Advertisement

ಸಾಕ್ಷರತೆಯಿಂದ ಕುರುಬ ಸಮುದಾಯ ಅಭಿವೃದ್ಧಿ: ಗೀತಾ

12:36 PM Jul 22, 2019 | Naveen |

ಹುಮನಾಬಾದ: ಸಾಕ್ಷರತೆ, ಆರ್ಥಿಕ ಸ್ವಾವಲಂಬನೆಯಿಂದ ಮಾತ್ರ ಸಮುದಾಯದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕುರುಬ(ಗೊಂಡ) ಸಮುದಾಯದ ಪಾಲಕರು ಮಕ್ಕಳನ್ನು ಪರಂಪರಾಗತವಾದ ಕುರಿ ಸಾಕಾಣಿಕೆಗೆ ಸೀಮಿತಗೊಳಿಸದೇ, ಪುರುಷ-ಮಹಿಳೆ ಎಂಬ ಭೇದ ಮಾಡದೇ ಸಾಕ್ಷರರನ್ನಾಗಿಬೇಕು ಎಂದು ಜಿಪಂ ಅಧ್ಯಕ್ಷೆ ಗೀತಾ ಪಂಡಿತ್‌ ಚಿದ್ರಿ ಸಲಹೆ ನೀಡಿದರು.

Advertisement

ಮಾಣಿನಗರದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ತಾಲೂಕು ಕುರುಬ (ಗೊಂಡ) ನೌಕರರ ಸಂಘ ರವಿವಾರ ಆಯೋಜಿಸಿದ್ದ ಎಸ್‌ಎಸ್‌ಎಲ್ಸಿ, ಪಿಯುಸಿ, ನೀಟ್ ಮತ್ತು ಜಿಇಇ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಕ್ಷರತೆ ವಿಷಯದಲ್ಲಿ ಪುರುಷರಿಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆ ತೀರಾ ಕಡಿಮೆಯಾಗಿದೆ. ಭವಿಷ್ಯದಲ್ಲಿ ಸ್ತ್ರೀ-ಪುರುಷರ ಮಧ್ಯ ಭೇದಭಾವ ಎಣಿಸದೇ ಇಬ್ಬರನ್ನೂ ಸಮಾನರಾಗಿ ಕಾಣುವ ಮೂಲಕ ಸಮುದಾಯ ಸರ್ವಾಂಗೀಣ ಪ್ರಗತಿಗೆ ಶ್ರಮಿಸಬೇಕು. ಮಹಿಳೆಯರು ಪ್ರತಿಯೊಂದಕ್ಕೂ ಪುರುಷರನ್ನು ಅವಲಂಬಿಸದೇ ಆರ್ಥಿಕ ಸ್ವಾವಲಂಬನೆ ಮೂಲಕ ಸ್ವಾಭಿಮಾನದಿಂದ ಬದುಕಬೇಕು ಎಂದು ಹೇಳಿದರು.

ಕುರಿ ಮತ್ತು ಉಣ್ಣೆ ಮಹಾಮಂಡಳದ ಅಧ್ಯಕ್ಷ ಪಂಡಿತ್‌ ಚಿದ್ರಿ ಮಾತನಾಡಿ, ಸಾಧನೆ ವಿಷಯದಲ್ಲಿ ವಿದ್ಯಾರ್ಥಿಗಳು ಕೇವಲ ಕನಸು ಕಂಡರೆ ಸಾಲದು. ಅದನ್ನು ನನಸಾಗಿಸಲು ಕಠಿಣ ಪರಿಶ್ರಮ ಪಡಬೇಕು. ನಮ್ಮಲ್ಲಿ ಹೇಳುವುದು ಹೆಚ್ಚು ಮಾಡಿ ತೋರಿಸುವುದು ಕಡಿಮೆಯಾದ ಕಾರಣ ಸಮುದಾಯ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿಲ್ಲ. ಯಾವುದಕ್ಕೂ ಎರಡೂವರೆ ದಶಕದಿಂದ ನಡೆಸಲಾದ ಹೋರಾಟದ ಪರಿಣಾಮ ಈಗ ಶೈಕ್ಷಣಿಕ, ಸರ್ಕಾರಿ ಹುದ್ದೆ ಜೊತೆಗೆ ರಾಜಕೀಯ ಸ್ಥಾನಮಾನದ ಮೀಸಲಾತಿ ಗಿಟ್ಟಿಕೊಳ್ಳಲು ಸಾಧ್ಯವಾಗಿದ್ದು, ನಮ್ಮವರು ಅವಕಾಶದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಕುರುಬ (ಗೊಂಡ) ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮಾಳಗೆ ಮಾತನಾಡಿ, ನಮ್ಮಲ್ಲಿ ಕೂಡಿಸುವವರುಗಿಂತ ಸಮಾಜ ಒಡೆಯುವವರ ಸಂಖ್ಯೆಯೇ ಹೆಚ್ಚಾಗಿದೆ. ಆ ಕಾರಣ ಸಂಘಟನೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನಾವೆಲ್ಲ ಸಂಘಟಿತರಾಗದಿದ್ದರೆ ಭವಿಷ್ಯದಲ್ಲಿ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದರು. ರಾಜಕಾರಣಿಗಳ ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಕೆಯಾಗದೇ ಸ್ವಾಭಿಮಾನ ಹೆಚ್ಚಿಸಿಕೊಳ್ಳಲು ಕಂಕಣ ಬದ್ಧರಾಗಬೇಕು ಎಂದರು.

Advertisement

ಕುರುಬ(ಗೊಂಡ) ಜಾತಿ ಪ್ರಮಾಣಪತ್ರಕ್ಕಾಗಿ ನಮ್ಮವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ನ್ಯಾಯವಾದಿ ಸತೀಶ ರಾಂಪೂರೆ, ಶೇಷಪ್ಪ ಪವಾಡೆ ಒಳಗೊಂಡಂತೆ ಹೊಸ ಪಡೆಗೆ ಬೆಂಬಲಿಸಿ, ಬೆಳೆಸುವ ಅಗತ್ಯತೆ ಇದೆ ಎಂದು ಹೇಳಿದರು.

ಕುರುಬ(ಗೊಂಡ) ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಸತೀಶ ರಾಂಪೂರೆ ಮಾತನಾಡಿ, ಜಿಲ್ಲಾಧಿಕಾರಿ ಅವರ ನಿರ್ಲಕ್ಷ್ಯದ ಕಾರಣ ನಮ್ಮ ಸಮುದಾಯದ ಅದೆಷ್ಟೋ ಜನ ಈಗಲೂ ಕುರುಬ(ಗೊಂಡ) ಪ್ರಮಾಣಪತ್ರ ಲಭ್ಯವಾಗದೇ ಸಂಕಷ್ಟದಲ್ಲಿದ್ದಾರೆ. ಅದಕ್ಕಾಗಿ ಸಮುದಾಯದ ಪ್ರತಿಯೊಬ್ಬರು ಹೋರಾಟಕ್ಕೆ ಇಳಿಯುವುದು ಈಗ ಹಿಂದೆಂದಿಗಿಂತ ಅನಿವಾರ್ಯವಾಗಿದೆ. ಸಮುದಾಯಕ್ಕೆ ಸರ್ಕಾರದ ಸೌಲಭ್ಯ ಕಲ್ಪಿಸಿ ಕೊಡುವವುದಕ್ಕಾಗಿ ದಿನದ 24 ಗಂಟೆ ಸಮಯ ಮೀಸಲಿಡಲು ಸಿದ್ಧರಿರುವುದಾಗಿ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕುರುಬ(ಗೊಂಡ) ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ‌ರದ್‌ನಾರಾಯಣಪೇಟಕರ್‌ ಮಾತನಾಡಿ, ಸಂಘಟನೆಯಲ್ಲಿ ದೊಡ್ಡ ಶಕ್ತಿ ಇದೆ. ಮನೆ ಒಡೆಯುವವರ ಮಾತಿಗೆ ಬೆಲೆ ಕೊಡದೇ ಜೋಡಿಸುವವರ ಜೊತೆಯಲ್ಲಿ ಪ್ರೀತಿ ವಿಶ್ವಾಸದಿಂದ ಇದ್ದಲ್ಲಿ ನಮ್ಮ ಸಮುದಾಯಕ್ಕೆ ಯಾವ ದುಷ್ಟ ಶಕ್ತಿಯಿಂದಲೂ ನಮ್ಮನ್ನೇನೂ ಮಾಡಲಾಗದು. ಆ ಆತ್ಮವಿಶ್ವಾಸದಿಂದ ಸಮುದಾಯ ಸಂಘಟನೆಗಾಗಿ ಸರ್ವರೂ ಶ್ರಮಿಸಬೇಕು ಎಂದು ಹೇಳಿದರು.

ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಸದಸ್ಯ ಬೀರಪ್ಪ ಮಾರ್ಥಂಡ, ವಿಮಲಾಬಾಯಿ ಕನಕಟ್ಟಾ, ಶಾಂತಾಬಾಯಿ ರಾಂಪೂರೆ, ನೌಕರರ ಸಂಘದ ಹಿರಿಯ ಸಲಹೆಗಾರ ಎಂ.ಎಸ್‌.ಕಟಗಿ, ವೀಠಲ್ ಬೈನೋರ್‌, ರಮೇಶ ಕನಕಟಕರ್‌, ಪ್ರಕಾಶ ಕಾಡಗೊಂಡ, ಶರಣಪ್ಪ ಮಲಗೊಂಡ ಇದ್ದರು.

ಇದೇ ವೇಳೆ ಎಸ್‌ಎಸ್‌ಎಲ್ಸಿ, ಪಿಯುಸಿ, ನೀಟ್ ಮತ್ತು ಜೆಇಇ ಪರೀಕ್ಷೆರಯಲ್ಲಿ ಸಾಧನೆ ಮಾಡಿದ, ಸೇವಾ ಬಡ್ತಿ, ಸೇವಾ ನಿವೃತ್ತಿ ಹೊಂದಿದ ಪ್ರಮುಖರನ್ನು ಸನ್ಮಾನಿಸಲಾಯಿತು. ಬಂಡೆಪ್ಪ ಮೋಳಕೇರಿ ಪ್ರಾರ್ಥಿಸಿದರು. ಕಂಟೆಪ್ಪ ಜಟಗೊಂಡ ಸ್ವಾಗತಿಸಿದರು. ಮಾಣಿಕಪ್ಪ ಬಕ್ಕನ್‌ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಕಲ್ಯಾಣಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next