Advertisement

ಅನಧಿಕೃತ ಧಾರ್ಮಿಕ ಕೇಂದ್ರ ತೆರವಿಗೆ ಸೂಚನೆ

05:34 PM Feb 28, 2020 | Naveen |

ಹುಮನಾಬಾದ: ಸಾರ್ವಜನಿಕ ರಸ್ತೆಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ಮೊಳಕೇರಾ ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಗೊಂದಲದಿಂದ ತಹಶೀಲ್ದಾರ್‌ ನಾಗಯ್ಯ ಹಿರೇಮಠ ಗ್ರಾಮಸ್ಥರಲ್ಲಿ ಕ್ಷಮೆ ಯಾಚಿಸಿದ ಘಟನೆ ಗುರುವಾರ ನಡೆದಿದೆ.

Advertisement

ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಎಲ್ಲಕಡೆಗಳಲ್ಲಿ ಕಳೆದ ವರ್ಷ ಗುರುತಿಸಿದ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ತಹಶೀಲ್ದಾರ್‌ ನಾಗಯ್ನಾ ಹಿರೇಮಠ, ಸಿಪಿಐ ಜೆ.ಎಸ್‌.ನ್ಯಾಮೆಗೌಡರ್‌, ಪಿಎಸ್‌ಐ ರವಿಂದ್ರ, ತಾಲೂಕು ಪಂಚಾಯತ ಅಧಿ ಕಾರಿಗಳ ತಂಡ ಗುರುವಾರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಅನ ಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.

ಸುಳ್ಳು ವರದಿ ಸಲ್ಲಿಕೆ: ಈ ಹಿಂದೆ ಗುರುತಿಸಿದ ಅನಧಿಕೃತ ಧಾರ್ಮಿಕ ಕೇಂದ್ರಗಳ ಪಟ್ಟಿ ಹಿಡಿದುಕೊಂಡು ಪ್ರವಾಸ ನಡೆಸಿದ ತಹಶೀಲ್ದಾರ್‌ ಹಾಗೂ ಪೊಲೀಸ್‌ ಅಧಿಕಾರಿಗಳಿಗೆ ಮುಜುಗರ ಉಂಟಾಗುವಂತೆ ಮಾಡಿತು. ಕಾರಣ ಅಧಿಕಾರಿಗಳು ನೀಡಿದ ವರದಿಯಂತೆ ಆಯಾ ಗ್ರಾಮದಲ್ಲಿ ಸಾರ್ವಜನಿಕ ರಸ್ತೆಗಳಲ್ಲಿ, ಉದ್ಯಾನವನಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳು ಹೆಚ್ಚಾಗಿ ಕಂಡು ಬಂದಿಲ್ಲ. ಬದಲಿಗೆ ಖಾಸಗಿ ಭೂಮಿ, ಕೃಷಿ ಭೂಮಿ, ರಸ್ತೆಯಿಂದ ಅಧಿಕ ದೂರದ ಪ್ರದೇಶದಲ್ಲಿ ಧಾರ್ಮಿಕ ಕೇಂದ್ರಗಳು ಕಂಡು ಬಂದವು. ಇನ್ನು ಕೆಲವು ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಸಮುದಾಯ ಭವನದಲ್ಲಿ ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಿರುವುದು ಕಂಡು ಬಂದಿದ್ದು, ತೆರವಿಗೆ ಅಧಿ ಕಾರಿಗಳು ಸೂಚನೆ ನೀಡಿದ್ದಾರೆ.

ಮೊಳಕೇರಾ ಘಟನೆ: ರಸ್ತೆ ಮೇಲಿರುವ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮೋಳಕೇರಾ ಗ್ರಾಮದಲ್ಲಿ ಶಾಂತಿ ಸಭೆ ನಡೆಯಿತು. ಲಕ್ಷ್ಮೀ ದೇವಸ್ಥಾನ ಅನಧಿಕೃತ ಹಾಗೂ 2009ರ ನಂತರ ನಿರ್ಮಾಣ ಮಾಡಲಾಗಿದೆ. ಗ್ರಾಮಸ್ಥರು ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು ಎಂದು ತಹಶೀಲ್ದಾರ್‌ ಗ್ರಾಮಸ್ಥರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿನ ಲಕ್ಷ್ಮೀ ದೇವಸ್ಥಾನ ಪುರಾತನವಾಗಿದ್ದು 200 ವರ್ಷಕ್ಕೂ ಅಧಿಕ ಇತಿಹಾಸ ಹೊಂದಿದೆ ಎಂದು ಮಾಹಿತಿ ನೀಡಿದರು. ತಪ್ಪು ಮಾಹಿತಿಯಿಂದ ಪುರಾತನ ದೇವಸ್ಥಾನದಲ್ಲಿ ಸಭೆ ನಡೆಸಿ ದೇವಸ್ಥಾನ ತೆರವುಗೊಳ್ಳಿಸುವ ನಿಟ್ಟಿನಲ್ಲಿ ಗ್ರಾಮಕ್ಕೆ ಆಗಮಿಸಿದ ಅಧಿಕಾರಿಗಳನ್ನು ಕೆಲ ಕಾಲ ಮುಜುಗುರ ಎದುರಿಸುವಂತೆ ಮಾಡಿತು. ನಂತರ ತಹಶೀಲ್ದಾರ್‌ ಗ್ರಾಮಲೆಕ್ಕಾಧಿಕಾರಿಯಿಂದ ವಿವರಣೆ ಪಡೆದರು.

ವರದಿಯಲ್ಲಿ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಗ್ರಾಮಲೆಕ್ಕಿಗ ಅವರನ್ನು ಅಮಾನತು ಮಾಡುವ ನಿಟ್ಟಿನಲ್ಲಿ ವರದಿ ತಯಾರಿಸಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ನಂತರ ತಹಶೀಲ್ದಾರ್‌ ಗ್ರಾಮಸ್ಥರಲ್ಲಿ ಕ್ಷಮೆ ಯಾಚಿಸಿದರು. ಅಧಿಕಾರಿ ಸೂಚಿಸಿದ ದೇವಸ್ಥಾನಕ್ಕೆ ತೆರಳಿದ ಅಧಿಕಾರಿಗಳು ಅಲ್ಲಿಯೂ ಕೂಡ ಖಾಸಗಿ ಸರ್ವೇ ಭೂಮಿಯಲ್ಲಿ ದೇವಸ್ಥಾನ ಕಟ್ಟಿರುವುದು ಕಂಡುಬಂತು. ಈ ಸಂದರ್ಭದಲ್ಲಿ ಕೂಡ ಗ್ರಾಮಲೆಕ್ಕಿಗ ಕರ್ತವ್ಯಲೋಪ ಕಂಡು ಕೆಂಡಾಮಂಡಲವಾದ ಅಧಿಕಾರಿಗಳು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

Advertisement

ಧಾರ್ಮಿ ಕೇಂದ್ರಗಳ ಪರಿಶೀಲನೆ: ತಾಲೂಕಿನ ಧುಮ್ಮನಸೂರ ಗ್ರಾಮದ ಸಾರ್ವನಿಕ ಸ್ಥಳದಲ್ಲಿನ ಗಣೇಶ ಮೂರ್ತಿ, ತಗಡಿನ ಶೇಡ್‌ನ‌ಲ್ಲಿದ್ದ ಭವಾನಿ ಮಾತಾ ಮಂದಿರ ಹಾಗೂ ತಾಂಡದಲ್ಲಿನ ಹನುಮಾನ ದೇವಸ್ಥಾನ ತೆರವಿಗೆ ಸೂಚಿಸಲಾಯಿತು. ಸಿದ್ಧಾರ್ಥ ಸ್ವಾಮಿ ಮಂದಿರ ಖಾಸಗಿ ಸ್ಥಳದಲ್ಲಿರುವುದು ಕಂಡುಬಂತು. ಹುಣಸನಾಳ ಗ್ರಾಮದ ಹನುಮಾನ ಮಂದಿರ ತೆರವಿಗೆ ಸೂಚನೆ ನೀಡಲಾಯಿತು. ಸೇಡೊಳ ವಿಠಲ ರುಕ್ಮಿಣಿ ಮಂದಿರ ಅನೇಕ ವರ್ಷಗಳ ಹಿಂದಿನ ದೇವಸ್ಥಾನ ಎಂದು ಸ್ಥಳೀಯರು ಮಾಹಿತಿ ನೀಡಿದರು.

ನಂತರ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಭಾವಚಿತ್ರ ತೆರವು ಮಾಡಲಾಯಿತು. ಚಂದನಹಳ್ಳಿ ಬೌದ್ಧ ಭವನದಲ್ಲಿ ಬೌದ್ಧ ಮೂರ್ತಿ ಸ್ಥಾಪನೆ ಮಾಡಿದ್ದು, ಮೂರ್ತಿ ತೆರವು ಮಾಡುವಂತೆ ಅಧಿಕಾರಿಗಳು ತಿಳಿಸಿದರು. ನಾಮದಾಪೂರ ಗ್ರಾಮದ ರೇಣುಕಾ ಮಂದಿರ ಖಾಸಗಿ ಭೂಮಿಯಲ್ಲಿರುವ ಕುರಿತು ಗ್ರಾಮಸ್ಥರು ದಾಖಲೆಗಳನ್ನು ಸಲ್ಲಿಸಿದರು. ಸಿತಾಳಗೇರಾ ಗ್ರಾಮದ ಚರ್ಚ್‌ ಸಿಲುಬೆ, ಕನಕಟ್ಟಾ ಗ್ರಾಮದ ಹನುಮಾನ ಮಂದಿರ ಎದುರಿನ ನವಗ್ರಹ ತೆರವು ಮಾಡುವಂತೆ ತಿಳಿಸಿದರು.

ಮುಸ್ತಾಪೂರ, ಕಲ್ಲೂರ, ಹುಡಗಿ, ಸೀತಾಳಗೇರಾ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇತರೆ ಅಧಿಕಾರಿಗಳ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಅನಧಿಕೃತ ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಿಕೊಳ್ಳುವಂತೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next