Advertisement

ಪತ್ರಕರ್ತರಿಗೆ ಅಧ್ಯಯನಶೀಲತೆ ಅಗತ್ಯ: ಕಾಶೀನಾಥರೆಡ್ಡಿ

02:51 PM Jul 24, 2019 | Naveen |

ಹುಮನಾಬಾದ: ಪತ್ರಕರ್ತರು ತಮ್ಮನ್ನು ತಾವು ಶ್ರೇಷ್ಟರೆಂದು ಭಾವಿಸದೇ ಸತತ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜದ ಓರೆಕೋರೆ ತಿದ್ದಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಪತ್ರಕರ್ತ ಎಚ್.ಕಾಶೀನಾಥರೆಡ್ಡಿ ಹೇಳಿದರು.

Advertisement

ಪಟ್ಟಣದ ತಿರುಮಲಾ ವಾಣಿಜ್ಯ ಸಂಕಿರ್ಣದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್‌ ಅವರ 54ನೇ ಜನ್ಮದಿನ ನಿಮಿತ್ತ ಗೆಳೆಯರ ಬಳಗದ ಪದಾಧಿಕಾರಿಗಳು ಮಂಗಳವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಾಲ್ಕು ದಶಕಗಳ ಹಿಂದೆ ಈ ದಿನದ ಪತ್ರಿಕೆ ಮಾರನೇ ದಿನ ಓದುಗರ ಕೈ ಸೇರುತ್ತಿತ್ತು. ಆಗ ತಾಲೂಕಿನ ಒಂದು ಚೂರು ಸುದ್ದಿ ಪ್ರಕಟವಾದರೂ ಎಲ್ಲೆಡೆ ಚರ್ಚೆಯಾಗುತ್ತಿತ್ತು. ಬದಲಾದ ಕಾಲಮಾನಕ್ಕೆ ತಕ್ಕಂತೆ ಸುದ್ದಿಗಳು ಜಿಲ್ಲಾವಾರು ಸೀಮಿತವಾದಾಗಿನಿಂದ ಹೆಚ್ಚು ಸುದ್ದಿಗಳು ಪ್ರಕಟವಾಗಲು ಸಾಧ್ಯವಾಗಿದೆ. ಅಷ್ಟಾದರೂ ಪುಟಗಳು ಸಾಕಾಗುತ್ತಿಲ್ಲ. ಇತ್ತೀಚೆಗೆ ಸುದ್ದಿಗಳು ಆದ್ಯತೆ ಮೇರೆಗೆ ಕೆಲ ಪತ್ರಿಕೆಗಳಲ್ಲಿ ಜಿಲ್ಲೆ, ವಿಭಾಗ, ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಹಾಗೂ ತೀರಾ ಮಹತ್ವದ್ದಾಗಿದ್ದರೆ ರಾಜ್ಯ ಪುಟಗಳಲ್ಲೂ ಪ್ರಕಟಗೊಳ್ಳುತ್ತಿರುವುದು ಸ್ಪರ್ಧಾತ್ಮಕ ಯುಗವಾದ ಇಂದು ಆರೋಗ್ಯಪೂರ್ಣ ಬೆಳವಣಿಗೆ ಎಂದರು.

ಹಿರಿಯ ಪತ್ರಕರ್ತ ಶಿವಶಂಕರ ತರನಳ್ಳಿ ಮಾತನಾಡಿ, ವಸ್ತುಸ್ಥಿತಿ ವರದಿಯನ್ನು ಧನಾತ್ಮಕವಾಗಿ ಸ್ವೀಕರಿಸಿ, ಬದಲಾವಣೆಗಾಗಿ ಶ್ರಮಿಸುವವರೆ ಉತ್ತಮ ರಾಜಕಾರಣಿಗಳು. ಆದರೆ ವಸ್ತುಸ್ಥಿತಿ ವರದಿ ಮಾಡುವವರನ್ನು ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ವೈರಿಗಳಂತೆ ಕಾಣುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು. ವ್ಯವಸ್ಥೆ ಜೊತೆಗೆ ಕೈ ಜೋಡಿಸುವ ಮತ್ತು ಚುನಾಯಿತ ಪ್ರತಿಧಿಗಳನ್ನು ಸಂತೋಷಪಡಿಸುವ ಸುದ್ದಿಗಳು ನಿಜವಾದ ಸುದ್ದಿಗಳೆ ಅಲ್ಲ. ಈ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಧಿಗಳು ಸತ್ಯಕ್ಕೆ ತಲೆಬಾಗಿ ಗೌರವಿಸುವ ನಿಟ್ಟಿನಲ್ಲಿ ಪರಿವರ್ತನೆ ತರಬೇಕು ಎಂದರು.

ಜಿಲ್ಲಾ ಪರಿಸರ ವಾಹಿನಿ ಅಧ್ಯಕ್ಷ ಶೈಲೇಂದ್ರ ಕಾವಡಿ ಮಾತನಾಡಿ, ಹುಮನಾಬಾದ ಪತ್ರಕರ್ತರು ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ ಮಾದರಿಯಾಗಿದ್ದಾರೆ. ಇಲ್ಲಿನ ಪತ್ರಕರ್ತರ ಕ್ರಿಯಾಶೀಲತೆ, ಕರ್ತವ್ಯನಿಷ್ಠೆ ಇಡೀ ಹೈದ್ರಾಬಾದ್‌ ಕರ್ನಾಟಕ ಭಾಗಕ್ಕೆ ಮಾದರಿ ಎಂದರು. ಆದರೆ ದೈನಿಕ ಸುದ್ದಿಗಳಿಗೆ ಅಂತರ್ಜಾಲದ ಮೊರೆ ಹೋಗದೇ ಪ್ರತಿನಿತ್ಯ ದಿನಪತ್ರಿಕೆಗಳನ್ನು ಖರೀದಿಸಿ, ಓದುವ ಹವ್ಯಾಸ ಬೆಳೆಯಬೇಕು ಎಂದರು.

Advertisement

ಪತ್ರಕರ್ತ ದುರ್ಯೋಧನ ಹೂಗಾರ ಮಾತನಾಡಿ, ಸಾರ್ವಜನಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಒಂದು ಲೇಖನ ಪ್ರಕಟವಾದ ಮಾತ್ರಕ್ಕೆ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸದೇ, ನಂತರದ ಬೆಳವಣಿಗೆಗಳನ್ನು ಬೆನ್ನಟ್ಟಿದಾಗಲೇ ವಿಶೇಷ ಲೇಖನ ಪ್ರಕಟಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಅಂಥ ಪ್ರಯತ್ನ ಈ ಭಾಗದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅಂಥ ಪ್ರಯತ್ನ ಈ ಭಾಗದ ವರದಿಗಾರರಿಂದ ಆಗಬೇಕಾದ ಅಗತ್ಯತೆ ಇದೆ ಎಂದು ಹೇಳಿದರು.

ಬಹುಭಾಷಾ ವರದಿಗಾರ ಸಂಜಯ್‌ ದಂತಕಾಳೆ ಮಾತನಾಡಿ, ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳು ಪತ್ರಕರ್ತರನ್ನು ಕೆಲಸ ಇರುವವರೆಗೆ ಮಾತ್ರ ಗೌರವಿಸಿ, ನಂತರ ಕೈ ಚೆಲ್ಲುವ ಮನೋಭಾವ ಬಿಡಬೇಕು. ಆ ಕಾರಣಕ್ಕಾಗಿ ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ಹಾಗೂ ಪತ್ರಕರ್ತರ ಮಧ್ಯದ ಬಾಂಧವ್ಯ ಕುಸಿಯುತ್ತಿದೆ ಎಂದರು.

ಪತ್ರಕರ್ತ ಅರವಿಂದ ಪಾಟೀಲ, ರಮೇಶರೆಡ್ಡಿ ಉಸ್ತೇಲಿ, ರಾಜಪ್ಪ ಪೂಜಾರಿ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಮಂತ ಪಾಟೀಲ, ಪ್ರಶಾಂತ ಹೊಸಮನಿ, ವೆಂಕಟೇಶ ಜಾಧವ್‌, ದಿಲೀಪಕುಮಾರ ಮೇತ್ರೆ ಮತ್ತಿತರರು ಮಾತನಾಡಿ, ಎರಡು ದಶಕಗಳಿಂದ ಪತ್ರಿಕಾ ದಿನ ಆಚರಿಸುತ್ತಿರುವ ಶಿವಾನಂದ ಮಂಠಾಳ್ಕರ್‌ ಕಾರ್ಯವನ್ನು ಶ್ಲಾಘಿಸಿದರು.

ಜನ್ಮದಿನ ನಿಮಿತ್ತ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಾನಂದ ಮಂಠಾಳ್ಕರ್‌ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸಮಾಜದಲ್ಲಿ ಪತ್ರಕರ್ತರ ಸ್ಥಾನ ಅತ್ಯಂತ ಶ್ರೇಷ್ಠವಾದದ್ದು. ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದಾಗ ಕೇವಲವಾಗಿ ಮಾತನಾಡದೇ ಧನಾತ್ಮಕವಾಗಿ ಸ್ವೀಕರಿಸಿ, ಗೌರವಿಸಬೇಕು. ತಮ್ಮನ್ನು ತಾವು ಸಂಪೂರ್ಣವಾಗಿ ಸಮಾಜಕ್ಕೆ ಸಮರ್ಪಿಸಿಕೊಂಡ ಅವರ ಸೇವೆ ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದರು.

ಗೆಳೆಯರ ಬಳಗದ ಅಧ್ಯಕ್ಷ ಝೆರೆಪ್ಪ ಮಣಗಿರೆ, ಗೌರವಾಧ್ಯಕ್ಷ ಡಿ.ಸಿ.ಬಿರಾದಾರ, ಕಾರ್ಯದರ್ಶಿ ಪ್ರಭಾಕರ ನಾಗರಾಳೆ, ಪ್ರಕಾಶ ತಾಳಮಡಗಿ, ಶಿವಾರೆಡ್ಡಿ ಸೇಡೊಳ, ಅಣ್ಣಾರಾವ್‌ ಪುರುಶೋತ್ತಮ, ವಿಠ್ಠಲ್ ಮೈಕೆ, ಸಂಗಪ್ಪ ಪಾಂಚಾಳ, ರಾಜೇಶ ಮಂಠಾಳ್ಕರ್‌, ರಾಜು ಭಂಡಾರಿ, ಸೂರ್ಯಕಾಂತ ಮಠಪತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next