Advertisement

ಮಾನವ ಜನ್ಮ ದೊಡ್ಡದು

07:53 PM Nov 08, 2019 | Lakshmi GovindaRaju |

ಸಕಲ ಜೀವಿಗಳಿಗೆಲ್ಲ ಮಾನವನೇ ಮಿಗಿಲು,
ಅವನಿಗಿಹುದು ಜ್ಞಾನದ ಬಲ,
ಇದಿಲ್ಲ ಇನ್ನಿತರ ಪ್ರಾಣಿಗಳಿಗೆ,
ಜ್ಞಾನಿಯಾಗುತ ನೀ ದೇವಮಾನವನಾಗೆಂದ,
ನಮ್ಮ ಮೃಡಗಿರಿ ಅನ್ನದಾನೀಶ

ಸಕಲ ಜೀವರಾಶಿಗಳಲ್ಲಿ ಮಾನವನೇ ಮಿಗಿಲು. ಬಹುಜನ್ಮದ ಪುಣ್ಯದ ಫ‌ಲವಾಗಿ ಮಾನವ ಜನ್ಮ ಸಿಕ್ಕುತ್ತದೆ. ಮಾನವನಿಗಿರುವ ಜ್ಞಾನಸಂಪತ್ತು ಇತರ ಪ್ರಾಣಿಗಳಿಗೆ ಇರುವುದಿಲ್ಲ. ಆದರೂ, ಭಗವಂತನು ಆಯಾ ಪ್ರಾಣಿಗಳಿಗೆ ವಿಶಿಷ್ಟವಾದ ಗುಣವನ್ನು ಕೊಟ್ಟಿದ್ದಾನೆ. ಮಾನವನಿಗೆ ಶಿವನು ಜ್ಞಾನ ಕೊಟ್ಟಿದ್ದರೂ ಗುರುಕೃಪೆಯಿಂದ ಮತ್ತು ಸ್ವಪ್ರಯತ್ನದಿಂದ ಮಾತ್ರ ಜ್ಞಾನವನ್ನು ಸಂಪಾದಿಸಬೇಕಾಗುತ್ತದೆ. ಸಾಮಾನ್ಯವಾಗಿ ಎಲ್ಲ ಮನುಷ್ಯರೂ ಬುದ್ಧಿವಂತರಾಗಿರುವುದಿಲ್ಲ.

Advertisement

ಜಾಣರಿಗಾಗಿ ವೇದೋಪನಿಷತ್ತುಗಳು, ಆಗಮ ಪುರಾಣಗಳು, ಶಾಸ್ತ್ರ ಕೃತಿಗಳು ವಿಪುಲವಾಗಿವೆ. ಬುದ್ಧಿವಂತರು ಜ್ಞಾನರಾಶಿಯನ್ನು ಅಭ್ಯಸಿಸಿ ಸುಖೀಗಳಾಗುತ್ತಾರೆ. ಒಮ್ಮೆ ಅರಣ್ಯದಲ್ಲಿ ಪ್ರಾಣಿಗಳ ಸಭೆ ಜರುಗಿತು. ಅಲ್ಲಿ ಪ್ರಾಣಿಗಳು ತಮ್ಮ ಜಾಣ್ಮೆಯನ್ನು ಪ್ರದರ್ಶಿಸುತ್ತಿದ್ದವು. ಇಲಿಯು, ಮಾನವರು ಸಂಗ್ರಹಿಸಿದ ಧವಸ ಧಾನ್ಯಗಳನ್ನು ತನ್ನ ಬಿಲದಲ್ಲಿ ಸಂಗ್ರಹಿಸಿ ಸುಖವಾಗಿರುವುದನ್ನು ಹೇಳಿತು. ಬೆಕ್ಕು, ತಾನು ಹಾಲು ತುಪ್ಪವನ್ನು ಕುಡಿದು ಸುಖವಾಗಿರುವೆ ಎಂದಿತು.

ಮಂಗ, ಹಣ್ಣು ಹಂಪಲನ್ನು ತಿಂದು ಆನಂದಿಸುವೆ ಎಂದು ಹೇಳಿದರೆ, ಹುಲಿ, ತಾನು ಘರ್ಜಿಸಿ ಮರದ ಮೇಲಿನ ಮಂಗಗಳನ್ನೇ ಕೆಡವಬಲ್ಲೆ, ಚಿಗರೆ ಆಕಳನ್ನೂ ಬೇಟೆಯಾಡಬಲ್ಲೆ ಎಂದಿತು. ಆನೆ, ತಾನು ದೊಡ್ಡ ದೊಡ್ಡ ಮರಗಳನ್ನು ಕಿತ್ತೆಸೆಯಬಲ್ಲೆ ಎಂದು ಬೀಗಿತು. ಹೀಗೆ, ಎಲ್ಲ ಪ್ರಾಣಿಗಳೂ ತಮ್ಮ ಶಕ್ತಿ ಸಾಮರ್ಥ್ಯಗಳ ಕುರಿತು ಕೊಚ್ಚಿಕೊಳ್ಳುತ್ತಿರುವು ದನ್ನು ಕಂಡ ನರಿಯು, “ನಿಮ್ಮೆಲ್ಲರಿಗಿಂತ ಬುದ್ಧಿವಂತ, ಮಾನವ. ಅವನು ಎಲ್ಲರನ್ನೂ ಹಿಡಿದು ತನ್ನ ಬುದ್ಧಿವಂತಿಕೆಯಿಂದ ಆಟವಾಡಿಸು ತ್ತಾನೆ. ಮಾನವನೇ ಜಾಣ. ಮಾನವನ ಜನ್ಮವೇ ದೊಡ್ಡದು. ಮಾನವರಾಗಿ ಹುಟ್ಟಿ ದೇವರನ್ನು ಕಾಣಬಹುದು’ ಎಂದು ಹೇಳಿತು. ಮನುಷ್ಯರಾಗಿ ಜನಿಸಿದ ಮೇಲೆ, ಮಾನವ ಜನ್ಮದ ಸಾರ್ಥಕತೆ ಮಾಡಿಕೊಳ್ಳಬೇಕಲ್ಲವೆ?!

* ಶ್ರೀ ಮ.ನಿ.ಪ್ರ. ಜಗದ್ಗುರು ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು, ಸಂಸ್ಥಾನಮಠ, ಮುಂಡರಗಿ

Advertisement

Udayavani is now on Telegram. Click here to join our channel and stay updated with the latest news.

Next