ವಿಜಯಪುರ: “ನಾನು ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ. ನಾನು ಪ್ರಧಾನಿ ಆಗಿದ್ದ ಸಂದರ್ಭದಲ್ಲಿ ಕೃಷ್ಣಾ ಕಣಿವೆ ಯೋಜನೆಗೆ ಚಾಲನೆ ನೀಡಿದ್ದೆ. ಆದರೆ ನನ್ನಂತೆ ಹಿಂದಿನ ಪ್ರಧಾನಿ ಮನಮೋಹನ ಸಿಂಗ್ ಹಾಗೂ ಇಂದಿನ ಮೋದಿ ಇಬ್ಬರೂ ನೀರಾವರಿ ಯೋಜನೆಗಳ ಕುರಿತು ಆದ್ಯತೆ ನೀಡದೇ ರೈತರ ಸಮಸ್ಯೆಯನ್ನು ನಿರ್ಲಕ್ಷಿಸಿದರು ‘ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಜೆಡಿಎಸ್ನಿಂದ ಉತ್ತರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅಪಪ್ರಚಾರ ನಡೆಸಲಾಯಿತು. ಆದರೆ ನನಗೆ ಉತ್ತರ ಕರ್ನಾಟಕ ವಿರೋಧಿ ಎಂದು ಪಟ್ಟ ಕಟ್ಟಿದವರೆಲ್ಲ ಈಗ ಮೇಲೆ ಹೋಗಿದ್ದಾರೆ. ಆದರೆ ನಾನು ಏನೆಲ್ಲ ಮಾಡಿದರೂ ಮೋದಿ ಅವರ ಮಟ್ಟಕ್ಕೆ ಇಳಿದು ಮಾತನಾಡಲಾರೆ’ ಎಂದರು.
“ನಾನು ಕೂಡ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಅವಧಿಯಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಯ ಕೃಷ್ಣಾ ಮೇಲ್ದಂಡೆ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದ್ದೇ ನಾನು. ಸದರಿ ಯೋಜನೆಗೆ ಆರ್ಥಿಕ ಸಮಸ್ಯೆ ಎದುರಾದರೂ ಬಾಂಡ್ ಹಾಗೂ ಸಾಲದ ಮೂಲಕ ಕೃಷ್ಣಾ ಕಣಿವೆ ಯೋಜನೆಗೆ ಮುಂದಾಗಿದ್ದೆ. ವರ್ಷಕ್ಕೆ 1000 ಕೋಟಿ ರೂ. ನೀಡುವ ಮೂಲಕ ಈ ಭಾಗದ ನೀರಾವರಿ ಯೋಜನೆಗಳಿಗೆ ನನ್ನ ಬದ್ಧತೆ ತೋರಿದ್ದೇನೆ’ ಎಂದರು.
ನಾನು ಸಿಎಂ ಆಗಿದ್ದ ಸಂದರ್ಭದಲ್ಲಿ 30 ಟಿಎಂಸಿ ನೀರು ಸಂಗ್ರಹಿಸಿಕೊಂಡಿದ್ದೆ. ನನ್ನ ಕಾಲದಲ್ಲಿ 120 ಕೋಟಿ ರೂ. ಫಿಯರ್ಲೆಸ್ ಸಂಸ್ಥೆಯಿಂದ ಸಾಲ ಪಡೆದು ಸರ್ಕಾರಿ ಅಧಿಕಾರಿಗಳ ಸಂಬಳ ಕೊಟ್ಟಿದ್ದೇವೆ. ಶೆ.18ರ ಬಡ್ಡಿ ಹಣ ತಂದು ಅಲಮಟ್ಟಿಯ ಶಾಸ್ತ್ರಿ ಜಲಾಶಯದಲ್ಲಿ ಮೊದಲು ನೀರು ನಿಲ್ಲಿಸಿದ್ದೇ ನನ್ನ ಅಧಿಕಾರದ ಅವಧಿಯಲ್ಲಿ. ಮೊದಲ ವರ್ಷ 650 ಕೋಟಿ ರೂ. ಹಾಗೂ ಎರಡನೇ ವರ್ಷ 1 ಸಾವಿರ ಕೋಟಿ ರೂ. ಖರ್ಚು ಮಾಡಿದೆ. ಇದೇ ಕಾರಣಕ್ಕೆ ಈ ಭಾಗದಲ್ಲಿ ನನ್ನ ಮೂರ್ತಿ ಪ್ರತಿಸ್ಥಾಪಿಸಿದ್ದಾರೆ ಎಂದು ಹೇಳಿದರು.