Advertisement

ಆರ್ಥಿಕ ಸಮಾನತೆಯಿಂದ ಮತಾಂತರ ತಡೆ ಸಾಧ್ಯ: ಪೇಜಾವರ ಸ್ವಾಮೀಜಿ

09:26 PM Sep 28, 2021 | Team Udayavani |

ಹುಣಸೂರು: ಹುಣಸೂರಿನಲ್ಲಿ ಬೃಹತ್ ಗೋಶಾಲೆಯ ಅತ್ಯವಶ್ಯವಿದ್ದು, ಸರಕಾರ ಗೋಶಾಲೆ ತೆರೆಯಲು ಹಾಗೂ ನಗರದ ಮದ್ಯಭಾಗ ಹರಿಯುವ ಲಕ್ಷ್ಮಣತೀರ್ಥ ನದಿ ಶುದ್ದೀಕರಣ ಆದ್ಯತೆ ಎಂದು ಭಾವಿಸಿ ತುರ್ತು ಕ್ರಮವಹಿಸಬೇಕೆಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಗ್ರಹಿಸಿದರು.

Advertisement

ಮಂಗಳವಾರದಂದು ನಗರದ ಬ್ರಾಹ್ಮಣರ ಬಡಾವಣೆಯ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀರಾಮವಿಠಲ ದೇವರ ಸಂಸ್ಥಾನ ಪೂಜೆ ನಡೆಸಿದ ನಂತರ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿ, ಆಶೀರ್ವಚನ ನೀಡಿದ ಸ್ವಾಮಿಜಿಗಳು ನಂತರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಇಲ್ಲಿನ ಜನರು ಗೋಶಾಲೆ ತೆರೆಯಬೇಕೆಂಬ ಬೇಡಿಕೆ ಇಟ್ಟಿದ್ದು, ಇಲ್ಲಿ ಸಾಮಾಜಿಕ,ಸಾಮರಸ್ಯ ನೆಲೆಯಾಗಿಸುವ ನಿಟ್ಟಿನಲ್ಲಿ ಗೋಶಾಲೆ ಅವಶ್ಯವಿದೆ. ಹಾಗೆಯೇ ಪುರಾಣದಲ್ಲಿ ಮಹತ್ವ ವಿರುವ ಲಕ್ಷ್ಮಣತೀರ್ಥನದಿ ಸಂಪೂರ್ಣ ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಅನೈರ್ಮಲ್ಯ ತಾಂಡವವಾಡುತ್ತಿದ್ದು, ತಕ್ಷಣಕ್ಕೆ ನದಿ ಶುದ್ದೀಕರಣ ಕಾರ್ಯಕೈಗೊಳ್ಳಬೇಕೆಂದು ಆಶಿಸಿದರು.

ದೇವಾಲಯಗಳ ಗಡಿ ಗುರುತಿಸಲಿ:  ಇತ್ತೀಚೆಗೆ ಸದನದಲ್ಲಿ ದೇವಾಲಯ ಸಂರಕ್ಷಣೆ ಕುರಿತು ಮಂಡನೆಯಾದ ಕಾಯ್ದೆಯಲ್ಲಿ ದೇವಾಲಯ ಆಸ್ತಿ ಸಂರಕ್ಷಣೆ, ಗಡಿ ಗುರುತಿಸುವುದನ್ನು ಸೇರಿಸಿಲ್ಲ. ರಾಜ್ಯದ ಮುಜರಾಯಿ ಇಲಾಖೆ ಆಶ್ರಯದಲ್ಲಿ ಸಾಕಷ್ಟು ದೇವಾಲಯಗಳಿದ್ದು, ಮೊದಲು ಅವುಗಳ ಗಡಿ ಗುರುತು ಆಗಬೇಕು. ಪಾಳು ಬಿದ್ದಿರುವ ದೇವಸ್ಥಾನಗಳು ಹಾಗೂ ಎಲ್ಲ ದೇವಾಲಯಗಳ ಜೀರ್ಣೋದ್ದಾರ ನಡೆಸಬೇಕೆಂದರು.

ಇದನ್ನೂ ಓದಿ:ಬಿಜೆಪಿ ಕಾರ್ಯಕರ್ತೆ ಮನೆಯಲ್ಲಿ ಕಾರ್ಮಿಕ ಇಲಾಖೆ ಸುರಕ್ಷಾ ಕಿಟ್ ಪತ್ತೆ!

ದೇವರ ಹಣ ದುರ್ಬಲರ ಅಭಿವೃದ್ದಿಗೆ ಬಳಕೆಯಾಗಲಿ: ದೇವಾಲಯಗಳಿಗೆ ಭಕ್ತರು ನೀಡುವ ಕಾಣಿಕೆ, ಹುಂಡಿ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಇತರೆ ಧರ್ಮದ ಆಲಯಗಳ ಆದಾಯ ಅವರ ಧರ್ಮ, ಸಮಾಜದ ಅಭಿವೃದ್ದಿಗೆ ಬಳಸುತ್ತಾರೆ, ಮತಾಂತರಕ್ಕೆ ಕುಮ್ಮಕ್ಕು ನೀಡಲು ಇದುವೇ ಕಾರಣ. ಹೀಗಾಗಿ ಹಿಂದೂ ದೇವಾಲಯಗಳ ಆದಾಯವನ್ನು ಹಿಂದೂ ಸಮಾಜದ ದೀನ, ದಲಿತ, ದುರ್ಬಲವರ್ಗಗಳ ಅಭಿವೃದ್ದಿಗೆ ಮೀಸಲಿಡಬೇಕೆಂದರು.

Advertisement

ಆರ್ಥಿಕ ಸಮಾನತೆ ಇಂದಿನ ಅವಶ್ಯ: ಇತ್ತೀಚಿನ ವರ್ಷಗಳಲ್ಲಿ ಹಿಂದೂ ಧರ್ಮದಿಂದ ಮತಾಂತರ ಹೆಚ್ಚುತ್ತಿದ್ದು, ಹಿಂದೂ ಧರ್ಮದಲ್ಲಿನ ಅಸಮಾನತೆಯೇ ಕಾರಣವಲ್ಲವೇ ಎಂಬ ಪ್ರಶ್ನೆಗೆ, ದೇಶದಲ್ಲಿ ದುರ್ಬಲರು ಆರ್ಥಿಕವಾಗಿ ಹಿಂದುಳಿದಿರುವುದನ್ನೇ ಬಂಡವಾಳ ಮಾಡಿಕೊಂಡು ನೆರವಿನ ನೆಪದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ನಿಯಂತ್ರಣಕ್ಕಾಗಿ ದುರ್ಬಲರಿಗೆ ಆರ್ಥಿಕ ಸಮಾನತೆ ನೀಡಬೇಕು. ಹಿಂದೂ ದೇವಾಲಯಗಳಿಂದ ಬರುವ ಆದಾಯವನ್ನು ಆ ವರ್ಗದ ಜನರ ಕಲ್ಯಾಣಕ್ಕೆ ಮೀಸಲಿಡಬೇಕು. ಈ ಬಗ್ಗೆ ಮಠಮಾನ್ಯಗಳು ಕೂಡ ಅವ್ಯಾಹತವಾಗಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿವೆ. ಇವರನ್ನು ಘರ್ ವಾಪ್ಸಿ ಮೂಲಕ ಕರೆತರುವ ಪ್ರಯತ್ನವಿದೆಯೇ ಎಂಬ ಪ್ರಶ್ನೆಗೆ ಅದೂ ಸಹ ನಡೆಯುತ್ತಿದೆ ಎಂದರು.

ದೇವಸ್ಥಾನ ಪ್ರವೇಶ ನಿಷೇಧ ಖಂಡನೆ: ಕೊಪ್ಪಳ ಜಿಲ್ಲೆಯಲ್ಲಿ ದಲಿತ ಮಗುವಿನ ದೇವಾಲಯ ಪ್ರವೇಶ ವಿರೋಧಿಸಿರುವುದು ಖಂಡನೀಯ, ಇದು ಅಕ್ಷಮ್ಯ ಅಪರಾಧವೂ ಹೌದು, ಇಂತಹ ಕಾರ್ಯಕ್ಕೆ ಯಾರೂ ಕೈ ಹಾಕಬಾರದು. ದೇವಾಲಯಗಳಲ್ಲಿ ಮುಕ್ತ ಅವಕಾಶವಿರಲಿ ಎಂದು ಸಲಹೆ ನೀಡಿದರು.

ಈ ವೇಳೆ ಪೇಜಾವರ ಮಠದ ಪಿ.ಆರ್.ಓ.ಗಳಾದ ವಿಷ್ಟು, ಕೃಷ್ಣಭಟ್, ವ್ಯವಸ್ಥಾಪಕ ವಾದಿರಾಜಭಟ್, ಅರ್ಚಕ ನಾರಾಯಣಮೂರ್ತಿ, ಕೃಷ್ಣ, ಸತೀಶ್, ಮೈಸೂರುಪ್ರಕಾಶ್ ಸೇರಿದಂತೆ ಭಕ್ತ ವೃಂದ ಭಾಗವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next