Advertisement

ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿಯಾಗಲಿ

04:10 PM Jun 15, 2019 | Naveen |

ಹುಣಸಗಿ: ಗ್ರಾಮೀಣ ಪ್ರದೇಶದ ಜನರು ಮಹಾನಗರಗಳಿಗೆ ವಲಸಿ ಹೋಗುವುದನ್ನು ತಡೆಯಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರಲಾಗಿದ್ದು, ಸಮರ್ಪಕ ಅನುಷ್ಠಾನಗೊಳಿಸಲು ಅಧಿಕಾರಿಗಳು ಮುಂದಾಗಬೇಕಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಮುಖಂಡ ಬಸವರಾಜ ಕಟ್ಟಿಮನಿ ಒತ್ತಾಯಿಸಿದರು.

Advertisement

ಸಮೀಪದ ಕಾಮನಟಗಿ ಗ್ರಾಪಂ ಕಾರ್ಯಾಲಯ ಮುಂದೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಗ್ರಾಮ ಘಟಕ ಹಮ್ಮಿಕೊಂಡ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ಗ್ರಾಮ ಮಟ್ಟದಲ್ಲಿ ಮಾನವ ಉದ್ಯೋಗ ಸೃಷ್ಟಿಸಿ ಬಡ ಕುಟುಂಬಗಳು ಗುಳೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆ ಭೀಮ ಬಲವಿದ್ದಂತೆ. ಆದ್ದರಿಂದ ಗ್ರಾಮ ಮಟ್ಟದ ಜನಪ್ರತಿನಿಧಿಗಳು, ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ ಎಂದರು.

ಈ ಯೋಜನೆಯಡಿ ವೈಯಕ್ತಿಕ ಕಾಮಗಾರಿ ನಿರ್ವಹಿಸಲು ಸಹ ಅನುಕೂಲ ಕಲ್ಪಿಸಲಾಗಿದೆ. ಬದು ನಿರ್ಮಾಣ, ಕೃಷಿ ಹೊಂಡ, ದನದ ಕೊಟ್ಟಿಗೆ ಸೇರಿದಂತೆ ಹಲವಾರು ಕಾಮಗಾರಿ ಕೈಗೊಳ್ಳಬಹುದಾಗಿದೆ. ಪ್ರತಿಯೊಬ್ಬ ವಲಸೆ ಹೋಗುವರನ್ನು ತಡೆದು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಂತರ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘಟನೆ ಅಧ್ಯಕ್ಷ ದಾವಲಸಾಬ ನಧಾಪ ಮಾತನಾಡಿ, ಪ್ರತಿಯೊಂದು ಪಂಚಾಯತಿಯಲ್ಲೂ ಕಾಲಕಾಲಕ್ಕೆ ಕ್ರಿಯಾಯೋಜನೆ ರೂಪಿಸಬೇಕು. ಮಾನವ ದಿನಗಳ ಸೃಷ್ಟಿಗೆ ನಿಗದಿಪಡಿಸಿರುವ ಗುರಿಯನ್ನು ತಪ್ಪದೇ ಮುಟ್ಟಬೇಕು. ಇದರಿಂದ ಮಹಿಳೆಯರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳು ಸಿಗಲಿವೆ. ತಕ್ಷಣವೇ ಫಾರಂ ನಂಬರ 6ನ್ನು ಸ್ವೀಕರಿಸಿ ಪ್ರತಿಯೊಬ್ಬರಿಗೂ ಕೂಡ ಕೆಲಸ ಕೊಡಬೇಕು ಮತ್ತು ಹೊಸದಾಗಿ ಜಾಬ್‌ ಕಾರ್ಡ್‌ ನೋಂದಣಿ ಮಾಡಿಸಿ ಅವರಿಗೂ ಕೂಡ ಕೆಲಸ ಕೊಡಬೇಕೆಂದು ಒತ್ತಾಯಿಸಿದರು.

Advertisement

ಕಾಮನಟಗಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮನವಿ ಪತ್ರ ಸ್ವೀಕರಿಸಿ ಪ್ರತಿಭಟನಾಕಾರರ ಬೇಡಿಕೆಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಶರಣಪ್ಪ ಅನಸೂರ, ಬಸವರಾಜ ಕಟ್ಟಿಮನಿ, ಸಂಘದ ಅಧ್ಯಕ್ಷೆ ಮಲ್ಲಮ್ಮ ಗಡದ, ಉಪಾಧ್ಯಕ್ಷೆ ಸಂಗಮ್ಮ ಪತ್ತಾರ, ಗಂಗಪ್ಪ ದೊಡ್ಡಮನಿ, ಹಣಮಂತ್ರಾಯ ದೊಡ್ಡಮನಿ, ಕನಕಪ್ಪ ಚಲುವಾದಿ, ಮಾಳಪ್ಪ ಮಾಳ್ಯಾರ, ಭೀಮರಾಯಗೌಡ ಕಲ್ಯಾಣಿ, ಬಾಲಪ್ಪ ತಳವಾರ, ಅಮರಪ್ಪ ಗಡದ, ನಿಂಗಣ್ಣ ಗಡದ, ಸಿದ್ದಪ್ಪ ಚಲುವಾದಿ, ಬೇಗಂ ಮಾಳನೂರ, ಜಗನಪ್ಪ ನಡಕೂರ ಹಾಗೂ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next