Advertisement

ವಾಯವ್ಯ ಸಾರಿಗೆಗೆ 51.71 ಕೋಟಿ ನೆರೆ ಬರೆ

01:28 PM Sep 19, 2019 | Naveen |

ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ:
ಆಗಸ್ಟ್‌ ತಿಂಗಳಲ್ಲಿ ಉಕ ಭಾಗದಲ್ಲಿ ಉಂಟಾದ ನೆರೆಯಿಂದ ಕೇವಲ 20 ದಿನದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಬರೋಬ್ಬರಿ 51.71 ಕೋಟಿ ರೂ. ನಷ್ಟವಾಗಿದೆ. ಮೊದಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ಸಾರಿಗೆ ಸಂಸ್ಥೆಗೆ ನೆರೆ ಗಾಯದ ಮೇಲೆ ಬರೆ ಎಳೆದಿದೆ.

Advertisement

ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಸೇರಿದಂತೆ ಹಳ್ಳ ಕೊಳ್ಳಗಳ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದ ನಷ್ಟವಾಗಿದೆ. ಬೆಳಗಾವಿ, ಹಾವೇರಿ ಹಾಗೂ ಬಾಗಲಕೋಟೆ ಜಿಲ್ಲಾ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ.

ಉಕ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಎಂಟು ವಿಭಾಗಗಳಿಂದ 48 ಲಕ್ಷ ಕಿಮೀ ಸಂಚಾರ ರದ್ದಾಗಿದೆ. ಇದರಿಂದ ಬರಬೇಕಾಗಿದ್ದ ಸುಮಾರು 42.57 ಕೋಟಿ ರೂ. ಆದಾಯ ಖೋತಾ ಆಗಿದೆ. ಉಳಿದಂತೆ ಘಟಕ, ಬಸ್‌ ನಿಲ್ದಾಣಗಳ ಜಖಂ ಸೇರಿದಂತೆ ಕಟ್ಟಡಗಳ ಅಂದಾಜು ನಷ್ಟ 9.14 ಕೋಟಿ ರೂ. ಎನ್ನಲಾಗಿದ್ದು, ಒಟ್ಟು 51.71 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ.

ನೆರೆ ಹಾಗೂ ತೀವ್ರ ಮಳೆಯಿಂದ ಸಾರಿಗೆ ಸಂಸ್ಥೆಗೆ ಸಂಬಂಧಿಸಿದ ಬಸ್‌ ನಿಲ್ದಾಣದ, ಘಟಕ ಸೇರಿದಂತೆ ಕಟ್ಟಡ ಹಾನಿ 9.14 ಕೋಟಿ ರೂ.ಗಳಿಗೆ ತಲುಪಿದೆ. ಅತಿ ಹೆಚ್ಚು ಚಿಕ್ಕೋಡಿ ಹಾಗೂ ಬೆಳಗಾವಿ ವಿಭಾಗ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ ಹಾನಿಯಾಗಿವೆ. ಚಿಕ್ಕೋಡಿ 3.50 ಕೋಟಿ ರೂ, ಬೆಳಗಾವಿ 3.20 ಕೋಟಿ ರೂ. ಶಿರಸಿ 2.10 ಕೋಟಿ ರೂ. ಧಾರವಾಡ 35 ಲಕ್ಷ ರೂ. ಹಾಗೂ ಗದಗ ವಿಭಾಗ ವ್ಯಾಪ್ತಿಯಲ್ಲಿ ಕೊಣ್ಣೂರು ಬಸ್‌ ನಿಲ್ದಾಣ ಸೇರಿದಂತೆ ಇತರೆಡೆ ಆಗಿರುವ ನಷ್ಟ 8 ಲಕ್ಷ ರೂ. ಮೌಲ್ಯದ ಸಂಸ್ಥೆಯ ಕಟ್ಟಡಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.

ಪರಿಹಾರಕ್ಕೆ ಸರ್ಕಾರ ಹಿಂದೇಟು: ನೆರೆಯಿಂದ ಸಂಸ್ಥೆಗೆ ಉಂಟಾದ ನಷ್ಟದ ಕುರಿತು ಈಗಾಗಲೇ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೇರಿದಂತೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ವಿವರವಾದ ಪ್ರಸ್ತಾವನೆ ಸಲ್ಲಿಸಲಾಗಿದೆ. ನೆರೆ ಸಂದರ್ಭದಲ್ಲಿ ಭೌತಿಕ ನಷ್ಟವಾದರೆ ಮಾತ್ರ ಪರಿಹಾರ ನೀಡಲು ಸಾಧ್ಯ. ಬಸ್‌ಗಳ ಕಾರ್ಯಾಚರಣೆ ರದ್ದಾಗಿರುವುದರಿಂದ ಪರಿಹಾರ ನೀಡಲು ಕಾನೂನಾತ್ಮಕವಾಗಿ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಸರ್ಕಾರದ ಮಟ್ಟದಲ್ಲಿ ವ್ಯಕ್ತವಾಗಿದೆ. ಇನ್ನೂ ಕೆಲ ವಿಭಾಗಗಳಿಂದ ಘಟಕಗಳ ಕಟ್ಟಡ, ಬಸ್‌ ನಿಲ್ದಾಣದ ಹಾನಿಯ ಪರಿಹಾರ ಕೋರಿ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದು, ಇಷ್ಟೊಂದು ಮೊತ್ತದ ಪರಿಹಾರ ನೀಡಲು ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಜಿಲ್ಲಾಡಳಿತದಿಂದ ವ್ಯಕ್ತವಾಗಿದೆ ಎನ್ನಲಾಗಿದೆ.

Advertisement

ನಷ್ಟಕ್ಕೆ ಕಾರಣ ನೀಡಿದ ಸಂಸ್ಥೆ: ನೆರೆ ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳ ಮೂಲಕ ಬಸ್‌ ಸಂಚಾರ ಮಾಡಿರುವುದು ನಷ್ಟಕ್ಕೆ ಕಾರಣವಾಗಿದೆ. ನೆರೆ ಸಂತ್ರಸ್ತರಿಗೆ ಉಚಿತ ಪ್ರಯಾಣ, ಅವರ ಸರಕು ಸಾಮಗ್ರಿಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ. ಇನ್ನು ಸಂತ್ರಸ್ತರಿಗೆ ದಾನಿಗಳು ನೀಡುವ ವಸ್ತುಗಳನ್ನು ಮಾನವೀಯತೆ ದೃಷ್ಟಿಯಿಂದ ಉಚಿತವಾಗಿ ತಲುಪಿಸುವ ಕೆಲಸ ಸಂಸ್ಥೆಯಿಂದ ಆಗಿದೆ. ಅತ್ಯಂತ ಕನಿಷ್ಟ ಸ್ಥಿತಿಯಲ್ಲಿ ಸಂಸ್ಥೆ ಸಾರಿಗೆ ಸೇವೆ ನೀಡಿದೆ. ಇದನ್ನು ನಷ್ಟ ಪರಿಹಾರ ಅಥವಾ ವಿಶೇಷ ಅನುದಾನದ ಮೂಲಕವಾದರೂ ಭರಿಸಿಕೊಡಬೇಕು ಎಂಬುದು ಅಧಿಕಾರಿಗಳ ಅಭಿಪ್ರಾಯ.

ಬಸ್‌ಗಳ ಕಾರ್ಯಾಚರಣೆ ಆದಾಯವೇ ಸಂಸ್ಥೆಗೆ ಜೀವಾಳ. ಕಾರ್ಯಾಚರಣೆ ರದ್ದಾದರೂ ಸಿಬ್ಬಂದಿಗೆ ವೇತನ ಸೇರಿದಂತೆ ಇತರೆ ಆರ್ಥಿಕ ಸೌಲಭ್ಯಗಳನ್ನು ಕಡಿತಗೊಳಿಸಲು ಸಾಧ್ಯವಿಲ್ಲ. ಆದರೆ ಇದೀಗ ಆದಾಯವೇ ಖೋತಾ ಆಗಿರುವುದರಿಂದ ಸಿಬ್ಬಂದಿ ವೇತನ, ಇತರೆ ಖರ್ಚು ವೆಚ್ಚಗಳನ್ನು ನಿಭಾಯಿಸುವುದು ದೊಡ್ಡ ಸಂಕಷ್ಟ ತಂದೊಡ್ಡಿದೆ. ಸೇವಾ ದೃಷ್ಟಿಯಿಂದ ಕಾರ್ಯ ನಿರ್ವಹಿಸುವ ಸರ್ಕಾರದ ಅಂಗ ಸಂಸ್ಥೆಗೆ ನೆರೆಯಿಂದ ಆದ ನಷ್ಟಕ್ಕೆ ಪರಿಹಾರ ನೀಡುವುದು ಸರ್ಕಾರದ ಕಾರ್ಯ ಎಂಬುದು ಸಂಸ್ಥೆಯ ವಾದವಾಗಿದೆ.

ನೆರೆ ಹಾವಳಿಯಿಂದ ಸಂಸ್ಥೆಗೆ ಸಾಕಷ್ಟು ಹಾನಿಯಾಗಿದೆ. ಈಗಾಗಲೇ ಸರ್ಕಾರಕ್ಕೆ ಪರಿಹಾರ ಕೋರಿ ಮನವಿ ಮಾಡಿದ್ದು, ಈ ತರಹದ ನಷ್ಟಕ್ಕೆ ಪರಿಹಾರ ಕೊಡಲು ಅಸಾಧ್ಯ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸಾರಿಗೆ ಸಚಿವರಿಗೂ ವಿವರವಾದ ಮಾಹಿತಿ ನೀಡಿ ಮನವಿ ಮಾಡಿದ್ದೇವೆ. ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು.
ರಾಜೇಂದ್ರ ಚೋಳನ್‌,
 ವ್ಯವಸ್ಥಾಪಕ ನಿರ್ದೇಶಕ, ವಾಕರಸಾಸಂ

Advertisement

Udayavani is now on Telegram. Click here to join our channel and stay updated with the latest news.

Next