ಹುಬ್ಬಳ್ಳಿ: ಯಾರೂ ಹಸಿವಿನಿಂದ ಬಳಲಬಾರದು, ಮಾನಬಿಟ್ಟು ಬದುಕಬಾರದೆಂಬ ಉದ್ದೇಶ ದೊಂದಿಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಲಾಖೆಯಿಂದ ಇಟ್ಟಿರುವ ಪಬ್ಲಿಕ್ ಫ್ರಿಡ್ಜ್ ಹಾಗೂ ಪಬ್ಲಿಕ್ ಸ್ಟೋರ್ಗೆ ಸಾರ್ವಜನಿಕರು ಹಾಗೂ ನಿರಾಶ್ರಿತರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ.
ಇನ್ನು ಪಬ್ಲಿಕ್ ಸ್ಟೋರ್ನಲ್ಲಿ ಬಳಸಿದ ಬಟ್ಟೆ, ಚಪ್ಪಲಿ, ಬೂಟು, ಇನ್ನಿತರೆ ಸಾಮಗ್ರಿಗಳನ್ನು ತಂದು ಇಡಬಹುದು. ಅವು ಇನ್ನೊಬ್ಬರು ಬಳಸುವಂತಿರಬೇಕು. ಸಂಪೂರ್ಣ ಮಾಸಿರಬಾರದು. ತಾವು ಮಾಡಿದ ದಾನ ಇನ್ನೊಬ್ಬರು ಉಪಯೋಗಿಸುವಂತಿರಬೇಕು.
ಕೆಲವರ ಹಿಂದೇಟು: ಪಬ್ಲಿಕ್ ಫ್ರಿಡ್ಜ್-ಸ್ಟೋರ್ ಭಿಕ್ಷುಕರು, ನಿರಾಶ್ರಿತರು, ವೃದ್ಧರು, ಹಣ ಕಳೆದುಕೊಂಡವರು, ಮನೆ ಬಿಟ್ಟು ಬಂದವರು, ಊಟಕ್ಕೂ ಹಣ ಇಲ್ಲದವರಿಗೆ, ಜೊತೆಗೆ ರಾತ್ರಿ ಹೊತ್ತು ಹಸಿದುಕೊಂಡು ನಿಲ್ದಾಣಕ್ಕೆ ಬಂದಾಗ ಎಲ್ಲಿಯೂ ಆಹಾರ, ತಿಂಡಿ ಸಿಗದೆ ಪರದಾಡುವವರಿಗೆ ವರದಾನವಾಗಿದೆ. ಆದರೆ, ಆಹಾರ ಮತ್ತು ವಸ್ತುಗಳನ್ನು ತೆಗೆದುಕೊಳ್ಳಲು ಕೆಲವರು ಹಿಂಜರಿಯುತ್ತಿದ್ದಾರೆ. ತೆಗೆದುಕೊಂಡರೆ ಯಾರು ಬಯ್ಯುತ್ತಾರೋ ಎಂಬ ಹೆದರಿಕೆ ಅವರದ್ದಾಗಿದೆ. ಸರಿಯಾಗಿ ಓದಲು ಬರದವರು ಇವನ್ನು ಮಾರಾಟ ಮಾಡಲು ಇಡಲಾಗಿದೆಯೇ ಎಂದು ತಿಳಿದು ಹಾಗೇ ಹೋಗುತ್ತಿದ್ದಾರೆ. ಇಂತಹವರಿಗೆ ಸ್ಥಳೀಯ ಆಟೋ ಚಾಲಕರು ಹಾಗೂ ಕೆಲ ಪ್ರಯಾಣಿಕರು ನೆರವಾಗುತ್ತಿದ್ದಾರೆ. ನಿಮಗಾಗಿಯೇ ಇಟ್ಟಿದ್ದೆಂದು ಹೇಳಿಕೊಡುತ್ತಿದ್ದಾರೆ.
Advertisement
ಒಂದೆಡೆ ಕೆಲವರು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದರೆ, ಇನ್ನೊಂದೆಡೆ ಕೆಲವರು ತಮಗೆ ಅವಶ್ಯಕ್ಕಿಂತ ಹೆಚ್ಚಾಗಿ ಆಹಾರ ಬಡಿಸಿಕೊಂಡು ಹಾಳು ಮಾಡುತ್ತಿರುತ್ತಾರೆ. ಆಹಾರ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಹಾಗೂ ಅವಶ್ಯವುಳ್ಳವರಿಗೆ ಆಹಾರ ದೊರಕಬೇಕೆಂಬ ಸದುದ್ದೇಶದಿಂದ ಪಬ್ಲಿಕ್ ಫ್ರಿಡ್ಜ್ ಇಡಲಾಗಿದೆ. ಸಾರ್ವಜನಿಕರು ತಾವು ಬಳಸಿ ಉಳಿದ ಆಹಾರವನ್ನು ಇಲ್ಲವೆ ಹಸಿದುಕೊಂಡವರಿಗೆ ಅನ್ನದಾನ ಮಾಡಬೇಕೆಂಬ ಸದಿಚ್ಛೆ ಇದ್ದರೆ ಅಂಥವರು ಈ ಫ್ರಿಡ್ಜ್ನಲ್ಲಿ ತಂದು ಇಡಬೇಕು. ಆಹಾರವಲ್ಲದೆ ಹಣ್ಣು-ಹಂಪಲ, ಸಲಾಡ್, ತರಕಾರಿ, ಪ್ಯಾಕ್ವುಳ್ಳ ಹಾಲನ್ನು ಫ್ರಿಡ್ಜ್ನಲ್ಲಿ ಇಡಬಹುದಾಗಿದೆ. ಆದರೆ ಯಾವುದೇ ಕಾರಣಕ್ಕೂ ಹಾಳಾದ, ಅವಧಿ ಮುಗಿದ ಹಾಗೂ ಮಾಂಸ, ಮೀನು, ತೆರೆದ ಹಾಲು ಇಡುವಂತಿಲ್ಲ.
ಆಟೋ ಸಂಘದ ಸಹಾಯಹಸ್ತ
ಪಬ್ಲಿಕ್ ಫ್ರಿಡ್ಜ್ ಇಟ್ಟಾಗಿನಿಂದ ನಿಲ್ದಾಣದಲ್ಲಿರುವ ಹಜರತ್ ಭೋಡಕೆಶಾಲಿ ಬಾಬಾ ಆಟೋ ರಿಕ್ಷಾ ನಿಲ್ದಾಣದ ಚಾಲಕರು ಸಹಿತ ತಮ್ಮಲ್ಲಿಯೇ ಒಂದಿಷ್ಟು ಹಣ ಸಂಗ್ರಹಿಸಿ, ಹಸಿದು ಬಂದವರಿಗೆ ಅನ್ನದಾನ ಮಾಡುತ್ತಿದ್ದಾರೆ. ಗುರುವಾರ ಅಂದಾಜು 25ಕ್ಕೂ ಅಧಿಕ ಜನರಿಗಾಗಿ ಅನ್ನ, ಸಾಂಬಾರ, ಪಲ್ಲೆ ಸೇರಿ ಪ್ಯಾಕಿಂಗ್ ಮಾಡಿದ್ದ ಆಹಾರದ ಪೊಟ್ಟಣವನ್ನು ಫ್ರಿಡ್ಜ್ನಲ್ಲಿಟ್ಟು ಅವಶ್ಯವುಳ್ಳವರಿಗೆ ನೀಡಿದ್ದಾರೆ. ಇತ್ತೀಚೆಗೆ ತನ್ನ ನಾಲ್ಕು ಮಕ್ಕಳೊಂದಿಗೆ ಮನೆಬಿಟ್ಟು ಬಂದಿದ್ದ ತುಮಕೂರು ಮೂಲದ ಮಹಿಳೆಯೊಬ್ಬರಿಗೆ ಈ ಸಂಘದ ಚಾಲಕರು ಐವರಿಗೂ ಊಟ ಮಾಡಿಸಿದ್ದಲ್ಲದೆ, ಮರಳಿ ಅವರ ಊರಿಗೆ ಹೋಗಲು ರೈಲು ಪ್ರಯಾಣದರ ತೆಗೆಸಿ ಕಳುಹಿಸಿದ್ದಾರೆ. ಇದೇರೀತಿ ಬಹಳಷ್ಟು ಜನರು ನಗರಕ್ಕೆ ಬಂದಿರುತ್ತಾರೆ. ಅವರಿಗೆ ನಮ್ಮ ಕೈಲಾದ ಸಹಾಯವನ್ನು ಸಂಘದವರು ಮಾಡುತ್ತಿದ್ದೇವೆ ಎಂದು ಆಟೋರಿಕ್ಷಾ ಚಾಲಕರಾದ ಮಹ್ಮದಫಾರೂಕ ಧಾರವಾಡ ಮತ್ತು ಫಿರೋಜ್ ನೀಲಗಾರ ಹೇಳುತ್ತಾರೆ.
Related Articles
•ವಿ. ವಿಜಯನ್,
ಹುಬ್ಬಳ್ಳಿ ರೈಲ್ವೆ ನಿಲ್ದಾಣ ನಿರೀಕ್ಷಕ
Advertisement