ಗದಗ: ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ 8000 ಶಾಲಾ ಕೊಠಡಿಗಳಿಗೆ “ವಿವೇಕ’ ಎಂದು ಹೆಸರಿಡಲಾಗುತ್ತಿದೆ. ಅಂತಹ ಶಾಲೆಗಳ ಗೋಡೆಗಳಿಗೆ ಕೇಸರಿ ಬಣ್ಣ ಹಚ್ಚುವ ಆರ್ಕಿಟೆಕ್ಚರ್ ಏನಾದರೂ ಕೇಸರಿ ಬಣ್ಣ ಚೆನ್ನಾಗಿದೆ ಅಂತಾ ಹೇಳಿದರೆ ಕೇಸರಿ ಬಣ್ಣ ಹಚ್ಚಿಯೇ ತೀರುತ್ತೇನೆಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಸರಿ ಬಣ್ಣ ಹೌದೋ ಅಲ್ವೋ? ಕೇಸರಿ ಬಣ್ಣ ಚೆನ್ನಾಗಿದೆ ಅಂತಾ ಆರ್ಕಿಟೆಕ್ಟ್ ಹೇಳಿದರೆ ಕೇಸರಿ ಹಾಕುತ್ತೇನೆ. ವಿವೇಕ ಶಾಲೆಯ ಬಣ್ಣ, ಕಿಟಕಿ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲ್ಲ. ಆರ್ಕಿಟೆಕ್ಚರ್ ಮೇಲೆ ಬಿಟ್ಟಿದ್ದೇವೆ. ಅವರು ಕೊಡುವ ಡಿಸೈನ್ ಮೇಲೆ ನಾವು ಡಿಸೈಡ್ ಮಾಡ್ತೀವಿ. ಒಂದಿಷ್ಟು ಜನಕ್ಕೆ ಬಣ್ಣದ ಅಲರ್ಜಿ ಇದೆ. ಅವರ ಧ್ವಜದಲ್ಲೂ ಕೇಸರಿ ಇದೆ. ಅದನ್ನು ಏಕೆ ಬಿಟ್ಕೊಂಡಿದಾರೆ. ಅದನ್ನು ಪೂರ್ತಿ ಹಸಿರು ಮಾಡ್ಕೊಂಡ್ ಬಿಡಿ ಎಂದರು.
ಟಿಪ್ಪು ಬಯಸಿದ ರಾಷ್ಟ್ರಕ್ಕೆ ಹೋರಾಟ
ತನ್ವೀರ್ ಸೇಠ್ ಅವರ ವೈಯಕ್ತಿಕ ವಿಚಾರ ಪಕ್ಷಕ್ಕೆ ಸಂಬಂಧ ಇಲ್ಲ ಅಂತಾ ಕಾಂಗ್ರೆಸ್ ಹೇಳಿದೆ. ಅವರ ಲೆಕ್ಕ ನೋಡಿದರೆ ಯಾವ ಮೂರ್ತಿಗಳನ್ನೂ ಮಾಡಲೇಬಾರದು. ಇದ್ದ ಮೂರ್ತಿಗಳನ್ನು ತೆಗೆಯಬೇಕಾ? ಈ ರೀತಿ ಹೇಳುವುದಕ್ಕೆ ಅವರಿಗೆ ನೈತಿಕತೆ ಇಲ್ಲ. ಮೈಸೂರಲ್ಲಿ ಟಿಪ್ಪು ಮೂರ್ತಿ ನಿರ್ಮಾಣ ಮಾಡುವುದನ್ನು ಜನ ನಿರ್ಧಾರ ಮಾಡುತ್ತಾರೆ. ಜನಕ್ಕೆ ವಿರೋಧ ಮಾಡುವ ಹಕ್ಕಿದೆ. ಸತ್ಯ ಹೇಳುವುದಕ್ಕೆ ಕೆಲವರು ಸಹಿಸುವುದಿಲ್ಲ. ಸುಳ್ಳು ಹೇಳುವುದರಲ್ಲೇ ಕೆಲವರು ತಜ್ಞರಾಗಿದ್ದಾರೆ. ಸುಳ್ಳು ಹೇಳಿಕೊಂಡೇ ಕೆಲ ರಾಜಕೀಯ ಪಕ್ಷಗಳು ಬದುಕಿವೆ. ನಿಜ ಹೊರ ಬರೋದ್ರಿಂದ ಕೆಲವರ ಭವಿಷ್ಯಕ್ಕೆ ಕುತ್ತಾಗುತ್ತದೆ ಎಂದರು.
ದೇಶ ಕಂಡಂತಹ ಅತ್ಯಂತ ಶ್ರೇಷ್ಠ ಅಂತಾ ಟಿಪ್ಪು ಬಗ್ಗೆ ಓದಿದ್ದೆವು. ಈಗ ಸತ್ಯ ಗೊತ್ತಾಗುತ್ತಿದೆ. ಶ್ರೀರಂಗಪಟ್ಟಣದ ಆಂಜನೇಯ ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದು ಗೊತ್ತಾಯ್ತು. ಪಹಣಿಯಲ್ಲಿ ಇರೋದು ಪರ್ಷಿಯನ್ ಪದ ಅಂತಾ ಗೊತ್ತಾಯಿತು. ಪಹಣಿ ಅಂದರೆ ಕನ್ನಡದ ಪದ ಅಂತ ಅಂದುಕೊಂಡಿದ್ದೆವು. ಶಿರಸ್ತೇದಾರ್ ಅಂದರೆ ಕನ್ನಡ ಅಂದುಕೊಂಡು ಬಿಟ್ಟಿದ್ವಿ. ಕನ್ನಡವನ್ನು ಕೊಂದಿದ್ದು ಟಿಪ್ಪು ಅಂತಾ ಈಗ ಗೊತ್ತಾಗ್ತಿದೆ ಎಂದರು.
Related Articles
ಕೊಡಗು, ಕೇರಳದಲ್ಲಿ ಬಲವಂತವಾಗಿ ಮತಾಂತರ ಮಾಡಿ, ಮತಾಂತರವಾಗದಿರುವವರನ್ನು ಕೊಲೆ ಮಾಡಿದ್ದಾನೆ. ಟಿಪ್ಪು ಸುಲ್ತಾನ್ ಬರೆದ ಪತ್ರದ ಮೂಲಕವೇ ಗೊತ್ತಾಗುತ್ತಿದೆ. ದುರಾದೃಷ್ಟ ಅಂದರೆ ಈ ದೇಶದಲ್ಲಿ ಟಿಪ್ಪುನನ್ನು ಕೆಂಪೇಗೌಡರಿಗೆ ಹೋಲಿಸಲಾಗುತ್ತಿದೆ. ಕೆಂಪೇಗೌಡರು ಎಲ್ಲರೂ ಚೆನ್ನಾಗಿರಬೇಕು ಎಂದು ಕೆಲಸ ಮಾಡಿದವರು. ದೇಶ ಇನ್ನೂ 100 ವರ್ಷದ ನಂತರ ಹೇಗಿರಬೇಕು ಎಂದು ಕನಸು ಕಂಡವರು ಕೆಂಪೇಗೌಡರು. ಟಿಪ್ಪು ಸುಲ್ತಾನ್ ಏನು ಮಾಡಿದ್ದಾನೆ ಎಂದು ಗೊತ್ತಿದ್ದರೂ ದೇಶದಲ್ಲಿ ಟಿಪ್ಪು ಬಯಸಿದ ರಾಷ್ಟ್ರ ಆಗಬೇಕು ಅಂತಾ ಹೊರಟಿದ್ದಾರೆ ಎಂದರು.