Advertisement

ರಸ್ತೆ ದೊಡ್ಡದಾದರೂ ತಪ್ಪಲಿಲ್ಲ ದಟ್ಟ ಣೆ

12:48 PM Dec 09, 2019 | Naveen |

ಶಶಿಕಾಂತ ಕೆ.ಭಗೋಜಿ
ಹುಮನಾಬಾದ:
ಪಟ್ಟಣದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಕಿರಿದಾಗಿದ್ದ ಅನೇಕ ಪ್ರಮುಖ ರಸ್ತೆಗಳನ್ನು ವಿಸ್ತರಣೆಗೊಳಿಸಿದರೂ ವಾಹನ ಮತ್ತು ಜನ ದಟ್ಟಣೆ ಮಾತ್ರ ತಪ್ಪಿಲ್ಲ. ಇದರ ಪರಿಣಾಮ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಲೆ ಇವೆ.

Advertisement

ಪಟ್ಟಣದ ಪ್ರತಿಯೊಂದು ಪ್ರಮುಖ ರಸ್ತೆಗಳಲ್ಲಿ ಈ ಸಮಸ್ಯೆ ಇದ್ದರೂ ವಿಶೇಷವಾಗಿ ಅಂಬೇಡ್ಕರ್‌ ವೃತ್ತದಿಂದ ನೂರಖಾನ್‌ ಅಖಾಡಾ ವರೆಗಿನ ಪ್ರದೇಶದಲ್ಲಿ ಹಿಂದೆಂದಿಗಿಂತಲೂ ಜನಸಂದಣಿ ಈಗ ದ್ವಿಗುಣಗೊಂಡಿದೆ. ಪಟ್ಟಣದೆಲ್ಲೆಡೆ ಪ್ರಮುಖ ರಸ್ತೆಗಳು ಕೇವಲ 20ರಿಂದ 40ಅಡಿ ಅಗಲ ಇದ್ದವು.

ಮೊದಲೇ ಸಂಚಾರಕ್ಕೆ ತೊಂದರೆ, ಈ ಮಧ್ಯೆ ಈ ರಸ್ತೆಗಳ ಎರಡೂ ಬದಿಗೆ ತರಕಾರಿ ವ್ಯಾಪಾರಿಗಳು ಈ ರಸ್ತೆ ಅತಿಕ್ರಮಿಸ ತೊಡಗಿದ್ದರು. ನಗರದ ಹೃದಯಭಾಗ ಸರ್ದಾರ ವಲ್ಲಭಭಾಯಿ ಪಟೇಲ ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ವಿಶೇಷವಾಗಿ ರವಿವಾರ ಮತ್ತು ಬುಧವಾರ ಸಂತೆ ದಿನಗಳಂದು ಬಟ್ಟೆ ಸೇರಿದಂತೆ ಇತರೆ ದಿನಬಳಕೆ ವಸ್ತಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಎರಡೂ ಬದಿಗೆ ಕುಳಿತುಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಯಾವುದೋ ಒಂದು ಸರಕು ಲಾರಿ ಬಂದರೂ ಸಂಚಾರ ದಟ್ಟಣೆ ಹೆಚ್ಚುತ್ತಿತ್ತು.

ರಸ್ತೆ ಅಗಲೀಕರಣ: ಇಕ್ಕಟ್ಟಾದ ರಸ್ತೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದ ವಿಷಯ ಗಂಭೀರ ಪರಿಗಣಿಸಿ, 2008ರಲ್ಲಿ ಜಿಲ್ಲಾ ಧಿಕಾರಿ ಆಗಿದ್ದ ಹರ್ಷಗುಪ್ತ ಅವರ ಅವಧಿಯಲ್ಲಿ ಜಿಲ್ಲಾದ್ಯಂತ ಕೈಗೊಳ್ಳಲಾದ ರಸ್ತೆ ವಿಸ್ತರಣೆ ಸಂದರ್ಭದಲ್ಲೇ ಹುಮನಾಬಾದನಲ್ಲೂ ವಿಸ್ತರಣೆ ಕಾರ್ಯ ಆರಂಭಗೊಂಡಿತ್ತು. ಪ್ರವಾಸಿ ಮಂದಿರದಿಂದ ಕೆಇಬಿ ಬೈಪಾಸ್‌, ಡಾ|ಅಂಬೇಡ್ಕರ್‌ ವೃತ್ತದಿಂದ ಬಸವೇಶ್ವರ ವೃತ್ತ, ಅಲ್ಲಿಂದ ಶಿವಪುರ ಮಾರ್ಗವಾಗಿ ಹಳೆ ರಾಷ್ಟ್ರಿಯ ಹೆದ್ದಾರಿವರೆಗೆ, ತದನಂತರ ಬಾಲಾಜಿ ವೃತ್ತದಿಂದ ಜೇರಪೇಟೆ, ಬಸವೇಶ್ವರ ವೃತ್ತದಿಂದ ವೀರಭದ್ರೇಶ್ವರ ದೇವಸ್ಥಾನದ ವರೆಗೆ, ಬಸವೇಶ್ವರ ವೃತ್ತದಿಂದ ಹಳೆಯ ಅಡತ್‌ ಬಜಾರ ಮಾರ್ಗವಾಗಿ ಶಿವಾಜಿ ವೃತ್ತದವರೆಗಿನ ರಸ್ತೆ ಒಳಗೊಂಡಂತೆ ಡಾ|ಅಂಬೇಡ್ಕರ್‌ ವೃತ್ತದಿಂದ ವಾಂಜ್ರಿ ವರೆಗೆ
ಕೇವಲ 20-40 ಅಡಿ ಇದ್ದ ಎಲ್ಲ ಮಾರ್ಗಗಳಲ್ಲೂ 55-58ರ ಅಡಿ ವರೆಗೆ ವಿಸ್ತರಿಸಲಾಯಿತು.

15 ಕೋಟಿ ಮೊತ್ತದ ಅಭಿವೃದ್ಧಿ: 2008-2019ರ ವರೆಗೆ ನಿರಂತರ ಈ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಗೊಂಡ ರಾಜಶೇಖರ ಬಿ.ಪಾಟೀಲ ಅವರು ರಾಜ್ಯದಲ್ಲಿ ಸರ್ಕಾರ ಯಾವುದೇ ಇದ್ದರೂ ಅಭಿವೃದ್ಧಿಗಾಗಿ ಅನುದಾನ ತರಲು ಯಾವತ್ತೂ ಹಿಂದೆ ಬಿದ್ದವರಲ್ಲ. ಅಂತೆಯೇ 2008ರಿಂದ ಈವರೆಗೆ ವಿಸ್ತರಣೆಗೊಳಿಸಲಾದ ಎಲ್ಲ ರಸ್ತೆಗಳನ್ನು ಬಿಆರ್‌ಜಿಎಫ್‌ ಮತ್ತು ಎಚ್‌ ಕೆಆರ್‌ಡಿಬಿ ಸೇರಿದಂತೆ ಸರ್ಕಾರದ ವಿವಿಧ ನಿಧಿಗಳಿಂದ 15 ಕೋಟಿಗೂ ಅಧಿಕ ಅನುದಾನ ತಂದು ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. ವಿಸ್ತರಣೆಯಾದ ನಂತರ ಅಷ್ಟಕ್ಕೆ ಕೈಬಿಡದೆ ರಸ್ತೆಗಳ ಬದಿಗೆ ಪಾದಚಾರಿ ರಸ್ತೆ ವ್ಯವಸ್ಥೆ ಮಾಡಿದ್ದಾರೆ. ಬಾಕಿ ಇರುವ ಇನ್ನೂ ಹಲವೆಡೆಗಳಲ್ಲಿ ಆ ಕಾರ್ಯ ಈಗಲೂ ಚಾಲ್ತಿಯಲ್ಲಿದೆ.

Advertisement

ಕಡಿಮೆಯಾಗದ ದಟ್ಟಣೆ: ಇಷ್ಟೆಲ್ಲ ಅಭಿವೃದ್ಧಿಯಾದ ಮೇಲೆ ಎಲ್ಲವೂ ಸುಸೂತ್ರವಾಗಿ ನಡೆಯಬೇಕು ತಾನೆ. ಅಂದುಕೊಂಡಂತೆ ಎಲ್ಲವೂ ಸುಗಮವಾಗಿದ್ದರೆ ಪಟ್ಟಣದಲ್ಲಿ ಸಂಚಾರ ದಟ್ಟಣೆಯೇ ಇರುತ್ತಿರಲಿಲ್ಲ. ಬೇಕಾಬಿಟ್ಟಿಯಾಗಿ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ನಿಲ್ಲಿಸುವುದಕ್ಕಾಗಿ ವಾರದಲ್ಲಿ 3 ದಿನ ಬಲಬದಿಗೆ 3 ದಿನ ಎಡ ಬದಿಗೆ ಎಂದು ನಿಗದಿಪಡಿಸಿ, ವಾಹನಗಳನ್ನೇನೋ ನಿಲ್ಲಿಸಲಾಗುತ್ತಿದೆ. ಆದರೆ ಸಮಸ್ಯೆ ಇರೋದು ಬೀದಿ ವ್ಯಾಪಾರಿಗಳದು. ತಾಲೂಕಿನ ವಿವಿಧ ಗ್ರಾಮಗಳಿಂದ ಬರುವ ಬಡ ರೈತರು ತಾವು ಬೆಳೆದ ತರಕಾರಿ ಮಾರಾಟ ಮಾಡಲು ಈ ರಸ್ತೆ ಬದಿ ಸ್ಥಳಗಳಲ್ಲೇ ಕುಳಿತುಕೊಳ್ಳುತ್ತಾರೆ.

ಜೊತೆಗೆ ಪಟ್ಟಣದ ಪ್ರತಿಯೊಬ್ಬ ವ್ಯಾಪಾರಿಗಳು ಪಾದಚಾರಿಗಳ ಸಂಚಾರಕ್ಕಾಗಿ ನಿರ್ಮಿಸಲಾದ ಸ್ಥಳದ ಮೇಲೆ ತಮ್ಮ ವಿವಿಧ ಮಾರಾಟ ಸಾಮಗ್ರಿ ಇಡುತ್ತಿರುವುದೂ ಕೂಡ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವಾಗಿದೆ.

ವ್ಯಾಪಾರಿಗಳು ಬದಲಾಗಲಿಲ್ಲ: ಸಾರ್ವಜನಿಕರ ಅನುಕೂಲಕ್ಕಾಗಿ ರಸ್ತೆಗಳ ಜೊತೆಗೆ ಅಭಿವೃದ್ಧಿಪಡಿಸಲಾದ ಫುಟ್‌ಪಾತ್‌ ಮೇಲೆ ಮಾರಾಟ ವಸ್ತುಗಳನ್ನು ಇಡದಂತೆ ಶಾಸಕರು ಈವರೆಗೆ ನೂರಾರು ಬಾರಿ ಮನವಿ ಮಾಡಿದರೂ ಇದರಿಂದ ಕಂಠ ಹೋಯಿತೇ ವಿನಃ ಪರಿವರ್ತನೆ ಕಾಣದೇ ಇರುವುದು ನೋವಿನ ಸಂಗತಿ.

ಯಾವುದಾದರೊಂದು ಲಾರಿ ರಸ್ತೆ ಮಧ್ಯ ಬಂದರೆ ಅದು ಅಲ್ಲಿಂದ ಹೋಗುವವರೆಗೆ ಅದರ ಹಿಂದೆ ನೂರಾರು ಬೈಕ್‌ ಸಾಲುಗಟ್ಟಿ ನಿಲ್ಲಿಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪರ್ಯಾಯ ವ್ಯವಸ್ಥೆ ಮಾಡಿ: ಈ ಮಧ್ಯ ತಮಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿದ್ದೇ ಆದರೆ ನಾವು ಅಲ್ಲಿ ಕುಳಿತುಕೊಳ್ಳುವ, ವಾಹನ ಸವಾರರಿಗೆ ತೊಂದರೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಾಧ್ಯವಾದಷ್ಟು ಶೀಘ್ರ ತಮಗೆ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಿಕೊಡಬೇಕು ಎಂಬುದು ರಸ್ತೆಬದಿ ಬಡ ವ್ಯಾಪಾರಿಗಳ ಒತ್ತಾಸೆ.

ಎಲ್ಲಕ್ಕೂ ಒಂದೇ ಪರಿಹಾರ: ಈ ನಿಟ್ಟಿನಲ್ಲಿ ರಸ್ತೆಗಳ ಅಭಿವೃದ್ಧಿ ಕೈಗೊಂಡ ಕ್ಷೇತ್ರದ ಶಾಸಕರಿಗೆ ಬೀದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡುವುದು ಕಷ್ಟಸಾಧ್ಯದ ಕೆಲಸವೇನಲ್ಲ. ಇದರಿಂದ ವ್ಯಾಪಾರಿಗಳ ಜೊತೆಗೆ ಸಂಚಾರ ಪೊಲೀಸರಿಗೆ ಸಮಸ್ಯೆಯೂ ಕಡಿಮೆಯಾಗಿ ಎಲ್ಲರಿಗೂ ನೆಮ್ಮದಿ ಸಿಗುವ ಹಿನ್ನೆಲೆಯಲ್ಲಿ ಸಮಸ್ಯೆಗೆ ಶೀಘ್ರ ಶಾಶ್ವತ ಪರಿಹಾರ ಕಲ್ಪಿಸುವರೆ ಕಾದು ನೋಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next