Advertisement

ಮಾನವೀಯತೆ ಮೆರೆದ ಸಂಚಾರ ಪೇದೆ

10:18 AM Jun 14, 2018 | Team Udayavani |

ಬೆಂಗಳೂರು: ಹೆಲ್ಮೆಟ್‌ ಧರಿಸದೆ ಬೈಕ್‌ ಚಾಲನೆ ಮಾಡುತ್ತಿದ್ದ ಸವಾರನನ್ನು ತಡೆದು ದಂಡ ಹಾಕಲು ಮುಂದಾದ ಸಂಚಾರ ಪೊಲೀಸ್‌ ಪೇದೆಯೊಬ್ಬರು, ಆ ಸವಾರ ಕ್ಯಾನ್ಸರ್‌ ರೋಗಿಯೊಬ್ಬರಿಗೆ ರಕ್ತ ದಾನ ಮಾಡಲು ಹೊರಟಿದ್ದನ್ನು ಕೇಳಿ, ತಾವೂ ಆತನೊಂದಿಗೆ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

Advertisement

ಕುಮಾರಸ್ವಾಮಿ ಲೇಔಟ್‌ ಸಂಚಾರ ಠಾಣೆ ಪೇದೆ ಕೆ.ಲೋಕೇಶ್‌ (35) ರಕ್ತದಾನ ಮಾಡಿದವರು. ನಗರದ ಖಾಸಗಿ ಕಾಲೇಜಿನ ಕ್ರೀಡಾ ಉಪನ್ಯಾಸಕ ವಿನಯ್‌ ಅವರ ಸಂಬಂಧಿಕರೊಬ್ಬರು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಕುಮಾರಸ್ವಾಮಿ ಲೇಔಟ್‌ನ ಸಾಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಸಂಜೆ ರೋಗಿಗೆ ರಕ್ತದ ಅಗತ್ಯವಿತ್ತು. ಹೀಗಾಗಿ ವೈದ್ಯರ ಸೂಚನೆ ಮೇರೆಗೆ ಇಬ್ಬರು ಎ+ ಗುಂಪಿನ ರಕ್ತ ಬೇಕೆಂದು ವಿನಯ್‌ ಅವರು ತಮ್ಮ ವಿದ್ಯಾರ್ಥಿಗಳಿಗೆ ತಿಳಿಸಿದ್ದರು.

ಈ ವಿಚಾರ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಉದಯ್‌ ಕಿರಣ್‌, ಎ+ ಗುಂಪಿನ ರಕ್ತ ಹೊಂದಿರುವ ಸ್ನೇಹಿತನನ್ನು ಎಚ್‌ಎಸ್‌ಆರ್‌ ಲೇಔಟ್‌ನಿಂದ ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆ ಮಾರ್ಗದಲ್ಲಿ ಸಂಚಾರ ದಟ್ಟಣೆ
ಅಧಿಕವಾಗಿತ್ತು. ಆದರೆ ಆಸ್ಪತ್ರೆಗೆ ತುರ್ತು ಹೋಗಬೇಕಿದ್ದ ಕಾರಣ, ಉದಯ್‌ ಕಾರಿನಿಂದ ಇಳಿದು ತಮ್ಮನ್ನು
ಹಿಂಬಾಲಿಸುತ್ತಿದ್ದ ಮತ್ತೂಬ್ಬ ಗೆಳೆಯನ ಬೈಕ್‌ ತೆಗೆದುಕೊಂಡು ರಕ್ತ ನೀಡಲಿದ್ದ ಸ್ನೇಹಿತನ ಜತೆ ಆಸ್ಪತ್ರೆಗೆ ಹೋಗುತ್ತಿದ್ದರು.

ಇದೇ ವೇಳೆ ಕುಮಾರಸ್ವಾಮಿ ಲೇಔಟ್‌ ಜಂಕ್ಷನ್‌ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಪೇದೆ ಲೋಕೇಶ್‌, ಹೆಲ್ಮೆಟ್‌ ಧರಿಸದೆ
ಹೋಗುತ್ತಿದ್ದ ಉದಯ್‌ ಕಿರಣ್‌ರನ್ನು ತಡೆದು ಪ್ರಕರಣ ದಾಖಲಿಸಿ ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಈ ವೇಳೆ
ಉದಯ್‌ ಕಿರಣ್‌ ರಕ್ತದಾನದ ಮಾಡಲು ಹೊರಟ ವಿಚಾರ ಹೇಳಿಕೊಂಡಿದ್ದಾರೆ.

ಇದರಿಂದ ಮರುಗಿದ ಪೇದೆ ಲೋಕೇಶ್‌, “ನನ್ನ ರಕ್ತದ ಗುಂಪು ಕೂಡ ಎ+. ಬೇಕಿದ್ದರೆ ನಾನೂ ರಕ್ತದಾನ ಮಾಡುತ್ತೇನೆ’ ಎಂದು ಉದಯ್‌ ಜತೆ ಆಸ್ಪತ್ರೆಗೆ ತೆರಳಿ ರಕ್ತದಾನ  ಮಾಡಿದ್ದಾರೆ. ಲೋಕೇಶ್‌ ಅವರ ಮಾನವೀಯತೆಗೆ ಆಸ್ಪತ್ರೆಯ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ವಿನಯ್‌ ಅಭಿನಂದನೆ ಸಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next