Advertisement

ಪ್ರೀತಿ ಮತ್ತು ಕ್ರಾಂತಿಯ ನಡುವೆ ನಾನು ಮತ್ತು ಜಾನು

12:01 PM Dec 10, 2017 | Team Udayavani |

ಕನ್ನಡ ಚಿತ್ರರಂಗದಲ್ಲಿ ಹೊಸಬರಿಗೆ ಹಾಗೂ ಹೊಸ ಚಿತ್ರಗಳಿಗೆ ಬರವಿಲ್ಲ. ಈಗಂತೂ ಹೊಸ ಆಸೆ, ಆಕಾಂಕ್ಷೆಗಳನ್ನು ಹೊತ್ತು ಬರುವವರ ಸಂಖ್ಯೆಗೇನೂ ಕಮ್ಮಿ ಇಲ್ಲ. ಅಂತಹ ಹೊಸ ತಂಡವೊಂದು ಹೊಸತನದ ಚಿತ್ರದೊಂದಿಗೆ ಗಾಂಧಿನಗರಕ್ಕೆ ಕಾಲಿಟ್ಟಿದೆ. “ನಾನು ಲವ್ವರ್‌ ಆಫ್ ಜಾನು’ ಸಿನಿಮಾ ಮೂಲಕ ಸುರೇಶ್‌ ಜಿ. ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾದಲ್ಲಿ ಕೆಲಸ ಮಾಡಿರುವವರೆಲ್ಲರಿಗೂ ಇದು ಮೊದಲ ಅನುಭವ. ನಿರ್ದೇಶಕ ಸುರೇಶ್‌ ಅವರಿಗೆ ಇದು ಚೊಚ್ಚಲ ಚಿತ್ರವಾದರೂ ಈ ಹಿಂದೆ ಕೆಲ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. ಹೊಸಬರೇ ಸೇರಿ ಮಾಡಿರುವ “ನಾನು ಲವ್ವರ್‌ ಆಫ್ ಜಾನು’ ಬಗ್ಗೆ ಒಂದಷ್ಟು…

Advertisement

“ನಾನು ಲವ್ವರ್‌ ಆಫ್ ಜಾನು’ ಚಿತ್ರದ ಮೂಲಕ ಬಾರಿಗೆ ಸುರೇಶ್‌ ಜಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರಾದರೂ, ಸಾಕಷ್ಟು ಅನುಭವ ಪಡೆದುಕೊಂಡೇ ಚಿತ್ರ ನಿರ್ದೇಶನಕ್ಕಿಳಿದಿದ್ದಾರೆ. ಕಳೆದ ಆರೇಳು ವರ್ಷಗಳಿಂದಲೂ ಚಿತ್ರರಂಗದಲ್ಲಿರುವ ಅವರು, “ಗೊಂಬೆಗಳ ಲವ್‌’ ಮತ್ತು ‘ಪಯಣ’ ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಆ ಬಳಿಕ ಒಂದಷ್ಟು ಚಿತ್ರಗಳಿಗೆ ಸ್ಕ್ರಿಪ್ಟ್ ಕೆಲಸವನ್ನೂ ಮಾಡಿದ್ದಾರೆ.

ಈಗ “ನಾನು ಲವ್ವರ್‌ ಆಫ್ ಜಾನು’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಬಹುತೇಕ ಹೊಸಬರೇ ಕೆಲಸ ಮಾಡಿದ್ದಾರೆ. ನಾಯಕ ಮತ್ತು ನಾಯಕಿ ಇಬ್ಬರಿಗೂ ಇದು ಹೊಸ ಅನುಭವ. ಆದರೆ, ಅವರ್ಯಾರು, ಹೆಸರೇನು ಎಂಬುದನ್ನು ಗೌಪ್ಯವಾಗಿಡುತ್ತಾರೆ ನಿರ್ದೇಶಕರು. ಯಾಕೆ? ಎಂಬ ಪ್ರಶ್ನೆಯನ್ನು ಅವರ ಮುಂದಿಟ್ಟರೆ, “ಹೊಸತನದ ಕಥೆ ಹೆಣೆದಿರುವುದರಿಂದ ಹೊಸ ನಾಯಕ, ನಾಯಕಿ ಇಲ್ಲಿದ್ದಾರೆ.

ಅವರನ್ನು ಈಗಲೇ ಪರಿಚಯಿಸುವುದಿಲ್ಲ. ವಿಶೇಷ ಕಾರ್ಯಕ್ರಮದ ಮೂಲಕ ಅವರಿಬ್ಬರನ್ನೂ ಪರಿಚಯಿಸುತ್ತೇನೆ’ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ನಿರ್ದೇಶಕ ಸುರೇಶ್‌. ಹಾಗಾದರೆ, ಈ “ನಾನು ಲವ್ವರ್‌ ಜಾನು’ ಚಿತ್ರ ಯಾವ ಜಾತಿಗೆ ಸೇರಿದ್ದು? “ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪ್ರೀತಿ ಕುರಿತಾದ ಚಿತ್ರ. 16 ರಿಂದ 60 ವರ್ಷದವರು ಕುಳಿತು ನೋಡಬಹುದಾದ ಅಪ್ಪಟ ಭಾವನಾತ್ಮಕ ಸಂಬಂಧಗಳ ಸುತ್ತ ಸಾಗುವ ಚಿತ್ರ.

ಎಲ್ಲಾ ಚಿತ್ರಗಳಲ್ಲೂ ಪ್ರೀತಿ ಕಥೆಗಳು ಸಹಜ. ಆದರೆ, ಇಲ್ಲೂ ಪ್ರೀತಿಯ ಕಥೆ ಇದ್ದರೂ, ಅದಕ್ಕೊಂದು ಹೊಸ ಸ್ಪರ್ಶ ಕೊಡಲಾಗಿದೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆ ಹೆಣೆಯಲಾಗಿದೆ. ಬೆಂಗಳೂರು, ಮಂಗಳೂರು, ತುಮಕೂರು ಮತ್ತು ಚಿಕ್ಕಮಗಳೂರು ಸುತ್ತಮುತ್ತಲ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ ಎಂದು ವಿವರ ಕೊಡುತ್ತಾರೆ ನಿರ್ದೇಶಕರು.

Advertisement

ಈಗಾಗಲೇ ಚಿತ್ರದ ಟೀಸರ್‌ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ, ಅದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ನೋಡಿ ಫ‌ುಲ್‌ ಖುಷಿಯ ಮೂಡ್‌ನ‌ಲ್ಲಿದೆ. ಅಂದಹಾಗೆ, ಜಯಣ್ಣ ಮತ್ತು ಭೋಗೇಂದ್ರ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾಗಿರುವ ಟೀಸರ್‌ಗೊಂದು ವಿಶೇಷವೂ ಇದೆ. ಆ ಟೀಸರ್‌ನಲ್ಲೂ ನಾಯಕ ಮತ್ತು ನಾಯಕಿಯನ್ನೆಲ್ಲಿ ತೋರಿಸಿಲ್ಲ. ಟೀಸರ್‌ನಲ್ಲಿ ನಾಯಕ-ನಾಯಕಿ ಇದ್ದರೂ ಸಹ, ಅವರು ಸ್ಪಷ್ಟವಾಗಿ ಗೋಚರಿಸುವುದಿಲ್ಲ.

ಅಂಥದ್ದೊಂದು ಟೀಸರ್‌ ಬಿಡುಗಡೆ ಮಾಡಿ, ಒಂದಷ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕರು. ಈ ಟೀಸರ್‌ನ ಮತ್ತೂಂದು ವಿಶೇಷವೆಂದರೆ, ಟೀಸರ್‌ಗೆ ನಿರ್ದೇಶಕ ಯೋಗರಾಜ್‌ಭಟ್‌ ಅವರು ಹಿನ್ನೆಲೆ ಧ್ವನಿ ಕೊಟ್ಟಿದ್ದಾರೆ. ಅವರ ಹಿನ್ನೆಲೆ ಧ್ವನಿಯಲ್ಲಿ ಮೂಡಿಬಂದಿರುವ ಟೀಸರ್‌ ಸಾಕಷ್ಟು ಸದ್ದು ಮಾಡಿರುವುದರಿಂದ ಚಿತ್ರತಂಡಕ್ಕೆ ಇನ್ನಷ್ಟು ಉತ್ಸಾಹ ಬಂದಿದೆ.

ಹಾಗಾದರೆ, ಇದರ ಕಥೆ ಏನು? “ಕ್ರಾಂತಿ ಮತ್ತು ಪ್ರೀತಿ’ ಎಂದು ಒನ್‌ಲೈನ್‌ ಹೇಳಿ ಸುಮ್ಮನಾಗುತ್ತಾರೆ ನಿರ್ದೇಶಕ ಸುರೇಶ್‌. ಒಂದು ಪ್ರೀತಿ ಇದೆ ಅಂದಮೇಲೆ, ಅಲ್ಲಿ ದ್ವೇಷವೂ ಇರುತ್ತೆ. ಇಲ್ಲೂ ಅದೆಲ್ಲಾ ಇದ್ದರೂ, ಸಮಾಜದೊಳಗಿನ ಕ್ರಾಂತಿ ನಡುವೆ ಪ್ರೀತಿ ಗೆಲ್ಲುತ್ತಾ ಅನ್ನುವುದನ್ನು ಸೂಕ್ಷ್ಮವಾಗಿ ಹೇಳಿದ್ದಾರಂತೆ ನಿರ್ದೇಶಕರು. ಚಿತ್ರದಲ್ಲಿ ಚಿಕ್ಕಣ್ಣ, ಸುಚೇಂದ್ರ ಪ್ರಸಾದ್‌, ರಾಕ್‌ಲೈನ್‌ ವೆಂಕಟೇಶ್‌, ಹರಿಣಿ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ.

ಶ್ರೀನಾಥ್‌ ವಿಜಿ ಸಂಗೀತ ನೀಡಿದ್ದಾರೆ. ಶಿವು ಕ್ಯಾಮೆರಾ ಹಿಡಿದರೆ, ರಾಜ್‌ಶಿವ ಸಂಕಲನ ಮಾಡಿದ್ದಾರೆ. ಕಲಾತಪಸ್ವಿ ಬ್ಯಾನರ್‌ನಲ್ಲಿ ಐವರು ಗೆಳೆಯರು ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಂದ್ರು, ರಾಜು ಕಲ್‌ಕುಣಿಕೆ, ವಿಷ್ಣು ಭಂಡಾರಿ,ರವಿಶಂಕರ್‌ ಮತ್ತು ಮೂಡ್ಲಿರಾಮ್‌ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಹಾಡು ಮತ್ತು ಫೈಟ್‌, ಚೇಸಿಂಗ್‌ ಹೈಲೈಟ್‌. ವಿಕ್ರಂ ಫೈಟ್‌ ಮಾಡಿಸಿದ್ದಾರೆ.

ಇನ್ನು, ನಾಗೇಂದ್ರಪ್ರಸಾದ್‌ ಅವರೇ ನಾಲ್ಕು ಹಾಡುಗಳನ್ನು ರಚಿಸಿದ್ದಾರೆ. ವಿಜಯಪ್ರಕಾಶ್‌, ಶ್ರೇಯಾ ಘೋಷಾಲ್‌, ಕಾರ್ತಿಕ್‌, ಚಿನ್ಮಯಿ, ಹರಿಚರಣ್‌ ಹಾಡಿದ್ದಾರೆ.  ಕಳೆದ ಎರಡು ವರ್ಷಗಳ ಹಿಂದೆ ಶುರುವಾಗಿದ್ದ ಈ ಚಿತ್ರ ಈಗ ಬಿಡುಗಡೆಗೆ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಹೊಸ ವರ್ಷಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next