Advertisement

ಸಿಎಂ ಸಿದ್ದರಾಮಯ್ಯಗೆ ಅದ್ಧೂರಿ ಸ್ವಾಗತ

03:25 PM Aug 19, 2017 | |

ಆಲಮಟ್ಟಿ: ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಡಿಬಿಡಿಯಲ್ಲಿ ಬಾಗಿನ ಅರ್ಪಿಸಿದ್ದು ಸ್ಥಳೀಯ ರೈತಾಪಿ ವರ್ಗದ ಕೋಪಕ್ಕೆ ಕಾರಣವಾಯಿತು. ಶುಕ್ರವಾರ ಮಧ್ಯಾಹ್ನ 12:10ಕ್ಕೆ ಹೆಲಿಕಾಪ್ಟರ್‌ ಮೂಲಕ ಆಗಮಿಸಿದ ಮುಖ್ಯಮಂತ್ರಿಗಳು ತುಂಬಿದ ಕೃಷ್ಣೆಗೆ ಬಾಗಿನ ಅರ್ಪಿಸಿ 12:40ಕ್ಕೆ ಮರಳಿ ಹೆಲಿಕಾಪ್ಟರ್‌ ಮೂಲಕ ವಿಜಯಪುರಕ್ಕೆ ತೆರಳಿದರು. ಅದ್ಧೂರಿ ಸ್ವಾಗತ: ವಿಜಯಪುರ ಹಾಗೂ ಬಾಗಲಕೋಟೆ ಅವಳಿ ಜಿಲ್ಲೆಯ ಜಿಲ್ಲಾಡಳಿತ, ಕೃಷ್ಣಾ ಮೇಲ್ದಂಡೆ ಯೋಜನೆ, ಕೃಷ್ಣಾಭಾಗ್ಯ ಜಲ ನಿಗಮ ಹಾಗೂ ಅವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರುಗಳು, ಶಾಸಕರು ಸೇರಿದಂತೆ ವಿವಿಧ ಗಣ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೂಗುಚ್ಚ ನೀಡಿದ ನಂತರ ಹೆಲಿಪ್ಯಾಡ್‌ನ‌ಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್‌.ಆರ್‌. ಪಾಟೀಲ ಹಾಗೂ ವಿವಿಧ ಗಣ್ಯರು ಸನ್ಮಾನಿಸಿದರು. ರಾರಾಜಿಸಿದ ಕಟೌಟ್‌: ಹೆಲಿಪ್ಯಾಡ್‌ನಿಂದ ಜಲಾಶಯಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ರಸ್ತೆಯಲ್ಲಿ ಮುಖ್ಯಮಂತ್ರಿಗಳ ಹಾಗೂ ಅವಳಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರುಗಳ ಮತ್ತು ಬಸವನ ಬಾಗೇವಾಡಿ ಹಾಗೂ ಬಾಗಲಕೋಟೆ ಮತಕ್ಷೇತ್ರಗಳ ಶಾಸಕರಾದ ಶಿವಾನಂದ ಪಾಟೀಲ, ಎಚ್‌.ವೈ. ಮೇಟಿ ಅವರ ಕಟೌಟ್‌ ರಾರಾಜಿಸಿದವು. ವಾದ್ಯಮೇಳ: ಬಾಗಿನ ಅರ್ಪಿಸಲು ಆಗಮಿಸಿದ ಗಣ್ಯರ ಸ್ವಾಗತಕ್ಕೆ ಹೆಗಡಿಹಾಳದ ಲಗಮಾದೇವಿ ಡೊಳ್ಳಿನ ವಾಲಗ ಮೇಳದವರಿಂದ ಡೊಳ್ಳು ಕುಣಿತ ಹಾಗೂ ಉಕ್ಕಲಿಯ ಯಮನಪ್ಪ ಭಜಂತ್ರಿ ನಾಗರಾಜ ಕನ್ನೂರ ಅವರಿಂದ ಶಹನಾಯಿ ವಾದನ ಹಾಗೂ ಮುತ್ತಗಿಯ ವೀರಭದ್ರೇಶ್ವರ ಕರಡಿ ಮಜಲು ಸಂಘದವರಿಂದ ಕರಡಿ ಮಜಲು ನಡೆಯಿತು.

Advertisement

ಮುಖ್ಯಮಂತ್ರಿಗಳಿಗೆ ಹರಿದು ಬಂತು ಮನವಿಗಳ ಮಹಾಪೂರ
ಆಲಮಟ್ಟಿ: ಕೃಷ್ಣೆ ಜಲನಿಧಿ ಗೆ ಬಾಗಿನ ಅರ್ಪಿಸಲು ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ವಿವಿಧ ಸಂಘಟನೆಗಳ ಮುಖಂಡರು ಮನವಿ ಸಲ್ಲಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಮನವಿ ಸಲ್ಲಿಸಿ ಜಿಲ್ಲೆ ಸತತ ಮೂರು ವರ್ಷದಿಂದ ಬರಗಾಲಕ್ಕೆ ತುತ್ತಾಗಿದೆ. ಈ ವರ್ಷ ಕೂಡ ಜಿಲ್ಲೆಗೆ ಬರಗಾಲ ಘೋಷಣೆ ಮಾಡಬೇಕು. ಕೂಡಗಿ ಎನ್‌ ಟಿಪಿಸಿ ಸ್ಥಾವರದ ಕೇವಲ 10 ಕಿಮೀ ಸುತ್ತಲಿನ ಗ್ರಾಮ ಅಭಿವೃದ್ಧುಯಾಗುತ್ತಿದ್ದು ಇದನ್ನು 25 ಕಿಮೀವರೆಗೆ ವಿಸ್ತರಿಸಬೇಕು. ಆಲಮಟ್ಟಿ ಜಲಾಶಯ ನಿರ್ಮಾಣಕ್ಕಾಗಿ
ಸರ್ವಸ್ವ ಕಳೆದುಕೊಂಡಿರುವ ಅವಳಿ ಜಿಲ್ಲೆಯ ರೈತರ ಹಿತ ಕಾಪಾಡಲು ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಜಿಲ್ಲೆಗೆ ದಿನದ 24 ಗಂಟೆ ವಿದ್ಯುತ್‌ ಪೂರೈಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮೀಸಲಾತಿ ಒದಗಿಸಿ: ಗ್ರಾಪಂ ಸದಸ್ಯ ಕಲ್ಲಪ್ಪ ಕುಂಬಾರ ಸಲ್ಲಿಸಿದ ಮನವಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಹಂತ-1 ಹಾಗೂ 2ರಲ್ಲಿ ಸುಮಾರು 176 ಗ್ರಾಮಗಳು ಬಾಧಿ ತಗೊಂಡು 136 ಗ್ರಾಮಗಳು ಪುನರ್ವಸತಿ ಕೇಂದ್ರಗಳಾಗಿ ಯೋಜನೆಯಿಂದ ಬಾಧಿತಗೊಂಡು ಸಂತ್ರಸ್ತರು ವಾಸವಾಗಿದ್ದಾರೆ. ಅವರ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಾಗಿ ಯೋಜನಾ ನಿರಾಶ್ರಿತರ ಮೀಸಲಾತಿ ಮುಂದುವರಿಸಬೇಕು ಮತ್ತು ಯೋಜನೆ ಇನ್ನೂ ಮುಂದುವರಿದಿದ್ದು ಮೂರನೇ ಹಂತದ ಸಂತ್ರಸ್ತರಿಗೆ ನೀಡುವ ಸೌಲಭ್ಯಗಳನ್ನು ಈ ಹಿಂದೆ ಭೂಮಿ ಕಳೆದುಕೊಂಡವರಿಗೆ ಒದಗಿಸಬೇಕು ಎಂದು ವಿನಂತಿಸಿದ್ದಾರೆ.  ಸಂಯುಕ್ತ ತಾಲೂಕು ರಚಿಸಿ: ತಾಪಂ ಸದಸ್ಯ ಮಲ್ಲು ರಾಠೊಡ ಮನವಿ ಸಲ್ಲಿಸಿ, ಆಲಮಟ್ಟಿ ದೇಶದ ಬೃಹತ್‌ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಬೃಹತ್‌ ಜಲಾಶಯ, ವಿವಿಧ ಉದ್ಯಾನ, ಸಂಗೀತ ನೃತ್ಯ ಕಾರಂಜಿ ಸೇರಿದಂತೆ ವಿವಿಧ ಪ್ರೇಕ್ಷಣೀಯ ಸ್ಥಳವಾದ್ದರಿಂದ ನೆಚ್ಚಿನ ಪ್ರವಾಸಿ ತಾಣಗಳಲ್ಲೊಂದಾಗಿ ಅರಳದಿನ್ನಿ, ಚಿಮ್ಮಲಗಿ, ಮರಿಮಟ್ಟಿ, ದೇವಲಾಪುರಗಳನ್ನು ಒಡಲಲ್ಲಿರಿಸಿಕೊಂಡು ಸುಮಾರು 27 ಸಾವಿರ ಜನಸಂಖ್ಯೆ ನಾಗಾಲೋಟದಲ್ಲಿ ಬೆಳೆಯುತ್ತಿದೆ. ಆಲಮಟ್ಟಿ-ನಿಡಗುಂದಿ ಗ್ರಾಮಗಳು ಈಗಾಗಲೇ ಒಂದಕ್ಕೊಂದು ಕೂಡಿಕೊಂಡಿವೆ. ಆಲಮಟ್ಟಿಯನ್ನು ನಿಡಗುಂದಿಯೊಂದಿಗೆ ಸಂಯೋಜಿಸಿ ಆಲಮಟ್ಟಿ-ನಿಡಗುಂದಿ ತಾಲೂಕಾಗಿ ರಚಿಸಬೇಕು. ಸಂತ್ರಸ್ತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಆಲಮಟ್ಟಿಯಲ್ಲಿ ಡಿಗ್ರಿ ಕಾಲೇಜು, ಕೆಬಿಜೆಎನ್‌ಎಲ್‌ ಆಸ್ಪತ್ರೆ ಸಾರ್ವತ್ರೀಕರಣ ಮಾಡಬೇಕು. ಪಶು ಆಸ್ಪತ್ರೆ ಆರಂಭಿಸಬೇಕು. ವಿಜ್ಞಾನ ಮಹಾವಿದ್ಯಾಲಯ
ಹಾಗೂ ಪಾಲಿಟೆಕ್ನಿಕ್‌ ಕಾಲೇಜು ಆರಂಭಿಸಬೇಕು. ರೈಲ್ವೆ ಕೆಳಸೇತುವೆ ನಿರ್ಮಿಸಬೇಕು. ರಾಷ್ಟ್ರೀಯ ಹೆದ್ದಾರಿ ಯಲಗೂರ ಕ್ರಾಸ್‌ನಿಂದ ಲಾಲ್‌ ಬಹಾದ್ದೂರ್‌ ಶಾಸ್ತ್ರೀ ಮಹಾದ್ವಾರದವರೆಗೆ ದ್ವಿಪಥ ನಿರ್ಮಿಸಿ ಮದ್ಯದಲ್ಲಿ ವಿದ್ಯುದ್ದೀಪ ಅಳವಡಿಸಬೇಕು. ಜಲಾಶಯ ಹಾಗೂ ಈ ಭಾಗದ ಜನತೆ ಹಿತಕ್ಕಾಗಿ ಅಗ್ನಿಶಾಮಕ ಠಾಣೆ ನಿರ್ಮಿಸಬೇಕು. ಗ್ರಾಪಂನ್ನು ಪಪಂ ಆಗಿ ಪರಿವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next