Advertisement

ಕೆಸರುಗದ್ದೆಯಂತಿದ್ದ ರಸ್ತೆ ಧೂಳುಮಯ

01:16 PM Aug 24, 2019 | Naveen |

ಹೇಮರಡ್ಡಿ ಸೈದಾಪುರ
ಹುಬ್ಬಳ್ಳಿ:
ತೀವ್ರ ಮಳೆಯಿಂದ ಕೆಸರುಗದ್ದೆಯಂತೆ ಆಗಿದ್ದ ರಸ್ತೆಗಳೀಗ ಧೂಳುಮಯವಾಗಿವೆ. ಸಾರ್ವಜನಿಕರು ಓಡಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ನೀಲಿಜಿನ್‌ ರಸ್ತೆಯ ನಿವಾಸಿಗಳ ಪಾಡಂತೂ ದೇವರಿಗೆ ಪ್ರೀತಿ.

Advertisement

ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ಇದೀಗ ಕೊಂಚ ಮಳೆ ಕಡಿಮೆಯಾಗುತ್ತಿದ್ದಂತೆ ವಾಹನ ಸವಾರರ ಅನುಕೂಲಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಮೊದಲ ಆದ್ಯತೆ ನೀಡಿದೆ. ಕೆಲವೊಂದು ರಸ್ತೆಗಳಲ್ಲಿ ವೆಟ್ಮಿಕ್ಸ್‌, ಕಟ್ಟಡದ ತ್ಯಾಜ್ಯ ಬಳಸಿಕೊಂಡು ಗುಂಡಿ ಮುಚ್ಚುತ್ತಿರುವುದರಿಂದ ಇದೀಗ ಬರೀ ಧೂಳು ರಾರಾಜಿಸುತ್ತಿದೆ. ಮಳೆರಾಯ ಗುಂಡಿ ನಿರ್ಮಾಣ ಮಾಡಿದರೆ ಮಹಾನಗರ ಪಾಲಿಕೆ ಜನತೆಗೆ ಧೂಳು ನೀಡುತ್ತಿದೆ ಎಂದು ಶಾಪ ಹಾಕುವಂತಾಗಿದೆ. ಲಾರಿ ಅಥವಾ ಬಸ್‌ ಹಿಂದೆ ಹೊರಟರೆ ಮುಖಕ್ಕೆ ಧೂಳು ರಾಚುತ್ತಿದೆ. ಕೆಲ ರಸ್ತೆಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿರುವುದರಿಂದ ಧೂಳು ಸೇವಿಸಿಕೊಂಡೇ ಓಡಾಡುವಂತಾಗಿದೆ.

ತೀವ್ರ ನಿರ್ಲಕ್ಷ್ಯಕ್ಕೊಳಗಾದ ರಸ್ತೆ: ನೀಲಿಜಿನ್‌ ರಸ್ತೆ ದುರಸ್ತಿ ಕಳೆದ ಮೂರ್‍ನಾಲ್ಕು ವರ್ಷದ ಬೇಡಿಕೆಯಾಗಿದೆ. ರಸ್ತೆಯಲ್ಲಿ ಗುಂಡಿ ಬದಲು ಗುಂಡಿಯಲ್ಲಿ ರಸ್ತೆ ಹುಡುಕುವಂತಾಗಿದೆ. ಮಹಾನಗರದ ಪೈಕಿ ಇದೊಂದು ರಸ್ತೆ ತೀವ್ರ ನಿರ್ಲಕ್ಷ್ಯಗೊಳಗಾಗಿದೆ. ಪ್ರತಿ ಮಳೆಯಲ್ಲಿ ಇಡೀ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗುತ್ತಿದ್ದು, ಅವುಗಳಿಗೆ ತಾತ್ಕಾಲಿಕವಾಗಿ ವೆಟ್ಮಿಕ್ಸ್‌ ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಇದು ವಾಹನಗಳಿಗೇನೋ ಸುಗಮವಾಗುತ್ತದೆಯಾದರೂ ಈ ರಸ್ತೆಯಲ್ಲಿನ ಅಂಗಡಿ ಮುಗ್ಗಟ್ಟುಗಳ ವ್ಯಾಪಾರಿಗಳ ಪರಿಸ್ಥಿತಿ ಹೇಳತೀರದು. ಇಡೀ ದಿನ ಧೂಳಿನಲ್ಲಿ ವ್ಯಾಪಾರ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ.

ದೊಡ್ಡ ವಾಹನ ಈ ರಸ್ತೆಯಲ್ಲಿ ಹಾದು ಹೋದರೆ ಸಾಕು ಇಡೀ ರಸ್ತೆ ಮಂಜು ಕವಿದ ಸ್ಥಿತಿಯಲ್ಲಿ ಧೂಳು ತುಂಬಿಕೊಳ್ಳುತ್ತದೆ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಡಿಗಳನ್ನು ಮುಚ್ಚಲು ವೆಟ್ಮಿಕ್ಸ್‌ ಹಾಕಲಾಗಿದೆ. ಹೀಗಾಗಿ ಈಗಂತೂ ಈ ರಸ್ತೆಯಲ್ಲಿ ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಇಲ್ಲಿನ ನಿವಾಸಿಗಳ ಪರಿಸ್ಥಿತಿ ಯಾವುದಕ್ಕೂ ಬೇಡವಾದಂತಾಗಿದೆ. ಬಸ್‌, ಲಾರಿ ಸೇರಿದಂತೆ ಬೃಹತ್‌ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ.

ಹುಸಿಯಾದ ನಿರೀಕ್ಷೆ
ನೀಲಿಜಿನ್‌ ರಸ್ತೆಯನ್ನು ಸಿಆರ್‌ಎಫ್‌ ಯೋಜನೆಯಡಿ ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಸಚಿವ ಜಗದೀಶ ಶೆಟ್ಟರ ಹಿಂದೆಯೇ ಭರವಸೆ ನೀಡಿದ್ದರು. ಇನ್ನೇನು ಕಾಂಕ್ರೀಟ್ ರಸ್ತೆ ನಿರ್ಮಾಣವಾಗೇಬಿಟ್ಟಿತು ಎಂದು ಸ್ಥಳೀಯರು ನಿರೀಕ್ಷೆಯಲ್ಲಿದ್ದರು. ಆದರೆ ಜನಪ್ರತಿನಿಧಿಗಳು ನೀಡಿದ ಆಶ್ವಾಸನೆ ಇನ್ನೂ ಭರವಸೆಯಾಗಿಯೇ ಉಳಿದಿದೆ. ಈ ರಸ್ತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎನ್ನುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

Advertisement

ನೀಲಿಜಿನ್‌ ರಸ್ತೆ ಅಭಿವೃದ್ಧಿ ಚರ್ಚೆ ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದೆ. ಗುಂಡಿ ಬಿದ್ದಾಗ ವೆಟ್ಮಿಕ್ಸ್‌, ನಂತರ ಒಂದಿಷ್ಟು ಡಾಂಬರ್‌ ಸುರಿಯಲಾಗುತ್ತಿದೆ. ಶಾಶ್ವತ ಪರಿಹಾರವಾಗಿ ಉತ್ತಮ ರಸ್ತೆ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಮನವಿ, ಹೋರಾಟ ಎಲ್ಲಾ ಮುಗಿದಿದೆ. ನಮ್ಮ ಗೋಳು ಯಾರ ಮುಂದೆ ಹೇಳಬೇಕು. ಸಂಜೆಯಾಗುವುದರೊಳಗೆ ಅಂಗಡಿಯಲ್ಲಿ ಕೆಜಿಗಟ್ಟಲೆ ಧೂಳು ಸಂಗ್ರಹವಾಗುತ್ತಿದೆ.
ಸುಜಿತ್‌ ಜೈನ್‌,
ನೀಲಿಜಿನ್‌ ರಸ್ತೆ ವ್ಯಾಪಾರಿ

ಹಿಂದೆ ರಸ್ತೆತಡೆ ನಡೆಸಿದ ನಂತರ ಸ್ಥಳಕ್ಕೆ ಆಗಮಿಸಿದ್ದ ಪಾಲಿಕೆ ಅಧಿಕಾರಿಗಳು ರಸ್ತೆಗೆ ತೇಪೆ ಹಚ್ಚುವ ಕೆಲಸ ಮಾಡಿದ್ದರು. ಏಳೆಂಟು ತಿಂಗಳಲ್ಲಿ ಹಾಕಿದ ಡಾಂಬರ್‌ ಸಂಪೂರ್ಣ ಕಿತ್ತು ಹೋಯಿತು. ಮೊನ್ನೆ ಸುರಿದ ಮಳೆಗೆ ಒಂದೊಂದು ಅಡಿ ಆಳದ ಗುಂಡಿಗಳು ನಿರ್ಮಾಣವಾಗಿದ್ದು, ಅವುಗಳನ್ನು ಮುಚ್ಚಲು ಕಡಿ ಹಾಕಿದ್ದೇ ತಡ ಇಡೀ ರಸ್ತೆ ಧೂಳಿನಿಂದ ತುಂಬಿದೆ. ಕಣ್ಣು, ಮೂಗಿನಲ್ಲಿ ಬರೀ ಧೂಳು.
ಶೇಖರಯ್ಯ ಮಠಪತಿ,
 ಅಧ್ಯಕ್ಷ, ಆಟೋ ಚಾಲಕರ-ಮಾಲೀಕರ ಸಂಘ

Advertisement

Udayavani is now on Telegram. Click here to join our channel and stay updated with the latest news.

Next