Advertisement

ಹೈಕೋರ್ಟ್‌ಲ್ಲಿ ನ್ಯಾಯ ಕೇಳುವೆ: ಮಲ್ಲಮ್ಮ

04:23 PM Jun 16, 2017 | |

ಧಾರವಾಡ: ತಮ್ಮ ಪತಿ ಯೋಗೀಶ ಗೌಡ ಗೌಡರ ಹತ್ಯೆ ಹಿಂದಿರುವ ಪ್ರಭಾವಿಗಳಿಗೆ ಪೊಲೀಸರೇ ರಕ್ಷಣೆ ಕೊಡುತ್ತಿದ್ದು, ಈ ಸಂಬಂಧ ಹೈಕೋರ್ಟ್‌  ನಲ್ಲಿ ನ್ಯಾಯ ಕೇಳುವುದಾಗಿ ಯೋಗೀಶಗೌಡ ಪತ್ನಿ ಮಲ್ಲಮ್ಮ ಗೌಡರ ಹೇಳಿದರು. ಗುರುವಾರ ಸಮೀಪದ ಗೋವನಕೊಪ್ಪದ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,

Advertisement

ನನ್ನ ಪತಿ ಹತ್ಯೆಯಾಗಿ ಇಂದಿಗೆ (ಜೂನ್‌ 15ಕ್ಕೆ) ಒಂದು ವರ್ಷ ಆಯಿತು. ಆದರೆ ಈ ಹತ್ಯೆಯನ್ನು ಮಾಡಿದ  ಕೆಲವು ಅಪರಾಧಿಗಳು ಇನ್ನೂಅರಾಮಾಗಿ ಓಡಾಡಿಕೊಂಡಿದ್ದಾರೆ.  ನನ್ನ ಪತಿ ಕೊಲೆ ನಡೆದ ದಿನ ಕೊಲೆಗಡುಕರು ಬಳಸಿದ ಕಾರನ್ನು ಪೊಲೀಸರು ಇಲ್ಲಿಯವರೆಗೂ ಹಿಡಿದಿಲ್ಲ. ಆ ಕಾರಿನಲ್ಲಿ ಬಂದವರು ಯಾರು? ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸಿಯೇ ಇಲ್ಲ.

ಸಚಿವರ ಪ್ರಭಾವಕ್ಕೆ ಒಳಗಾಗಿರುವ ಪೊಲೀಸ್‌ ಆಯುಕ್ತ ಪಾಂಡುರಂಗ ರಾಣೆ, ಡಿಸಿಪಿ ಕಣಗಾವಿ, ಧಾರವಾಡ ಎಸಿಪಿ, ಈ ಮೂವರು ಸೇರಿಕೊಂಡು ತನಿಖೆಯ ದಾರಿ ತಪ್ಪಿಸುತ್ತಿದ್ದಾರೆ ಎಂದು ಮಲ್ಲಮ್ಮ ಆರೋಪಿಸಿದರು. ಪೊಲೀಸ್‌ ಮತ್ತು ಹಂತಕರ ಮಧ್ಯೆ ಹೊಟೇಲ್‌ ಮಾಲೀಕರ ಸಂಘದ ಸದಸ್ಯ, ಸಚಿವರ ಪರಮಾಪ್ತನೊಬ್ಬ ತನಿಖೆ ದಾರಿ ತಪ್ಪಿಸಲು ಸಹಾಯ ಮಾಡಿದ್ದಾನೆ ಎಂದು ಆಪಾದಿಸಿದರು. 

ಕಾರ್‌ ಬಗ್ಗೆ ತನಿಖೆ ಮಾಡಿ: ಹುಂಡೈ ಎಕ್ಸೆಂಟ್‌ ಕಂಪನಿಯ ಕರಿ ಬಣ್ಣದ ಕಾರು (ಕೆಎ-05, ಎಂ.ಡಿ.0696) ಸಚಿವರ ಆಪ್ತನಾದ ಮರೇವಾಡ್‌ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ ಈರಪ್ಪಾ ಪೂಜಾರ ಅವರ ಸೋದರ ಸಂಬಂಧಿ ಮಂಜುನಾಥ ಬಸಣ್ಣನವರ ಅವರಿಗೆ ಸೇರಿದ್ದಾಗಿದೆ.

ಇವರು ಕೊಲೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿಯವರ ಆಪ್ತ ಸ್ನೇಹಿತರಾಗಿದ್ದಾರೆ. ಈ ಕಾರಿನಲ್ಲಿ ಬಂದು ಹೋದ ಹಂತಕರು ಯಾರು ಎನ್ನುವುದು ಸ್ಪಷ್ಟವಾಗಬೇಕಿದೆ. ಇದು ನ್ಯಾಯಾಲಯದಿಂದ ಮಾತ್ರ ಸಾಧ್ಯ. ಹೀಗಾಗಿ ನಾನು ಹೈಕೋರ್ಟ್‌ ಮೆಟ್ಟಿಲೇರುತ್ತೇನೆ ಎಂದು ಮಲ್ಲಮ್ಮ ಹೇಳಿದರು. 

Advertisement

ಮುತ್ತಗಿಗೆ ಪೊಲೀಸರ ರಕ್ಷಣೆ: ಕೊಲೆ ಆರೋಪಿ ಬಸವರಾಜ ಮುತ್ತಗಿ ಕೆಎಂಸಿಯಿಂದ ಬಿಡುಗಡೆಯಾದಾಗ ಕಲಘಟಗಿ ತಾಲೂಕಿನ ಬೂದಿನಗುಡ್ಡದ ಬಸವೇಶ್ವರನಿಗೆ ಮತ್ತು ಧಾರವಾಡದ ಎಸ್‌ಪಿ ಕಚೇರಿ ಎದುರು ಇರುವ ಕರಿಯಮ್ಮ  ದೇವಸ್ಥಾನಕ್ಕೆ ಹೋಗಲು ಎ.ಕೆ.47 ನೊಂದಿಗೆ 7 ಜನ ಪೊಲೀಸರ ಭದ್ರತೆಯ ರಕ್ಷಣೆ ಕೊಟ್ಟಿರುವುದರ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಪ್ರಭಾವವಿದೆ.

ಪೊಲೀಸರು ಸಚಿವರ ಕೈಗೊಂಬೆಯಾಗಿ ಕುಣಿಯುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದ್ದು, ನನ್ನ ಪತಿ ಹತ್ಯೆ ಪ್ರಕರಣದ ತನಿಖೆ ನಿಷ್ಪಕ್ಷಪಾತವಾಗಿ ನಡೆಸುವಂತೆ ನ್ಯಾಯಾಲಯದಲ್ಲಿ ಕೋರುತ್ತೇನೆ ಎಂದು ಮಲ್ಲಮ್ಮ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next