Advertisement

ಬಕ್ರಾ ಆದವರಿಗೆಲ್ಲಾ ಐಸ್‌ಕ್ರೀಂ!

06:00 AM Jul 10, 2018 | |

ಪಿಯುಸಿ ಹುಡುಗಿಯೊಬ್ಬಳು ಅದನ್ನು ನೋಡಿದಳು. ಕೂಡಲೇ ಸುತ್ತಮುತ್ತ ನೋಡಿ, ತಟಕ್ಕನೆ ಅದನ್ನು ಎತ್ತಿ ಬ್ಯಾಗ್‌ನಲ್ಲಿ ಹಾಕಿಕೊಂಡಳು. ಅದನ್ನು ನೋಡಿ ನಾವು ಜೋರಾಗಿ ನಕ್ಕು, ಪುನಃ ಅವಳಿಂದ ಅದನ್ನು ವಾಪಸ್‌ ಪಡೆದುಕೊಂಡೆವು. 

Advertisement

ಶಾಲೆ-ಕಾಲೇಜುಗಳಲ್ಲಿ ಪಾಠದ ಜೊತೆಗೆ ಮೋಜು, ಮಸ್ತಿ, ಆಟ ಎಲ್ಲವೂ ಸರ್ವೇ ಸಾಮಾನ್ಯ. ಆದರೆ ನಾವು ಅಂತಿಮ ಬಿ.ಎ ಓದುತ್ತಿರುವಾಗ ಆಡಿದ ಒಂದು ಆಟ ಮಾತ್ರ ಎಂದೆಂದಿಗೂ ನೆನಪಿರುತ್ತದೆ. ಆಟದ ಹೆಸರು ಐನೂರರ ಆಟ. ಅಂದರೆ, ಐನೂರು ರೂಪಾಯಿಯನ್ನು ನಮ್ಮ ಕ್ಲಾಸ್‌ರೂಮ್‌ ಮುಂಭಾಗದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಹಾಕಿ, ಅದನ್ನು ನೋಡಿದಾಗ ಬೇರೆಯವರು ಯಾವ ರೀತಿ ವರ್ತಿಸುತ್ತಾರೆ ಅಂತ ಮರೆಯಲ್ಲಿ ನಿಂತು ಮಜಾ ತೆಗೆದುಕೊಳ್ಳೋಣ ಅಂತ ಮಾತಾಡಿಕೊಂಡಿದ್ದೆವು.

ಅವತ್ತು ಬೇಗ ಕಾಲೇಜಿಗೆ ಹೋದೆವು. ನಮ್ಮದು ಅಮರ ಭಾರತಿ ವಿದ್ಯಾಕೇಂದ್ರ. ಇದರ ಅಡಿಯಲ್ಲಿ ಎಲ್‌ಕೆಜಿಯಿಂದ ಹಿಡಿದು ಬಿಎಡ್‌ವರೆಗಿನ ತರಗತಿಗಳು ನಡೆಯುತ್ತವೆ. ಶಿಕ್ಷಕರಲ್ಲಿ ಹೆಚ್ಚಿನವರು ಅತಿಥಿ ಶಿಕ್ಷಕರಾಗಿದ್ದರಿಂದ ಕ್ಲಾಸ್‌ಗಳು ಒಂದು ದಿನ ಬೇಗ ಶುರುವಾದರೆ, ಮತ್ತೂಂದು ದಿನ ಸ್ವಲ್ಪ ತಡವಾಗಿ ಶುರುವಾಗುತ್ತಿದ್ದವು. ಐನೂರರ ಆಟದ ದಿನದಂದು ನಮ್ಮ ಕ್ಲಾಸ್‌ಗಳು ಸ್ವಲ್ಪ ಲೇಟಾಗಿಯೇ ಪ್ರಾರಂಭವಾಗಿದ್ದರಿಂದ ತುಂಬಾ ಮಜವಾದ ಪ್ರಸಂಗಗಳು ನಡೆದವು. 

ಅಲ್ಲಿನ ಎಲ್ಲಾ ತರಗತಿಗಳಿಗೂ ಒಮ್ಮೆಲೇ ಪ್ರಾರ್ಥನೆ ಮಾಡಿಸುತ್ತಾರೆ. ಅದನ್ನು ಮುಗಿಸಿಕೊಂಡು ಕ್ಲಾಸ್‌ರೂಮ್‌ ಬಳಿ ಬಂದೆವು. ನಾವಿದ್ದ ಜಾಗದಲ್ಲಿ 8ನೇ ತರಗತಿ ಮತ್ತು ಪಿಯುಸಿ ಕ್ಲಾಸ್‌ಗಳು ಇದ್ದವು. ಇವರೇ ಸರಿಯಾದ ಬಕ್ರಾಗಳು ಎಂದು ಭಾವಿಸಿ ಐನೂರರ ನೋಟನ್ನು ಅವರು ಓಡಾಡುವ ಕಾರಿಡಾರ್‌ ಬಳಿ ಇಟ್ಟು, ಯಾರಿಗೂ ಗೊತ್ತಾಗದಂತೆ ಅಲ್ಲಿಯೇ ಪಕ್ಕದಲ್ಲಿ ಬೇರೆ ಕಡೆ ನಿಂತೆವು. ಒಂದು ನಿಮಿಷವಾಗುತ್ತಿದ್ದಂತೆ ಎಂಟನೇ ತರಗತಿಯ ಹುಡುಗನೊಬ್ಬ ಬಂದು ಅದನ್ನು “ತೆಗೆದುಕೊಳ್ಳಲು’ ಮಾಡಿದ ಪರಿಯನ್ನು ನೋಡಿ ನಗು ಉಕ್ಕಿಬಂತು. ಅವನಿಗದು ಗೊತ್ತಾಯಿತು. ನಮ್ಮತ್ತ ನೋಡಿ, ಅದನ್ನು ಅಲ್ಲಿಯೇ ಬಿಟ್ಟು ಹೋದ.

ನಂತರ ಪಿಯುಸಿ ಹುಡುಗಿಯೊಬ್ಬಳು ಅದನ್ನು ನೋಡಿದಳು. ಕೂಡಲೇ ಸುತ್ತಮುತ್ತ ನೋಡಿ, ತಟಕ್ಕನೆ ಅದನ್ನು ಎತ್ತಿ ಬ್ಯಾಗ್‌ನಲ್ಲಿ ಹಾಕಿಕೊಂಡಳು. ಅದನ್ನು ನೋಡಿ ನಾವು ಜೋರಾಗಿ ನಕ್ಕು, ಪುನಃ ಅವಳಿಂದ ಅದನ್ನು ವಾಪಸ್‌ ಪಡೆದುಕೊಂಡೆವು. ಹೀಗೆ ಸುಮಾರು ಎರಡು ತಾಸಲ್ಲಿ ಇಪ್ಪತ್ತು ಹುಡುಗ-ಹುಡುಗಿಯರು ಅದನ್ನು ತೆಗದುಕೊಳ್ಳಲು ಹಲವು ಬಗೆಯಲ್ಲಿ ಪ್ರಯತ್ನಿಸಿ ಸಿಕ್ಕಿಬಿದ್ದರು. ಅವರ ಪ್ರಯತ್ನಗಳೆಲ್ಲ ನಮ್ಮನ್ನು ನಕ್ಕು ನಗಿಸಿದವು. 

Advertisement

ನಮ್ಮ ಕ್ಲಾಸ್‌ನ ಸರ್‌ ಒಬ್ಬರು ಕಾರಿಡಾರ್‌ನಲ್ಲಿ ನಡೆದು ಬಂದಿದ್ದರಿಂದ ಐನೂರರ ನೋಟನ್ನು ತೆಗೆದುಕೊಳ್ಳದೆ ಕ್ಲಾಸ್‌ರೂಮ್‌ ಒಳಗೆ ಓಡಿದೆವು. ಅವರು ಅದನ್ನು ತೆಗೆದುಕೊಂಡು ಕ್ಲಾಸ್‌ನೊಳಗೆ ಬಂದರು. ನಮಗೆ ಆಗಲೂ ನಗು ತಡೆಯಲಾಗಲಿಲ್ಲ. ಮೇಷ್ಟ್ರು ಬಕ್ರಾ ಆಗಿಬಿಟ್ರಲ್ಲ ಎಂದುಕೊಂಡು ಬಾಯಿ ಮುಚ್ಚಿಕೊಂಡು ಒಳಗೊಳಗೇ ನಗುತ್ತಿದ್ದೆವು. ಅವರಿಗೆ ಸಿಟ್ಟು ಬಂದು ಬೈಯಲು ಆರಂಭಿಸಿದರು. ಇದಕ್ಕೆ ಕಾರಣ, ಪಿಯುಸಿಯ ಹುಡುಗಿಯರು ನಾವು ಮಾಡುತ್ತಿರುವ ಚೇಷ್ಟೆಯನ್ನು ಅವರಿಗೆ ಹೇಳಿ ಬಂದಿದ್ದರು. ಅವರು ನಮಗೆ ಜೋರಾಗಿ ಬೈಯಲು ಶುರು ಮಾಡಿದರು. 

ಆಗ ನಾವು, “ಸರ್‌, ತಮಾಷೆಗೆ ಮಾಡಿದ್ದು. ಈ ವಿಚಾರ ನಿಮ್ಮ ತನಕ ಬರುತ್ತದೆ ಅಂತ ಅಂದುಕೊಂಡಿರಲಿಲ್ಲ. ನಾವು ಮಾಡಿದ ತಪ್ಪಿಗೆ ನೀವು ಏನೇ ಶಿಕ್ಷೆ ಕೊಟ್ಟರೂ ತೆಗೆದುಕೊಳ್ಳುತ್ತೇವೆ’ ಎಂದೆವು. ಅವರು ಕೊಟ್ಟ ಶಿಕ್ಷೆ ಏನು ಗೊತ್ತಾ? ಬೆಳಿಗ್ಗೆಯಿಂದ ಐನೂರರ ಆಟಕ್ಕೆ ಬಕ್ರಾ ಆದವರಿಗೆಲ್ಲಾ ಐಸ್‌ಕ್ರಿಮ್‌ ಕೊಡಿಸಬೇಕೆಂದು ಹೇಳಿಬಿಟ್ಟರು. ಮನಸ್ಸಿಲ್ಲದಿದ್ದರೂ ಅದನ್ನು ನಾವು ಒಪ್ಪಿಕೊಳ್ಳಲೇಬೇಕಿತ್ತು. ಇಪ್ಪತ್ತೂಂದು ಐಸ್‌ಕ್ರೀಮ್‌ ತಂದು, ನಮ್ಮ ಸರ್‌ಗೆ ಒಂದು ಹಾಗೂ ಬಕ್ರಾ ಆದ ಪಿಯುಸಿ ಓದುತ್ತಿದ್ದ 13 ವಿದ್ಯಾರ್ಥಿಗಳಿಗೆ ಮತ್ತು ಎಂಟನೇ ತರಗತಿಯ ಏಳು ವಿದ್ಯಾರ್ಥಿಗಳಿಗೆ ಕೊಟ್ಟವು. ಅದನ್ನವರು ಖುಷಿಯಿಂದ ತೆಗೆದುಕೊಂಡು, ನಾಳೆ ಸಾವಿರದ ನೋಟನ್ನು ತಂದು ಇಡಿ. ನಂತರ ಮಧ್ಯಾಹ್ನ ನಮಗೆಲ್ಲಾ ಹೋಳಿಗೆ ಊಟ ಕೊಡಿಸಿ ಎಂದು ಅಪಹಾಸ್ಯ ಮಾಡುತ್ತಾ ಮುಂದೆಹೋದರು.

 ತಮಾಷೆ ಮಾಡಲು ಹೋಗಿ ನನ್ನ ಸ್ನೇಹಿತನ ಐನೂರರ ನೋಟಿಗೆ ಕತ್ತರಿ ಬಿದ್ದಿದ್ದರಿಂದ,  ಮರುದಿನ ನಾನು ಮತ್ತು ತಂಡದ ಇತರರು ಅವನಿಗೆ ಕೊಡಬೇಕಾದ ಹಣ ಕೊಟ್ಟೆವು. ಮತ್ತೆ ಯಾವತ್ತಿಗೂ ಅಂತ ದುಬಾರಿ ಆಟ ಆಡಲು ಹೋಗಲಿಲ್ಲ. 

ಮಧುಕುಮಾರ್‌ ಬಿಳಿಚೋಡು

Advertisement

Udayavani is now on Telegram. Click here to join our channel and stay updated with the latest news.

Next