತಗೊಂಡಿರುವುದು ಸಮೂಹ ತಂಡ ಸದಾ ಹೊಸದರತ್ತ ತುಡಿಯುವುದರ ದ್ಯೋತಕವಾಗಿದೆ. ಬಿ.ಎಂ. ಶ್ರೀ, ಕುವೆಂಪು, ಪು.ತಿ.ನ., ಕಡೆಂಗೊಡ್ಲು ಶಂಕರ ಭಟ್‌, ಗೋವಿಂದ ಪೈ, ಕೆ. ಶಿವರಾಮ ಕಾರಂತ, ಅಮೃತ ಸೋಮೇಶ್ವರ, ಬನ್ನಂಜೆ ಗೋವಿಂದಾಚಾರ್ಯ ಮೊದಲಾದ ಶ್ರೇಷ್ಠ ಕವಿಗಳ- ಸಾಹಿತಿಗಳ ಕೃತಿಗಳು ರಂಗ ಪಠ್ಯವಾಗಿ ಮೈದಳೆದು ಕವಿ ಕಲ್ಪನೆಯನ್ನು ದರ್ಶಿಸಿವೆ. ಹರಿಹರ, ಹರಿದಾಸರು, ಸೋದೆ ವಾದಿರಾಜರ ರಗಳೆ, ಕೀರ್ತನೆಗಳನ್ನು ರಂಗ ಕೃತಿಯಾಗಿಸಿದ್ದಾರೆ. ಕಥನ ಕವನಗಳು, ಯಕ್ಷಗಾನ ಪ್ರಸಂಗ ಸಾಹಿತ್ಯ, ಜನಪದ ಸಾಹಿತ್ಯಗಳೂ ಸಮೂಹದಲ್ಲಿ ಬಳಸಲ್ಪಟ್ಟಿವೆ. ತಾವೇ ಸ್ವತಃ ಏಳು ಕೃತಿಗಳನ್ನು ಇದಕ್ಕಾಗಿ ರಚಿಸಿದ್ದಾರೆ. ಏಕವ್ಯಕ್ತಿ ಯಕ್ಷಗಾನ ನೃತ್ಯ ರೂಪಕ, ಏಕವ್ಯಕ್ತಿ ಭರತನಾಟ್ಯ ನೃತ್ಯರೂಪಕ, ಏಕವ್ಯಕ್ತಿ ನಾಟಕ ಒಟ್ಟು ಹದಿನಾರು ಪ್ರಯೋಗಗಳು ಪ್ರದರ್ಶನಗೊಂಡಿವೆ. 

ಗೀತ ರೂಪಕ, ಹಾಡು, ನೃತ್ಯ ಪ್ರಧಾನವಾದುದು. ಸಮೂಹವನ್ನು (ತಂಡವನ್ನು) ಅವರು ಬಳಸಿಕೊಳ್ಳುವ ಪರಿ ಅನ್ಯಾದೃಶ. ರಂಗ ತುಂಬಿ ಬರುವ ತಂಡ, ತಂಡದವರಿಗೆ ಅವರು ಬಳಸುವ ಸಾಂಕೇತಿಕ ಉಡುಗೆಗಳು, ಪ್ರವೇಶ ನಿರ್ಗಮನ ಇವೆಲ್ಲ ಸಮೂಹ ಎಂಬ ಹೆಸರಿಗೆ ಅನ್ವರ್ಥಕವಾಗುವ ಧನಾತ್ಮಕ ಅಂಶಗಳು. ನಾಡಿನಾದ್ಯಂತ, ವಿದೇಶದಲ್ಲೂ ಸಮೂಹ ಪ್ರದರ್ಶನ ನೀಡಿದೆ. ಉದ್ಯಾವರರ ಮಗಳು ಭ್ರಮರಿ ಶಿವಪ್ರಕಾಶ್‌ ಪ್ರತಿಭಾವಂತ ಕಲಾವಿದೆ. ಏಕವ್ಯಕ್ತಿ ಪ್ರದರ್ಶನಗಳಲ್ಲಿ ಅವರ ಕೊಡುಗೆ ಅಸಾಧಾರಣ. ತಂದೆಯ ನಿರ್ದೇಶನದ ಹೊಣೆಯನ್ನು ಹಗುರಗೊಳಿಸಿ ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. 

ಮೂವರಿಗೆ ವೈಯಕ್ತಿಕ ಪ್ರಶಸ್ತಿ
ಇದೇ ವೇಳೆ ಸಂಸ್ಥೆ ಕೊಡಮಾಡುವ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಗೆ  ನಲ್ಲೂರು ಜನಾರ್ದನ ಆಚಾರ್ಯ,ಕಪ್ಪೆಟ್ಟು ಬಾಬು ಶೆಟ್ಟಿಗಾರ ಪ್ರಶಸ್ತಿಗೆ  ಕಪ್ಪೆಟ್ಟು ವ್ಯಾಸ ಭಟ್‌,ಕುತ್ಪಾಡಿ ಆನಂದ ಗಾಣಿಗ ಪ್ರಶಸ್ತಿಗೆ ಬೆಲೂ¤ರು ರಮೇಶ ಆಯ್ಕೆಯಾಗಿದ್ದಾರೆ. ಜರ್ನಾದನ ಆಚಾರ್ಯರು ಐದು ದಶಕಗಳಿಗೂ ಮೀರಿದ ವೃತ್ತಿ ಬದುಕಿನಲ್ಲಿ ಶಿವರಾಜಪುರ, ಶೃಂಗೇರಿ, ಕಿಗ್ಗ, ಹಾಲಾಡಿ, ಬಗ್ವಾಡಿ, ಗೋಳಿಗರಡಿ, ಮುಲ್ಕಿ, ಮಡಾಮಕ್ಕಿ, ಮೇಗರವಳ್ಳಿ, ಮಂದಾರ್ತಿ, ಗುತ್ಯಮ್ಮ, ಪೆರ್ಡೂರು, ಕಮಲಶಿಲೆ, ಮಾರಣಕಟ್ಟೆ ಮೇಳಗಳಲ್ಲಿ ಕಲಾಸೇವೆಗೈದಿದ್ದಾರೆ. 

Advertisement

ಕೆ.ವ್ಯಾಸರಾಯ ಭಟ್‌ ಅಂಬಲಪಾಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾಮಂಡಳಿಯ ಸದಸ್ಯರಾಗಿ ಕಲಾಸೇವೆ ಮಾಡುತ್ತಿದ್ದಾರೆ. ಮಂಡಳಿಯ ವೇಷಭೂಷಣಗಳ ನಿರ್ವಹಣೆಯನ್ನು ಮಾಡಿಕೊಂಡು ಬಂದಿದ್ದಾರೆ. ವೇಷಭೂಷಣಗಳ ದುರಸ್ತಿ ಕಾರ್ಯದಲ್ಲಿಯೂ ತೊಡಗಿಸಿಕೊಂಡವರು. ಧ್ವನಿವರ್ಧಕ ಮತ್ತು ಬೆಳಕಿನ ವ್ಯವಸ್ಥೆ ಕಲ್ಪಿಸುವಲ್ಲಿ ನಿಷ್ಣಾತರಾಗಿದ್ದಾರೆ. 

ಬೆಲ್ತೂರು ರಮೇಶ ಐದುವರೆ ದಶಕಗಳ ಕಲಾವ್ಯವಸಾಯದಲ್ಲಿ ಹಾಲಾಡಿ, ಸಾಲಿಗ್ರಾಮ, ಕಳವಾಡಿ, ಬಗ್ವಾಡಿ, ಮಡಾಮಕ್ಕಿ, ಮಂದಾರ್ತಿ, ಅಮೃತೇಶ್ವರೀ, ಅಜ್ರಿ-ಶನೀಶ್ವರ ಮೇಳಗಳಲ್ಲಿ ಕಲಾಸೇವೆ ಗೈದಿದ್ದಾರೆ. ಪ್ರಸಕ್ತ ಮಾರಣಕಟ್ಟೆ ಮೇಳದಲ್ಲಿ ತಿರುಗಾಟ ನಡೆಸುತ್ತಿದ್ದಾರೆ. ಮಾರ್ತಾ ಆಸ್ಟಿನ್‌ರೊಂದಿಗೆ ವಿದೇಶಗಳಲ್ಲೂ ಯಕ್ಷರಸಿಕರ ಮನ ರಂಜಿಸಿದ್ದಾರೆ. ಪುಂಡುವೇಷದ ಮೂಲಕ ಗಮನ ಸೆಳೆದವರು. ಪೌರಾಣಿಕ ಪಾತ್ರಗಳನ್ನು ಮನೋಜ್ಞವಾಗಿ ನಿರ್ವಹಿಸಿದ್ದಾರೆ. ಬಭುವಾಹನ, ಅಭಿಮನ್ಯು, ಪುಷ್ಕಳ, ದೇವವ್ರತ, ಧ್ರುವ, ಶ್ರೀಕೃಷ್ಣ ಮೊದಲಾದ ಪಾತ್ರಗಳು ವಿಶೇಷ ಪ್ರಸಿದ್ಧಿ ತಂದಿವೆ. 

ಪ್ರೊ| ನಾರಾಯಣ ಎಂ. ಹೆಗಡೆ 

Advertisement

Udayavani is now on Telegram. Click here to join our channel and stay updated with the latest news.

Next