Advertisement

ನಾನು ಗೆದ್ದೇ ಗೆಲ್ತೀನಿ, ನೀನು ಜೊತೆಗಿದ್ರೆ ಮಾತ್ರ!

04:00 AM Nov 06, 2018 | |

“ಪ್ರೀತಿ’ ಎಂಬ ಭಾವವೇ ಹಾಗೆ, ಎಲ್ಲವನ್ನೂ, ಎಲ್ಲರನ್ನೂ ಮರೆಸಿ ಹೊಸದೊಂದು ಬಾಂಧವ್ಯವನ್ನು ಬೆಸೆದು,  ಬದುಕು ಬದಲಿಸುತ್ತದೆ.  ನೀನು ಸಿಕ್ಕ ಮೇಲೆ ಜೀವನ ಬದಲಾಗಿದೆ. ನಾನು  ಬದುಕುವ ಶೈಲಿ ಬದಲಾಗಿದೆ.  ಭವಿಷ್ಯದ ಬಗ್ಗೆ ಕಂಡ ಕನಸುಗಳ ಬೆನ್ನೇರಿ ಬದುಕು ನಡೆಸುವ ಕಾಲ ಬಂದಾಗಿದೆ. ತಿಳಿ ಹೇಳುವ ಜೀವವೊಂದು ಜೊತೆಯಾಗಿದೆ. 

Advertisement

ನನ್ನ ನಿನ್ನ ಪರಿಚಯ ಹೇಗಾಯ್ತು, ಯಾವಾಗಾಯ್ತು, ಅವೆಲ್ಲವೂ ಈಗ ಬೇಡವಾದ ಪ್ರಶ್ನೆಗಳು. ನನ್ನ ಬಾಳ ಪಯಣ ನಿಜವಾಗಿ ಶುರುವಾಗಿದ್ದೇ ನೀನು ಬದುಕಿಗೆ ಬಂದಾಗಿನಿಂದ. ಯಾವ ಆಸೆ, ಆಕಾಂಕ್ಷೆಗಳಿಲ್ಲದೆ ಬದುಕುತ್ತಿದ್ದ ನನಗೆ,  ನೀನು ಭಾವನೆಗಳ ಲೋಕವನ್ನು ಪರಿಚಯಿಸಿದೆ, ಜೀವನದ ಸತ್ವ ಏನೆಂದು ತಿಳಿ ಹೇಳಿದೆ.  ಸಮಯ ಎಲ್ಲವನ್ನೂ, ಎಲ್ಲರನ್ನೂ ಬದಲಾಯಿಸುತ್ತದೆ ಅಂತಾರೆ.

ಆದರೆ, ನನ್ನ-ನಿನ್ನ ಪ್ರೀತಿ ಮಾತ್ರ ಎಂದೆಂದಿಗೂ ಬದಲಾಗಬಾರದು, ಬದಲಾಗುವ ಅನಿವಾರ್ಯ ಕೂಡ ಬರಬಾರದು. ಕಣ್ಣಿಗೆ ಕಾವಲಿರುವ ರೆಪ್ಪೆಯಂತೆ, ಹೃದಯದ ಬಡಿತಕ್ಕೆ ನೀ ಕಾರಣ. ಮನ ಕುಣಿಯಲು, ನೆನಪುಗಳು ತಣಿಯಲು ನಿನ್ನ ಪ್ರೀತಿಯೇ ಸಾಕ್ಷಿ. ದೇವರ ವರವೋ, ಪುಣ್ಯದ ಫ‌ಲವೋ ನಾ ಕಾಣೆ, ನಿನ್ನ ಪಡೆದಾಯ್ತು.

ನಡು ನೀರಲ್ಲಿ ಕೈ ಕೋಟ್ಟು ಬಿಟ್ಟು ಹೋಗೊ ಕೆಟಗರಿ ಹುಡುಗ ನಾನಲ್ಲ. ಕೊನೆವರೆಗೂ ಜೊತೆಯಾಗ್ತಿàನಿ, ಏಳು ಬೀಳುಗಳ ಮಧ್ಯೆ ಸಿಹಿಕಹಿ ಘಟನೆಗಳನ್ನು ಎದುರಿಸುತ್ತಾ, ಆಗು ಹೋಗುಗಳ ಜೊತೆಯಲ್ಲಿ ನಿನ್ನ ರಾಣಿಯಂತೆ ನೋಡಿಕೊಳ್ತೀನಿ. ನಾನು ಧೈರ್ಯವಂತನಿದ್ದರೂ, ನನಗೆ ಧೈರ್ಯದಂತೆ ಬೆನ್ನ ಹಿಂದೆ ನೀನಿರು. ಬರ್ತೀಯಾ ತಾನೆ ನನ್ನ ಬಾಳಲ್ಲಿ? ಇರ್ತೀಯಾ ಕೊನೆವರೆಗೂ ಜೊತೆಯಲ್ಲಿ? 

* ವೀರೇಶ್‌ ದೊಡ್ಡಮನಿ

Advertisement
Advertisement

Udayavani is now on Telegram. Click here to join our channel and stay updated with the latest news.

Next