Advertisement

ಹುಣ್ಸೆಮಕ್ಕಿ;ಮಹಿಳೆ ಮೇಲೆ ಚಿರತೆ ದಾಳಿ,ಗಂಭೀರ ಗಾಯ;ಆಸ್ಪತ್ರೆಗೆ ದಾಖಲು

07:13 PM Mar 14, 2019 | Team Udayavani |

ಕುಂದಾಪುರ: ಡೈರಿಗೆ ಹಾಲು ಕೊಡಲು ತೆರಳುತ್ತಿದ್ದ ಮಹಿಳೆ ಮೇಲೆ ಚಿರತೆಯೊಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಕುಂದಾಪುರ ತಾಲೂಕಿನ ಹುಣ್ಸೆಮಕ್ಕಿಯಲ್ಲಿ ಸೋಮವಾರ ನಡೆದಿದೆ.

Advertisement

ಚಿರತೆಯ ದಾಳಿಯಿಂದಾಗಿ ಹುಣ್ಸೆಕಟ್ಟೆ ನಿವಾಸಿ ಪ್ರೇಮಾ(32ವರ್ಷ) ಎಂಬಾಕೆ ಗಂಭೀರವಾಗಿ ಗಾಯಗೊಂಡಿದ್ದು, ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ವರದಿ ತಿಳಿಸಿದೆ.

ಇಂದು ಮುಂಜಾನೆ ಡೈರಿಗೆ ಹಾಲು ಕೊಡಲು ಹೋಗುತ್ತಿದ್ದ ಸಂದರ್ಭದಲ್ಲಿ ಮರೆಯಲ್ಲಿದ್ದ ಚಿರತೆ ಏಕಾಏಕಿ ದಾಳಿ ಮಾಡಿದ್ದು, ಇದರಿಂದಾಗಿ ಪ್ರೇಮಾ ಅವರ ಕೈ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿತ್ತು. ದಾಳಿಯಿಂದ ಈಕೆ ಕಿರುಚಿಕೊಂಡ ಶಬ್ದ ಕೇಳಿ ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದರು. ನೆಲದ ಮೇಲೆ ಬಿದ್ದಿದ್ದ ಪ್ರೇಮಾ ಅವರನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಉಡುಪಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು ಎಂದು ವರದಿ ವಿವರಿಸಿದೆ.

ಇತ್ತೀಚೆಗೆ ಶಂಕರನಾರಾಯಣ, ಹುಣ್ಸೆಮಕ್ಕಿ, ಹಳ್ಳಿಹೊಳೆ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನರು ಆತಂಕಗೊಂಡಿದ್ದರು. ಅಲ್ಲದೇ ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next