ರಾಂಚಿ: “5 ತಿಂಗಳ ನಂತರ, ನಾನು ಕಾನೂನಾತ್ಮಕವಾಗಿ ಜೈಲಿನಿಂದ ಹೊರಬಂದಿದ್ದೇನೆ. ಕಳೆದ 5 ತಿಂಗಳು ಜಾರ್ಖಂಡ್ ಚಿಂತಿತವಾಗಿತ್ತು. ನಾನು ಜೈಲಿಗೆ ಹೋಗಿದ್ದು ಯಾಕೆ ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ಜಾರ್ಖಂಡ್ ಮಾಜಿ ಸಿಎಂ ಹೇಮಂತ್ ಸೊರೇನ್ ಆಕ್ರೋಶ ಹೊರ ಹಾಕಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾಗಿ ಜೈಲಿನಿಂದ ಹೊರ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೊರೇನ್ ”ನನ್ನನ್ನು 5 ತಿಂಗಳ ಕಾಲ ಜೈಲಿನಲ್ಲಿ ಇರಿಸಲಾಗಿತ್ತು.ನ್ಯಾಯಾಂಗ ಪ್ರಕ್ರಿಯೆಯು ದಿನಗಳು ಅಥವಾ ತಿಂಗಳುಗಳಲ್ಲ, ಹೇಗೆ ವರ್ಷಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಇಂದು ನಮ್ಮ ವಿರುದ್ಧ ಹೇಗೆ ಸಂಚು ರೂಪಿಸಲಾಯಿತು ಎಂಬುದು ಇಡೀ ದೇಶಕ್ಕೆ ಸಂದೇಶವಾಗಿದೆ. ನಾವು ಪ್ರಾರಂಭಿಸಿದ ಹೋರಾಟ ಮತ್ತು ನಾವು ಮಾಡಿದ ನಿರ್ಣಯಗಳನ್ನು ಈಡೇರಿಸಲು ನಾವು ಕೆಲಸ ಮಾಡುತ್ತೇವೆ” ಎಂದು ಹೇಳಿದರು.
ಜೈಲಿನಿಂದ ಹೊರಬರುವ ವೇಳೆ ಪತ್ನಿ ಕಲ್ಪನಾ ಸೊರೇನ್ ಅವರೊಂದಿಗೆ ಜೆಎಂಎಂ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳ ಮೂಲಕ ಸ್ವಾಗತಿಸಿದರು. ಬಿಡುಗಡೆಯಾದ ಬಳಿಕ ಹೇಮಂತ್ ಅವರು ತಂದೆ, ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಮತ್ತು ತಾಯಿ ರೂಪಿ ಸೊರೇನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜನವರಿ 31 ರಂದು ಜಾರ್ಖಂಡ್ ಸಿಎಂ ಹುದ್ದೆಗೆ ಸೊರೇನ್ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ರಾಂಚಿ ರಾಜಭವನದಿಂದ ಬಂಧಿಸಲಾಗಿತ್ತು. ಇದಾದ ಬಳಿಕ ಜೂನ್ 22 ರಂದು, ಭೂಕಬಳಿಕೆ ಸಂಬಂಧ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆಯ ಭಾಗವಾಗಿ ರಾಂಚಿಯಲ್ಲಿ ದಾಳಿ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ 1 ಕೋಟಿ ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದವು.