Advertisement

ಪೈಗಂಬರರ ಮಾನವೀಯ ಆದರ್ಶ ಮತ್ತು ಅನುಕರಣೀಯ ಮಾದರಿಗಳು

04:25 AM Dec 01, 2017 | |

ಪ್ರವಾದಿಯವರ ಕಾಲದಲ್ಲಿ ತಾವು ಉಣ್ಣುವುದಕ್ಕೆ ಮುಂಚಿತವಾಗಿ ತಮ್ಮ ನೆರೆಹೊರೆಯವರಿಗೆ ಸಾಕಷ್ಟು ಆಹಾರವಿದೆಯೇ ಎಂಬುದನ್ನು ನೋಡಿ ತಿಳಿಯುವ ಪರಿಪಾಠವನ್ನು ಅವರ ಅನುಚರರು ಹೊಂದಿದ್ದರು. ಅಬೂದರ್ರ ಎಂಬ ನಿಕಟವರ್ತಿಗೆ ಪೈಗಂಬರರು ಒಮ್ಮೆ ಹೇಳುತ್ತಾರೆ, “ನೀವು ಒಂದು ಸಾರು ಮಾಡುವುದಾದರೆ ಅದನ್ನು ಸ್ವಲ್ಪ ಹೆಚ್ಚಿಸಿ ನಿಮ್ಮ ನೆರೆಯವರಿಗೆ ನೀಡಿ’. ನೆರೆಹೊರೆಯ ಯಹೂದಿಗಳಿಗೂ ವಿಶೇಷ ಸಂದರ್ಭಗಳಲ್ಲಿ ಮಾಂಸವನ್ನು ಹಂಚುತ್ತಿದ್ದರು. ಕೇವಲ ದೇವನಿಗೆ ಸಂಬಂಧಿಸಿದ ಕರ್ತವ್ಯಗಳಲ್ಲದೆ ಸಹಜೀವಿಗಳೊಂದಿಗೆ ಹೇಗೆ ವರ್ತಿಸಬೇಕೆಂಬುದಕ್ಕೆ ಇದೊಂದು ಪಾಠದಂತಿದೆ.

Advertisement

ಪ್ರವಾದಿಯವರ ಆಗಮನಕ್ಕಿಂತ ಮುಂಚಿತವಾಗಿ ಅರೇಬಿಯಾ ಅಜ್ಞಾನ, ಅಂಧಕಾರ, ಕ್ಷುಲ್ಲಕ ವಿಷಯಗಳಿಂದಾಗಿ ಯುದ್ಧ, ಮೌಡ್ಯ ಮತ್ತು ಮಹಿಳೆಯ ಬಗ್ಗೆ ಅತ್ಯಂತ ತುತ್ಛ ಭಾವನೆಯನ್ನು ಹೊಂದಿದ್ದ ಕಾಲಘಟ್ಟವಾಗಿತ್ತು. ನ್ಯಾಯ, ನೀತಿ, ಲಜ್ಜೆಯಂತಹ ವಿಷಯಗಳನ್ನು ಗಾಳಿಗೆ ತೂರಲಾಗಿತ್ತು. ಇಂತಹ ವಿಷಮ ಘಟ್ಟದಲ್ಲಿ ಅವರು ಅರೇಬಿಯಾದ ಸಾಮಾಜಿಕ ಸಂರಚನೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದರು. ತಮ್ಮ ಅವಿರತವಾದ ಪರಿಶ್ರಮ, ಅತ್ಯಂತ ಸರಳ, ಸಚ್ಚಾರಿತ್ರ ಮತ್ತು ತ್ಯಾಗಭರಿತ ಬದುಕಿನ ಮೂಲಕ “ನನ್ನ ಜೀವನವೇ ನನ್ನ ಸಂದೇಶ’ ಎಂಬುದನ್ನು ಸಾಥ‌ìಕಗೊಳಿಸಿ ಮನುಕುಲದಲ್ಲಿ ಚಿರಸ್ಥಾಯಿಯಾಗಿದ್ದಾರೆ.     ದೇವನ ಸಂದೇಶವಾಹಕರಾಗಿ ಮಾನವ ಸಮೂಹಕ್ಕೆ ಜ್ಞಾನದ ಬೆಳಕು ಮತ್ತು ಸನ್ಮಾರ್ಗದ ಹಾದಿಯನ್ನು ತೋರಿಸಿದ ಪೈಗಂಬರರು ಬದುಕನ್ನು ನಿಸ್ಸಂಶಯವಾಗಿಯೂ ಅಪ್ರತಿಮ ಪ್ರೀತಿ, ತಾಳ್ಮೆ, ಕ್ಷಮೆ, ವಿನಯ ಮತ್ತು ಕರುಣೆಯಿಂದ ಪೂರ್ಣಗೊಳಿಸಿದರು. ಅನೀತಿ-ಅಕ್ರಮವನ್ನು ನೀತಿ ಮತ್ತು ಅಭಯದಿಂದ, ಶತ್ರುತ್ವವನ್ನು ಭಾತೃತ್ವದಿಂದ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಸತ್ಯ ವಿಶ್ವಾಸ ಮತ್ತು ವೈಚಾರಿಕತೆಗಳ ಮೂಲಕ ಬದಲಿಸಿ ಮನುಷ್ಯ ಜೀವನಕ್ಕೆ ಹೊಸ ಭಾಷ್ಯವನ್ನು ಬರೆದ ಪೈಗಂಬರರ ಯಶೋಗಾಥೆಯ ಹಿಂದಿರುವ ಚುಂಬಕಶಕ್ತಿ ಮತ್ತು ಅವರ ಸಂದೇಶ‌ಗಳು ಒಂದು ಬೃಹತ್‌ ಜನ ಸಮೂಹದ ಆಕರ್ಷಣೆೆಗೆ ಒಳಗಾಗಲು ಕಾರಣವಾಗಿರುವುದು ಅವರ ಶ್ರೇಷ್ಠ ಗುಣ ನಡತೆ ಮತ್ತು ಉತ್ತುಂಗ ನೈತಿಕ ಮಟ್ಟದಿಂದ. ಕುಟುಂಬದವರಾಗಲಿ, ಸ್ನೇಹಿತರಾಗಲಿ, ವೈರಿಗಳಾಗರಲಿ ಯಾರೊಂದಿಗೆ ವ್ಯವಹರಿಸುವಾಗಲೂ ಪೈಗಂಬರರು ಸದ್ವರ್ತನೆಯನ್ನು ತೋರುತ್ತಿದ್ದರು.

ಧರ್ಮದಲ್ಲಿ ಸರಳತೆ ಮತ್ತು ನಮ್ಯತೆ
ಧರ್ಮವನ್ನು ಕಠಿಣಗೊಳಿಸದೆ ಸುಲಲಿತವಾಗಿಸುವುದು ಉತ್ತಮವೆಂದು ಪ್ರವಾದಿಯವರು ಜನಸಮೂಹಕ್ಕೆ ಹೇಳಿರುವುದು ಉಲ್ಲೇಖನೀಯ. ಧರ್ಮವು ತುಂಬಾ ಸುಲಭ. ಧರ್ಮದ ವಿಚಾರದಲ್ಲಿ ಅತಿ ಹೊರೆಯನ್ನಾಗಿಸುವುದರಿಂದ ಅದನ್ನು ಯಥಾವತ್ತಾಗಿ ಕಾರ್ಯಗತಗೊಳಿಸುವುದು ಕಷ್ಟಕರವಾಗುತ್ತದೆ. ಆದುದರಿಂದ ಅತಿರೇಕಗೊಳಿಸದೆ ತಾನು ಮಾಡುವ ಆರಾಧನೆ ಪ್ರಾರ್ಥನೆಗಳನ್ನು ಸರಳ ಮತ್ತು ಸುಲಲಿತವಾಗಿಸಿ ಅದರಲ್ಲಿ ಪರಿಪೂರ್ಣತೆಯನ್ನು ಸಾಧಿಸುವುದು ಹೆಚ್ಚು ಪುಣ್ಯದಾಯಕವೆಂದಿದ್ದಾರೆ. ಧರ್ಮದ ವಿಶಾಲ ಪರಿಕಲ್ಪನೆಯಾಗಿರುವ ಇಸ್ಲಾಂ (ದೀನ್‌) ಮಾನವ ಬದುಕಿನ ಸಮಗ್ರ ನೀತಿ ಸಂಹಿತೆಯಾಗಿದ್ದು, ಅವುಗಳನ್ನು ಮತ್ತೆ ಇಮಾನ್‌ (ವಿಶ್ವಾಸ), ಇಸ್ಲಾಂ (ಆಚರಣೆ) ಮತ್ತು ಇಹ್‌ಸಾನ್‌ ಅಂದರೆ ಸಾಮಾಜಿಕ ಹೊಣೆಗಾರಿಕೆ, ಸಹಜೀವಿಗಳೊಡನೆ ಸದ್ವರ್ತನೆಯೆಂದು ವಿಂಗಡಿಸಲಾಗಿದೆ. ಈ ಮೂಲಕ ಇಸ್ಲಾಮ್‌ ಧರ್ಮವಿಶ್ವಾಸ, ಆಚರಣೆ ಮತ್ತು ಸಮುದಾಯ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವದ ವಿಚಾರದಲ್ಲಿ ಪೂರ್ಣ ನಮ್ಯತೆ, ಲಾಲಿತ್ಯ ಮತ್ತು ಸಮತೋಲನವನ್ನು ಪ್ರತಿಪಾದಿಸಿದ್ದಾರೆ. ಇಸ್ಲಾಮಿನ ಆಧಾರಸ್ತಂಭವಾಗಿರುವ ನಮಾಜ್‌ ಒಂದು ಕಡ್ಡಾಯ ಆರಾಧನೆಯಾಗಿದ್ದು ಮೊದಲಿಗೆ ದಿನವೊಂದಕ್ಕೆ ಐವತ್ತು ಬಾರಿ ನಿಗದಿಗೊಳಿಸಿದ್ದ ಈ ಪ್ರಾರ್ಥನೆಯನ್ನು ಹಂತ ಹಂತವಾಗಿ ಐದು ಹೊತ್ತಿಗೆ ಮಿತಿಗೊಳಿಸಲಾಗಿದ್ದರೂ ದೇವನು ಅದರ ಪುಣ್ಯ ಫ‌ಲವನ್ನು ಐವತ್ತಕ್ಕೆ ಸಮಾನವಾಗಿ ನೀಡುತ್ತೇನೆಂದು ವಾಗ್ಧಾನವಿತ್ತಿರುವುದು ಇದಕ್ಕೆ ನಿದರ್ಶನವಾಗಿದೆ. ತನಗೆ ಹೊರೆಯೆನಿಸುವ ಮಟ್ಟದಲ್ಲಿ ಧರ್ಮದ ವಿಷಯದಲ್ಲಿ ಅತಿಯೆನಿಸುವುದನ್ನು ಮಾಡುವುದರಿಂದ ಕ್ರಮೇಣ ಬಳಲಿಕೆ, ಆಲಸ್ಯವುಂಟಾಗಿ ಅವುಗಳಿಂದ ವಿಮುಖರಾಗುವ ಸಾಧ್ಯತೆಗಳಿವೆಯೆಂದು ಪ್ರವಾದಿಯವರು ಎಚ್ಚರಿಸಿದ್ದಾರೆ. ಅಲ್ಲಾಹನು ನಿಮ್ಮ ಹೆಚ್ಚಿನ ಆರಾಧನೆಗಳಿಗೆ ಪ್ರತಿಫ‌ಲವನ್ನು ನೀಡುವುದರಲ್ಲಿ ಆಯಾಸಗೊಳ್ಳುವುದಿಲ್ಲ. ಆದರೆ ದುರ್ಬಲರಾದ ಮನುಷ್ಯರು ಆಯಾಸಗೊಳ್ಳುತ್ತಾರೆ. ನಿತ್ಯ ನಿರಂತರವಾಗಿ ಮಾಡುವ ಸುಲಭ ಕರ್ಮಗಳು ಅಲ್ಲಾಹನ ಬಳಿ ಅತ್ಯುತ್ತಮವೆನಿಸಿದ್ದು, ಧರ್ಮವು ಮನುಷ್ಯನ ದೈಹಿಕ ಮತ್ತು ಬೌದ್ಧಿಕ ಸಾಮರ್ಥ್ಯಕ್ಕೆ ಮೀರಿದ ಕಠಿಣ ಕರ್ಮಗಳನ್ನು ಕಡ್ಡಾಯಗೊಳಿಸಿ ಕಷ್ಟಕ್ಕೀಡು ಮಾಡುವ ಉದ್ದೇಶವನ್ನು ಹೊಂದಿಲ್ಲವೆಂದು ಪವಿತ್ರ ಕುರಾನ್‌ ಮತ್ತು ಪ್ರವಾದಿ ಚರ್ಯೆಗಳಿಂದ ಸ್ಪಷ್ಟಗೊಂಡಿದೆ. 

ನೆರೆಹೊರೆಯವರೊಂದಿಗೆ ಸಂಬಂಧ
ನೆರೆ ಹೊರೆಯವರೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸುವುದನ್ನು ಪೈಗಂಬರರು ಉತ್ಕೃಷ್ಟ ಮೌಲ್ಯವಾಗಿ ಪರಿಗಣಿಸಿದ್ದರು. ನೈಜ ಮುಸ್ಲಿಂ ಯಾರೆಂದರೆ ಆತ‌ನಿಂದ ನೆರೆಯವರ ಜೀವ ಸೊತ್ತು ವಿತ್ತಗಳು ಸುರಕ್ಷಿತವಾಗಿರುವುದು ಎಂಬುದು ಪ್ರವಾದಿಯವರ ನಿರ್ವಚನವಾಗಿತ್ತು. 

ಓರ್ವ ಮಹಿಳೆ ಧರ್ಮಭಕ್ತೆಯಾಗಿದ್ದು ಹೆಚ್ಚಿನ ರೀತಿಯಲ್ಲಿ ಪ್ರಾರ್ಥನೆ ಉಪವಾಸ ಮತ್ತು ದಾನಧರ್ಮಗಳನ್ನು ಮಾಡುತ್ತಿದ್ದರು. ಆದರೆ ಆಕೆ ನೆರೆಯವರ ಜತೆಗೆ ಬಹಳ ಕಠಿಣವಾಗಿ ವರ್ತಿಸುತ್ತಿದ್ದರು. ಇದರಿಂದ ಆ ಮಹಿಳೆ ನರಕವಾಸಿಯಾಗಿದ್ದಾರೆಂದು ಪೈಗಂಬರರು ಹೇಳಿದರು. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನಮ್ಮವನಲ್ಲ ಎಂದು ಪೈಗಂಬರರು ಹೇಳಿರುವುದು ಉಲ್ಲೇಖನೀಯ. ಪ್ರವಾದಿಯವರ ಕಾಲದಲ್ಲಿ ತಾವು ಉಣ್ಣುವುದಕ್ಕೆ ಮುಂಚಿತವಾಗಿ ತಮ್ಮ ನೆರೆಹೊರೆಯವರಿಗೆ ಸಾಕಷ್ಟು ಆಹಾರವಿದೆಯೇ ಎಂಬುದನ್ನು ನೋಡಿ ತಿಳಿಯುವ ಪರಿಪಾಠವನ್ನು ಅವರ ಅನುಚರರು ಹೊಂದಿದ್ದರು. ಅಬೂದರ್ರ ಎಂಬ ನಿಕಟವರ್ತಿಗೆ ಪೈಗಂಬರರು ಒಮ್ಮೆ ಹೇಳುತ್ತಾರೆ, “ನೀವು ಒಂದು ಸಾರು ಮಾಡುವುದಾದರೆ ಅದನ್ನು ಸ್ವಲ್ಪ ಹೆಚ್ಚಿಸಿ ನಿಮ್ಮ ನೆರೆಯವರಿಗೆ ನೀಡಿ’. ನೆರೆಹೊರೆಯ ಯಹೂದಿಗಳಿಗೂ ವಿಶೇಷ ಸಂದರ್ಭಗಳಲ್ಲಿ ಮಾಂಸವನ್ನು ಹಂಚುತ್ತಿದ್ದರು. ಕೇವಲ ದೇವನಿಗೆ ಸಂಬಂಧಿಸಿದ ಕರ್ತವ್ಯಗಳಲ್ಲದೆ ಸಹಜೀವಿಗಳೊಂದಿಗೆ ಹೇಗೆ ವರ್ತಿಸಬೇಕೆಂಬುದಕ್ಕೆ ಇದೊಂದು ಪಾಠದಂತಿದೆ.

Advertisement

ನಿಸರ್ಗ ಮತ್ತು ನೀರಿನ ಮಹತ್ವ
ಮಾನವ ಜೀವನದ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಮಾನವೀಯ ಸಂದೇಶವನ್ನು ನೀಡಿರುವ ಪೈಗಂಬರರು, ಪರಿಸರ ನಿಸರ್ಗ ಮತ್ತು ನೀರಿನ ಮಹತ್ವವನ್ನು ಸಾರಿ ಹೇಳಿದ್ದರು. ಜಾಗತಿಕ ತಾಪಮಾನ, ಪರಿಸರಕ್ಕೆ ಸಂಬಂಧಿಸಿದ‌ ಬಿಕ್ಕಟ್ಟುಗಳು ಈ ಕಾಲದ ಬಹುದೊಡ್ಡ ಸವಾಲಾಗಿವೆ. ಈ ಪ್ರಕೃತಿಯಲ್ಲಿ ದೇವನು ಸಮತೋಲನವನ್ನಿರಿಸಿದ್ದು ಅದನ್ನು ಭಂಗಗೊಳಿಸಿದರೆ ವಿನಾಶಕಾರೀ ಪರಿಣಾಮಗಳೆದುರಾಗಬಹುದೆಂದು ಕುರಾನ್‌ ಎಚ್ಚರಿಸಿದೆ. ಮುಸ್ಲಿಮರು ಇಡೀ ಮಾನವಕುಲವನ್ನು ವಿಶ್ವದ ಸ್ವರಮೇಳದ ಭಾಗವೆಂದು ಪರಿಗಣಿಸಬೇಕಾಗುತ್ತದೆ. ಮಾನವರನ್ನು ಈ ಭೂಮಿಯಲ್ಲಿ ದೇವನ ಪ್ರತಿನಿಧಿಗಳೆಂದು ಕರೆಯಲಾಗಿದೆ. ಪ್ರಕೃತಿಯಲ್ಲಿರುವ ಎಲ್ಲವನ್ನು ಅವರಿಗೆ ಕೊಡುಗೆಯಾಗಿ ನೀಡಲಾಗಿದೆ. ಇದನ್ನು ಸದ್ಬಳಕೆಮಾಡುವ ನಿಟ್ಟಿನಲ್ಲಿ ಜ್ಞಾನ -ವಿವೇಕವನ್ನು ನೀಡಲಾಗಿದೆ. ಮಾನವರು ಈ ಅಗಾಧ ಸಂಪತ್ತಿನ ಧರ್ಮದರ್ಶಿಗಳಾಗಿ ಎಲ್ಲ ರೀತಿಯ ದುರಾಸೆಗಳಿಂದ ಮುಕ್ತರಾಗಿ ಸಕಲ ಜೀವಾತ್ಮರಿಗೂ ಈ ಭೂಮಿಯನ್ನು ಸುಭಿಕ್ಷವಾಗಿರಿಸುವ ಹೊಣೆಯನ್ನು ಹೊಂದಿದ್ದಾರೆ. ಪವಿತ್ರ ಕುರಾನಿನಲ್ಲಿರುವ 6,666 ಸೂಕ್ತಿಗಳ ಪೈಕಿ ಸುಮಾರು 500ರಷ್ಟು ಸೂಕ್ತಿಗಳು ನೈಸರ್ಗಿಕ ವಿಷಯಗಳ ಬಗ್ಗೆ ವಿವರಿಸುತ್ತವೆ. ಅಲ್ಲಾಹನು ಆಕಾಶ, ಭೂಮಿಯಲ್ಲಿರುವ ತನ್ನ ದೃಷ್ಟಾಂತಗಳ ಬಗ್ಗೆ ಗಹನವಾಗಿ ಚಿಂತಿಸಲು ಆಗಾಗ ನೆನಪಿಸುತ್ತಾನೆ. ಪರ್ವತಗಳು, ಸಮುದ್ರ, ಪ್ರಾಣಿ-ಪಕ್ಷಿ ಸಂಕುಲ, ಸೂರ್ಯ-ಚಂದ್ರ ನಕ್ಷತ್ರಗಳು ಹೀಗೆ ಅನೇಕ ಕುರುಹುಗಳು ನಮ್ಮ ಕಣ್ಣ ಮುಂದಿವೆ. ಮದೀನದ ಗ‌ಡಿಯುದ್ದಕ್ಕೂ ಮರಗಳನ್ನು ಸಂರಕ್ಷಿಸಲಾಗಿದ್ದು ಮರುಭೂಮಿಯಲ್ಲಿ ಪ್ರಾಣಿಗಳಿಗೆ ಆಶ್ರಯ ಮತ್ತು ನೆರಳು ನೀಡುತ್ತಿದ್ದ ದೇವದಾರು ಮರಗಳನ್ನು ಕಡಿಯುವುದನ್ನು ಪೈಗಂಬರರು ಕಟ್ಟುನಿಟ್ಟಾಗಿ ನಿಷೇಧಿಸಿದ್ದರು. ಇಡೀ ಭೂಮಿಯನ್ನು ಪವಿತ್ರ ಸ್ಥಾನದಿಂದ ನೋಡಬೇಕೆಂಬ ಆಶಯ ಪ್ರವಾದಿಯವರ ವಚನಗಳಲ್ಲಿದೆ. ಐದು ಹೊತ್ತಿನ ನಮಾಝ್ ಮನುಷ್ಯನಿಗೆ ಭೂಮಿಯೊಂದಿಗಿನ ಪವಿತ್ರ ಸಂಬಂಧವನ್ನು ಸಂಕೇತಿಸುತ್ತದೆ.

ನಮಾಝ್ ನೇರವಾಗಿ ನಿಲ್ಲುವುದರಿಂದ ಆರಂಭಗೊಂಡು ನಾವು ಜನಿಸಿ ಬಂದಿರುವ ಭೂಮಿಗೆ ಹಣೆಯನ್ನು ಇಟ್ಟು ಸಾಷ್ಟಾಂಗವೆರಗಿ ದೇವನನ್ನು ಸ್ತುತಿಸುವ ವಿಶಿಷ್ಟ ಪ್ರಾರ್ಥನೆಯಾಗಿದೆ. “ಈ ಭೂಮಿಯ ಅಂತ್ಯ ಸಮೀಪಿಸುತ್ತಿರುವುದೆಂದು ತಿಳಿದ‌ರೂ ನಿನ್ನ ಕೈಯಲ್ಲಿರುವ ಪುಟ್ಟ ಸಸಿಯೊಂದ‌ನ್ನು ಭೂಮಿಯಲ್ಲಿ ನೆಟ್ಟು ಬಿಡು’ ಎಂದು ಪ್ರವಾದಿಯವರು ಹೇಳಿದ್ದಾರೆ.

ಅದೇ ರೀತಿ ಇಸ್ಲಾಮಿಕ್‌ ನ್ಯಾಯಶಾಸ್ತ್ರ ಮಿತವಾಗಿ ಲಭ್ಯವಿರುವ ನೀರನ್ನು ಹೇಗೆ ಸಂರಕ್ಷಿಸಿ, ವಿತರಿಸಬೇಕೆಂದು ನಿಯಮಾವಳಿಗಳನ್ನು ಹಾಕಿಕೊಟ್ಟಿದೆ.  ಮಳೆ, ಸಮುದ್ರ, ಸಾಗರಗಳು, ನದಿಗಳು ಕಾರಂಜಿಗಳ ಬಗ್ಗೆ ಕುರಾನಿನಲ್ಲಿ ತಿಳಿಸಿದ್ದು, ಅವುಗಳು ಮಾನವ ಕುಲಕ್ಕೆ ದೇವನ ಕರುಣೆ ಮತ್ತು ಔದಾರ್ಯಗಳಾಗಿವೆ. ಬಾಯಾರಿಕೆಯಿಂದ ಬಳಲಿದ ವ್ಯಕ್ತಿಗೆ ನೀರುಣಿಸುವುದು ಒಂದು ಸತ್ಕರ್ಮವಾಗಿದೆ. ಮನುಷ್ಯರಂತೆ, ಪ್ರಾಣಿಗಳು ಮತ್ತು ಬೆಳೆಗಳಿಗೂ ನೀರಿನ ಹಕ್ಕಿದೆಯೆಂದು ಪ್ರತಿಪಾದಿಸಿದ ಪೈಗಂಬರರು, ಯಥೇಚವಾಗಿ ನೀರಿನ ಲಭ್ಯತೆಯಿದ್ದರೂ ಅದನ್ನು ಅನಗತ್ಯವಾಗಿ ಪೋಲು ಮಾಡುವುದು ನಿಷಿದ್ಧ ಮತ್ತು ಪಾಪಕಾರ್ಯವೆಂದು ಎಚ್ಚರಿಸಿದ್ದಾರೆ. ನೀರಿನಿಂದ ಆವೃತವಾದ ಪ್ರದೇಶಗಳನ್ನು ತಟಸ್ಥವಲಯ (buffer zone)ಗಳೆಂದು ಘೋಷಿಸುವಂತೆೆ ಸಲಹೆ ನೀಡಿದ ಪೈಗಂಬರರು ಯುದ್ಧದ ಸಂದರ್ಭಗಳಲ್ಲಿಯೂ ನೀರನ್ನು ಕಲುಷಿತಗೊಳಿಸಬಾರದೆಂದು ತಾಕೀತು ಮಾಡಿದ್ದಾರೆ.

ಆದಿಪಿತ ಆದಂ (ಅ.ಸ‌)ರಿಂದ ಆರಂಭಗೊಂಡ ಪ್ರವಾದಿ ಶೃಂಖಲೆಯನ್ನು ದೇವನು ಅಂತ್ಯಪ್ರವಾದಿ ಲೋಕಾನುಗ್ರಹಿ ಮುಹಮ್ಮದ್‌ (ಸ.ಅ)ರ ಮೂಲಕ ಪರಿಸಮಾಪ್ತಿಗೊಳಿಸಿದ್ದಾನೆ. ಮಾನವ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಅನುಕರಣೀಯವಾದ ಮಾದರಿಗಳನ್ನು ಹಾಕಿಕೊಟ್ಟ ಪೈಗಂಬರರನ್ನು ಕುರಾನಿನಲ್ಲಿ “ಉಸುವತುನ್‌ ಹಸನ’ ಅದರ್ಶ ಅನುಕರಣೀಯ ಮಾದರಿ ವ್ಯಕ್ತಿತ್ವವೆಂದು ಬಣ್ಣಸಲಾಗಿದೆ. 

ಆ ಮಹಾನ್‌ ಪ್ರವಾದಿಯವರು ಜಗತ್ತಿನಿಂದ ಕಣ್ಮರೆಯಾಗಿ 1400 ವರ್ಷಗಳೇ ಸಂದರೂ ಅವರು ತಮ್ಮ ಸಂದೇಶಗಳ ಮೂಲಕ ಜಗತ್ತಿನ ಮಾರ್ಗದರ್ಶಿಯಾಗಿ ಜನಮಾನಸದಲ್ಲಿ ವಿರಾಜಮಾನರಾಗಿದ್ದಾರೆ. 
ಈದ್‌ ಮಿಲಾದ್‌ ನಾಡಿನ ಸರ್ವಧರ್ಮೀಯ ಬಂಧುಗಳಿಗೆ ಶುಭವನ್ನು ತರಲಿ.

ಡಾ|  ಮೊಹಮ್ಮದ್‌ ಮುಸ್ತಫಾ ಆತೂರು

Advertisement

Udayavani is now on Telegram. Click here to join our channel and stay updated with the latest news.

Next