Advertisement

ಹುಬ್ಬಳ್ಳಿ-ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

06:50 AM Jan 09, 2018 | Team Udayavani |

ಧಾರವಾಡ/ಹುಬ್ಬಳ್ಳಿ: ಕೋರೆಗಾಂವ್‌ ವಿಜಯೋತ್ಸವ ವೇಳೆ ಹಿಂಸಾಚಾರ, ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಸಚಿವ ಅನಂತಕುಮಾರ ಅವರ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಹುಬ್ಬಳ್ಳಿ ಧಾರವಾಡ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

Advertisement

ಧಾರವಾಡದ ಆಲೂರು ವೆಂಕಟರಾವ್‌ ವೃತ್ತದಲ್ಲಿ ಬೆಳಗ್ಗೆ ಪ್ರತಿಭಟನಾಕಾರರು ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಟೈರ್‌ ಸುಟ್ಟ ಹೊಗೆಯಿಂದ ಮಹಿಳೆಯರಿಬ್ಬರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆಯೂ ನಡೆಯಿತು. ಸಂಜೆ ವೇಳೆ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ಕೈಗೊಂಡು ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ವಿವಿಧ ದಲಿತಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸಿದರು. ಕಾಂಗ್ರೆಸ್‌-ಜೆಡಿಎಸ್‌ನ ನಾಯಕರೂ ಬೆಂಬಲ ವ್ಯಕ್ತಪಡಿಸಿದರು. ನಂತರ ಕೇಶವಕುಂಜಕ್ಕೆ ಮುತ್ತಿಗೆ ಯತ್ನವೂ ನಡೆಯಿತು. ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆಯ ಮಧ್ಯೆ ಕಲ್ಲುಗಳನ್ನು ಇಟ್ಟು ಗಾಜಿನ ಬಾಟಲಿಗಳನ್ನು ರಸ್ತೆಗೆಸೆದು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿರಲಿಲ್ಲ. ಆದರೆ, ಬಂದ್‌ ತೀವ್ರ ಸ್ವರೂಪ ಪಡೆದು ವಾಹನಗಳ ಸಂಚಾರ ಸ್ತಬ್ಧವಾಗುತ್ತಿದ್ದಂತೆ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಆಸ್ಪತ್ರೆ, ಮೆಡಿಕಲ್‌ ಶಾಪ್‌ ಹೊರತುಪಡಿಸಿ ಪೆಟ್ರೋಲ್‌ ಬಂಕ್‌ಗಳು, ಚಿತ್ರಮಂದಿರಗಳು ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್‌ ಮಾಡಲಾಯಿತು.

ಕಲ್ಲು ತೂರಾಟ:
ಹುಬ್ಬಳ್ಳಿಯಲ್ಲಿ ರಸ್ತೆಗಿಳಿದ ಖಾಸಗಿ ಸಂಸ್ಥೆ ಬಸ್‌, ಕೋರ್ಟ್‌ ವೃತ್ತದಲ್ಲಿ ಆಟೋ ರಿಕ್ಷಾ ಹಾಗೂ ಮಿನಿ ಟೆಂಪೋಗಳಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಹಳೇ ಬಸ್‌ನಿಲ್ದಾಣದ ವಿಚಾರಣಾ ಕೊಠಡಿಯ ಗಾಜನ್ನು ಪುಡಿ ಮಾಡಿದ್ದಾರೆ. ಗಣೇಶ ಪೇಟೆಯ ಕ್ರಾಸ್‌ನಲ್ಲಿರುವ ಜನೆರಿಕ್‌ ಔಷಧ ಮಳಿಗೆಗೂ ಪ್ರತಿಭಟನಾಕಾರರು ಕಲ್ಲು ಎಸೆದು ಜಖಂಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next