Advertisement

ಆ ಬ್ಯಾಗ್‌ನಲ್ಲಿ ನನ್ನ ಬದುಕಿತ್ತು!

01:23 PM Jan 16, 2018 | |

ಎಂಟು ವರ್ಷಗಳ ಹಿಂದೆ ನಮ್ಮ ಹಳ್ಳಿಯಿಂದ 380 ಕಿ.ಮೀ ದೂರವಿರುವ ಬೆಂಗಳೂರಿಗೆ ಉದ್ಯೋಗಕ್ಕಾಗಿ ಪಯಣ ಬೆಳೆಸಿದ್ದೆ. ಅಪ್ಪ- ಅಮ್ಮ ಸಾಲ ಮಾಡಿ ಒಂದಿಷ್ಟು ಹಣ ಕೊಟ್ಟು ಕಳುಹಿಸಿದ್ದರು. ನಾನೊಬ್ಬನೇ ರೈಲಿನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಅದು ನನ್ನ ಮೊದಲ ರೈಲು ಪ್ರಯಾಣ. ಕಾಲಿಡಲು ಸ್ಥಳವಿಲ್ಲದೆ ನಿಂತುಕೊಂಡೇ ಹೊರಟಿದ್ದೆ. ನಾಲ್ಕೈದು ಸ್ಟಾಪ್‌ಗ್ಳ ನಂತರ ಒಬ್ಬ ಅಜ್ಜಿಯ ದಯೆಯಿಂದ ಸೀಟು ಸಿಕ್ಕಿತು. ರಾತ್ರಿ ಸಮಯ. ಯಾರನ್ನು ನಂಬುವುದೋ, ಯಾರನ್ನು ಬಿಡುವುದೋ ಗೊತ್ತಿಲ್ಲ. ಆದರೂ ಸಮಯ ಕಳೆದಂತೆ ನಿದ್ರೆ ಹತ್ತಿತು. ಬೆಳಗ್ಗೆ 7 ಗಂಟೆಗೆ ಎಚ್ಚರವಾದಾಗ, ಒಮ್ಮೆಲೆ ಹೃದಯ ಬಡಿತ ನಿಂತೇ ಹೋಯ್ತು!

Advertisement

ಕಾರಣ, ನಾನು ತಂದ ಬ್ಯಾಗ್‌ ಮಾಯವಾಗಿತ್ತು. ವಿದ್ಯಾಭ್ಯಾಸದ ಎಲ್ಲ ಒರಿಜಿನಲ್‌ ಸರ್ಟಿಫಿಕೆಟ್‌ಗಳು ಅದರಲ್ಲೇ ಇದ್ದವು. ಮನೆಯಿಂದ ತಂದಿದ್ದ ಹಣ ಕೂಡ. ಅಕ್ಕಪಕ್ಕ ಇದ್ದವರನ್ನು ಕೇಳಿದರೂ, ಎಲ್ಲ ಕಡೆ ಹುಡುಕಿದರೂ ಪ್ರಯೋಜನವಾಗಲಿಲ್ಲ. ನನ್ನ ಕಥೆ ಮುಗಿಯಿತು ಎಂದು ತಲೆ ಮೇಲೆ ಕೈಯಿಟ್ಟು ನಿಲ್ದಾಣದಲ್ಲಿ ಅಳುತ್ತಾ ಕೂತಿದ್ದೆ. ಅಷ್ಟರಲ್ಲಿ ನನ್ನ ಬಳಿ ಬಂದ ಒಬ್ಬ ವ್ಯಕ್ತಿ, “ಬಾಬು, ಈ ಬ್ಯಾಗ್‌ ನಿನ್ನದಾ?’ ಎಂದು ಕೇಳಿದರು. ಕಣ್ಣೆತ್ತಿ ನೋಡಿದೆ. ಆ ಬ್ಯಾಗ್‌ ನನ್ನದೇ ಆಗಿತ್ತು. ಹೋದ ಜೀವ ಮತ್ತೆ ಬಂತು. “ಹೌದು ಸರ್‌’ ಎಂದು ಬ್ಯಾಗ್‌ ತಗೊಂಡು ನೋಡ್ತೀನಿ, ಸರ್ಟಿಫಿಕೆಟ್ಸ್‌ ಎಲ್ಲಾ ಸೇಫ್. ಆದರೆ, ಹಣ ಮಾತ್ರ ಇರಲಿಲ್ಲ. ಯಾರೋ ಅದರಲ್ಲಿದ್ದ ಹಣವನ್ನೆಲ್ಲ ಎತ್ತಿಕೊಂಡು, ಬ್ಯಾಗನ್ನು ಎಸೆದು ಹೋಗಿದ್ದರು. ಅವರು ಬ್ಯಾಗ್‌ ಎತ್ತಿಕೊಂಡು ನೋಡಿದಾಗ, ಅದರಲ್ಲಿ ಸರ್ಟಿಫಿಕೆಟ್ಸ್‌ಗಳು ಕಾಣಿಸಿವೆ. ಅಳುಮೋರೆ ಹಾಕಿ ಕೂತಿದ್ದ ನನ್ನದೇ ಬ್ಯಾಗ್‌ ಇರಬಹುದೆಂದು ನನಗೆ ತಂದುಕೊಟ್ಟರು. ಹಣ ಇರದದ್ದನ್ನು ನೋಡಿ ಮತ್ತೆ ಮುಖ ಬಾಡಿತು. ಈಗ ನಾನು ಹೋಗಬೇಕಿದ್ದ ಆಫೀಸ್‌ಗೆ ಹೇಗೆ ಹೋಗಲಿ? ಹೇಗೆ ಕೆಲಸ ಪಡೆಯಲಿ? ಎಂದು ಚಿಂತೆಯಾಯಿತು. 

ನನ್ನ ಬಾಡಿದ ಮುಖ ನೋಡಿದ ಆ ಮನುಷ್ಯ, ಯಾಕೆ? ಹಣ ಇಲ್ಲವಾ ಬಾಬು ಎಂದು ಕೇಳಿ, ಬೆಂಗಳೂರಿನಂಥ ಮಹಾನಗರಗಳಲ್ಲಿ ಕಳ್ಳತನ ಸಾಮಾನ್ಯ. ನಮ್ಮ ಎಚ್ಚರದಲ್ಲಿ ನಾವು ಇರಬೇಕು ಎಂದು ಹೇಳಿ ಟಿಫಿನ್‌ ಮಾಡಿಸಿದರು. ನಂತರ ನನ್ನನ್ನು ಆಫೀಸ್‌ವರೆಗೆ ಡ್ರಾಪ್‌ ಮಾಡಿದರು. ನನಗೆ ಆ ಕೆಲಸವನ್ನೂ ಕೊಡಿಸಿದರು. ಅಷ್ಟೇ ಅಲ್ಲ, ಹತ್ತಿರದಲ್ಲೇ ನನಗೊಂದು ರೂಂ ಮಾಡಿಸಿಕೊಟ್ಟರು. “ಸರ್‌, ನಿಮ್ಮ ವಿಳಾಸ ಕೊಡಿ. ಖಂಡಿತಾ, ನಾನು ನನ್ನ ಮೊದಲ ಸಂಬಳವನ್ನು ನಿಮಗೇ ನೀಡುತ್ತೇನೆ’ ಎಂದರೂ, ಆ ವ್ಯಕ್ತಿ ತನ್ನ ಪರಿಚಯ ಹೇಳದೆ ಹಾಗೇ ಹೊರಟುಹೋದರು. ಪ್ರಸ್ತುತ ನಾನು ಒಂದೊಳ್ಳೆ ಕಂಪನಿಯಲ್ಲಿ ಮ್ಯಾನೇಜರ್‌ ಆಗಿರುವುದಕ್ಕೆ, ಅಂದು ನನ್ನ ಕೈ ಹಿಡಿದ ಆ ಮಹಾನ್‌ ವ್ಯಕ್ತಿಯೇ ಕಾರಣ. 

ಪ್ರಭಾಕರ ಪಿ.

Advertisement

Udayavani is now on Telegram. Click here to join our channel and stay updated with the latest news.

Next