ಹುಬ್ಬಳ್ಳಿ: ತಮ್ಮ ಪಕ್ಷದ ಶಾಸಕರಿಗೇ ರಕ್ಷಣೆ ಕೊಡದ ರಾಜ್ಯ ಸರ್ಕಾರ ನಾಡಿನ ಜನರಿಗೆ ಇನ್ನಾವ ರಕ್ಷಣೆ ನೀಡುತ್ತದೆ ಎಂದು ಸಂಸದ ಬಿ.ವೈ. ರಾಘವೇಂದ್ರ ವ್ಯಂಗ್ಯವಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರಿಗೆ ರಕ್ಷಣೆ ನೀಡಲು ರೆಸಾರ್ಟ್ಗೆ ಹೋಗಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿ ಕೊಂಡಿದ್ದರು. ಆದರೆ ಕರೆದುಕೊಂಡು ಹೋಗಿದ್ದ ಶಾಸಕರಿಗೇ ಸರಿಯಾದ ರಕ್ಷಣೆ ಒದಗಿಸಲು ಆಗಿಲ್ಲ. ರಾಜ್ಯದ ಜನತೆಗೆ ಇನ್ನೆಂತಹ ರಕ್ಷಣೆ ನೀಡುತ್ತಾರೆ. ಜನಪ್ರತಿನಿಧಿಗಳು ಈ ರೀತಿ ಹೊಡೆದಾಡಿ ಕೊಂಡರೆ ಸಮಾಜಕ್ಕೆ ಯಾವ ಸಂದೇಶ ಹೋಗುತ್ತದೆ ಎನ್ನುವ ಸಾಮಾನ್ಯ ಜ್ಞಾನ ಇದ್ದಂತಿಲ್ಲ. ಇಂತಹ ಘಟನೆಗಳಿಂದ ಜನರು ಜನಪ್ರತಿನಿಧಿಗಳನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ ಎಂದರು.
ಆಪರೇಶನ್ ಕಮಲ ನಮ್ಮ ಪಕ್ಷದಿಂದ ನಡೆದಿಲ್ಲ. ಕಾಂಗ್ರೆಸ್-ಜೆಡಿಎಸ್ನಲ್ಲಿನ ಗೊಂದಲ ಮುಚ್ಚಿ ಹಾಕಲು ನಮ್ಮ ಪಕ್ಷದ ಮೇಲೆ ಆರೋಪ ಮಾಡಿದ್ದಾರೆ. ಅವರ ಪಕ್ಷದ ಶಾಸಕರು ರಾಜೀನಾಮೆ ನೀಡಿ ಹೊರಬಂದರೆ ನೋಡೋಣ ಎಂದು ಪಕ್ಷ ನಿರ್ಧರಿಸಿದೆ. ಸಮ್ಮಿಶ್ರ ಸರ್ಕಾರದಲ್ಲಿ ಯಾರ ಮೇಲೂ ವಿಶ್ವಾಸವಿಲ್ಲದಂತೆ ಗೊಂದಲ ಮೂಡಿದೆ. ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿರುವ ಕುರಿತು ಕೆಲ ಶಾಸಕರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮೊದಲಿನಿಂದಲೂ ಕೆಲ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು.
ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಸರ್ಕಾರ ಶೋಕಾಚರಣೆ ಹಾಗೂ ರಜೆ ಘೋಷಿಸಿದ ದಿನ ರಾಷ್ಟ್ರಿಯ ವಿಚಾರ ಸಂಕಿರಣ ನಡೆದಿರುವುದು ರಾಜ್ಯದ ಜನರ ಮನಸ್ಸಿಗೆ ಮಾಡಿದ ಘಾಸಿಯಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದ್ದು, ಕೂಡಲೇ ಅವರು ರಾಜೀನಾಮೆ ನೀಡಬೇಕು.
•ಬಿ.ವೈ.ರಾಘವೇಂದ್ರ,
ಸಂಸದ