Advertisement

ನಾಟ್‌ವೆಸ್ಟ್‌ ಮೆಲುಕು: ಆ ದಿನ ನಾನು ಅಮಿತಾಭ್‌ ಆಗಿದ್ದೆ : ಕೈಫ್

08:39 AM Jul 14, 2020 | mahesh |

ಪ್ರಯಾಗ್‌ರಾಜ್‌: ಭಾರತದ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ 2002ರ ನಾಟ್‌ವೆಸ್ಟ್‌ ಟ್ರೋಫಿ ಗೆಲುವಿಗೆ 1983ರ ವಿಶ್ವಕಪ್‌ ವಿಜಯದಷ್ಟೇ ಮಹತ್ವವಿದೆ. ಅಂದು ದಾದಾ ಪಡೆ ಇಂಗ್ಲೆಂಡ್‌ ವಿರುದ್ಧ 326 ರನ್‌ ಬೆನ್ನಟ್ಟಿ ಜಯಭೇರಿ ಮೊಳಗಿಸಿದ್ದು, ಲಾರ್ಡ್ಸ್‌ ಬಾಲ್ಕನಿಯಲ್ಲಿ ಗಂಗೂಲಿ ಶರ್ಟ್‌ ಬಿಚ್ಚಿ ಸಂಭ್ರಮಾಚರಣೆ ನಡೆಸಿದ ದೃಶ್ಯಾವಳಿ ಈಗಲೂ ಕಣ್ಮುಂದಿದೆ. ಇದಕ್ಕೂ ಮಿಗಿಲಾಗಿ ಆಗ ತೆಂಡುಲ್ಕರ್‌, ಗಂಗೂಲಿ, ಸೆಹವಾಗ್‌, ದ್ರಾವಿಡ್‌ ಮೊದಲಾದ ಸ್ಟಾರ್‌ ಆಟಗಾರರನ್ನು ಹೊಂದಿದ್ದ ತಂಡಕ್ಕೆ ಯುವರಾಜ್‌ ಸಿಂಗ್‌ ಮತ್ತು ಮೊಹಮ್ಮದ್‌ ಕೈಫ್ ಅವರಂಥ ಪ್ರತಿಭಾನ್ವಿತ ಆಟಗಾರರಿಬ್ಬರು ಸೇರ್ಪಡೆ ಯಾಗಿದ್ದರು.

Advertisement

ಸೋಮವಾರ ಭಾರತದ ಈ ಮಹೋನ್ನತ ಸಾಧನೆಗೆ 18 ವರ್ಷ ತುಂಬಿತು. ಈ ಸಂದರ್ಭದಲ್ಲಿ ಅಂದಿನ ಚೇಸಿಂಗ್‌ ಹೀರೋ ಮೊಹಮ್ಮದ್‌ ಕೈಫ್ ತವರಿನ ವಿಜಯೋತ್ಸವವನ್ನು ಮೆಲುಕು ಹಾಕಿದ್ದಾರೆ. ತಾನಾಗ ಅಮಿತಾಭ್‌ ಬಚ್ಚನ್‌ ಎಂಬ ಕಲ್ಪನೆಯಲ್ಲಿ ವಿಹರಿಸುತ್ತಿದ್ದೆ ಎಂದಿದ್ದಾರೆ.

ನಾನು ಗಾಳಿಪಟ ಹಾರಿಸಿದ್ದು!
“ಗೆಲುವಿನ ಬಳಿಕ ನಾನು ತವರಾದ ಅಲಹಾಬಾದ್‌ಗೆ ಆಗಮಿಸಿದೆ. ಆದರೆ ಈ ಸಂಭ್ರವನ್ನು ನಿಭಾಯಿಸಲು ನನ್ನಿಂದ ಸಾಧ್ಯವಾಗಲಿಲ್ಲ. ಕಾರಣ, ನಾನು ಭಾರೀ ನಾಚಿಕೆ ಸ್ವಭಾವದವನು. ಅಭಿಮಾನಿಗಳೆಲ್ಲ ಮನೆಗೆ ಲಗ್ಗೆ ಇಡುತ್ತಿದ್ದರು. ಮಾಧ್ಯಮದವರಂತೂ ಬೆನ್ನು ಬಿಡುತ್ತಿರಲಿಲ್ಲ. ಯಮುನಾ ನದಿ ತೀರದಲ್ಲಿ ನಾನು ಗಾಳಿಪಟ ಹಾರಿಸುತ್ತಿದ್ದಾಗ ಅಲ್ಲಿಗೂ ಬರುತ್ತಿದ್ದರು. ಕೈಫ್ ಇವತ್ತು ಗಾಳಿಪಟ ಹಾರಿಸಿದರು ಎಂದು ವರದಿ ಮಾಡುತ್ತಿದ್ದರು. ಆದರೆ ನಾನು ಬಾಲ್ಯದಿಂದಲೇ ಇಲ್ಲಿ ಗಾಳಿಪಟ ಬಿಡುತ್ತಿದ್ದುದು ಅವರಿಗೆ ತಿಳಿದಿರಲಿಲ್ಲ…’ ಎಂದು ಕೈಫ್ ನಗುತ್ತ ಹೇಳಿದರು.

ತೆರೆದ ಜೀಪ್‌ನಲ್ಲಿ ಮೆರವಣಿಗೆ
ಮುಂದಿನ ಘಟನೆ ಇನ್ನೂ ಸ್ವಾರಸ್ಯಕರ. ಅದು ಕೈಫ್ಗೆ ಏರ್ಪಡಿಸಲಾದ ರೋಡ್‌ ಶೋನದ್ದಾಗಿತ್ತು.  “ಅಂದು ಅಲಹಾಬಾದ್‌ನಲ್ಲಿ ನನಗೆ ತೆರೆದ ಜೀಪ್‌ನಲ್ಲಿ ಮೆರವಣಿಗೆ ಏರ್ಪಡಿ ಸಲಾಗಿತ್ತು. 5-6 ಕಿ.ಮೀ. ಸಾಗಲು ಬರೋಬ್ಬರಿ 4 ಗಂಟೆ ತಗುಲಿತ್ತು. ಎಲ್ಲೆಡೆ ಜನವೋ ಜನ. ಜತೆಗೆ ಹಾರ, ತುರಾಯಿ. ಆಗ ನಾನು ಅಮಿತಾಭ್‌ ಬಚ್ಚನ್‌ ಎಂಬ ಕಲ್ಪನೆಯಲ್ಲಿ ತೇಲಾಡುತ್ತಿದ್ದೆ. ಕಾರಣ, ನಾನು ಹುಡುಗನಾಗಿದ್ದಾಗ ಚುನಾವಣೆಯಲ್ಲಿ ಗೆದ್ದ ಅಮಿತಾಭ್‌ ಅವರನ್ನು ಇದೇ ಬೀದಿಯಲ್ಲಿ ತೆರೆದ ಜೀಪಿನಲ್ಲಿ ಮೆರವಣಿಗೆ ಮಾಡಿದ್ದರು. ಆ ದೃಶ್ಯ ಕಣ್ಮುಂದೆ ಸುಳಿಯುತ್ತಿತ್ತು…’ ಎಂದು ಕೈಫ್ ಆ ದಿನದ ಸಂಭ್ರಮವನ್ನು ತೆರೆದಿಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next