ಮೈಸೂರು: ಪೂರ್ವ ನಿಗದಿತ ಕಾರ್ಯಕ್ರಮ ಇದ್ದುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರೆದಿದ್ದ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ತಿಳಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿಯಲ್ಲೇ ಇದ್ದೇನೆ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿಯೂ ಮುಂದುವರಿಯುತ್ತೇನೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಹೇಳಿದರು.
ಸಮರ್ಥನೆ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಮತ್ತು ವಿಧಾನಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ವಿರುದ್ಧ ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಅವರು, ಅಂಬೇಡ್ಕರ್ ಮತ್ತು ದಲಿತರಿಗೆ ಭಾವನಾತ್ಮಕ ಸಂಬಂಧವಿದೆ.
ಸಂವಿಧಾನ ಮತ್ತು ಅಂಬೇಡ್ಕರ್ ಕುರಿತು ಇವರಿಬ್ಬರ ಹೇಳಿಕೆಗೆ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆಯುತ್ತಿದ್ದವು, ಹೀಗಾಗಿ ನನ್ನ ಅಂತರಾಳದ ಮಾತುಗಳನ್ನು ಹೇಳಿದ್ದೇನೆ. ಇದನ್ನು ಮಾಧ್ಯಮಗಳು ವಾಗ್ಧಾಳಿ ಎಂದುಕೊಂಡರೆ ನಾನೇನು ಮಾಡಲಿ ಎಂದರು.
ಮಜಾವಾದಿ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತ್ಯತೀತವಾದಿಯೂ ಅಲ್ಲ, ಸಮಾಜವಾದಿಯೂ ಅಲ್ಲ. ಕೇವಲ ಮಜಾವಾದಿ, 80 ಲಕ್ಷ ರೂಪಾಯಿಯ ವಾಚ್ ಕಟ್ಟಿದಾಗಲೇ ಅವರು ಸಮಾಜವಾದಿಯಲ್ಲ ಎಂಬುದು ಗೊತ್ತಾಯಿತು. ಅವರೊಬ್ಬ ನಿರ್ಲಜ್ಜ ರಾಜಕಾರಣಿ ಎಂದು ವಾಗ್ಧಾಳಿ ನಡೆಸಿದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಜಿ.ಟಿ.ದೇವೇಗೌಡ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಎಚ್ಬಿ ಭೂ ಹಗರಣಕ್ಕೆ ಸಂಬಂಧಿಸಿದ ಪ್ರಕರಣವನ್ನು ಲೋಕಾಯುಕ್ತದಿಂದ ಎಸಿಬಿಗೆ ವರ್ಗಾಯಿಸಿ, ಎದುರಾಳಿಯನ್ನು ವಾಮಮಾರ್ಗದಿಂದ ಹೆದರಿಸಲು ನೋಡುತ್ತಿದ್ದಾರೆ ಎಂದು ಹೇಳಿದರು.