Advertisement

ಅನುದಾನ ಸದ್ಬಳಕೆಯಾದರೆ ಸಾರ್ಥಕ

10:26 AM Aug 18, 2019 | Naveen |

ಹುಮನಾಬಾದ: ಶಾಸಕರ ಅನುದಾನ ಮಾತ್ರವಲ್ಲದೇ ಎಚ್ಕೆಆರ್‌ಡಿಬಿ ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾಲೇಜು ಅಭಿವೃದ್ಧಿಗಾಗಿ ಕೋಟ್ಯಂತರ ರೂ. ಅನುದಾನ ನೀಡಿದ್ದೇನೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.

Advertisement

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಸ್ಮಾರ್ಟ್‌ ಕ್ಲಾಸ್‌ ಉದ್ಘಾಟಿಸಿ ಮಾತನಾಡಿದ ಅವರು, ಕೇವಲ ಅನುದಾನ ಪಡೆದು ಮೂಲಸೌಲಭ್ಯ ಕಲ್ಪಿಸಿಕೊಂಡ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ ಸೌಲಭ್ಯಕ್ಕೆ ತಕ್ಕಂತೆ ಮಕ್ಕಳ ಫಲಿತಾಂಶದಲ್ಲಿ ಸುಧಾರಣೆ ತಂದಾಗಲೇ ಅನುದಾನ ನೀಡಿದ ನಮಗೂ ತೃಪ್ತಿಯಾಗುತ್ತದೆ. ಈ ನಿಟ್ಟಿನಲ್ಲಿ ಸರ್ವರು ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.

1700 ಬಡ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಓದುತ್ತಿಯುವುದು ಸಂತಸದ ಸಂಗತಿ. ನಾನು ನೀಡಿದ ಅನುದಾನದಲ್ಲಿ ಗುಣಮಟ್ಟದ ಕಟ್ಟಡ ನಿರ್ಮಾಣವಾಗಿರುವುದು ನೆಮ್ಮದಿ ನೀಡಿದೆ. ಫಲಿತಾಂಶ ಸುಧಾರಣೆ ಆಗಬೇಕೆಂಬ ಉದ್ದೇಶದ ಹಿಂದೆ ಇಲ್ಲಿ ಏನೂ ಪ್ರಗತಿ ಇಲ್ಲವೆಂದೇನಲ್ಲ. ಇನ್ನೂ ಹೆಚ್ಚು ಪ್ರಮಾಣದಲ್ಲಿ ಸುಧಾರಣೆ ಆಗಬೇಕೆಂಬ ಸದುದ್ದೇಶವಿದೆ ಎಂದರು. ಗುರು-ಶಿಷ್ಯರ ಮಧ್ಯ ಗೌರವದ ಭಾವನೆ ಇರಬೇಕೇ ಹೊರತು ಅದು ಸಲುಗೆ ರೂಪ ಪಡೆದರೆ ಅಪಾಯಕ್ಕೆ ಕಾರಣವಾಗುತ್ತದೆ. ಈ ವಿಷಯದಲ್ಲಿ ಕೊಂಚ ಎಚ್ಚೆತ್ತುಕೊಳ್ಳುವುದು ಭವಿಷ್ಯದ ದೃಷ್ಟಿಯಿಂದ ಒಳಿತು ಎಂದು ಸಲಹೆ ನೀಡಿದರು.

ಈ ಕ್ಷೇತ್ರದ ಶಾಸಕನಾದ ನನಗೆ ಸರ್ಕಾರ ಮಾಸಿಕ 40,000 ರೂ. ಸಂಬಳ ನೀಡುತ್ತದೆ. ಆದರೆ ಇಲ್ಲಿನ ಪ್ರಾಧ್ಯಾಪಕರು ನನಗಿಂತ ಹೆಚ್ಚು ಸಂಬಳ ಪಡೆಯುತ್ತಾರೆ. ಡಾ|ತುಪ್ಪದ ಅವರೆ ನಿಮಗೆಷ್ಟು ಸಂಬಳ ಎಂಬ ಶಾಸಕರ ಪ್ರಶ್ನೆಗೆ 2 ಲಕ್ಷ ರೂ. ಎನ್ನುವ ಬದಲು ಎರಡು ಬೆರಳು ಮಾಡಿ ತೋರಸಿದಾಗ, ಏನು ತುಪ್ಪದವರೆ ಬಿ.ಎಸ್‌.ಯಡಿಯೂರಪ್ಪ ಅವರಂತೆ ಎರಡು ಬೆರಳು ತೋರಿಸುತ್ತಿದ್ದಿರಿ ಎಂದು ಸಭೆಯನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಬಾಬುರಾವ್‌ ಪರಮಶೆಟ್ಟಿ ಮಾತನಾಡಿ, ಶಾಸಕ ರಾಜಶೇಖರ ಪಾಟೀಲ ಅವರು ತಮ್ಮ ಸ್ವಂತ ಸಂಸ್ಥೆಗಿಂತ ನಾಲ್ಕೈದು ಪಟ್ಟು ಹೆಚ್ಚು ಅನುದಾನ ನೀಡಿರುವುದನ್ನು ಗಮನಿಸಿದರೆ ಬಡ ಮಕ್ಕಳ ಮೇಲಿನ ಅವರ ಕಳಕಳಿ ಎಷ್ಟಿದೆ ಎಂಬುದು ತಿಳಿಯುತ್ತದೆ. 4 ದಶಕಗಳ ಹಿಂದೆ ಪಟ್ಟಣದಲ್ಲಿ ಶೈಕ್ಷಣಿಕ ಸೌಲಭ್ಯವಿಲ್ಲದ ಸಂದರ್ಭದಲ್ಲಿ ಮಾಜಿ ಸಚಿವ ದಿ.ಬಸವರಾಜ ಪಾಟೀಲ ಅವರು ಪದವಿಪೂರ್ವ, ಪದವಿ ಮಹಾವಿದ್ಯಾಲಯ ಆರಂಭಿಸುವ ಮೂಲಕ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದರು ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ|ವೀರಣ್ಣ ತುಪ್ಪದ ಮಾತನಾಡಿ, ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಈ ಮಟ್ಟಕ್ಕೆ ಬೆಳೆಯಲು ಶಾಸಕರ ಇಚ್ಛಾಶಕ್ತಿಯೇ ಕಾರಣ ಎಂದು, ತಮ್ಮ ಅವಧಿಯಲ್ಲಿ ಕೈಗೊಂಡ ಅಭಿವದ್ಧಿ ಕಾರ್ಯಗಳ ಕುರಿತು ವಿವರಿಸಿದರು.

ಇನ್ನೋರ್ವ ನಿರ್ದೇಶಕ ಸುರೇಶ ಘಾಂಗ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವರಾವ್‌ ತಳಘಟಕರ್‌ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಡಾ|ಜಯಕುಮಾರ ಸಿಂಧೆ, ಅಲ್ಕಾ ಡಿ.ಸೋಲಂಕರ್‌, ಡಾ|ಶಾಂತಕುಮಾರ ಬನಗುಂಡಿ, ಡಾ|ಸಂಜೀವಕುಮಾರ, ಡಾ|ರಾಜಕುಮಾರ, ಡಾ|ಸಚಿನ್‌ ಕುಲಕರ್ಣಿ, ಮಾಧವರಾವ್‌, ವೀರೇಶ ಹಳಿಮನಿ, ಮಲ್ಲಿಕಾರ್ಜುನ ಬಾಳಿ, ಡಾ|ರೂತಾ ತಾಳ್ಮಡ್ಗಿ, ಡಾ|ಜೈಶ್ರೀ ಶೆಟ್ಟಿ, ಅಂಬರೀಶ ಕನ್ಹೇರಿ, ರಾಜಾಬಾಯಿ, ಸಂಪತಕುಮಾರಿ ಮೊದಲಾದವರು ಇದ್ದರು. ಕಿರಣ-ಅರುಣ ಪ್ರಾರ್ಥಿಸಿದರು. ಡಾ|ಮಹಾದೇವಿ ಹೆಬ್ಟಾಳೆ ನಿರೂಪಿಸಿದರು. ಡಾ|ಪ್ರಹ್ಲಾದ ಚೇಂಗ್ವೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next