Advertisement

ನಾನು ದಿಲ್ಲಿಯಲ್ಲಿ ಕುಳಿತು ಆಳ್ವಿಕೆ ಮಾಡಿಲ್ಲ

05:10 AM Apr 18, 2019 | mahesh |

ದೂರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಂದರ್ಶನದಲ್ಲಿ ಐದು ವರ್ಷಗಳಲ್ಲಿ ತಮ್ಮ ನೇತೃತ್ವದ ಸರ್ಕಾರ ಮಾಡಿದ ಸಾಧನೆಗಳನ್ನು ವಿವರಿಸಿದ್ದಾರೆ. ಜತೆಗೆ 2022ಕ್ಕೆ 75ನೇ ಸ್ವಾತಂತ್ರ್ಯ ದಿನದ ವೇಳೆ ಸಾಧಿಸಬೇಕಾಗಿರುವ ಗುರಿಯ ಬಗ್ಗೆ ಕನಸುಗಳನ್ನು ಮುಂದಿಟ್ಟಿದ್ದಾರೆ. ಗುಜರಾತ್‌ನಲ್ಲಿ ಸುದೀರ್ಘ‌ ಅವಧಿಗೆ ಮುಖ್ಯಮಂತ್ರಿಯಾಗಿದ್ದ ಅನುಭವವೇ ದೇಶವನ್ನು ಮುನ್ನಡೆಸಲು ಬೇಕಾದ ಸ್ಫೂರ್ತಿ ನೀಡಿತು ಎಂದು ಮೋದಿಯರು ವಿನಮ್ರರಾಗಿ ಹೇಳಿಕೊಂಡಿದ್ದಾರೆ.

Advertisement

ಭಾರತದ ಭವಿಷ್ಯದ ಬಗ್ಗೆ ಪ್ರಣಾಳಿಕೆಯಲ್ಲಿ ಅನೇಕ ಕನಸಿಟ್ಟುಕೊಂಡಿದ್ದೀರಿ. 2022ರಲ್ಲಿ ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಹೇಗೆ ಆ ಗುರಿಗಳನ್ನು ತಲುಪುತ್ತೀರಿ?
2022ಕ್ಕೆ ಭಾರತದ ಸ್ವಾತಂತ್ರ್ಯಕ್ಕೆ 75 ತುಂಬಲಿದೆ. ಆ ವೇಳೆ ದೇಶದಲ್ಲಿ ಒಂದು ಪ್ರೇರಣೆಯ ವಾತಾವರಣವನ್ನು ನಿರ್ಮಿಸಲಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಸಂಪೂರ್ಣವಾಗಿ ಸ್ಮರಿಸುವ ಕೆಲಸ ಆಗಲಿದೆ. ಅವರ ಸ್ಫೂರ್ತಿಯಿಂದ ನೂರಾರು ಕೋಟಿ ಭಾರತೀಯರು ದೇಶದ ಅಭಿವೃದ್ಧಿ ಜತೆ ಹೆಜ್ಜೆಹಾಕಲಿದ್ದಾರೆ. 75 ವರ್ಷದ ಈ ಸಂಭ್ರಮದ ಹಿನ್ನೆಲೆಯಲ್ಲಿ 75 ಪ್ರಮುಖ ಹೆಜ್ಜೆಗಳನ್ನು 2022ರಲ್ಲಿ ಪೂರೈಸಲಿದ್ದೇವೆ. ಅಂದರೆ, ಇದರರ್ಥ 2023-24ರಲ್ಲಿ ಜನ ನೀವು ಏನು ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದರೆೆ, ಅಷ್ಟೊಂದು ದೊಡ್ಡ ಜವಾಬ್ದಾರಿ ಹೊತ್ತು ಹಿಂದೆ ಯಾರೂ ಸಾಧಿಸದ್ದನ್ನೇ ಮಾಡಿದ್ದೇವೆ ಎಂದೇ ಹೇಳುತ್ತೇವೆ. 2022ರಲ್ಲಿ ಯಾರ ಬಳಿ ವಸತಿ ಇರುವುದಿಲ್ಲವೋ, ಅವರೆಲ್ಲರಿಗೂ ಮನೆಗಳನ್ನು ನಿರ್ಮಿಸುತ್ತೇವೆ; ವಿದ್ಯುತ್‌ ಸೌಲಭ್ಯ ಇಲ್ಲದ ಸ್ಥಳಕ್ಕೆ ಅದು ತಲುಪಿರುತ್ತದೆ. ಇವೆಲ್ಲ ವಂಚಿತವಾಗಿ, ಸರಳವಾಗಿ ಬದುಕುತ್ತಿರುವವರಿಗೆ ಸೌಲಭ್ಯಗಳ ಮೂಲಕ ಬಲ ತುಂಬುತ್ತೇವೆ. ರೈತರ ಆದಾಯ ಆ ಹೊತ್ತಿಗೆ ದ್ವಿಗುಣವಾಗಲಿದೆ. ರೈತರ ಕೃಷಿ ಆದಾಯದೊಂದಿಗೆ, ಪಶುಸಂಗೋಪನೆ, ಕೋಳಿ ಸಾಕಣೆ, ಮೀನುಗಾರಿಕೆ, ಜೇನುಸಾಕಣೆ ಇತ್ಯಾದಿ ಕಸುಬುಗಳನ್ನು ಯಶಸ್ವಿಯಾಗಿ ಜೋಡಿಸುವ ಕೆಲಸವಾಗಲಿದೆ. ಪಂಪ್‌ಸೆಟ್‌ ಅವಶ್ಯಕತೆಗಳನ್ನೂ ಪೂರೈಸುತ್ತೇವೆ. ಸೋಲಾರ್‌ ಪ್ಯಾನೆಲ್‌ ಮೂಲಕ ಅವರಿಗೆ ವಿದ್ಯುತ್‌ ಪೂರೈಸಿದರೆ, 365 ದಿನವೂ ಆದಾಯ ಕಂಡುಕೊಳ್ಳಲು ಮಾರ್ಗಗಳು ಸಿಗಲಿವೆ.

ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದೀರಿ. ಆದರೆ, ಪ್ರಸ್ತುತ ಅವರ ಹತಾಶೆ, ಆತ್ಮಹತ್ಯೆ, ಪ್ರತಿಭಟನೆಗಳಿಗೆ ಮುಂದಿನ ದಿನಗಳಲ್ಲಿ ಯಾವ ಉತ್ತರ ಸಿಗಲಿದೆ?
ಆ ನಿಟ್ಟಿನಲ್ಲಿ ನಮ್ಮ ಯೋಜನೆಗಳು ಸಾಕಷ್ಟಿವೆ. ಮಣ್ಣಿನ ಆರೋಗ್ಯ ಕಾರ್ಡ್‌ಗಳ ಬೃಹತ್‌ ಅಭಿಯಾನ ಈಗಾಗಲೇ ಸಾಗಿದೆ. ರೈತರ ಜಮೀನಿನ ಮಣ್ಣು ಹೇಗಿದೆ? ಅದರ ಆರೋಗ್ಯ ಯಾವ ಗುಣಮಟ್ಟದ್ದು? ಎಂಬ ಮಾಹಿತಿಯನ್ನಾಧರಿಸಿ, ಕೃಷಿ ನಿರ್ಧಾರಗೊಳ್ಳಲಿವೆ. ರಾಸಾಯನಿಕ ಗೊಬ್ಬರ ಹಾಕಿ, ಈಗಾಗಲೇ ಸಾಕಷ್ಟು ಭೂಮಿ ಬರಡಾಗಿದೆ. ಅವುಗಳ ಸುಧಾರಣೆಗೆ ಯೋಜನೆ ಕೈಗೊಳ್ಳಲಿದ್ದೇವೆ. ದೇಶದ ಆಮದು ಹೆಚ್ಚಾದಂತೆ ರೈತರಿಗೆ ಬಲ ಸಿಗಲಿದೆ. ಫ‌ಸಲ್‌ ವಿಮಾ ಯೋಜನೆಯಲ್ಲಿ ಪ್ರಾಕೃತಿಕ ವಿಕೋಪಗಳಿಂದಾಗುವ ನಷ್ಟಕ್ಕೆ ಈಗಾಗಲೇ ಸಾಕಷ್ಟು ಪರಿಹಾರ ಸಿಕ್ಕಿದೆ. ರೈತರನ್ನು ಸಂತೋಷವಾಗಿಡುವುದು ನಮ್ಮ ಮುಂದಿನ ಉದ್ದೇಶ. “ಇ-ನಾಮ್‌’ ಯೋಜನೆ ಶುರುವಾದರೆ, ರೈತರ ಬೆಳೆಗಳಿಗೆ ರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸಿಗಲಿದೆ. ರೈತರು ತಮ್ಮ ಮೊಬೈಲುಗಳ ಮೂಲಕವೇ ತಮ್ಮ ಬೆಳೆಯ ಮಾರುಕಟ್ಟೆಯನ್ನು ತಿಳಿದುಕೊಳ್ಳಬಹುದು.

ನೀವು 2022ರ ಬಗ್ಗೆಯೂ ಮಾತಾಡುತ್ತೀರಿ, 2047ರ ಕನಸು ಗಳನ್ನೂ ಹೇಳುತ್ತೀರಿ. ಇಷ್ಟೊಂದು ಆತ್ಮವಿಶ್ವಾಸ ಹೇಗೆ ಸಾಧ್ಯ?
ಕಳೆದ 5 ವರ್ಷಗಳನ್ನು ಅತ್ಯಂತ ಸಮರ್ಪಣಾ ಭಾವದಿಂದ, ಪರಮ ನಿಷ್ಠೆಯಿಂದ ಪೂರೈಸಿರುವುದೇ ಇದಕ್ಕೆ ಕಾರಣ. ಈ ಅವಧಿಯಲ್ಲಿ ಒಳ್ಳೆಯ ಸಂಗತಿಗಳನ್ನು ಬರಮಾಡಿಕೊಳ್ಳುತ್ತಾ, ವಿದ್ಯಾರ್ಥಿಯಂತೆ ಪಾಠವನ್ನೂ ಕಲಿಯುತ್ತಾ, ಹೆಜ್ಜೆ ಇಟ್ಟಿದ್ದೇನೆ. ಇನ್ನೊಂದು ನನಗೆ ಹೆಚ್ಚು ಲಾಭವಾಗಿದ್ದು, ಗುಜರಾತ್‌ ರಾಜ್ಯದ ಅತಿ ಸುದೀರ್ಘ‌ ಮುಖ್ಯಮಂತ್ರಿ ಆಗಿದ್ದು. ಆ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದ ಅನುಭವಗಳು ಇಲ್ಲಿ ಕೇಂದ್ರ ಸರ್ಕಾರವನ್ನು ಮುನ್ನಡೆಸಲು ಸುಲಭ ಮಾಡಿಕೊಟ್ಟವು. ದೇಶದಲ್ಲಿ ಎಲ್‌ಪಿಜಿ ಸಂಪರ್ಕಗಳನ್ನು ಈ 5 ವರ್ಷದಲ್ಲಿ ದ್ವಿಗುಣಗೊಳಿಸುವಲ್ಲಿ ಇದೇ ಅನುಭವವೇ ಕೈಹಿಡಿಯಿತು. ಜನರು ದೇಶದ ಅಭಿವೃದ್ಧಿಯ ವೇಗವನ್ನು ನೋಡಿದ್ದಾರೆ, ನಮ್ಮ ಆಡಳಿತವನ್ನೂ ನೋಡಿದ್ದಾರೆ, ನಮ್ಮ ಕೆಲಸದ ಪ್ರಮಾಣಗಳನ್ನೂ ನೋಡಿದ್ದಾರೆ. ನಾವು ಎಲ್ಲೂ ಎಡವಿಲ್ಲ, ಪ್ರಮಾದ ಎಸಗಿಲ್ಲ. ಈ 5 ವರ್ಷದ ಕಠಿಣ ಪರಿಶ್ರಮ ಮತ್ತು ತ್ಯಾಗ ನಮಗೆ ಆತ್ಮವಿಶ್ವಾಸವನ್ನು ತುಂಬಿವೆ. ನಾನು ದಿಲ್ಲಿಯಲ್ಲಿ ಕುಳಿತು ದೇಶವನ್ನು ನಡೆಸಿಲ್ಲ. ಶನಿವಾರ- ಭಾನುವಾರಗಳನ್ನೂ ನೋಡದೆ ದೇಶದ ಮೂಲೆ ಮೂಲೆಗೆ ಹೋಗಿದ್ದೇನೆ. ಜನರೊಂದಿಗೆ ಮಾತಾಡಿದ್ದೇನೆ. ಇದರ ಫ‌ಲವಾಗಿ ಚುನಾವಣಾ ರ್ಯಾಲಿಗಳಲ್ಲಿ 2014ಕ್ಕಿಂತಲೂ ಹೆಚ್ಚು ಜನ ಈಗ ಸೇರುತ್ತಿದ್ದಾರೆ.

ಬಾಲಕೋಟ್‌ ದಾಳಿಯ ನಂತರ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಶಕ್ತಿ ಸಿಕ್ಕಿದೆ. ವಿದೇಶಗಳ ಜತೆ ಇಟ್ಟುಕೊಂಡ ಒಳ್ಳೆಯ ಸಂಬಂಧವೇ ನೆರವಾಗಿರಬಹುದೇ?
ನಿಮ್ಮ ಮಾತು ನಿಜ. ಇಂದು ಭಾರತ ವಿಶ್ವದ ಮಧ್ಯದಲ್ಲಿ ತನ್ನ ಜಾಗವನ್ನು ಮಾಡಿಕೊಂಡಿದೆ. ಮೊದಲು ನಾವು ಕೇವಲ ಪ್ರೇಕ್ಷಕರಾಗಿದ್ದೆವು. ಈಗ ನಾವು ಪ್ಲೇಯರ್‌ ಆಗಿದ್ದೇವೆ. ಒಂದು ಗಮನದಲ್ಲಿಟ್ಟುಕೊಳ್ಳಿ, ಇವತ್ತು ಜಾಗತಿಕ ತಾಪಮಾನದಂಥ ಚರ್ಚೆಯಲ್ಲೂ ನಮ್ಮ ಧ್ವನಿಗೆ ಬೆಲೆ ಸಿಗುತ್ತಿದೆ. ಇಂದು ವಿಶ್ವವನ್ನು ಭಾರತವೇ ಮುನ್ನಡೆಸುತ್ತಿದೆ. ಜಾಗತಿಕ ಸೌರ ಒಕ್ಕೂಟಕ್ಕೆ ಭಾರತವೇ ಅಡಿಪಾಯ ಹಾಕಿದೆ. ಇಸ್ರೇಲ್‌ ಅಲ್ಲದೆ, ಪ್ಯಾಲೆಸ್ತೀನ್‌ ಜೊತೆಗೂ ಉತ್ತಮ ಬಾಂಧವ್ಯ ಸಂಪಾದಿಸಿದ್ದೇವೆ. ಭಾರತದ ಪ್ರಧಾನಮಂತ್ರಿಯಾಗಿ ಇವರೆಡೂ ದೇಶಗಳಿಗೆ  ಹೋಗಿ ಬಂದಿದ್ದು, ಸೌಭಾಗ್ಯವೇ ಸರಿ. ಅರಬ್‌ ರಾಷ್ಟ್ರಗಳು ಮತ್ತು¤ ಇರಾನ್‌ ನಡುವೆಯೂ ನಾವು ಸುಮಧುರ ನಂಟನ್ನು ಇಟ್ಟು ಕೊಂಡಿದ್ದೇವೆ. ಇಂದು ವಿಶ್ವದ ಎಲ್ಲ ರಾಷ್ಟ್ರಗಳೂ ಆಂತರಿಕವಾಗಿ ಸ್ವತಂತ್ರವಾಗಿದ್ದು, ಪರಸ್ಪರ ಸಂಬಂಧಗಳನ್ನು ಬಯಸುತ್ತಿವೆ. ಇಂಥ ಸ್ಥಿತಿಯಲ್ಲಿ ಭಾರತ ಪ್ರತ್ಯೇಕವಾಗಿ ಇರಲು ಸಾಧ್ಯವೇ ಇಲ್ಲ. ಈ ಸ್ನೇಹವೇ ನಮಗೆ ಇಂದು ಅಪಾರ ಬಲ ತುಂಬಿದೆ.

Advertisement

ಅತ್ತ ಕಾಂಗ್ರೆಸ್‌ನವರು ಪ್ರಣಾಳಿಕೆಯಲ್ಲಿ ಸಾಮಾಜಿಕ ಸುರಕ್ಷೆಯ ಪ್ರಸ್ತಾಪ ಎತ್ತಿದ್ದಾರೆ. ನೀವು 60 ವರ್ಷ ದಾಟಿದ ರೈತರಿಗೆ ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದೀರಿ. ಸಾಮಾಜಿಕ ಸುರಕ್ಷೆ ಇಂದು ದೊಡ್ಡ ಸಂಚಿಕೆಯಾಗುತ್ತಿದೆಯೇ?
ಮೊದಲನೆಯದಾಗಿ, ಪ್ರತಿ ಸರ್ಕಾರಕ್ಕೂ ಸಾಮಾಜಿಕ ಸುರಕ್ಷೆ ಎನ್ನುವುದು ಪ್ರಮುಖ ದಾಯಿತ್ವ. ಪ್ರಣಾಳಿಕೆಯಲ್ಲಿ ಅದು ಇದೆಯೋ, ಇಲ್ಲವೋ, ಆದರೆ ಈ ಹಿಂದಿನ 5 ವರ್ಷಗಳಲ್ಲಿ ನಾವು ಮಾಡಿರುವುದು ಅದೇ ಕೆಲಸವನ್ನೇ. ಜನರಿಗೆ ವಾಸಿಸಲು ವಸತಿಯನ್ನು ಪೂರೈಸಿರುವುದು, ಆಯುಷ್ಮಾನ್‌ ಭಾರತ್‌ ಯೋಜನೆಯ ಮೂಲಕ ಬಡವರಿಗೆ 5 ಲಕ್ಷ ರೂ. ವರೆಗೆ ಆರೋಗ್ಯ ರಕ್ಷೆ ನೀಡಿರುವುದು, ಸಾಮಾನ್ಯ ಮನುಷ್ಯನಿಗೂ 90 ಪೈಸೆಗೆ ವಿಮೆ ನೀಡಿರುವುದು, ಸಾಮಾಜಿಕ ಸುರಕ್ಷಾ ಯೋಜನೆಗಳೇ. 3 ಸಾವಿರ ಕೋಟಿ ರೂ. ವಿಮೆ ಈಗಾಗಲೇ ಜನರನ್ನು ತಲುಪಿದೆ. ಹಾಗಾಗಿ, ನಮ್ಮ ಸರ್ಕಾರದ ಕೆಲಸ ವೃತ್ತಪತ್ರಿಕೆಗಳಲ್ಲಿ ಹೆಡ್‌ಲೈನ್‌ ಆದವು.

ಕಾಂಗ್ರೆಸ್‌ನ ನ್ಯಾಯ ಯೋಜನೆಯನ್ನು ಹೇಗೆ ಪರಿಗಣಿಸುತ್ತೀರಿ? ಅನುಷ್ಠಾನಕ್ಕೆ ತರುತ್ತೀರಾ?
ಅವರು ಇಂದು ನ್ಯಾಯ ಯೋಜನೆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ, ಈ 60- 65 ವರ್ಷಗಳಲ್ಲಿ ಒಂದೇ ಕುಟುಂಬ 55 ವರ್ಷ ಆಳ್ವಿಕೆ ನಡೆಸಿ, ಈ ದೇಶಕ್ಕೆ ಘೋರ ಅನ್ಯಾಯ ಮಾಡಿದ್ದಾರೆ. ಇಂಥವರಿಂದ ಯಾವ ನ್ಯಾಯ ನಿರೀಕ್ಷಿಸಲು ಸಾಧ್ಯ? 1984ರ ಸಿಖ್‌ ವಿರೋಧಿ ದಂಗೆಯಲ್ಲಿ ಅವರನ್ನು ನಿರ್ದಯವಾಗಿ ನಡೆಸಿಕೊಂಡಾಗ, ಕಾಂಗ್ರೆಸ್‌ಗೆ ಸಾಮಾಜಿಕ ನ್ಯಾಯ ಕಾಣಿಸಲಿಲ್ಲವೇ? ಈ ದೇಶದಲ್ಲಿ 100ಕ್ಕೂ ಅಧಿಕ ಸಲ 356 ವಿಧಿಯನ್ವಯ ಸರ್ಕಾರಗಳನ್ನು ಮುರಿದು, ಬೀಳಿಸಿ, ರಾಜನೀತಿಕ್‌ ದಳವನ್ನು ಕೆಳಕ್ಕುರುಳಿಸಿದವರಿಂದ ಯಾವ ನ್ಯಾಯ ಸಾಧ್ಯ? ಈ ದೇಶದಲ್ಲಿ ಎಂಜಿಆರ್‌ಗೂ ಅಪಮಾನ ಮಾಡಿದ್ದಾರೆ, ಕರುಣಾನಿಧಿಯವರನ್ನೂ ಅವಮಾನಿಸಿದ್ದಾರೆ, ನಂಬೂದರಿಪ್ಪಾಡ್‌ರನ್ನೂ ಅವರು ಬಿಡಲಿಲ್ಲ. ಪ್ರಕಾಶ್‌ ಸಿಂಗ್‌ ಬಾದಲ್‌ ಅವರಿಗೂ ಹಾಗೆಯೇ ಮಾಡಿದ್ದಾರೆ. ಈ ಘಟನೆಗಳೆಲ್ಲ ಯಾವ ಸಾಮಾಜಿಕ ನ್ಯಾಯ? ಅಂಥ ಕೆಲಸ ಮಾಡಿದ ಕಾಂಗ್ರೆಸ್‌ ಇಂದು ಸಾಮಾಜಿಕ ನ್ಯಾಯದ ಕುರಿತು ಮಾತಾಡುತ್ತಿದೆ.

ಸರ್‌, ಶತ್ರುಗಳನ್ನು ಎದುರಿಸುವುದು ಅಭ್ಯಾಸವಾಗಿದೆ ಎಂದು ನೀವೇ ಹೇಳಿದ್ದೀರಿ. ಈ 5 ವರ್ಷಗಳಲ್ಲಿ ಇಷ್ಟೊಂದು ಶತ್ರುಗಳನ್ನು ಕಂಡಿದ್ದೀರಲ್ಲಾ?
ಐದು ವರ್ಷವಲ್ಲ, 18-19 ವರ್ಷಗಳಿಂದ ಇಂಥ ಶತ್ರುಗಳನ್ನು ನೋಡುತ್ತಾ, ಎದುರಿಸುತ್ತಲೇ ಇದ್ದೇನೆ. ನನ್ನ ಡಿಕ್ಷನರಿಯಲ್ಲಿ ಯಾವುದೇ ಪ್ರಮಾದದ ಪದವೇ ಇಲ್ಲ. ನಾನು ಪೂರ್ಣ ಸಮರ್ಪಣಾ ಭಾವದಿಂದ ದೇಶದ ಕೆಲಸ ಮಾಡುತ್ತಿದ್ದೇನೆ.

ನಿಮಗೇಕೆ ಈ ಪ್ರಮಾಣದಲ್ಲಿ ಶತ್ರುಗಳು?
ಕಾರಣ ಒಂದೇ, ಅದೂ ತುಂಬಾ ಸಿಂಪಲ್‌… ದೇಶದ ಜನತೆಗೆ ನನ್ನ ಮೇಲಿರುವ ಅಪಾರ ಪ್ರೀತಿ. ಆದರೆ, ತಮ್ಮನ್ನು ಯಾರೂ ಸ್ವೀಕಾರ ಮಾಡುತ್ತಿಲ್ಲ ಎನ್ನುವ ಬೇಸರ ಶತ್ರುಗಳದ್ದು.

370ನೇ ವಿಧಿ ರದ್ದು ಮಾಡಿದರೆ, ಫಾರೂಖ್‌ ಅಬ್ದುಲ್ಲಾ, ಮೆಹಬೂಬ ಮುಫ್ತಿ, ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸುವುದಾಗಿ ಹೇಳಿದ್ದಾರೆ. 2020ಕ್ಕೆ ಡೆಡ್‌ಲೈನ್‌ ಅನ್ನೂ ಕೊಟ್ಟಿದ್ದಾರಲ್ಲಾ?
ಅವರು ಯಾವಾಗಲೂ ಅದೇ ಭಾಷೆಯನ್ನೇ ಪ್ರಯೋಗಿಸುವುದು. ಇದು ಎಮೋಶನಲ್‌ ಬ್ಲ್ಯಾಕ್‌ವೆುàಲ್‌ ಅಷ್ಟೇ. ಈಗ ಭಾವನಾತ್ಮಕವಾಗಿ ಸ್ಫೋಟಗೊಂಡಿದ್ದಾರೆ. ಕಾಶ್ಮೀರದ ಜನತೆಗೆ ಅವರು ಚುನಾವಣೆಯನ್ನು ಬಹಿಷ್ಕರಿಸಲು ಹೇಳಿದ್ದರು. ಈಗ ಪಂಚಾಯ್ತಿ ಚುನಾವಣೆಗಳೂ ಅಲ್ಲಿ ನಡೆದಿವೆ. ಈ ಮುಖಂಡರು ಅಲ್ಲಿ ಔಡ್‌ಡೇಟೆಡ್‌. ಅಬ್ದುಲ್ಲಾ, ಮುಫ್ತಿಯನ್ನು ನಾಯಕರನ್ನಾಗಿ ಒಪ್ಪಿಕೊಳ್ಳಲು ಯಾವ ಕಾಶ್ಮೀರಿಯೂ ತಯಾರಿಲ್ಲ. ರಾಜ್ಯಪಾಲರ ಆಳ್ವಿಕೆಯಲ್ಲಿ ಪಂಚಾಯ್ತಿ ಚುನಾವಣೆಗಳು ನಡೆದಾಗ, ಅದನ್ನು ತಡೆಯಲು ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇವರಿಬ್ಬರ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದರೂ, ಶೇ.75ರ ಪ್ರಮಾಣದಲ್ಲಿ ಮತದಾನ ನಡೆಯಿತು. ಸಹಸ್ರಾರು ಪಂಚ್‌, ಸರಪಂಚ್‌ಗಳು ಆಯ್ಕೆಯಾಗಿ, ಈಗ ಖುಷಿಯಿಂದ ಕೆಲಸ ಮಾಡುತ್ತಿದ್ದಾರೆ. ಈಗ ಭಾರತ ಸರ್ಕಾರದ ಪೈಸೆ ಯಾವ ಮಧ್ಯವರ್ತಿಯನ್ನೂ ತಲುಪುತ್ತಿಲ್ಲ. ಕಾಶ್ಮೀರದ ಕೊನೆಯ ವ್ಯಕ್ತಿಗೆ ಮುಟ್ಟುತ್ತಿದೆ.

ಉತ್ತರ ಪ್ರದೇಶದಲ್ಲಿ ನಿಮ್ಮ ವಿರೋಧಿಗಳೆಲ್ಲ ಒಗ್ಗೂಡಿದ್ದಾರೆ. ಕಳೆದ ಸಲದಂತೆ ಈ ಬಾರಿಯೂ ಬಿಜೆಪಿ ಅಲ್ಲಿ ಒಳ್ಳೆಯ ಸೀಟುಗಳನ್ನು ಗೆಲ್ಲಲು ಸಾಧ್ಯವೇ?
ಬಿಜೆಪಿ ಅಲ್ಲಿ ಅದ್ಭುತ ಫ‌ಲಿತಾಂಶವನ್ನೇ ಕಾಣಲಿದೆ. ದೇಶದ ಇತರೆ ಪ್ರದೇಶಗಳ ಜನತೆಯಂತೆ ಉತ್ತರ ಪ್ರದೇಶದವರ ಜೋಶ್‌ ಕೂಡ ಹೆಚ್ಚಾಗಿದೆ ಇದೆ. ನಾಲ್ಕಾರು ದಶಕಗಳಿಂದ ಅಧಿಕಾರ ಅನುಭವಿಸಿದವರನ್ನು ಈಗಾಗಲೇ ಮೈದಾನದಿಂದ ಹೊರಗೆ ಹಾಕಿದ್ದಾರೆ. ಅವರೆಲ್ಲ ಈಗ ಒಗ್ಗೂಡಿ ಮಹಾಮೈತ್ರಿಕೂಟ ಮಾಡಿಕೊಂಡಿದ್ದಾರಷ್ಟೇ. ಫ‌ಲಿತಾಂಶ ಬರುತ್ತಿದ್ದಂತೆ ಅವರು ಅಲ್ಲಿಂದಲೂ ಓಡಿಹೋಗಲಿದ್ದಾರೆ. ಇದಕ್ಕೆ ಸಾಕ್ಷ್ಯ ಕೊಡುವ ಅವಶ್ಯಕತೆ ನನಗಿಲ್ಲ.

n ಅಮೇಠಿಯನ್ನು ಉದ್ದೇಶಿಸಿಯೂ ಹೀಗೆಯೇ ಹೇಳುತ್ತೀರಾ?
ಅಮೇಠಿಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಾನು ಹೇಳಿದ್ದು. ಅದರಲ್ಲಿ ಯಾವುದೇ ಮುಜುಗರವಿಲ್ಲ.

ರಾಹುಲ್‌ ಗಾಂಧಿ ಅಮೇಠಿಯಲ್ಲಿ ಸೋಲುವ ಭಯದಿಂದ, ವಯನಾಡ್‌ಗೆ ಓಡಿದ್ದಾರೆ ಎಂದು ನೀವು ಹೇಳುತ್ತೀರಾ?
ನಾನು ಹೇಳುತ್ತಿಲ್ಲ, ಅದು ವಾಸ್ತವ.

ಮಂಗಳೂರಿನಲ್ಲಿ ಜನ ಸಾಗರ ನೋಡಿದೆ
ಜನಸಾಗರದ ನಡುವೆ ನೀವು ಸಿಲುಕಿದ ಕ್ಲಿಪ್‌ ನೋಡಿದೆವು…
ಹೌದು. ಆದರೆ, ಅದೇನೂ ರೋಡ್‌ ಶೋ ಆಗಿರಲಿಲ್ಲ. ಮಂಗಳೂರಿನ ಭೇಟಿ ಸಂದರ್ಭ. ನಾನು ಹೋಗುವಾಗ ಜನ ಹೊರಗೆ ಸಾಲುಗಟ್ಟಿ ನಿಂತಿದ್ದರು. ಆಗ ನಾನು ಅವರತ್ತ ಕೈ ಬೀಸೋಣ ಅಂತ ಕಾರಿನಿಂದ ಹೊರಗೆ ಇಳಿದೆ. ಆಗ ನನಗೇ ಆಶ್ಚರ್ಯವಾಯಿತು. ಮೈಲು ದೂರದವರೆಗೂ, ಅಕ್ಕಪಕ್ಕ 25-50 ಅಡಿ ಅಂತರದಲ್ಲಿ ಇದೇ ದೃಶ್ಯವೇ ಇತ್ತು. ಅದನ್ನು ಯಾರೋ ಫೋಟೋಗ್ರಾಫ‌ರ್‌ ಮೇಲಿಂದ ಕ್ಲಿಕ್ಕಿಸಿದ್ದಾರೆ. ಜನ ನಮ್ಮ ರ್ಯಾಲಿಗಳಿಗೆ ಮುಗಿಬೀಳುತ್ತಿದ್ದಾರೆ ಎನ್ನುವುದಕ್ಕೆ ಇದೇ ನಿದರ್ಶನ

Advertisement

Udayavani is now on Telegram. Click here to join our channel and stay updated with the latest news.

Next