Advertisement

WTC Final;ಹೇಗಿದ್ದೀತು ಓವಲ್‌ ಟ್ರ್ಯಾಕ್‌? ಟೆಸ್ಟ್‌  ಫೈನಲ್‌ ಗೂ ಮುನ್ನ ಒಂದು ಕುತೂಹಲ

11:35 PM Jun 05, 2023 | Team Udayavani |

ಲಂಡನ್‌: ಇನ್ನೊಂದೇ ದಿನ ಬಾಕಿ. ಐತಿಹಾಸಿಕವೂ, ಲಂಡನ್‌ನ ಅತ್ಯಂತ ಪುರಾತನವೂ ಆದ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ಭಾರತ-ಆಸ್ಟ್ರೇಲಿಯ ತಂಡಗಳು ದ್ವಿತೀಯ ಐಸಿಸಿ ವಿಶ್ವಕಪ್‌ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಮುಖಾಮುಖೀ ಆಗಲಿವೆ.

Advertisement

ಎಲ್ಲರ ಕುತೂಹಲವೂ ಒಂದೇ, ಓವಲ್‌ ಪಿಚ್‌ ಹೇಗೆ ವರ್ತಿಸೀತು ಎಂದು. ಏಕೆಂದರೆ 140 ವರ್ಷಗಳ ಇತಿ ಹಾಸವುಳ್ಳ ದಕ್ಷಿಣ ಲಂಡನ್‌ನ ಈ ಓವಲ್‌ ಅಂಗಳದಲ್ಲಿ ಜೂನ್‌ ತಿಂಗಳಲ್ಲಿ ಟೆಸ್ಟ್‌ ಪಂದ್ಯವೊಂದು ನಡೆಯಿತ್ತಿರುವುದು ಇದೇ ಮೊದಲು. ಸಾಮಾನ್ಯವಾಗಿ ಇಲ್ಲಿ ಪ್ರವಾಸಿ ತಂಡಗಳಿಗೆ ಸರಣಿಯ ಕೊನೆಯ ಟೆಸ್ಟ್‌ ಪಂದ್ಯವನ್ನು ಇರಿಸುವುದು ವಾಡಿಕೆ. ಇದು ಆಗಸ್ಟ್‌ ಕೊನೆಯಲ್ಲಿ ಅಥವಾ ಸೆಪ್ಟಂಬರ್‌ ಮೊದಲ ವಾರದಲ್ಲಿ ನಡೆಯುತ್ತದೆ. ಆಗ ಇಲ್ಲಿನ ಪಿಚ್‌ ಸಂಪೂರ್ಣ ಒಣಗಿರುತ್ತದೆ. ನಿಧಾನ ಗತಿಯ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ.

ಟೀಮ್‌ ಇಂಡಿಯಾ ಆಟಗಾರರು ಇಲ್ಲಿಗೆ ಕಾಲಿಟ್ಟಾಗ ಸ್ವಾಗತಿಸಿದ್ದು ಹಸಿರು ಹುಲ್ಲಿನ ತಾಜಾ ಪಿಚ್‌. ಇದು ಹೇಗೆ ವರ್ತಿಸಬಹುದೆಂಬುದು ಸದ್ಯಕ್ಕೆ ಸಸ್ಪೆನ್ಸ್‌. ಈಗಿನ ಲೆಕ್ಕಾಚಾರದ ಪ್ರಕಾರ ಇದೊಂದು “ಮಿಸ್ಟರಿ ಪಿಚ್‌’. ಇಂಗ್ಲೆಂಡ್‌ ನ‌ಲ್ಲಿ ಸ್ಪಿನ್‌ ದಾಳಿಗೆ ಸಹಕರಿಸುವ ಏಕೈಕ ಪಿಚ್‌ ಕೂಡ ಹೌದು.

ಅವಳಿ ಸ್ಪಿನ್‌ ದಾಳಿ
ಇದನ್ನು ಗಮನಿಸಿಯೇ ಇಂಗ್ಲೆಂಡ್‌ನ‌ ಮಾಜಿ ಸ್ಪಿನ್ನರ್‌, ಭಾರತೀಯ ಮೂಲದ ಮಾಂಟಿ ಪನೆಸರ್‌, ಭಾರತವಿಲ್ಲಿ ಅವಳಿ ಸ್ಪಿನ್ನರ್‌ಗಳನ್ನು ಆಡಿಸುವುದು ಉತ್ತಮ ಎಂದಿದ್ದಾರೆ. ಈ ಸ್ಪಿನ್ನರ್‌ಗಳನ್ನೂ ಅವರಿಲ್ಲಿ ಹೆಸರಿಸಿದ್ದಾರೆ-ಆರ್‌. ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ.

“ಇಂಗ್ಲೆಂಡ್‌ನ‌ಲ್ಲಿ ಸ್ಪಿನ್ನಿಗೆ ಹೆಚ್ಚಿನ ನೆರವು ನೀಡುವ ಏಕೈಕ ಅಂಗಳ ವೆಂದರೆ ಅದು ಓವಲ್‌. ನನ್ನ ಪ್ರಕಾರ ಇದೊಂದು ಫ್ಲ್ಯಾಟ್‌ ಟ್ರ್ಯಾಕ್‌. ಇಬ್ಬರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸಿದ್ದೇ ಆದರೆ ಭಾರತಕ್ಕೆ ಈ ಪಿಚ್‌ ಲಾಭ ತರಲಿದೆ. ಆಸ್ಟ್ರೇಲಿಯ ಆಟಗಾರರು ಸ್ಪಿನ್ನರ್‌ಗಳಿಗೆ, ಅದರಲ್ಲೂ ಭಾರತದ ಸ್ಪಿನ್ನರ್‌ಗಳಿಗೆ ಪರದಾಡುವುದನ್ನು ನೋಡಿದ್ದೇವೆ’ ಎಂಬುದಾಗಿ ಮಾಂಟಿ ಪನೆಸರ್‌ ಪಿಟಿಐಗೆ ನೀಡಿದ ಸಂದರ್ಶನ
ದಲ್ಲಿ ಹೇಳಿದ್ದಾರೆ.

Advertisement

ಆದರೆ ಎರಡು ವರ್ಷಗಳ ಹಿಂದಿನ ವಿಶ್ವಕಪ್‌ ಟೆಸ್ಟ್‌ ಫೈನಲ್‌ನಲ್ಲಿ ಭಾರತದ ಅವಳಿ ಸ್ಪಿನ್‌ ಪ್ರಯೋಗ ಯಶಸ್ಸು ಕಾಣಲಿಲ್ಲ ಎಂದೂ ಪನೆಸರ್‌ಗೆ ನೆನಪಿಸಲಾಯಿತು. “ಅದು ನಿಜ, ಆದರೆ ಓವಲ್‌ ವಾತಾವರಣದಲ್ಲಿ ಇದು ಯಶಸ್ವಿಯಾಗಲಿದೆ’ ಎಂದರು.

“ಓವಲ್‌ ವಾತಾವರಣ ಅತ್ಯಂತ ಬಿಸಿಯಾಗಿದೆ. ಕಳೆದ ಟಿ20 ಬ್ಲಾಸ್ಟ್‌ ಟೂರ್ನಿಯ ವೇಳೆ ಇಲ್ಲಿ ಚೆಂಡು ತಿರುವು ಪಡೆದುದನ್ನು ಗಮನಿಸಿದ್ದೇವೆ. ಆದರೆ ಈ ಬಾರಿ ಹುಲ್ಲನ್ನು ಕತ್ತರಿಸಿಲ್ಲ. ಬಹುಶಃ ಟೆಸ್ಟ್‌ ಫೈನಲ್‌ ನಾಲ್ಕೇ ದಿನದಲ್ಲಿ ಮುಗಿಯಬಾರದು ಎಂಬುದು ಇದರ ಉದ್ದೇಶ ಆಗಿರಬಹುದು’ ಎಂಬುದಾಗಿ ಪನೆಸರ್‌ ಹೇಳಿದರು.

ಭಾರತದ ಸೀಮ್‌ ಬೌಲಿಂಗ್‌ ಕಾಂಬಿನೇಶನ್‌ ಬಗ್ಗೆ ಮಾತಾಡಿದ ಪನೆಸರ್‌, ಶಾದೂìಲ್‌ ಠಾಕೂರ್‌ಗಿಂತ ಉಮೇಶ್‌ ಯಾದವ್‌ ಅತ್ಯುತ್ತಮ ಆಯ್ಕೆ ಆಗಬಲ್ಲದು ಎಂದರು. ಜಡೇಜ ಮತ್ತು ಅಶ್ವಿ‌ನ್‌ ಬ್ಯಾಟಿಂಗ್‌ ಕೂಡ ಮಾಡುವುದರಿಂದ ಠಾಕೂರ್‌ ಅಗತ್ಯ ಕಂಡುಬರದು. ಇಲ್ಲಿ ಯಾದವ್‌ ಅವರ ಅನುಭವ ನೆರವಿಗೆ ಬರಲಿದೆ ಎಂದರು. ಮೊಹಮ್ಮದ್‌ ಶಮಿ ಮತ್ತು ಮೊಹಮ್ಮದ್‌ ಸಿರಾಜ್‌ ಉಳಿದಿಬ್ಬರು ವೇಗಿಗಳು.

ಬ್ಯಾಟಿಂಗ್‌ ಕಾಂಬಿನೇಶನ್‌
ಓವಲ್‌ ಬ್ಯಾಟಿಂಗ್‌ ವಿಷಯಕ್ಕೆ ಬರುವುದಾದರೆ, ಇಲ್ಲಿನ ಮೊದಲ ಇನ್ನಿಂಗ್ಸ್‌ನ ಸರಾಸರಿ ರನ್‌ 269. ದ್ವಿತೀಯ ಇನ್ನಿಂಗ್ಸ್‌ ವೇಳೆ ಇದು 280ಕ್ಕೆ ಏರುತ್ತದೆ. 3ನೇ ಇನ್ನಿಂಗ್ಸ್‌ನಲ್ಲಿ ಗರಿಷ್ಠ 326ಕ್ಕೆ ತಲುಪುತ್ತದೆ. ಇದನ್ನು ಗಮನಿಸುವಾಗ, ದಿನಗಳೆದಂತೆ ಓವಲ್‌ ಅಂಗಳದಲ್ಲಿ ಬ್ಯಾಟಿಂಗ್‌ ಸುಲಭ ಎಂಬುದು ಅರಿವಾಗುತ್ತದೆ.

“ಭಾರತದ ಟಾಪ್‌ ಆರ್ಡರ್‌ ಲೈನಪ್‌ ಉತ್ತಮ ಫಾರ್ಮ್ನಲ್ಲಿದೆ. ಇಂಗ್ಲೆಂಡ್‌ ಕೌಂಟಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡುತ್ತ ಬಂದಿರುವ ಚೇತೇಶ್ವರ್‌ ಪೂಜಾರ ಅವರಿಂದ ಲಾಭ ಖಂಡಿತ. ಇವರು ನಿಂತು ಆಡಿದರೆ, ಉಳಿದವರು ತುಸು ವೇಗದಿಂದ ಬ್ಯಾಟಿಂಗ್‌ ನಡೆಸಬಹುದಾಗಿದೆ’ ಎಂದು ಪನೆಸರ್‌ ಅಭಿಪ್ರಾಯಪಟ್ಟರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next