Advertisement

Hunsur ನಗರಸಭೆ; ಎನ್‌ಡಿಎ ಪಾಲಾದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ:ಕೈ ಪ್ರತಿಭಟನೆ

08:55 PM Sep 09, 2024 | Team Udayavani |

ಹುಣಸೂರು: ಹುಣಸೂರು ನಗರಸಭೆಯ ಅಧ್ಯಕ್ಷ ಗಾದಿಯು ನಿರೀಕ್ಷೆಯಂತೆ ಎನ್‌ಡಿಎ ಪಾಲಾಗಿದ್ದು, ಅಧ್ಯಕ್ಷರಾಗಿ 7 ನೇವಾರ್ಡಿನ ಜೆಡಿಎಸ್‌ನ ಎಸ್.ಶರವಣ ಚುನಾಯಿತರಾದರೆ, ಉಪಾಧ್ಯಕ್ಷರಾಗಿ 2 ನೇ ವಾರ್ಡಿನ ಪಕ್ಷೇತರ ಸದಸ್ಯೆ ಆಶಾರಾಣಿ ಅವಿರೋಧವಾಗಿ ಆಯ್ಕೆಯಾದರು.

Advertisement

ಅಧ್ಯಕ್ಷ(ಬಿಸಿಎಂ-ಎ)ಸ್ಥಾನದ ಜೆಡಿಎಸ್ ಅಭ್ಯರ್ಥಿ ಎಸ್.ಶರವಣ ಅವರು ಜೆಡಿಎಸ್‌ನ-7, ಬಿಜೆಪಿಯ-3, ಐವರು ಪಕ್ಷೇತರ ಸದಸ್ಯರು ಹಾಗೂ ಶಾಸಕ ಜಿ.ಡಿ.ಹರೀಶ್‌ಗೌಡ, ಸಂಸದ ಯದುವೀರ್‌ ಒಡೆಯರ್ ಸೇರಿದಂತೆ 17 ಮತ ಪಡೆದು ಗೆಲುವಿನ ನಗೆ ಬೀರಿದರು. ಕಾಂಗ್ರೆಸ್‌ನ ಸ್ವಾಮಿಗೌಡರಿಗೆ ಕಾಂಗ್ರೆಸ್ಸಿನ-13 ಹಾಗೂ ಎಸ್.ಡಿ.ಪಿ.ಐನ ಇಬ್ಬರು ಸದಸ್ಯರು ಸೇರಿದಂತೆ 15 ಮತ ಪಡೆದು ಸೋಲು ಅನುಭವಿಸಿದರು.

ಉಪಾಧ್ಯಕ್ಷ( STಮಹಿಳೆ) ಮೀಸಲಾತಿಯಲ್ಲಿ ಪಕ್ಷೇತರ ಸದಸ್ಯೆ ಆಶಾರಾಣಿಯೊಬ್ಬರೆ ಇದ್ದು, ಅವರೊಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದಾಗಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣೆಗೆ 6ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ದೇವನಾಯ್ಕ ಗೈರಾಗಿದ್ದರು. ಉಪವಿಭಾಗಾಕಾರಿ ಎಚ್.ಬಿ.ವಿಜಯ್‌ಕುಮಾರ್ ಚುನಾವಣಾಕಾರಿಯಾಗಿದ್ದರು. ಪೌರಾಯುಕ್ತೆ ಮಾನಸ ಇದ್ದರು. ಈವರೆಗೆ ಆಡಳಿತ ನಡೆಸಿದ್ದ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಳ್ಳುವಲ್ಲಿ ಎನ್‌ಡಿಎ ಯಶಸ್ವಿಯಾಗಿದ್ದು, ಕೊನೆ ಕ್ಷಣದ ವರೆಗೆ ನಡೆಸಿದ ಕಾಂಗ್ರೆಸ್ ವರಿಷ್ಠರ ತಂತ್ರ ಫಲಿಸಲಿಲ್ಲ.

Advertisement

ಅಭಿನಂದನೆ
ಚುನಾವಣೆ ನಂತರ ನೂತನ ವರಿಷ್ಟರನ್ನು ಸಂಸದ ಯದುವೀರ್ ಒಡೆಯರ್, ಶಾಸಕ ಜಿ.ಡಿ.ಹರೀಶ್‌ ಗೌಡ ಹಾಗೂ ಉಪವಿಭಾಗಾಕಾರಿ ವಿಜಯ್‌ಕುಮಾರ್ ಪೌರಾಯುಕ್ತೆ ಮಾನಸ ಮತ್ತು ಸದಸ್ಯರು ಪುಷ್ಪಗುಚ್ಚ ನೀಡಿ ಅಭಿನಂದಿಸಿದರು.

ವಿಜಯೋತ್ಸವ ಆಚರಣೆ
ನೂತನ ವರಿಷ್ಠರ ಘೋಷಣೆಯಾಗುತ್ತಿದ್ದಂತೆ ಜೆಡಿಎಸ್ ಹಾಗೂ ಬಿಜೆಪಿ ನೂರಾರು ಕಾರ್ಯಕರ್ತರು ಕೈಯಲ್ಲಿ ಪಕ್ಷಗಳ ಬಾವುಟ ಹಿಡಿದು ಘೋಷಣೆ ಕೂಗುತ್ತಾ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರಲ್ಲದೆ ನಗರಸಭೆಯಿಂದ ಜೆಡಿಎಸ್ ಪಕ್ಷದ ಕಚೇರಿವರೆಗೆ ಶಾಸಕ ಹರೀಶ್‌ಗೌಡರು ಹಾಗೂ ನೂತನ ವರಿಷ್ಠರನ್ನು ಮೆರವಣಿಗೆಯಲ್ಲಿ ಕರೆದೊಯ್ದರು.

ಶಾಸಕರ ಚಾಣಾಕ್ಷ ನಡೆ
24 ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ, ಮಾಜಿ ಅಧ್ಯಕ್ಷೆ ಗೀತಾನಿಂಗರಾಜು ಕಳೆದ ವಿಧಾನಸಭೆ ಚುನಾವಣೆ ಯಾದಾಗಿನಿಂದ ಜೆಡಿಎಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಈ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವರೆಂಬ ನಿರೀಕ್ಷೆ ಕಾಂಗ್ರೆಸ್ಸಿಗರಲ್ಲಿತ್ತು. ಇವರ ಮನೆ ಬಾಗಿಲಿಗೆ ವಿಪ್ ಅಂಟಿಸಿದ್ದರು. ಜೆಡಿಎಸ್ ಸದಸ್ಯರೊಂದಿಗೆ ಚುನಾವಣೆಗೆ ಬಸ್ ನಲ್ಲಿ ಬಂದಿಳಿದ ಗೀತಾನಿಂಗರಾಜ್ ಚುನವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ವಾಮಿಗೌಡರಿಗೆ ಮತ ಚಲಾಯಿಸಿ ಕಾಂಗ್ರೆಸ್ಸಿಗರನ್ನೇ ಅವಕ್ಕಾಗಿಸಿದರು. ಅದರೆ ಶಾಸಕ ಹರೀಶ್‌ಗೌಡರು ಕಾಂಗ್ರೆಸ್ ಸದಸ್ಯ ದೇವನಾಯ್ಕರು ಚುನಾವಣೆಗೆ ಗೈರು ಹಾಜರಾಗುವಂತೆ ತಂತ್ರ ರೂಪಿಸಿ ಗೀತಾರವರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಬಚಾವಾಗದರು.

ಕಾಂಗ್ರೆಸ್ ಪ್ರತಿಭಟನೆ
ತಮ್ಮ ಪಕ್ಷದ ಸದಸ್ಯ ದೇವನಾಯ್ಕರು ಚುನಾವಣೆಯಲ್ಲಿ ಗೈರಾಗಿರುವುದನ್ನು ವಿರೋದಿಸಿ ನಗರ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು, ನಗರ ಅಧ್ಯಕ್ಷ ಕಲ್ಕುಣಿಕೆ ರಮೇಶ್ ನೇತೃತ್ವದಲ್ಲಿ ಕಾರ್ಯಕರ್ತರು ದೇವನಾಯ್ಕರ ಡೀಲ್ ಆಗಿದ್ದಾರೆಂದು ಅವರ ವಿರುದ್ದ ದಿಕ್ಕಾರ ಮೊಳಗಿಸಿದರು. ಈ ನಡುವೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಸಹ ಹರೀಶ್‌ಗೌಡರಿಗೆ ಜೈಕಾರ ಹಾಕಿದರು. ಇನ್ಸ್ಪೆಕ್ಟರ್ ಸಂತೋಷ್‌ಕಶ್ಯಪ್ ಹಾಗೂ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿದರು.

ಸಣ್ಣಸಮುದಾಯಕ್ಕೆ ಅಧಿಕಾರ ಕಲ್ಪಿಸಿದ ತೃಪ್ತಿ: ಹರೀಶ್‌ಗೌಡ.

ನಗರಸಭೆಯಲ್ಲಿ ಕಳೆದ15 ವರ್ಷಗಳಿಂದ ಸ್ಥಗಿತಗೊಂಡಿರುವ ಅಭಿವೃದ್ಧಿಗೆ ವೇಗ ನೀಡುವುದಾಗಿ ಶಾಸಕ ಜಿ.ಡಿ.ಹರೀಶ್‌ಗೌಡ ತಿಳಿಸಿದರು.

ನಗರಸಭೆಯ ನೂತನ ವರಿಷ್ಠರ ಆಯ್ಕೆ ನಂತರ ಮಾತನಾಡಿದ ಅವರು ಕೆಲವು ದಿನಗಳ ಹಿಂದೆ ಟಿಎಪಿಸಿಎಂಎಸ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ದಲಿತ ಸಮುದಾಯದ ಬಸವಲಿಂಗಯ್ಯರಿಗೆ ಅಧಿಕಾರ ಕಲ್ಪಿಸಲಾಗಿತ್ತು. ಇದೀಗ ನಗರಸಭೆಗೆ ಪ್ರಥಮವಾಗಿ ಹಿಂದುಳಿದ ಗಾಣಿಗ ಸಮಾಜಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಧಿಕಾರ ಹಂಚಿಕೆಯ ಯಾವುದೇ ತೀರ್ಮಾನವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಸದರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದೆಂದ ಅವರು ಕಳೆದ ಒಂದೂವರೆ ವರ್ಷದಿಂದ ಜನಪ್ರತಿನಿಧಿಗಳ ಹಕ್ಕನ್ನು ಕಸಿದುಕೊಂದಂತಾಗಿತ್ತು. ಇದರಿಂದ ಅಭಿವೃದ್ದಿ ಸ್ಥಗಿತಗೊಂಡಿತ್ತು. ಇದೀಗ ನಗರಸಭೆಯ ಪಕ್ಷೇತರ ಸದಸ್ಯರು ಹಿಂದೆ ಕಾಂಗ್ರೆಸ್ಸನ್ನು ಬೆಂಬಲಿಸಿದ್ದರೂ ಯಾವುದೇ ಅಭಿವೃದ್ದಿಯಾಗದ ಹಿನ್ನೆಲೆಯಲ್ಲಿ ಐವರು ಪಕ್ಷೇತರರು ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ಮೈತ್ರಿಕೂಟವನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ಸಿಗರು ಬೇಷರತ್ ಕ್ಷಮೆಯಾಚಿಸಲಿ: ರಂಜಿತಾ ಚಿಕ್ಕಮಾದು

ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯ ದೇವನಾಯಕರವರು ಪಕ್ಷಕ್ಕೆ ಕೈಕೊಟ್ಟರೆಂಬ ಕಾರಣಕ್ಕೆ ಕಾಂಗ್ರೆಸ್‌ನವರು ನಗರಸಭೆ ಎದುರು ನಡೆಸಿದ ಪ್ರತಿಭಟನೆಯಲ್ಲಿ ದೇವನಾಯಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ಸಿಗರು ಬೇಷರತ್ ಆಗಿ ಕ್ಷಮೆ ಕೋರದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ನಾಯಕ ಸಮಾಜದ ಜೆಡಿಎಸ್ ಮುಖಂಡರಾದ ರಂಜಿತಾಚಿಕ್ಕಮಾದು, ಲೋಕೇಶ್ ಎಚ್ಚರಿಸಿದರು.

ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ವಿಪ್ ಉಲ್ಲಂಘಿಸಿದ್ದಲ್ಲಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕಿತ್ತು. ಅದು ಬಿಟ್ಟು ವೈಯಕ್ತಿಕವಾಗಿ ನಿಂದಿಸಿರುವುದು ನಾಯಕ ಸಮಾಜಕ್ಕೆ ಮಾಡಿರುವ ಅವಮಾನವೆಂದು ಆಕ್ರೋಶ ವ್ಯಕ್ತಪಡಿಸಿ. ಇದರ ಹಿಂದೆ ಮಾಜಿ ಶಾಸಕ ಎಚ್.ಪಿ.ಮಂಜುನಾಥರ ಕುಮ್ಮಕ್ಕಿದೆ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next