Advertisement

ನಾನು ಭಾರತವನ್ನು ಪ್ರೀತಿಸಲು ಕಲಿತೆ

04:35 AM Sep 17, 2017 | Harsha Rao |

ಒಬ್ಬ ಪಾಕಿಸ್ತಾನಿಯಳಾಗಿ ನಾನು ಮೊದಲಿನಿಂದಲೂ ಭಾರತೀಯ ಮಾಧ್ಯಮಗಳನ್ನು “ಪಾಕ್‌ ವಿರೋಧಿ’ ಮತ್ತು ಅತಿ “ರಾಷ್ಟ್ರೀಯವಾದಿ’ ಎಂದು ಭಾವಿಸಿದ್ದೆ. ಹೀಗಾಗಿ ಇತ್ತೀಚೆಗೆ ಭಾರತೀಯ ಪತ್ರಕರ್ತರೊಂದಿಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಾಗ, ಅವರಿಂದ ಏನನ್ನು ನಿರೀಕ್ಷಿಸಬೇಕು ಎನ್ನುವ ಬಗ್ಗೆ ನನಗೆ ಗೊಂದಲವಿತ್ತು. ನಾನು  “ಸೌತ್‌ ಏಷ್ಯಾ ಜರ್ನಲಿಸಂ ಫೆಲೋಶಿಪ್‌ನಲ್ಲಿ’ ಭಾಗಿಯಾಗಲು ಲಂಡನ್‌ಗೆ ತೆರಳಿದ್ದೆ. ಈ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನ, ಶ್ರೀಲಂಕಾ, ಭಾರತ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನಿಂದ ಬಂದ 17 ಪತ್ರಕರ್ತರಿದ್ದರು. ನಾವೆಲ್ಲ ಎರಡು ತಿಂಗಳವರೆಗೆ ಲಂಡನ್‌ನಲ್ಲಿ ಜೊತೆಯಾಗಿ ಕೆಲಸ ಮಾಡಬೇಕಿತ್ತು.  

Advertisement

ಹೀತೌÅವ್‌ ವಿಮಾನನಿಲ್ದಾಣದಲ್ಲಿ ಕೆಳಕ್ಕಿಳಿಯುತ್ತಿದ್ದಂತೆಯೇ ನನಗೆ, “ಭಾರತೀಯ ಪತ್ರಕರ್ತರೊಂದಿಗೆ ಮುಕ್ತ ಮಾತುಕತೆ ನಡೆಸಿದರೆ ಹೇಗಿರುತ್ತದೆ?’ ಎಂಬ ಯೋಚನೆ. “ಪಾಕಿಸ್ತಾನದ ಗಾತ್ರ ಭಾರತದ ಕಾಲುಭಾಗದಷ್ಟಿದೆ. ಆದರೂ ಭಾರತದ ನ್ಯೂಸ್‌ ಚಾನೆಲ್‌ಗ‌ಳು ನಮ್ಮ ಬಗ್ಗೆಯೇ ಸುದ್ದಿ ಬಿತ್ತರಿಸುತ್ತಿರುತ್ತವೆ.’ ಹೀಗೆ ಯೋಚಿಸುತ್ತಲೇ ನಾನು ನನ್ನ ತಾತ್ಕಾಲಿಕ ಫ್ಲ್ಯಾಟ್‌ಗೆ ತೆರಳಿದೆ. ಅದೇ ಅಪಾರ್ಟ್‌ಮೆಂಟ್‌ನಲ್ಲಿಯೇ ಭಾರತೀಯ ಪತ್ರಕರ್ತರೂ ಉಳಿದುಕೊಂಡಿದ್ದರು. 

ಲಂಡನ್‌ನಲ್ಲಿ ಎರಡನೆಯ ದಿನ. ರಾತ್ರಿ ಅಡುಗೆ ಸಿದ್ಧಪಡಿಸಿ ಭಾರತೀಯ ಮತ್ತು ಇತರ ಪತ್ರಕರ್ತರನ್ನೆಲ್ಲ ಊಟಕ್ಕೆ ಆಹ್ವಾನಿಸುವ ಯೋಚನೆಯಲ್ಲಿದ್ದೆ. ಆದರೆ ಆಶ್ಚರ್ಯವೆಂಬಂತೆ, ಹೈದ್ರಾಬಾದ್‌ ಮೂಲದ ಸುಧಾಕರ ರೆಡ್ಡಿ  ಎಂಬ ಹಿರಿಯ ಪತ್ರಕರ್ತರು ನಮ್ಮೆಲ್ಲರನ್ನೂ ಮೊದಲೇ ಊಟಕ್ಕೆ ಆಹ್ವಾನಿಸಿಬಿಟ್ಟರು. ಆ ರಾತ್ರಿ ಅವರ ಫ್ಲ್ಯಾಟ್‌ನಲ್ಲಿ ನಾವು ಅನ್ನ ಮತ್ತು ಚಿಕನ್‌ ಬಾರಿಸುತ್ತಾ  ಬಲಪಂಥೀಯ ರಾಜಕಾರಣದ ಬೆಳವಣಿಗೆಯ ಬಗ್ಗೆ ಚರ್ಚೆ ಮಾಡಿದೆವು.  ಕೆಲವೇ ದಿನಗಳಲ್ಲಿ ಸುಧಾಕರರ ಡಿನ್ನರ್‌ ಟೇಬಲ್‌ ನಮ್ಮ ಮುಕ್ತ ಚರ್ಚೆಗೆ ವೇದಿಕೆಯಾಗಿಬಿಟ್ಟಿತು. ಹೆಚ್ಚಾಗಿ, ಅತ್ತ ಸುಧಾಕರ್‌ ಅಡುಗೆ ಮಾಡುತ್ತಿದ್ದರೆ ಇತ್ತ ನಾವೆಲ್ಲ ತೀವ್ರವಾದ, ಜಾತಿ ಪದ್ಧತಿ, ಪ್ರತ್ಯೇಕತಾ ಚಳವಳಿಗಳು, ಕಾಶ್ಮೀರ ಸಮಸ್ಯೆ ಮತ್ತು ಸಿಪಿಇಸಿಯಂಥ ಸಂಕೀರ್ಣ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಆಗಾಗ ಜೋಕುಗಳೂ ಹರಿದಾಡುತ್ತಿದ್ದವು(ಭಾರತದ ಬಾಡಿಗೆದಾರರು ಮನೆ ತೊರೆದ ಮೇಲೆ ಲಂಡನ್‌ನ ರಿಯಲ್‌ ಎಸ್ಟೆಟ್‌ ಏಜೆಂಟರು ಊದಿನ ಕಡ್ಡಿ ಹಚ್ಚಿಡುತ್ತಾರಂತೆ. ಏಕೆಂದರೆ ಭಾರತೀಯ ಅಡುಗೆ ವಾಸನೆಯ ಘಾಟು ಮನೆಗೆಲ್ಲ ಅಂಟಿಕೊಂಡಿರುತ್ತದೆ!)

ಲಂಡನ್‌ನಲ್ಲಿ ಎರಡನೆಯ ವಾರ: ದೆಹಲಿ ಮೂಲದ ಪತ್ರಕರ್ತ ಪಿನಾಕಿ ಚಕ್ರವರ್ತಿಯವರು ರಾತ್ರಿ ಹಣ ಡ್ರಾ ಮಾಡಲು ಒಬ್ಬರೇ ಹೋಗಿದ್ದರು. ಆಗ ಎಟಿಎಂ ಬಳಿ ಅವರಿಂದ ದುಷ್ಕರ್ಮಿಗಳು ಹಣ ದೋಚಿಬಿಟ್ಟರು. ಈ ಘಟನೆಯಿಂದ ಅವರು ಬಹಳ ಡಿಸ್ಟರ್ಬ್ ಆಗಿದ್ದರು, ಅಲ್ಲದೇ ವಿಪರೀತ ಹಣ ಕಳೆದುಕೊಂಡಿದ್ದರು. ಹೀಗಾಗಿ ರಾತ್ರಿ ಒಬ್ಬೊಬ್ಬರೇ ಅಡ್ಡಾಡಬಾರದೆಂದು ನಿರ್ಧರಿಸಿದೆವು.  ಕೆಲವು ದಿನಗಳ ನಂತರ ನಾನು, ರಿಫ‌ತ್‌ ಇಸ್ಲಾಮ್‌(ಬಾಂಗ್ಲಾದೇಶಿ ಪತ್ರಕರ್ತೆ) ಮತ್ತು ಸುಧಾಕರ್‌ ಅವರು ರಾತ್ರಿ 10 ಗಂಟೆಗೆ ವೆಸ್ಟ್‌ ಮಿನಿಸ್ಟರ್‌ ಪ್ಯಾಲೆಸ್‌ನತ್ತ ಹೊರಟೆವು. ರೈಲಿಗಾಗಿ ಕಾಯುತ್ತಾ ನಿಂತಿದ್ದಾಗ ಕಳ್ಳರು ಬಂದರೆ ಹೇಗೆ ಎಂದು ನಾನು ಚಿಂತೆ ಮಾಡಲಾರಂಭಿಸಿದೆ. ಆಗ ಸುಧಾಕರ್‌ ಹೇಳಿದರು “”ನಾನಿರೋವರೆಗೂ ನೀವಿಬ್ಬರೂ ಹೆದರಬೇಕಾದ ಅಗತ್ಯವಿಲ್ಲ. ನಿಮ್ಮಿಬ್ಬರನ್ನೂ ಯಾರೂ ಮುಟ್ಟಲಾರರು”. ಅವರ ಮಾತು ಕೇಳಿದ್ದೇ ನನಗೆ. ಪಾಕಿಸ್ತಾನಿಯೊಬ್ಬನ ಜೊತೆಗಿದ್ದೇನೋ ಎನ್ನುವಷ್ಟು ಧೈರ್ಯ ಬಂದುಬಿಟ್ಟಿತು. 

ಕೆಲ ಸಮಯದ ನಂತರ ಸುಧಾಕರ್‌ ಮತ್ತು ನಾನು ಪರಸ್ಪರರ ಕುಟುಂಬಗಳ ಫೋಟೋ, ವೀಡಿಯೋ ತೋರಿಸಲಾರಂಭಿಸಿದೆವು. ಅವರಿಗೆ ನಾನು “ಒಮ್ಮೆ ಪಾಕಿಸ್ತಾನಕ್ಕೆ ಬನ್ನಿ’ ಅಂತ ಅಹ್ವಾನ ಕೊಟ್ಟೆ. ಆಗ “ನೀವೂ ಒಮ್ಮೆ ಭಾರತಕ್ಕೆ ಬನ್ನಿ’ ಎಂದರು. ಕೂಡಲೇ ನಾನಂದೆ-“”ಅಯ್ಯೋ ಭಾರತ ಹೆಣ್ಣುಮಕ್ಕಳಿಗೆ ಸುರಕ್ಷಿತ ಸ್ಥಳವಲ್ಲ, ಹೀಗಾಗಿ ಕುಟುಂಬದವರು ನನ್ನ ಭಾರತಕ್ಕೆ ಕಳಿಸೋಲ್ಲ. ಅಲ್ಲದೇ ನಾನು ಪಾಕಿಸ್ತಾನಿಯಳು ಬೇರೆ!”.  ಬಹುಶಃ ಸುಧಾಕರ್‌ ಅವರಿಗೆ ಹೀಗೆ ಹೇಳಿದ್ದು ನಾನೊಬ್ಬಳೇ ಅಲ್ಲವೇನೋ. ಅವರು ನನ್ನ ಮಾತು ಕೇಳಿ ನಕ್ಕು, ಬಹಳ ವಿನಮ್ರವಾಗಿ ಹೇಳಿದರು: “”ಹೇಗೆ ನೀವೆಲ್ಲ ಉಗ್ರವಾದಿಗಳಲ್ಲವೋ, ಹಾಗೆಯೇ ಭಾರತೀಯರೆಲ್ಲ ಅತ್ಯಾಚಾರಿಗಳಲ್ಲ!”

Advertisement

ಆಗ ನನಗೆ 3 ವರ್ಷದ ಹಿಂದೆ ಎದುರಾಗಿದ್ದ ಇಂಥದ್ದೇ ಸನ್ನಿವೇಶ ನೆನಪಾಯಿತು. ಪಾಕಿಸ್ತಾನಿಯರೆಲ್ಲ ಉಗ್ರವಾದಿಗಳು ಎಂಬ ಧಾಟಿಯಲ್ಲಿ ಮಾತನಾಡಿದ್ದ ಅಮೆರಿಕನ್‌ ವ್ಯಕ್ತಿಯೊಬ್ಬರಿಗೆ(ಸಂಪ್ರದಾಯಸ್ಥ ಕ್ಯಾಥೋಲಿಕ್‌) ನಾನು ಹೀಗೆಯೇ ಹೇಳಿದ್ದೆ-“”ಹೇಗೆ ನೀವೆಲ್ಲ ಮಕ್ಕಳ ಪೀಡಕರಲ್ಲವೋ, ಹಾಗೆಯೇ ಪಾಕಿಸ್ತಾನಿಯರೆಲ್ಲ ಉಗ್ರವಾದಿಗಳಲ್ಲ”

ಸುಧಾಕರ್‌ ಒಬ್ಬರೇ ಅಲ್ಲ, ಲಂಡನ್‌ನಲ್ಲಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮತ್ತೂಬ್ಬ ಭಾರತೀಯ, ದೆಹಲಿ ಮೂಲದ ಬ್ಯುಸಿನೆಸ್‌ ಪತ್ರಕರ್ತ ಅನುÏಮಾನ್‌ ತಿವಾರಿಯೊಂದಿಗೂ ನಾನು ಬಹಳ  ಮಾತನಾಡಿದೆ. ತಿವಾರಿ ಅವರಂತೂ ಪತ್ರಿಕೋದ್ಯಮದ ತಂತ್ರಗಳ ಬಗ್ಗೆ, , ಫಿಟೆ°ಸ್‌ ಬಗೆಗಿನ ನನ್ನ ಪ್ರೀತಿಯ ಬಗ್ಗೆ, ಕೊನೆಗೆ ಪಾಕಿಸ್ತಾನದ ಉರ್ದು ಕವಿಗಳ ಬಗ್ಗೆಯೂ ಮಾತನಾಡಿದರು(ಅನುÏಮಾನ್‌ ಪಾಕಿಸ್ತಾನಕ್ಕೆ ಭೇಟಿಕೊಟ್ಟಿದ್ದಾರೆ). ಒಂದಂತೂ ಸ್ಪಷ್ಟವಾಯಿತು. ಸುಧಾಕರ್‌ ಮತ್ತು ಅನುÏಮಾನ್‌ ಪಾಕಿಸ್ತಾನವನ್ನು ಶತ್ರುರಾಷ್ಟ್ರವೆಂದು ನೋಡುತ್ತಿರಲಿಲ್ಲ. ಅವರ ಜೊತೆ ಲಂಡನ್‌ನಲ್ಲಿ ಕಾಫಿಗೆ, ಊಟಕ್ಕೆ, ಸಂಗ್ರಹಾಲಯಗಳಿಗೆ ಭೇಟಿ ಕೊಟ್ಟಾಗ ಭಾರತದ ಬಗ್ಗೆ ಹೊಸ ಸಂಗತಿಗಳನ್ನು ಕಲಿಯುತ್ತಾ ಹೋದೆ.  

ಎರಡು ತಿಂಗಳ ಫೆಲೋಶಿಪ್‌ ಪ್ರೋಗ್ರಾಂ ಮುಗಿಯುವುದರಲ್ಲಿತ್ತು. ಆ ಸಮಯದಲ್ಲಿ ನನಗೆ ತೆಲುಗು ಸಿನೆಮಾ/ಟಾಲಿವುಡ್‌ನ‌ ಪರಿಚಯವಾಯಿತು. ಲಾಹೋರ್‌ನಿಂದ ಬಂದಿದ್ದ ಪತ್ರಕರ್ತೆ ನೀದಾ ತೆಹ್ಸಿàನ್‌ ಟಾಲಿವುಡ್‌ ಸಿನೆಮಾ ನೋಡುವುದಕ್ಕೆ ನಮಗೆಲ್ಲ ವ್ಯವಸ್ಥೆ ಮಾಡಿದಳು. ನಾವೆಲ್ಲ ಬಾಹುಬಲಿ 2 ಸಿನೆಮಾ ನೋಡಿದೆವು. ಆ ಸಂಜೆ ಭಾರತದ ಬಗ್ಗೆ ನಾನೊಂದು ಸಂಗತಿಯನ್ನು ಅರ್ಥಮಾಡಿಕೊಂಡೆ. ಭಾರತದಲ್ಲಿ ಸಿನೆಮಾಗಳು ಜೀವನ ಎಂಜಾಯ್‌ ಮಾಡುವುದನ್ನು ಕಲಿಸಿಕೊಡುತ್ತವೆ. ಎಲ್ಲರೂ ತಮ್ಮ ಆದಾಯದ ಒಂದಿಷ್ಟು ಪಾಲನ್ನು ಸಿನೆಮಾ ನೋಡಲು ಎತ್ತಿಡುತ್ತಾರೆ.  
ಭಾರತದ ಬಗ್ಗೆ ನನಗೆ ಮೊದಲಿದ್ದ ಒಟ್ಟಾರೆ ಕಲ್ಪನೆಯು ರೂಪಪಡೆದದ್ದು ಬಾಲಿವುಡ್‌ ಸಿನೆಮಾ ಮತ್ತು ಕೆಲವೊಂದು ಬೆರಳೆಣಿಕೆ ನ್ಯೂಸ್‌ ಚಾನೆಲ್‌ಗ‌ಳ ಮೂಲಕ. ಹೀಗಾಗಿ, ಇಷ್ಟೊಂದು ದೊಡ್ಡ ಮತ್ತು ವೈವಿಧ್ಯಮಯ ಭಾರತೀಯ ಸಮಾಜದ ಬಗೆಗಿನ ನನ್ನ ದೃಷ್ಟಿಕೋನ ಇಷ್ಟು ವರ್ಷ ಸಂಕುಚಿತವಾಗಿಯೇ ಇತ್ತಲ್ಲ ಎಂದು ಆಶ್ಚರ್ಯಪಟ್ಟೆ. ಆದರೆ ಮಾತನಾಡುತ್ತಾ ಹೋದಾಗ ಇನ್ನೊಂದು ವಿಷಯವೂ ಅರ್ಥವಾಯಿತು, ನನ್ನ ಭಾರತೀಯ ಸ್ನೇಹಿತರಿಗೂ ಪಾಕಿಸ್ತಾನದ ಬಗ್ಗೆ ಇಂಥದ್ದೇ ಸಂಕುಚಿತ ದೃಷ್ಟಿಕೋನವಿತ್ತು. ಪಾಕಿಸ್ತಾನದ ಬಹುಮುಖೀ ಸಮಾಜದ ಸಂಕೀರ್ಣತೆಗಳನ್ನು ವಿವರಿಸುವುದಕ್ಕೆ ನಾನೂ ಹಲವಾರು ಬಾರಿ ಹೆಣಗಿದ್ದೇನೆ.  

ಲಂಡನ್‌ನಲ್ಲಿ ಕೊನೆಯ ದಿನ: ಸುಧಾಕರ್‌ ಮತ್ತು ನನ್ನ ನಡುವಿನ ಮಾತು ಶಿಕ್ಷಣ ಮತ್ತು ಮಕ್ಕಳ ಪೋಷಣೆಯತ್ತ ಹೊರಳಿತು. ಆಗ ಸುಧಾಕರ್‌ ಹೇಳಿದ ಮಾತೊಂದು ನನ್ನ ಹೃದಯ ತಾಕಿತು. ಅವರಂದರು- “”ನನ್ನ ಮಗಳು ದೊಡ್ಡವಳಾದ ಮೇಲೆ ನಿಮ್ಮಂತೆ ಆಗಬೇಕು”. ಈ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. 
ಲಂಡನ್‌ಗೆ ನಾವು ಅಪರಿಚಿತರಾಗಿ ಬಂದಿದ್ದೆವು, ನಿರ್ಗಮಿಸಿದ್ದು ಸ್ನೇಹಿತರಾಗಿ!

ದುರದೃಷ್ಟವೆಂದರೆ ಎರಡೂ ದೇಶಗಳಲ್ಲಿನ ಮಾಧ್ಯಮಗಳು ಕೇವಲ ಯುದ್ಧ ಮತ್ತು ದ್ವೇಷದ ಕಥೆಗಳ ಮೇಲೆಯೇ ಗಮನ ಹರಿಸುತ್ತಿವೆ. ಬಹಳ ಬಾರಿ ಭಾರತದಲ್ಲಿ ರಾಷ್ಟ್ರೀಯತೆಯನ್ನು “ಪಾಕಿಸ್ತಾನ ವಿರೋಧಿ’ ಭಾವನೆಗೆ ಸಮೀಕರಿಸಲಾಗುತ್ತದೆ. ಪಾಕಿಸ್ತಾನದಲ್ಲೂ ಉಲ್ಟಾ ಆಗುತ್ತದಷ್ಟೆ. ಆದರೆ ನಾವು ಹೀಗಿರಬೇಕಾದ ಅಗತ್ಯವಿಲ್ಲವಲ್ಲ? ಪಾಕಿಸ್ತಾನಿಯರು ಮತ್ತು ಭಾರತೀಯರ ಮಧ್ಯೆ ಚರ್ಮದ ಬಣ್ಣವಷ್ಟೇ ಅಲ್ಲ ಇನ್ನೂ ಅನೇಕ ಸಾಮ್ಯತೆಗಳಿವೆ. ಉದಾಹರಣೆಗೆ ನಮ್ಮ “ಕ್ರಿಕೆಟ್‌ ಪ್ರೇಮ’! 

ನಾನು ಪಾಕಿಸ್ತಾನಕ್ಕೆ ತಲುಪುತ್ತಿದ್ದಂತೆಯೇ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಆರಂಭವಾಯಿತು. ಭಾರತ ಮತ್ತು ಪಾಕ್‌ ಪಂದ್ಯದ ವೇಳೆಯಲ್ಲೇ ನಾವೆಲ್ಲ ಗ್ರೂಪ್‌ ಮೆಸೇಜ್‌ ಮಾಡಿ ಯಾರು ಚೆನ್ನಾಗಿ ಆಡುತ್ತಿದ್ದಾರೆ, ಹೇಗೆ ಮ್ಯಾಚ್‌ ಟರ್ನ್ ಆಯಿತು ಎನ್ನುವುದನ್ನೆಲ್ಲ ಚರ್ಚಿಸಿದೆವು. ಫೈನಲ್‌ನಲ್ಲಿ ಪಾಕಿಸ್ತಾನ ಗೆದ್ದಾಗ ಸುಧಾಕರ್‌ ಜೊತೆಗೆ ಫೋನ್‌ನಲ್ಲಿ ಮಾತನಾಡಿದೆ. ಹೇಗೆ ಪಾಕ್‌ ಮತ್ತು ಭಾರತೀಯ ಕ್ರಿಕೆಟ್‌ ಅಭಿಮಾನಿಗಳ ಭಾವನೆ( ತಮ್ಮ ತಂಡ ಸೋತಾಗ ಮತ್ತು ಗೆದ್ದಾಗ) ಒಂದೇ ರೀತಿಯಿರುತ್ತದೆ ಎಂದು ಜೋಕ್‌ ಮಾಡಿದೆವು. ಅಲ್ಲದೇ ಅದೇ ವೇಳೆಯಲ್ಲೇ ನನಗೆ ಭಾರತ ಮತ್ತು ಪಾಕಿಸ್ತಾನ ವಿಭಜನೆಯ 70 ವರ್ಷ ಹತ್ತಿರವಾಗುತ್ತಿದೆ ಎನ್ನುವುದು ತಿಳಿಯಿತು. 

ಒಟ್ಟಲ್ಲಿ “ಗಡಿಯಾಚೆಗೂ ನನಗೆ ಸ್ನೇಹಿತರಿದ್ದಾರೆ’ ಎಂಬ ಆಪ್ತಭಾವದಿಂದ ನಾನು ಈ ಬಾರಿಯ ಸ್ವಾತಂತ್ರೊÂàತ್ಸವವನ್ನು ಆಚರಿಸಿದೆ. 
(ಲೇಖಕಿ ಕರಾಚಿ ಮೂಲದ ಪತ್ರಕರ್ತೆ ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕಿ)

– ಹೀನಾ ಅಲಿ, ಪತ್ರಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next