Advertisement

ಈಡೇರಿಲ್ಲ ಅಂಗನವಾಡಿಗಳ ಉದ್ದೇಶ

07:40 PM Mar 14, 2020 | Naveen |

ಹುಮನಾಬಾದ: 6 ವರ್ಷದ ಒಳಗಿನ ಮಕ್ಕಳ ಆರೋಗ್ಯ, ಪೌಷ್ಟಿಕ ಮಟ್ಟ ವೃದ್ಧಿಸುವುದು, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳೆವಣಿಗೆಗೆ ಭದ್ರ ಅಡಿಪಾಯ ಹಾಕುವ ನಿಟ್ಟಿನಲ್ಲಿ ಆರಂಭಗೊಂಡ ಅಂಗನವಾಡಿ ಕೇಂದ್ರಗಳು ಇಂದಿಗೂ ಅವುಗಳ ಉದ್ದೇಶ ಈಡೇರಿಸಿಕೊಳ್ಳುವಲ್ಲಿ ವಿಫಲವಾಗಿವೆ.

Advertisement

ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಒಳಾಂಗಣ ಹಾಗೂ ಹೊರಾಂಗಣ ಚಟುವಟಿಕೆಗಳಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎಂಬ ನಿಮಯ ಇದ್ದರು ಕೂಡ ಇಲ್ಲಿನ ಶಿಶು ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಅಂಗನವಾಡಿ ಮಕ್ಕಳು ವಿವಿಧ ಸೌಕರ್ಯಗಳಿಂದ ವಚಿತರಾಗಿದ್ದಾರೆ. ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕು ಕೇಂದ್ರಗಳಲ್ಲಿನ ಬಹುತೇಕ ಅಂಗನವಾಡಿಗಳು 10-8 ಅಡಿ ಕೋಣೆಗಳಲ್ಲಿಯೇ ನಡೆಯುತ್ತಿದ್ದು, ಅಲ್ಲಿಯೇ ಮಕ್ಕಳ ಆಟ, ಪಾಠ ಜೊತೆಗೆ ಸಿಲಿಂಡರ್‌ ಇಟ್ಟು ಅಡುಗೆ ಮಾಡುವ ಸ್ಥಿತಿ ಇಲ್ಲಿದೆ. ಮಕ್ಕಳ ಆರೋಗ್ಯ ಕುರಿತು ಅಧಿಕಾರಿಗಳು ಚಿಂತಿಸುತ್ತಿಲ್ಲ ಎಂಬ ಆರೋಪಗಳು ಇವೆ.

ಕೇಂದ್ರಗಳ ಪೂರ್ಣ ಮಾಹಿತಿ: ಹುಮನಾಬಾದ ಹಾಗೂ ಚಿಟಗುಪ್ಪ ತಾಲೂಕಿನಲ್ಲಿ ಒಟ್ಟಾರೆ 326 ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 242 ಸ್ವಂತ ಕಟ್ಟಡ ಹೊಂದಿವೆ ಎಂದು ಇಲಾಖೆ ಅ ಧಿಕಾರಿ ಮಾಹಿತಿ ನೀಡಿದ್ದಾರೆ. 64 ಅಂಗನವಾಡಿ ಕೇಂದ್ರಗಳು ಬಾಡಿಗೆ ಮನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಿಂಗಳಿಗೆ ಕನಿಷ್ಠ 1800 ರಿಂದ 3000 ವರೆಗೆ ಬಾಡಿಗೆ ನೀಡಲಾಗುತ್ತಿದೆ. 326 ಅಂಗನಾಡಿಗಳ ಪೈಕಿ 60ರಲ್ಲಿ ಶೌಚಾಲಯ ಇದ್ದು, 12 ಬಳಕೆಗೆ ಯೋಗ್ಯ ವಿಲ್ಲ. 54 ಕೇಂದ್ರಗಳಿಗೆ ಕುಡಿಯುವ ನೀರಿನ ವ್ಯಸ್ಥೆಗಳಿದ್ದು, 244 ಕೇಂದ್ರಗಳ ಸುತ್ತಲಿನ 100 ಮೀಟರ್‌ ಅಂತರದಲ್ಲಿ ನೀರಿನ ವ್ಯವಸ್ಥೆ ಇದೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

ಸೌಕರ್ಯ ಕೊರತೆ: 326 ಕೇಂದ್ರಗಳ ಪೈಕಿ ಕೇವಲ 20 ಅಂಗನವಾಡಿ ಕೇಂದ್ರಗಳಿಗೆ ಮಾತ್ರ ವಿದ್ಯುತ್‌ ವ್ಯವಸ್ಥೆ ಇದ್ದು, ಇನ್ನುಳಿದ ಕೇಂದ್ರಗಳು ವಿದ್ಯುತ್‌ ದೀಪ ಅಥವಾ ಫ್ಯಾನ್‌ ಕೂಡ ಕಾಣದ ಸ್ಥಿತಿ ಇಲ್ಲಿದೆ. ಬೇಸಿಗೆ ಸಂದರ್ಭದಲ್ಲಿ ಸರಾಸರಿ 40 ರಿಂದ 45 ಡಿಗ್ರಿ ವರೆಗಿನ ಉಷ್ಣಾಂಶ ಇಲ್ಲಿ ಸಾಮಾನ್ಯ. ಆದರೆ, ಯಾವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಫ್ಯಾನ್‌ ವ್ಯವಸ್ಥೆಯನ್ನು ಮಾಡಿಲ್ಲ. ಬಾಡಿಗೆಯಲ್ಲಿನ ಬಹುತೇಕ ಅಂಗನವಾಡಿಗಳು ತಗಡಿನ ಕೋಣೆಗಳಲ್ಲಿದ್ದು, ಮಕ್ಕಳಿಗೆ ಬೆವರಿಳಿಸುವಂತಿವೆ. 326 ಕೇಂದ್ರಗಳ ಪೈಕಿ 60ಕ್ಕೆ ಮಾತ್ರ ಶೌಚಾಲಯದ ವ್ಯವಸ್ಥೆ ಇದ್ದು, 12 ಮಾತ್ರ ಬಳಕೆಯಾಗುತ್ತಿವೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.

ಗುಣಮಟ್ಟದ ಆಹಾರ ಕೊರತೆ: 326 ಅಂಗನವಾಡಿ ಕೇಂದ್ರಗಳಲ್ಲಿ ಸುಮಾರು 15 ಸಾವಿರ ಮಕ್ಕಳು ಅಂಗನವಾಡಿಗಳ ಕಡೆ ಮುಖ ಮಾಡಿದ್ದು, ಇವರಿಗೆ ಪೌಷ್ಠಿಕ ಆಹಾರ ನೀಡಲು ತಿಂಗಳಿಗೆ ಸರಾಸರಿ 40 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಮಹಿಳಾ ಪೂರಕ ಪೌಷ್ಠಿಕ ಆಹಾರ ಉತ್ಪಾದನಾ (ಎಂಎಸ್‌ಪಿಟಿಸಿ) ಕೇಂದ್ರದಿಂದ ಸಿದ್ಧಪಡಿಸಿದ ಆಹಾರ ಪ್ಯಾಕೇಟ್‌ ಗಳನ್ನು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿದ್ದು, ಮಕ್ಕಳಿಗೆ ನೀಡುತ್ತಿರುವ ಆಹಾರ ಪದಾರ್ಥಗಳು ಗುಣಮಟ್ಟದಿಲ್ಲ ಎಂದು ಅನೇಕ ಪಾಲಕರು ಆಹಾರ ಪ್ಯಾಕ್‌ ಪಡೆದುಕೊಳ್ಳುತ್ತಿಲ್ಲ ಎಂದು ಅಂಗನವಾಡಿ ಕೇಂದ್ರದ ಸಿಬ್ಬಂದಿಗಳೇ ಮಾಹಿತಿ ನೀಡಿದ್ದಾರೆ. ಅಲ್ಲದೆ, ವಿವಿಧ ಧಾನ್ಯಗಳನ್ನು ಕೂಡ ಖುದ್ದು ನಮ್ಮ ಮನೆಯಲ್ಲಿ ಕೂಡ ಬಳಸುವುದಿಲ್ಲ ಎಂದು ಹೇಳಿದ್ದು, ಪೂರೈಕೆ ಆಗುತ್ತಿರುವ ಆಹಾರ ಕುರಿತು ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ. ಮಕ್ಕಳಿಗೆ ಯಾವುದೇ ಸಮಸ್ಯೆ ಉಂಟಾದರೆ ಅದಕ್ಕೆ ಅಂಗನವಾಡಿ ಕೇಂದ್ರದವರನ್ನೆ ಹೊಣೆ ಮಾಡುತ್ತಾರೆ. ಇದಕ್ಕೂ ಮುನ್ನ ಗುಣಮಟ್ಟದ ಆಹಾರಕ್ಕೆ ಮಹತ್ವ ನೀಡಬೇಕು ಎನ್ನುತ್ತಾರೆ ಸಿಬ್ಬಂದಿ.

Advertisement

ಅಂಗನವಾಡಿಗೆ ಬರುತ್ತಿಲ್ಲ ಗರ್ಭಿಣಿಯರು: ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಗರ್ಭಿಣಿಯರು ಬರುತ್ತಿಲ್ಲ ಎಂಬ ಮಾಹಿತಿ ಇದ್ದು, ಈ ಕುರಿತು ಕಾರ್ಯಕರ್ತೆಯರನ್ನು ವಿಚಾರಿಸಿದಾಗ ಗರ್ಭಿಣಿಯರು ಹೆಚ್ಚಾಗಿ ಬರುತ್ತಿಲ್ಲ. ಆದರೆ, ಆಹಾರ ತಯಾರಿಸಿ ನಾವೇ ಅವರ ಮನೆಗಳಿಗೆ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ, ನಾಲ್ಕು ದಿನಗಳಿಂದ ದಾಸ್ತಾನು ಖಾಲಿಯಾಗಿದ್ದು, ಊಟ ನೀಡಿಲ್ಲ ಎಂದು ತಿಳಿಸಿದ್ದಾರೆ.

ಹಳ್ಳಿಖೇಡ(ಬಿ) ಮಾಜಿ ತಾಪಂ ಸದಸ್ಯೆ ಹುರಮತ್‌ ಬೇಗಂ ಹೇಳುವ ಪ್ರಕಾರ ಅಂಗನವಾಡಿಗಳಿಗೆ ಗರ್ಭಿಣಿಯರು ಬರುತ್ತಿಲ್ಲ. ಆದರೆ, ಅವರ ಹೆಸರಲ್ಲಿ ಆಹಾರ ಧಾನ್ಯಗಳು ಬರುತ್ತಿದೆ. ಆದ್ದರಿಂದ ಯೋಜನೆಯಲ್ಲಿ ಪಾರದರ್ಶಕತೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಖಾಸಗಿ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿಗಳಿಗೆ ಕಾಯಂ ಕಟ್ಟಡ ನಿರ್ಮಿಸುವ ಕೆಲಸ ನಡೆಯುತ್ತಿದೆ. ಈಗಾಗಲೇ 23 ಕಟ್ಟಡ ಕಾಮಗಾರಿ ನಡೆದಿದ್ದು, ಇನ್ನು ಕೆಲವು ಕಡೆಗಳಲ್ಲಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ಸಣ್ಣ ಕೋಣೆಗಳಲ್ಲಿ ಮಕ್ಕಳ ಆಟ, ಪಾಠ ರಾಜ್ಯದ ಎಲ್ಲ ಕಡೆ ನಡೆಯುತ್ತಿದೆ. ಅಂಗನವಾಡಿಗಳ ಸುಧಾರಣೆಗಾಗಿ ನಾನು ಕೆಲಸ ಮಾಡುತ್ತಿದ್ದೇನೆ. ಮಕ್ಕಳ ಆಹಾರಕ್ಕಾಗಿ ತಿಂಗಳಿಗೆ ಸುಮಾರು 40 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಕಳಪೆ ಆಹಾರಕ್ಕೆ ಪೂರೈಕೆ
ಆಗುತ್ತಿಲ್ಲ. ಖುದ್ದು ನಾನೇ ಪರಿಶೀಲನೆ ಮಾಡುತ್ತಿದ್ದೇನೆ. ಯಾರ ಜೊತೆಗೂ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡುತ್ತಿಲ್ಲ. ಅಪೌಷ್ಠಿಕ ಮಕ್ಕಳ ಸಂಖ್ಯೆ ಕಡಿಮೆ ಆಗುತ್ತಿದೆ.
ಶೋಭಾ, ಸಿಡಿಪಿಒ

ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next