Advertisement

ನಿಧಿಗಾಗಿ ಪತ್ನಿಯನ್ನೇ ಬಲಿ ಕೊಡಲು ಪತಿ ಸಂಚು

02:09 AM Feb 15, 2019 | Team Udayavani |

ಹೂವಿನಹಡಗಲಿ: ನಿಧಿ ಆಸೆಗಾಗಿ ಪತಿ ತನ್ನ ಪತ್ನಿಯನ್ನೇ ಬಲಿಕೊಡಲು ಸಂಚು ರೂಪಿಸಿದ್ದ ಘಟನೆ ದಾಸರಹಳ್ಳಿ ತಾಂಡಾದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಪೊಲೀಸ್‌ ದೂರು ನೀಡಲಾಗಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.

Advertisement

ದಾಸರಹಳ್ಳಿ ತಾಂಡಾದ ಗೋಪಿನಾಯ್ಕ, ಆತನ ಸಹೋದರ ಮಂಜುನಾಯ್ಕ ಹಾಗೂ ಇವರ ತಂದೆ ಗಂಗ್ಯಾನಾಯ್ಕ ಮೂವರೂ ಸೇರಿ ನಿಧಿ ಆಸೆಗಾಗಿ ತನ್ನನ್ನು ಬಲಿ ಕೊಡಲು ಸಂಚು ರೂಪಿಸಿದ್ದರು ಎಂದು ಗೀತಾಬಾಯಿ ದೂರು ನೀಡಿದ್ದಾರೆ. “ನನ್ನ ಮಾವ ಗಂಗ್ಯಾನಾಯ್ಕ ಅವರು ನನ್ನ ಪತಿ ಹಾಗೂ ಬಾವನ ಬಳಿ ನಮ್ಮ ಹೊಲದಲ್ಲಿ ನಿಧಿ ಇದೆ. ಬೇರೆ ಜಾತಿಯವಳಾದ ನಿನ್ನ ಹೆಂಡತಿಯನ್ನೇ ಬಲಿ ಕೊಟ್ಟು ನಿಧಿಯನ್ನು ಹೊರ ತೆಗೆದರೆ ನಾವು ಶ್ರೀಮಂತರಾಗುತ್ತೇವೆ. ನಂತರ ನಮ್ಮ ಜಾತಿಯಲ್ಲೇ ನಿನಗೆ ಮತ್ತೂಂದು ಹೆಣ್ಣು ಹುಡುಕಿ ಮದುವೆ ಮಾಡುತ್ತೇವೆ’ ಎಂದೆಲ್ಲ ಮಾತನಾಡುತ್ತಿದ್ದರು. ನಾನು ಮನೆಯಲ್ಲಿ ಇಲ್ಲ ಎಂದುಕೊಂಡು ಬಲಿ ಕೊಡಲು ಸಂಚು ರೂಪಿಸಿದ್ದರು. ಅದಕ್ಕೆ ನನ್ನ ಪತಿ ಮತ್ತು ಭಾವ ಸಮ್ಮತಿಸಿದರು. ಇದನ್ನು ಕೇಳಿ ಹೆದರಿಕೆಯಿಂದ ನಾನು ಮನೆಯಿಂದ ಹೊರ ಬರಲು ಪ್ರಯತ್ನಿಸಿದಾಗ ಎಲ್ಲರೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಗೀತಾಬಾಯಿ ದೂರಿನಲ್ಲಿ ತಿಳಿಸಿದ್ದಾರೆ.

ದಾಸರಹಳ್ಳಿ ತಾಂಡಾದ ಗೋಪಿನಾಯ್ಕ ಮತ್ತು ಕೊಯಿಲಾರಗಟ್ಟಿ ಗ್ರಾಮದ ಭೋವಿ ಸಮುದಾಯದ ಗೀತಾ ಕಳೆದ ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ. ಹಲ್ಲೆಯಿಂದ ಗಾಯಗೊಂಡಿರುವ ಗೀತಾಬಾಯಿ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೂವಿನಹಡಗಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next