Advertisement

ನನಗೂ ಸಿಎಂ ಆಗೋ ಕಾಲ ಬಂದೇ ಬರುತ್ತೆ

03:05 PM Dec 08, 2017 | |

ಬಸವರಾಜ್‌ ರಾಯರಡ್ಡಿ ಉನ್ನತ ಶಿಕ್ಷಣ ಸಚಿವರಾದ ಮೇಲೆ ಅವರ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿವೆ. ವಿಶ್ವ ವಿದ್ಯಾಲಯದ ಸಮಗ್ರ ಕಾಯ್ದೆ ಜಾರಿಗೆ ತರಲು ಮುಂದಾಗಿದ್ದರೂ ಸ್ವಪಕ್ಷದವರಿಂದಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಕೆಎಸ್‌ಒಯು ಮುಚ್ಚುವ ಆರೋಪ, ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ನೀಡುವುದರಲ್ಲಿ ಹಗರಣ, ಅಂಕಪಟ್ಟಿ ಹಗರಣ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಅಲ್ಲದೇ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಸ್ಪಷ್ಟ ಬಹುಮತ ಪಡೆಯುವ ಕುರಿತಂತೆ ನೇರಾ ನೇರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Advertisement

ವಿಶ್ವ ವಿದ್ಯಾಲಯದ ಸಮಗ್ರ ಕಾಯ್ದೆ ಕತೆ ಏನಾಯ್ತು ?
ಪ್ರೊ. ಎನ್‌. ಆರ್‌. ಶೆಟ್ಟಿ ಅಧ್ಯಕ್ಷತೆಯಲ್ಲಿ ವಿಶ್ವ ವಿದ್ಯಾಲಯ ಸಮಗ್ರ ಕಾಯ್ದೆ ಕುರಿತು ಸಮಿತಿ ರಚನೆ ಮಾಡಿ ವರದಿ ಪಡೆದಿದ್ದೆವು. ಸಮಗ್ರ ವಿವಿ ಕಾಯ್ದೆ ಜಾರಿಗೊಳಿಸಬೇಕು ಎಂದು ಅಸೆಂಬ್ಲಿಲಿ ಮಂಡನೆ ಮಾಡಿದ್ವಿ. ಅಲ್ಲಿ ಪಾಸ್‌ ಆಯ್ತು ಕೆಲವು ವಿಧಾನ ಪರಿಷತ್‌ ಸದಸ್ಯರು ಅದಕ್ಷೆ ಆಕ್ಷೇಪ ವ್ಯಕ್ತಪಡಿಸಿ ಸದನ ಸಮಿತಿ ರಚನೆ ಮಾಡುವಂತೆ ಕೇಳಿದರು. ಸದನ ಸಮಿತಿ ರಚನೆ ಮಾಡಿದ್ದೇನೆ. ನಾನೇ ಅಧ್ಯಕ್ಷನಾಗಿದ್ದೇನೆ. ಬಜೆಟ್‌ ಅಧಿವೇಶನ ದಲ್ಲಿ ಸಮಗ್ರ ಕಾಯ್ದೆ ಜಾರಿಗೆ ತರುತ್ತೇವೆ. ಹಂಪಿ ವಿವಿಯನ್ನು ಸಮಗ್ರ ಕಾಯ್ದೆಯಿಂದ ಹೊರಗಿಡುವಂತೆ ಸಾಹಿತಿಗಳು ಮನವಿ ಮಾಡಿದ್ದಾರೆ. ತಾತ್ವಿಕವಾಗಿ ಒಪ್ಪಿಗೆ ನೀಡಿದ್ದೇನೆ.

ವಿವಿ ಅಧಿಕಾರ  ಸರ್ಕಾರ ಕಿತ್ತುಕೊಳ್ಳುತ್ತಿದೆಯೇ ?  ಸರ್ಕಾರ ಯಾವುದೇ ಅಧಿಕಾರವನ್ನು ಕಸಿದುಕೊಳ್ಳಲು ಹೋಗು ತ್ತಿಲ್ಲ. ಎಲ್ಲರಿಗೂ ಅಧಿಕಾರ ಹಂಚಿಕೆ ಮಾಡಲು ಹೋಗುತ್ತಿದ್ದೇವೆ. ಕಾಯ್ದೆಯನ್ನು ಸರಿಯಾಗಿ ಓದಿಕೊಳ್ಳದೇ ಕೆಲವರು ಆರೋಪ ಮಾಡುತ್ತಿದ್ದಾರೆ. 

    ನಿಮ್ಮ ವಿರುದ್ಧ ಲ್ಯಾಪ್‌ ಟಾಪ್‌ ಹಗರಣ ಕೇಳಿ ಬಂದಿದೆ ?
ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ನೀಡಲು ಈಗಾಗಲೇ ಟೆಂಡರ್‌ ಕರೆದಿದ್ದೇವೆ. ಈ ತಿಂಗಳಾಂತ್ಯಕ್ಕೆ ಲ್ಯಾಪ್‌ ಟಾಪ್‌ ವಿತರಣೆ ಮಾಡುತ್ತೇವೆ. ಡಿಗ್ರಿ ಮೊದಲ ವರ್ಷದ ಸಾಮಾನ್ಯ ವರ್ಗದ 1.5 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವ ಆಲೋಚನೆ ಮಾಡಿದ್ದೇವೆ. ಅದಕ್ಕಿನ್ನೂ ಟೆಂಡರ್‌ ಕರೆದಿಲ್ಲ. ಟೆಂಡರ್‌ ಕೆರೆಯುವ ಮೊದಲೇ ಹಗರಣ ಎಲ್ಲಿಂದ ಬರುತ್ತದೆ. ಇದರ ತನಿಖೆಗೆ ಸದನ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದರು. ಅದಕ್ಕೆ ಸದನ ಸಮಿತಿ ರಚನೆ ಮಾಡಿದ್ದೇವೆ.  ನಾವು ಬರವಣಿಗೆಯಲ್ಲಿ ನೀಡಿದರೂ ಪ್ರತಿಪಕ್ಷದವರು ಗಲಾಟೆ ಮಾಡಿದರು. ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ಕೊಡುವುದು ವಿಪಕ್ಷಗಳಿಗೆ ಬೇಡವಾಗಿರಬಹುದು.

ನಿಮ್ಮ ಕಮಿಷನರ್‌ ವಿರೋಧ ವ್ಯಕ್ತಪಡಿಸಿದ್ದರಂತಲ್ಲಾ ?
ನಮ್ಮ ಕಮಿಷನರ್‌ ನನ್ನ ವಿರುದ್ಧ ಯಾವುದೇ ಆರೋಪ ಮಾಡಿಲ್ಲ. ನನ್ನ ವಿರುದ್ಧ ಪ್ರಿನ್ಸಿಪಲ್‌ ಸೆಕ್ರೆಟರಿಗೆ ಏನೂ ಬರೆದಿಲ್ಲ. ಕಮಿಷನರೆ ಟೆಂಡರ್‌ ಮಾಡೋದು. ಅವರೇ ಟೆಂಡರ್‌ ಮಾಡಿಲ್ಲ. ಬೇಕಾದ್ರೆ ಫೈಲ್‌ ಕೊಡುತ್ತೇನೆ. ನೀವೇ ನೋಡಿ.  ಪ್ರತಿಪಕ್ಷದವರು ಇದನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಲ್ಯಾಪ್‌ಟಾಪ್‌ ಕೊಟ್ಟರೆ ಕಾಂಗ್ರೆಸ್‌ಗೆ ಅನುಕೂಲ ಆಗುತ್ತೆ ಅನ್ನುವ ಕಾರಣಕ್ಕೆ ಅವರು ವಿರೋಧ ಮಾಡಿದರು. ನಾನು ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ಆದರೆ, ಅವರು ಸದನ ಸಮಿತಿ ಮಾಡುವಂತೆ ಆಗ್ರಹಿಸಿದರು.

Advertisement

ಈ ವರ್ಷ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಭಾಗ್ಯ ಇಲ್ವಾ?
ಹಾಗೇನಿಲ್ಲಾ ಕೆ.ಸಿ. ಕೊಂಡಯ್ಯ ನೇತೃತ್ವದ ಸದನ ಸಮಿತಿ ಆದಷ್ಟು ಬೇಗ ವರದಿ ಕೊಡುತ್ತದೆ ಎನ್ನುವ ವಿಶ್ವಾಸ ಇದೆ. 1.5 ಲಕ್ಷ ಲ್ಯಾಪ್‌ಟಾಪ್‌ ಪಡೆಯಬೇಕು. ಇದೇ ಶೈಕ್ಷಣಿಕ ವರ್ಷದಲ್ಲಿ ಕೊಡಬೇಕೆನ್ನುವುದು ನನ್ನ ಉದ್ದೇಶ. ನೋಡೋಣ ಸದನ ಸಮಿತಿ ವರದಿ ಬಂದ ಮೇಲೆ ಏನಾಗುತ್ತೆ.  

ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ ಬಗ್ಗೆಯೂ ಹಗರಣದ ಆರೋಪ ಕೇಳಿ ಬಂತು?
ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ಸ್‌ನಿಂದ ಈಗಾಗಲೇ ಕ್ಲಾಸ್‌ ಆರಂಭ ಮಾಡಿದ್ದೇವೆ. ಒನ್‌ ಆಫ್ ದಿ ಬೆಸ್ಟ್‌ ಎಕನಾಮಿಕ್ಸ್‌ ಸ್ಕೂಲ್‌ ಆಗುತ್ತದೆ. ಬೆಂಗಳೂರು ವಿವಿಯವರು ನಮಗೆ 43 ಎಕರೆ ಜಾಗ ಕೊಟ್ಟಿದ್ದಾರೆ. ಹಣಕಾಸು ಇಲಾಖೆಯವರು 150 ಕೋಟಿಯಲ್ಲಿ ಈ ವರ್ಷಕ್ಕೆ 90 ಕೋಟಿ ರೂ. ಕೊಟ್ಟಿದ್ದಾರೆ. ಸಂಪುಟದ ಅನುಮೋದನೆ ಆಗುವ ಮೊದಲೇ ಹಣ ಬಿಡುಗಡೆ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿದ್ದಾರೆ. ಸಂಪುಟ ಅನುಮೋದನೆ ಮಾಡಿಯೇ ಹಣ ಬಿಡುಗಡೆ ಮಾಡಲಾಗಿದೆ. ಉಳಿದ ಹಣ ಮುಂದಿನ ವರ್ಷ ಕೊಡುತ್ತಾರೆ. ಇದರಲ್ಲಿ ಹಗರಣ ಎಲ್ಲಿಂದ ಬರುತ್ತೆ ?

ಕೆಎಸ್‌ ಒ ಯು ಮುಚ್ಚುತ್ತಾರೆಂಬ ಆರೋಪದ ಬಗ್ಗೆ?
ನೋಡಿ ಕೆಎಸ್‌ ಓ ಯು 2012-13, 13-14 ರ ಸಾಲಿನ ಮಾನ್ಯತೆ ಯುಜಿಸಿ ರದ್ದು ಮಾಡಿದೆ. ನಾನು ಮಿನಿಸ್ಟರ್‌ ಆದ ಮೇಲೆ ಕರ್ನಾಟಕದ ಇತಿಮಿತಿಯೊಳಗೆ ಕಾರ್ಯಚಟುವಟಿಕೆ ಇರಬೇಕೆಂದು ಕಾಯ್ದೆ ತಿದ್ದುಪಡಿ ಮಾಡಿ, ಜಾವಡೇಕರ್‌ ಅವರನ್ನು ಪ್ರತ್ಯೇಕವಾಗಿಯೇ ಭೇಟಿಯಾಗಿ ಮನವಿ ಮಾಡಿದ್ದೇನೆ. ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಅವರ ಗಮನಕ್ಕೆ ತಂದಿದ್ದೇನೆ. ಡಿಸೆಂಬರ್‌ 15 ರಂದು ಮತ್ತೂಂದು ಬಾರಿ ಭೇಟಿ ಮಾಡಿ ಮಾತನಾಡುತ್ತೇನೆ. ವಿವಿಯಲ್ಲಿ 450 ಕೋಟಿ ಹಣ ಇದೆ. ಅದನ್ನು ಇನ್‌ಕಮ್‌ ಟ್ಯಾಕ್ಸ್‌ನವರು ತೆಗೆದುಕೊಂಡು ಹೋದ್ರೆ ಸರ್ಕಾರದ ಮೇಲೆ ಬರುತ್ತದೆ. ಹಾಗಾಗಿ ಅದನ್ನು ಸರ್ಕಾರದ ಖಜಾನೆಯಲ್ಲಿ ಇಡಬೇಕು ಅಂತ ಹೇಳಿದ್ದೇನೆ. ವಿವಿಯವರು ನಾವು ಸ್ವತಂತ್ರ ಸಚಿವರು ಹಸ್ತಕ್ಷೇಪ ಮಾಡುವಂತಿಲ್ಲ ಅಂತ ಹೇಳುತ್ತಾರೆ. ಸರ್ಕಾರದ ಖಜಾನೆಯಲ್ಲಿ ಹಣ ಇಡಿ ಅಂದ್ರೆ ನಾನು ಹಣ ತೆಗೆದುಕೊಂಡು ಹೋಗುತ್ತೇನಾ ಕೆಎಸ್‌ಓಯು ನಲ್ಲಿ ಕ್ಲಾಸ್‌ ನಡೆಯದಿದ್ದರೂ ಪ್ರತಿ ವರ್ಷ ಸಿಬ್ಬಂದಿಗೆ ಸಂಬಳಕ್ಕೆ 50 ಕೋಟಿ ವೆಚ್ಚವಾಗುತ್ತಿದೆ. ಏನೂ ಕೆಲಸ ಆಗದೇ ಹಣ ವೆಚ್ಚವಾಗುವುದು  ನೋಡಿಕೊಂಡು ನಾನು ಸುಮ್ಮನೇ ಕೂಡಬೇಕಾ ?

ಸಿಎಂ ಲಿಂಗಾಯತರನ್ನು ಒಡೆದ ಆರೋಪ  ನಿಜಾನಾ ?
ನೋಡ್ರಿ ಇದು ಮುಖ್ಯಮಂತ್ರಿಗೆ ಸಂಬಂಧವಿಲ್ಲ. ನಾವು ಸನ್ಮಾನ ಮಾಡಿದಾಗ ಎಲ್ಲರೂ ಒಟ್ಟಾಗಿ ಬನ್ನಿ ಅಂತ ಮಾತ್ರ ಹೇಳಿದ್ದರು. ವೀರಶೈವ ಅಂದ್ರೆ ಪ್ರತ್ಯೇಕ ಧರ್ಮ ಆಗಲ್ಲ. ವೀರಶೈವ ಅಂದರೆ, ಶೈವ ಪದ ಬರುವುದರಿಂದ ಮಾನ್ಯತೆ ದೊರೆಯುವುದಿಲ್ಲ.  ಅದಕ್ಕೆ ವೀರಶೈವ ಬಿಡುವಂತೆ ಹೇಳಿದ್ದೇವೆ.

ರತ್ನ ಪ್ರಭಾ ವರದಿ  ಕೊಟ್ಟಿದ್ದಾರಲ್ಲಾ ಅದೇನಾಯ್ತು ?
ರತ್ನಪ್ರಭಾ ಅವರ ವರದಿಯನ್ನು ನಾನು ಓದಿಲ್ಲ. ವರದಿಯ ಲ್ಲೇನಿದೆ ನೋಡುತ್ತೇನೆ. ವಿವಿಯನ್ನು ನಾವು ಮುಚ್ಚುವುದಿಲ್ಲ ಅದರಲ್ಲಿನ ಗೊಂದಲ ನಿವಾರಣೆ ಮಾಡಿ ವ್ಯವಸ್ಥೆ ಸುಧಾರಣೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ವಿದ್ಯಾರ್ಥಿಗಳು ಫೀ ಕಟ್ಟಿದ ಹಣ ಇನ್‌ಕಮ್‌ ಟ್ಯಾಕ್ಸ್‌ನವರು ತೆಗೆದುಕೊಂಡು ಹೋದರೆ, ನಾಳೆ ಸರ್ಕಾರದಿಂದ ಹಣ ಕೊಡಿ ಅಂತ ಹೇಳುತ್ತಾರೆ. ಅವಾಗ ನಾನು ಜವಾಬ್ದಾರನಾಗಲು ಆಗುವುದಿಲ್ಲ. ಅದನ್ನು ಮುಚ್ಚು ವುದರಿಂದ ನನಗೇನು ಲಾಭವಿಲ್ಲ. ನಾನೇನು ಮಂತ್ರಿ ಸ್ಥಾನ ಬೇಕು ಅಂತ ಇಟ್ಟುಕೊಂಡು ಕೂತಿಲ್ಲ.  ಇವತ್ತೇ ಬಿಟ್ಟು ಕೊಡು ಅಂದರೂ ಬಿಸಾಕಿ ಹೋಗ್ತಿನಿ.

ಹೊಸ ವಸತಿ ಕಾಲೇಜು ಸ್ಥಾಪನೆ ಎಲ್ಲಿಗೆ ಬಂತು ?
ರಾಜ್ಯದಲ್ಲಿ 16 ವಸತಿ ಕಾಲೇಜುಗಳನ್ನು ತೆರೆಯಲು ಸಂಪುಟ ಈಗಾಗಲೇ ಒಪ್ಪಿಗೆ ಕೊಟ್ಟು ಟೆಂಡರ್‌ ಕರೆದ್ದಿದೇವೆ. ಪ್ರತಿ ಕಾಲೇಜಿಗೆ 25 ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ಹೈದ ರಾಬಾದ್‌ ಕರ್ನಾಟಕ ಭಾಗದಲ್ಲಿಯೇ 11 ವಸತಿ ಕಾಲೇಜು ಗಳನ್ನು ತೆರೆಯುತ್ತಿದ್ದೇವೆ. ಹೊಸ ಕಟ್ಟಡ ಆಗುವವರೆಗೂ ಆರಂಭ ಮಾಡುವುದು ಕಷ್ಟವಾಗುತ್ತದೆ. 25 ಪಾಲಿಟೆಕ್ನಿಕ್‌ ಮಂಜೂರಾಗಿದೆ ಪ್ರತಿ ಕಾಲೇಜಿಗೆ 8 ಕೋಟಿ ಬಿಡುಗಡೆ ಮಾಡಿ ಟೆಂಡರ್‌ ಕರೆಯಲಿದ್ದೇವೆ. ನಾಲ್ಕು ಕಡೆ ಸರ್ಕಾರಿ ಎಂಜನೀಯ ರಿಂಗ್‌ ಕಾಲೇಜು ಸ್ಥಾಪನೆ ಮಾಡಲು ಆದೇಶ ಮಾಡಿದ್ದೇವೆ. 

ಅತಿಥಿ ಉಪನ್ಯಾಸಕರ ನೇಮಕವಾಗುತ್ತಿಲ್ಲವೇ?
ಇತಿಹಾಸದಲ್ಲಿ ಪ್ರಥಮ ಬಾರಿಗೆ 2160 ಉಪನ್ಯಾಸಕರನ್ನು ಯಾವುದೇ ಭ್ರಷ್ಟಾಚಾರ ಇಲ್ಲದೇ ನೇಮಕ ಮಾಡಿಕೊಂಡು 2000 ಜನರಿಗೆ ಈಗಾಗಲೇ ಆದೇಶ ನೀಡಿದ್ದೇವೆ. ರಾಜ್ಯದಲ್ಲಿ 14 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಅವರನ್ನು ನೇರವಾಗಿ ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ. ಎಂ.ಎ. ಪಿಎಚ್‌ಡಿ, ನೆಟ್‌, ಸ್ಲೆಟ್‌ ಆಗಬೇಕು. ಪದವಿ ಕಾಲೇಜುಗಳಲ್ಲಿ  ಪ್ರಾಧ್ಯಾಪಕರ ಹುದ್ದೆಗಳಿರುವುದೇ 9 ಸಾವಿರ, ಈಗಾಗಲೇ 8 ಸಾವಿರ ಹುದ್ದೆ ನೇಮಕ ಮಾಡಿಕೊಂಡಿದ್ದೇವೆ. ಅತಿಥಿ ಉಪನ್ಯಾಸಕ ಹುದ್ದೆ ಬೇಡುವವರಿಗೂ ಯುಜಿಸಿ ನಿಯಮ ಏನಿದೆ ಎನ್ನುವುದು ಗೊತ್ತಿದೆ. ಸುಮ್ಮನೇ ಒತ್ತಾಯ ಮಾಡುತ್ತಾರೆ.

ವಿಸಿಗಳ ನೇಮಕದಲ್ಲಿ ರಾಜ್ಯಪಾಲರಿಗೇಕೆ ಮುನಿಸು ?
ರಾಜ್ಯಪಾಲರಿಗೆ ನನ್ನ ಬಗ್ಗೆ ಏನು ಅಭಿಪ್ರಾಯ ಇದೆಯೋ ಗೊತ್ತಿಲ್ಲ. ಪತ್ರಿಕೆಯವರು ಕೇಳಿದಾಗ ವಿಸಿ ನೇಮಕ ಕುರಿತಂತೆ ನನ್ನ ಕೆಲಸ ಮುಗಿದಿದೆ. ರಾಜ್ಯಭವನದಲ್ಲಿ ಫೈಲ್‌ ಪೆಂಡಿಂಗ್‌ ಇದೆ ಅಂತ ಹೇಳಿದ್ದೆ. ಅವರು ಮುಖ್ಯಮಂತ್ರಿಗೆ ಏನು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಸಿಎಂ ನನಗೇನು ಹೇಳಿಲ್ಲ. ನನಗೆ ರಾಜ್ಯಪಾಲರ ಬಗ್ಗೆ ಅಪಾರ ಗೌರವ ಇದೆ.   

ಮಾರ್ಕ್ಸ್ ಕಾರ್ಡ್‌ ಹಗರಣ ಸುತ್ತಿ ಕೊಂಡಿದೆಯಲ್ಲಾ ?
ನನಗೆ ಈ ಮಾರ್ಕ್ಸ್ ಕಾರ್ಡ್‌ ಬಗ್ಗೆ ಏನೂ ಗೊತ್ತಿಲ್ಲ. ಎಂಎಸ್‌ಐಎಲ್‌ ಸರ್ಕಾರಿ ಸಂಸ್ಥೆ ಎಂಬ ಕಾರಣಕ್ಕೆ ಅವರಿಗೆ ನೀಡಬೇಕೆಂಬ ಸಲಹೆ ಬಂದಿತು. ಅದರಂತೆ ಅವರಿಗೆ ಕೊಟ್ಟೆವು. ಮುಂಬೈ ಮೂಲದ ಬ್ಲಾಕ್‌ ಲಿಸ್ಟ್‌ನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಗುಣಮಟ್ಟದ ಬಗ್ಗೆ ಯಾವುದೇ ದೂರು ಬಂದಿಲ್ಲ. ಅವರು ಚಿಪ್‌ ಹಾಕುವ ಮಾರ್ಕ್‌ ಕಾರ್ಡ್‌ ನೀಡುವುದಾಗಿಯೂ ಎಂಎಸ್‌ಐಎಲ್‌ ಹೇಳಿದೆ. ಒಂದು ವೇಳೆ ಎಂಎಸ್‌ಐಎಲ್‌ ಕಳಪೆ ಗುಣಮಟ್ಟದ ಮಾರ್ಕ್ಸ್ ಕಾರ್ಡ್‌ ನೀಡಿದ್ದರೆ, ಈ ಬಗ್ಗೆ ತನಿಖೆ ನಡೆಸುತ್ತೇನೆ.

ಚಿಪ್‌ಗ್ಳನ್ನು ಬಳಕೆಗೆ ಆದೇಶಿಸಿ, ತಡೆ ಹಿಡಿದಿದ್ಯಾಕೆ ?
ನೋಡ್ರಿ, ನನಗೆ ಎನ್‌ಎಫ್ಸಿ ಚಿಪ್‌ ಅನ್ನೋದೆ ಗೊತ್ತಿಲ್ಲ. ನನಗೆ ಈ ಬಗ್ಗೆ ಯಾರಾದರೂ ಮನವಿ ಮಾಡಲಿ. ನಾನೇನು ಇದರಲ್ಲಿ ಯಾವುದೇ ಹಣ ತಿಂದಿಲ್ಲ. ಎನ್‌ಎಫ್ಸಿ ತಂತ್ರಜ್ಞಾನ ಒಳ್ಳೆಯ ದಾಗಿದ್ದರೆ ಈ ಬಗ್ಗೆ ತಾಂತ್ರಿಕ ಸಮಿತಿಯಲ್ಲಿ ಮುಂದಿಟ್ಟು ಅದೇ ತಂತ್ರಜ್ಞಾನ ಬಳಸುವಂತೆ ವಿವಿಗಳಿಗೆ ಆದೇಶ ನೀಡುತ್ತೇನೆ. ಎಂಎಸ್‌ಐಎಲ್‌ಗೆ ಆದೇಶ ಮಾಡಿದ್ದರೂ ಎಲ್ಲ ವಿವಿಗಳು ಅದನ್ನು ಒಪ್ಪಿಕೊಂಡಿಲ್ಲ. ವಿಶ್ವ ವಿದ್ಯಾಲಯಗಳಿಗೆ ಯಾವುದು ಅನುಕೂಲ ಆಗುತ್ತೆ ಅದನ್ನು ಬಳಸಿಕೊಳ್ಳುತ್ತಾರೆ.  ವಿವಿಗಳಿಗೆ ಒಳ್ಳೆಯದಾಗಬೇಕು ಅನ್ನೋನು ನಾನು.

ನಿಮ್ಮ ವಿರುದ್ಧ ಆರೋಪ ಏಕೆ ಬರ್ತಿದೆ ?
ಎನ್‌ಎಫ್ಸಿ ಅಳವಡಿಸಿಕೊಳ್ಳುತ್ತೇವೆ ಎಂದು ವಿಶ್ವ ವಿದ್ಯಾಲಯ ಗಳು ಹೇಳಿದರೆ, ಅದನ್ನೇ ಬಳಸಿಕೊಳ್ಳಲಿ ನನಗೇನು ತೊಂದರೆ ಯಿಲ್ಲ. ನನ್ನ ವಿರುದ್ಧ ಆರೋಪ ಮಾಡಿದರೆ ನನಗೇನು ತೊಂದರೆ ಯಿಲ್ಲ. ನಾನು ವೈಯಕ್ತಿಕವಾಗಿ ಶುದ್ಧ ಇದ್ದೇನೆ. ಎಲ್ಲ ವಿಚಾರಗಳು ಮಂತ್ರಿ ಗಮನಕ್ಕೆ ಬರುವುದಿಲ್ಲ. ನನ್ನ ಕೈ ಶುದ್ಧವಾಗಿದ್ದರೆ ನಾನೇಕೆ ಹೆದರಲಿ. ನಾನು ಭ್ರಷ್ಟಾಚಾರ ಮಾಡಿದ್ದರೆ ಕೋರ್ಟ್‌ಗೆ ಹೋಗಿ. ಎನ್‌ಎಫ್ಸಿ ತಂತ್ರಜ್ಞಾನ ಬೇಕೆಂದು ವಿವಿ ಸಿಂಡಿಕೇಟ್‌ ತೀರ್ಮಾನ ಮಾಡಿದರೆ ನನ್ನದೇನು ಅಭ್ಯಂತರ ಇಲ್ಲ.

ನೀವು ಸಚಿವರಾದ ಮೇಲೆ ಜಿಲ್ಲಾ ನಾಯಕರಿಗೆ ಗೌರವ ಕೊಡುತ್ತಿಲ್ಲ ಎಂಬ ಆರೋಪ ಇದೆಯಲ್ಲಾ ?
ನಮ್ಮ ಜಿಲ್ಲೆಯಲ್ಲಿ ಎಲ್ಲರೂ ನಾಯಕರೇ ನಾನು ನಾಯಕ ಅಲ್ಲ ಪಕ್ಷದ ಒಬ್ಬ ಸೇವಕ. ನನ್ನ ಬಗ್ಗೆ ಅಸಮಾಧಾನ ಇರೋರು ಯಾರು  ಅಂತ ಹೆಸರು ಹೇಳಿ, ನಮ್ಮಲ್ಲಿ ಎಲ್ಲರೂ ಸಂತೋಷವಾಗಿದ್ದಾರೆ. ನಾನು  ಎಲ್ಲಾ ನಾಯಕರೊಂದಿಗೆ ಮುಕ್ತವಾಗಿದ್ದೇನೆ. 

ಸಿಎಂ ಸರ್ಕಾರಿ ಯಾತ್ರೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ?
ಮುಖ್ಯಮಂತ್ರಿ ಸರ್ಕಾರಿ ಕಾರ್ಯಕ್ರಮಗಳನ್ನು ಅವರೇ ಮಾಡಬೇಕು. ಪಕ್ಷದ ಕಾರ್ಯಕ್ರಮ ಅಂದರೆ ಕೆಪಿಸಿಸಿ ಅಧ್ಯಕ್ಷರು ಮಾಡುತ್ತಾರೆ. ಮುಖ್ಯಮಂತ್ರಿಗಳು ಎಷ್ಟು ಸಭ್ಯರಿದ್ದಾರೋ ಪರಮೇಶ್ವರ್‌ ಅಷ್ಟೇ ಸಭ್ಯರಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈ ಬಾರಿ ಕಾಂಗ್ರೆಸ್‌ 135 ಸ್ಥಾನ ಗೆಲ್ಲುತ್ತದೆ ಎನ್ನುವ ವರದಿ ನನ್ನ ಬಳಿ ಇದೆ. ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ. 

ನಿಮಗೆ ಸಿಎಂ ಆಗಬೇಕು ಅನ್ನೋ ಆಸೆ ಇಲ್ವಾ ?
ನನಗೂ ಒಂದು ಕಾಲ ಬರುತ್ತದೆ. ಈಗ ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರು ಒಳ್ಳೆಯ ವ್ಯಕ್ತಿ ಅವರೇ ಮುಖ್ಯಮಂತ್ರಿ ಆಗ್ತಾರೆ. ಐದು ವರ್ಷ ಆದ ಮೇಲೆ ನಮಗೂ ಸಮಯ ಬರುತ್ತದೆ ಅಲ್ಲಿವರೆಗೂ ಕಾಯ್ತಿನಿ. 

ಪ್ರತ್ಯೇಕ ಧರ್ಮ ಎಲ್ಲಿಗೆ ಬಂತು?
ನಾನು ಸೈಲೆಂಟ್‌ ಆಗಿದ್ದೀನಿ ಅಂದೊಡಿದಾರೆ.  ನನಗೆ ಕಾಲಿಗೆ ನೋವಾಗಿದ್ದರಿಂದ  ಹೋಗಲಾಗಲಿಲ್ಲ. ನಾನು ವರ್ಣ ಬೇಧ ನೀತಿ ವಿರೋಧಿ, ದೇವರು ಮನುಷ್ಯರ ನಡುವೆ ಪೂಜಾರಿ ಇರಬಾರದು. ಇದು ಸಮಾನತೆಗಾಗಿ ನಡೆಯುವ ಹೋರಾಟ. ಹಿಂದೂ ಧರ್ಮದಲ್ಲಿ ಇದು ಸಾಧ್ಯವಿಲ್ಲ. ವರ್ಣ ಬೇಧ ನೀತಿಯಿಂದ ಜಾತಿ ಆಧಾರದಲ್ಲಿ ಅಳೆಯುತ್ತಾರೆ. ಒಬ್ಬ ಹರಿಜನ ದೇವಸ್ಥಾನಕ್ಕೆ ಹೋಗುವಂತಿಲ್ಲ. ಇದೆಂಥ ಧರ್ಮ? ದುಡ್ಡು ಕೊಟ್ಟವರಿಗೆ ದೇವರ ದರ್ಶನ ಆಗುತ್ತೆ ಇದೆಂಥ ಧರ್ಮಾ ? ಲಿಂಗಾಯತ ಪ್ರತ್ಯೇಕ ಧರ್ಮ ಅದರೆ, ಒಳಪಂಗಡ ಇರುವುದಿಲ್ಲ. ಜಾತಿ ಮಾಡೋರು ಲಿಂಗಾಯತ ಧರ್ಮದಲ್ಲಿ ಸೇರಬೇಡಿ. 

ಸಂದರ್ಶನ ಶಂಕರ್‌ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next