Advertisement

ಸಚಿವ ಡಿಕೆಶಿಗೆ ಮತ್ತೂಂದು ಸಂಕಷ್ಟ

06:00 AM Jun 20, 2018 | Team Udayavani |

ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ಆದಾಯ ತೆರಿಗೆ ಇಲಾಖೆ ವಿಚಾರಣೆ ಸಂದರ್ಭದಲ್ಲಿ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಆದಾಯ ತೆರಿಗೆ ಅಧಿಕಾರಿಗಳು ಆರ್ಥಿಕ ಅಪರಾಧಗಳ ನ್ಯಾಯಾಲಯಕ್ಕೆ ಮತ್ತೂಂದು ದೂರು ನೀಡಿದ್ದಾರೆ.

Advertisement

ಈ ಸಂಬಂಧ ವಿಚಾರಣೆ ನಡೆಸಿದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ನ್ಯಾ. ಎಂ.ಎಸ್‌.ಆಳ್ವ ಅವರು ಡಿ.ಕೆ.
ಶಿವಕುಮಾರ್‌ ಹಾಗೂ ಇತರರಿಗೆ ಆ.2ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದ್ದಾರೆ.
ಹೀಗಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ಗೆ ಆದಾಯ ತೆರಿಗೆ ಇಲಾಖೆ ಹೊಸ ಶಾಕ್‌ ನೀಡಿದಂತಾಗಿದೆ. ಇದೀಗ ಆ.2ರಂದು ಡಿ.ಕೆ. ಶಿವಕುಮಾರ್‌, ಉದ್ಯಮಿ ಸಚಿನ್‌ ನಾರಾಯಣ್‌, ಸುನಿಲ್ ಕುಮಾರ್‌ ಶರ್ಮಾ, ಆಪ್ತರಾದ ಆಂಜನೇಯ, ಹನುಮಂತಯ್ಯ ಮತ್ತು ರಾಜೇಂದ್ರ ಅವರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಬೇಕಿದೆ.

2017ರಲ್ಲಿ ಶಿವಕುಮಾರ್‌ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ತಮ್ಮ ಆದಾಯ ಕುರಿತು ಮಾಹಿತಿ ನೀಡಲು ಐಟಿ ಅಧಿಕಾರಿಗಳು ಶಿವಕುಮಾರ್‌ಗೆ ಸಮನ್ಸ್‌ ಜಾರಿ ಮಾಡಿದ್ದರು. ವಿಚಾರಣೆಗೆ ಹಾಜರಾದ ಶಿವಕುಮಾರ್‌ ಹಾಗೂ ಇತರರು ಸುಳ್ಳು ಮಾಹಿತಿ ನೀಡಿರುವುದು ಕಂಡು ಬಂದಿದೆ. ಸಚಿವರು ವಿಚಾರಣೆ ಸಂದರ್ಭದಲ್ಲಿ ನೀಡಿರುವ ಹೇಳಿಕೆ, ಅವರ
ಮನೆ ಮತ್ತು ಕಚೇರಿಗಳಲ್ಲಿ ಪತ್ತೆಯಾದ ದಾಖಲೆಗಳಿಗೆ ತಾಳೆ ಆಗುತ್ತಿಲ್ಲ. ಆ ಮೂಲಕ ಸುಳ್ಳು ಮಾಹಿತಿ ನೀಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿರುವ ಐಟಿ ಅಧಿಕಾರಿಗಳು ಐಟಿ ಕಾಯ್ದೆ 277, 278, 193, 199, ಹಾಗೂ 120(ಬಿ) ಸೆಕ್ಷನ್‌ಗಳ ಅಡಿ ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್‌ ವಿರುದ್ಧ ಕೇಂದ್ರ ಸರ್ಕಾರ ಇದೀಗ ಸಮನ್ಸ್‌ ಜಾರಿ “ಅಸ್ತ್ರ’ ಬಳಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next