Advertisement

HSV ಲೇಖನ: ಜಗತ್ತನ್ನೇ ಆಕ್ರಮಿಸಿದ ಸಾವಿನ ಸೂತಕ…2021 ಶುಭದ ಹೊಸಗೆಯನ್ನು ತರಲಿ

06:28 PM Dec 31, 2020 | Team Udayavani |

ಭಯ, ಆತಂಕ, ಸಂಕಷ್ಟದ ನಡುವೆ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇವೆ. ಹೊಸ ವರ್ಷವನ್ನು ಸವಾಲಾಗಿ ಸ್ವೀಕರಿಸುವ ಅಗತ್ಯ ಇದೀಗ ನಮ್ಮ ಮುಂದಿದೆ. ಯಾಕೆಂದರೆ 2020 ಅದರ ಕುರಿತು ಯೋಚಿಸಿದರೆ ನಾನಾ ರೀತಿಯ ಮಿಶ್ರ ಭಾವ ಮನಸ್ಸಿನಲ್ಲಿ ಉಂಟಾಗುತ್ತದೆ. ಬಹಳ ಮುಖ್ಯವಾಗಿ ನಾವ್ಯಾರೂ ಕನಸು ಮನಸ್ಸಿನಲ್ಲೂ ಕಲ್ಪಿಸಿರದ ವಿಲಕ್ಷಣ  ಅನುಭವ ನಮ್ಮೆಲ್ಲರಿಗೂ ಆಗಿದೆ. ಬದುಕಿನ ನಶ್ವರತೆ ಅನುಭವ ವೇದ್ಯವಾಗುವಂತೆ ಮಾಡಿದೆ ಈ ಕೋವಿಡ್ ಕಾಲಾವಧಿ. ಇಡೀ ಜಗತ್ತನ್ನೇ ಆಕ್ರಮಿಸಿ ಜೀವ ಹಿಂಡಿದ ಈ ಕಾಣದ ಕೈ ಆಟವನ್ನು ಕಲ್ಪಿಸುವುದೇ ಸಾಧ್ಯವಿಲ್ಲ. ಹೇಗೆ ಆಕಾಶ ವಿಶ್ವವನ್ನೇ ಆವರಿಸಿದೆಯೋ ಹಾಗೆ…ಒಂದು ಸಾವಿನ ಸೂತಕ ಜಗತ್ತನ್ನು ಆಕ್ರಮಿಸಿದ ವರ್ಷವಿದು. ಜಗತ್ತಿನ ಮಹಾಯುದ್ಧಗಳಲ್ಲಿ ಆಗದಂತಹ ಜೀವ ನಾಶ. ಕೋವಿಡ್ ನ ಕಾಲಾವಧಿಯಲ್ಲಿ ಆಗಿದೆ ಎಂದರೆ ಆಶ್ಚರ್ಯವಾಗುತ್ತದೆ. ಹಾಗಾಗಿ ಇದು ಮೂರನೇ ವಿಶ್ವಯುದ್ಧವೇ ಸೈ. ಕಾಣದ ಸೋಂಕಿನೊಂದಿಗೆ ಇಡೀ ವಿಶ್ವ ನಡೆಸಿದ ಮಾರಣಾಂತಿಕ ಸಮರವಿದು. ಎದುರಾಳಿಯನ್ನು ಕೊಲ್ಲುವುದಲ್ಲ. ತಾನು ಸಾಯುವುದಷ್ಟೇ ಈ ಸಂಗ್ರಾಮದಲ್ಲಿ ಉಂಟಾದ ನಾಶದ ಸ್ವರೂಪ.

Advertisement

ವೈಯಕ್ತಿಕವಾಗಿ ಹೇಳಬೇಕೆಂದರೆ ನನ್ನ ಆತ್ಮವನ್ನು ತಲ್ಲಣಗೊಳಿಸಿದ ಕಾಲವಿದು. ಫೆಬ್ರುವರಿಯಲ್ಲಿ ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನದ ಸಂಭ್ರಮದಲ್ಲಿ ಪಾಲ್ಗೊಂಡಿದ್ದೆ. ನಾಳೆ ಬರಲಿರುವ ಕೇಡು ಕನಸು ಮನಸ್ಸಿನಲ್ಲೂ ಇರಲಿಲ್ಲ. ಫೆಬ್ರುವರಿ ಕೊನೆ ವೇಳೆಗೆ ಕೋವಿಡ್ ಎನ್ನುವ ದುಷ್ಟ ಶಕ್ತಿ ವೈರಾಣು ರೂಪದಲ್ಲಿ ಜಗತ್ತಿನ ಪ್ರಾಣ ಹಿಂಡುವುದು ಎಂಬುದು ಗಾಳಿ ಮಾತಾಗಿ ಸುಳಿದಾಡತೊಡಗಿತ್ತು. ಇದು ಕೇವಲ ಸಮೂಹ ಮಾಧ್ಯಮಗಳ ಅಬ್ಬರ ಎಂದುಕೊಂಡವರಿಗೆ ಇದು ನಿಜವಾದ ವಾಸ್ತವ ಎಂದು ಅರಿವಾಗುವಷ್ಟರಲ್ಲಿ ಕೋವಿಡ್ ಮತ್ತು ಅದರ ಭೀಕರತೆ ಎಲ್ಲಾ ದೇಶಗಳ ಅನುಭವಕ್ಕೆ ಬರತೊಡಗಿತ್ತು.

ಅಮೆರಿಕದಂತಹ ಅಮೆರಿಕ ಕೂಡಾ ನಲುಗಿ ಹೋಯಿತು. ಕೋವಿಡ್ ಮೊದಲು ಕಂಡ ಚೀನಾ ವಿಶ್ವದ ಭೀತಿಗೆ ಒಳಗಾಯಿತು. ವೈರಾಣುಗಳ ಪ್ರವೇಶ ಭಾರತಕ್ಕೂ ಆಯಿತು. ಯಾವ ಪ್ರತಿಬಂಧಕ ಶಕ್ತಿ ಅದನ್ನು ತಡೆಯದಂತಾಯಿತು. ಔಷಧವೇ ಇಲ್ಲದ ಈ ಮಾರಕ ರೋಗ. ಸಾವೇ ಬದುಕುವ ಮಾರ್ಗ ಎಂದು ಹೇಳತೊಡಗಿತ್ತು. ಮನುಷ್ಯನ ಜೀವಿತಾವಧಿ ಒಂದು ನೂರು ವರ್ಷ ಎಂದು ಭಾವಿಸೋಣ. ಭಾರತದಲ್ಲಿ ಸರಾಸರಿ ಮನುಷ್ಯನ ಆಯುಷ್ಯ ಪ್ರಮಾಣ 70/80 ಎಂದು ಇಟ್ಟುಕೊಳ್ಳೋಣ. ಈಗ ಕೋವಿಡ್ ದೇಶದ ಎಲ್ಲಾ ಪ್ರಜೆಗಳನ್ನು ಅದರಲ್ಲೂ ದುರ್ಬಲರನ್ನು ಮತ್ತು ವಯೋ ವೃದ್ದರನ್ನು ತನ್ನ ಗುರಿ ಮಾಡಿಕೊಂಡು ಭೀಕರ ಹತ್ಯಾಕಂಡದಲ್ಲಿ ತೊಡಗಿತ್ತು. ಎಲ್ಲೋ ದೂರದಲ್ಲಿದೆ ಎನ್ನುವುದು ದಿನೇ ದಿನೇ ಹತ್ತಿರ ಬರತೊಡಗಿತ್ತು.

ಒಂದು ಬೆಳಗ್ಗೆ ಕೋವಿಡ್ ಬೆಂಗಳೂರಿಗೂ ಬಂದಿದೆ ಎಂಬ ಕಟು ವಾಸ್ತವ, ಪ್ರಚುರಗೊಂಡಿತ್ತು. ಮೊದ, ಮೊದಲು ನಮ್ಮ ಬಡಾವಣೆಗೆ ಕೋವಿಡ್ ಬಂದಿಲ್ಲ ಎಂದು ಸಮಾಧಾನ ಪಟ್ಟುಕೊಂಡೆವು. ಒಂದು ದಿನ ಬಡಾವಣೆಯಲ್ಲೂ ಕೆಲವರಿಗೆ ಕೋವಿಡ್ ಪಾಸಿಟಿವ್ ಕಾಣಿಸಿ ಸದ್ಯ ನಮ್ಮ ಬೀದಿಗೆ ಬಂದಿಲ್ಲ ಎಂದು ಸಮಾಧಾನ ಪಟ್ಟುಕೊಂಡೆವು. ಮಾರನೇ ದಿನ ನಮ್ಮ ಪಕ್ಕದ ಮನೆಯವರಿಗೆ ಕೋವಿಡ್ ಆವರಿಸಿಕೊಂಡಿತ್ತು. ಮುಂದಿನ ಮನೆ ಬಾಗಿಲು ನಮ್ಮದೇ “ತೂಳ್ಪ ಡಿಯಲು ಅಪ್ಪುದು ಕಾಣಾ” ಎನ್ನುವಂತೆ ಬಾಗಿಲು ಬಡಿಯುವ ಕೋವಿಡ್ ಗಾಗಿ ಕಾಯುವ ಆತಂಕದ ಗಳಿಗೆ ಸಮೀಪಿಸಿತು. ಜಗತ್ತಿನ ಸಂಪರ್ಕದ ಕೊಂಡಿಗಳೆಲ್ಲಾ ಕಳಚಿಬಿದ್ದಿದ್ದವು. ವಿಮಾನಗಳಿಲ್ಲ, ರೈಲುಗಳಿಲ್ಲ, ಸಾರಿಗೆ ವ್ಯವಸ್ಥೆ ಇಲ್ಲ. ಟ್ಯಾಕ್ಸಿ ರಿಕ್ಷಾಗಳೂ ಕಾಣದಾಗಿದೆ. ಈಗ ರಕ್ಷಣೆಯೇ ಸೆರಮನೆಯಾಗಿ ಪರಿಣಮಿಸಿತು. ಮನೆಯ ನಾಲ್ಕು ಗೋಡೆಗಳ ಮಧ್ಯೆ ಸಂಸಾರದ ಸೆರೆವಾಸ ಪ್ರಾರಂಭವಾಯಿತು. ಇದೆಲ್ಲವೇ ಹೌಸ್ ಅರೆಸ್ಟ್ ? ಸದ್ಯ ಹೇಗೋ ಮಕ್ಕಳು, ಮೊಮ್ಮಕ್ಕಳು ಬೇರೆ, ಬೇರೆ ದೇಶದ ಪ್ರದೇಶಗಳಿಗೆ ವಲಸೆ ಹೋಗಿದ್ದವರು, ಮನೆ ಸೇರಿಕೊಂಡಿದ್ದರು. ಆಶ್ಚರ್ಯ ಒಡೆಯುವ ಕೋವಿಡ್ ತನ್ನ ಅರಿವಿಲ್ಲದೆಯೇ ಜನಗಳನ್ನು ಕೂಡಿಸುವ ಕೆಲಸದಲ್ಲೂ ತೊಡಗಿತ್ತು. ಇದು ಬದುಕಿನ ವಿರೋಧಾಭಾಸ. ಯಾರೂ ಕೆಲಸಕ್ಕೆ ಹೋಗುತ್ತಿಲ್ಲ, ಮನೆಯಿಂದಲೇ ಕೆಲಸ ಎನ್ನುವುದು ಎಲ್ಲಾ ಕಡೆಯೂ ಜಾರಿಯಲ್ಲಿತ್ತು. ಪರಸ್ಪರ ಕೂಡುತ್ತ, ಆಟವಾಡುತ್ತ ಸುಳ್ಳು ಸುಳ್ಳೇ ನಗುತ್ತಾ ಸಾವಿನ ಭೀತಿಯನ್ನು ಗೆಲ್ಲುವ ವ್ಯರ್ಥ ಹೋರಾಟ ನಡೆಯಿತು.

ನನ್ನ ಅನುಭವವನ್ನೇ ಹೇಳುತ್ತೇನೆ, ಪರಸ್ಪರ ಹೆಚ್ಚು ಮಾತನಾಡದಿದ್ದ ಸ್ನೇಹಿತರು ಬಂಧುಗಳು, ಪ್ರತಿನಿತ್ಯ ದೂರವಾಣಿಯಲ್ಲಿ ಸಿಗತೊಡಗಿದರು. ಹೀಗೆ ಕಡಿದು ಹೋದ ಸಂಬಂಧಗಳು ಹತ್ತಿರ ಬಂದವು. ಒಬ್ಬ ಮನುಷ್ಯ ತನ್ನ ಏಕಾಂತವನ್ನು ನಿರ್ವಹಿಸಲೇ ಬೇಕಾಗುತ್ತದೆ ಕೋವಿಡ್ ಕೂಡಾ ಏಕಾಂತ ನಿರ್ವಹಣೆಯ ಒತ್ತಡವನ್ನು ತಂದಿತ್ತು. ಹಾಡುಗಾರರು ಹೆಚ್ಚು ಕಾಲ ಗಾಯನಾಭ್ಯಾಸಕ್ಕೆ ತೊಡಗಿದರು. ಲೇಖಕರು ಮುಚ್ಚಿಟ್ಟಿದ್ದ ಪುಸ್ತಕಗಳನ್ನು ತೆರೆದು ಬರವಣಿಗೆಗೆ ತೊಡಗಿದರು. ಕಳೆದ ವರ್ಷ ಅದೆಷ್ಟೋ ಉತ್ಕೃಷ್ಟವಾದ ಸಾಹಿತ್ಯ ಕೃತಿಗಳು ಹೊರಬಂದವು ಎಂಬುದನ್ನು ನೆನೆದರೆ ಆಶ್ಚರ್ಯವಾಗುತ್ತದೆ. ಕೋವಿಡ್ 19 ಹೇಗೆ ದ್ವೇಷಕ್ಕೆ ಪಾತ್ರವೊ ಹಾಗೆ ಮೆಚ್ಚುಗೆಗೂ ಪಾತ್ರವೇ? ಎಂತಹ ಗೊಂದಲವಿದು.

Advertisement

ಬಹಲ ಕಾಲ ಬದುಕುತ್ತೇವೆ ಎಂದುಕೊಂಡವರಿಗ ಅಥವಾ ಹಾಗೆ ಭ್ರಮಿಸಿದವರಿಗೆ ನಾವು ಯಾವ ಕ್ಷಣದಲ್ಲಿಯೂ ಕಥೆ ಮುಗಿಸಬಹುದು ಎಂದು ಅನ್ನಿಸಿತೊಡಗಿತು. ಸಾವಿನ ತೀವ್ರ ಪರಿಭಾವನೆಯಲ್ಲಿ ಭಾವದ ಅಭಿವ್ಯಕ್ತಿ ಉತ್ಕಟವಾಗತೊಡಗಿತ್ತು. ಬಹಳ ಕಾಲದಿಂದ ಮುಗಿಯದೆ ಉಳಿದಿದ್ದ. ಬುದ್ಧ-ಶರಣ ಕಾವ್ಯದ ರಚನೆಯಲ್ಲಿ ನಾನು ಮುಳುಗಿ ಹೋದೆ. ಬುದ್ಧ ಶರಣ ಈಗ ಬೇಡವಾಗಿದೆ. ಬದುಕಿನ ನಶ್ವರತೆಗೆ ಶಾಶ್ವತೆಯ ಪಾಠವನ್ನು ಕಲಿಸಿದೆ.

ಇಂತಹ ಭಯಾನಕ ಪರಿಸ್ಥಿತಿಯಲ್ಲೂ ಕೆಲವು ದೇಶಗಳು ಭಯೋತ್ಪಾದನೆಗೆ, ಕಾಲು ಕೆದರಿ ಯುದ್ಧಕ್ಕೆ ಕರೆ ಕೊಡುವುದು ಎಂತಹ ವಿಲಕ್ಷಣ ಸಂಗತಿ. ಬದುಕಿನ ನಶ್ವರತೆ ಮನುಷ್ಯನಿಗೆ ಬುದ್ದಿ ಕಲಿಸಲಿಲ್ಲವೇ? ಕೋವಿಡ್ ನೆಪದಲ್ಲಿ ಆದ ಭ್ರಷ್ಟಾಚಾರಗಳಿಗೆ ಕೊನೆ ಮೊದಲಿಲ್ಲ. ಸಾಯುವ ಗಳಿಗೆಯಲ್ಲೂ ಹಣ ಮಾಡುವ ಕೀಳೂ ಮನೋಧರ್ಮವೆ? ಮೃತ್ಯುವಿನೊಂದಿಗೆ ವ್ಯವಹಾರ ಕುದುರಿಸುವ ಪರಮಲೋಭವೇ, ಮನುಷ್ಯ, ಮನುಷ್ಯನಾಗದೆ ಇಂತಹ ಗಳಿಗೆಯಲ್ಲೂ ಕ್ರೂರಿಯಾದನೇ ಇದೆಲ್ಲ ವಿವರಿಸಲಾಗದ ಪ್ರಶ್ನೆ.

ದಿನನಿತ್ಯದ ಸಾಮಾನ್ಯ ಬದುಕನ್ನು ಅಸ್ತವ್ಯಸ್ತ ಮಾಡಿತ್ತು ಕೋವಿಡ್, ಹೊಟ್ಟೆ ಪಾಡಿಗಾಗಿ ಬೇರೆ, ಬೇರೆ ಸ್ಥಳಗಳಿಗೆ ವಲಸೆ ಹೋಗಿದ್ದ, ಕೂಲಿ ಕಾರ್ಮಿಕರು ಬಡ ಬಗ್ಗರು ಪಟ್ಟ ಪಾಡು ವರ್ಣಿಸಲು ಅಸದಳ. ನೂರಾರು ಮೈಲಿ ಉಪವಾಸ ನಡೆದು ಅವರು ತವರರಿಗೆ ಹೋಗಬೇಕಾದ ದುಸ್ಥಿತಿ ಯಾರೋ ದಯಾಳು ಅವರಿಗೆ ನೆರಳು ನೀರು ಒದಗಿಸಿದ್ದು ಉಂಟು, ಒಂದು ಕಡೆ ದುಷ್ಟತನ ಇನ್ನೊಂದು ಕಡೆ ಮನುಷ್ಯತ್ವ ಇವುಗಳ ನಡುವೆಯೇ ಒಂದು ಹೋರಾಟ ಪ್ರಾರಂಭವಾಯಿತು.

ಕೋವಿಡ್ ನೊಂದಿಗೆ ನೇರ ಸಂಪರ್ಕ ಮಾಡಬೇಕಾದ ಅನಿವಾರ್ಯವಾದ ವೈದ್ಯ ಇಲಾಖೆ, ಪೊಲೀಸ್ ಇಲಾಖೆ ಜೀವವನ್ನು ಪಣವಾಗಿಟ್ಟು ಸಾವಿನ ವಿರುದ್ಧ ಹೋರಾಟದಲ್ಲಿ ತೊಡಗಿತ್ತು. ಅವರಲ್ಲವೇ ನಿಜವಾದ ಯೋಧರು? ಹೀಗೆ ಮನುಷ್ಯ ಜಗತ್ತಿನ ವಿಭ್ರಾಂತಿಗಳನ್ನು ಒಮ್ಮೆಯೇ ನಮ್ಮ ಮನಸ್ಸಿಗೆ ತಂದ ಕೋವಿಡ 19 ಗೆ ನಾವು ನಮಸ್ಕಾರ ಹೇಳಬೇಕು. ಆದರೆ ಅದು ಕೊನೆ ನಮಸ್ಕಾರ. ಅಯ್ಯಾ ನೀನಿನ್ನು ಹೊರಡು ಮತ್ತೆ ಬರಬೇಡ ಎಂದು ಅತಿಥಿ ಧರ್ಮವನ್ನು ಮೀರಿ ನಾವು ಕೋವಿಡ್ ಅನ್ನು ಬೀಳ್ಕೊಡೋಣ. ಬರಲಿರುವ 2021 ಶುಭದ ಹೊಸಗೆಯನ್ನು ತರಲಿ. ನಿಷ್ಕಂಟಕರ ಸಾಮಾನ್ಯ ಜನಸಮುದಾಯ, ಶಾಂತವಾಗಿ ಸಮಾಧಾನದಿಂದ ಬದುಕುವಂತಾಗಲಿ. ಈ ಆಶಯವನ್ನು ವ್ಯಕ್ತಪಡಿಸುತ್ತಾ ಕಾಲಾಯಃ ತಸ್ಮೈ ನಮಃಎನ್ನುವುದೊಂದೇ ಈಗ ನಮಗೆ ಉಳಿದಿರುವ ವಿದಾಯದ ಮಾತು.

ಎಚ್.ಎಸ್.ವೆಂಕಟೇಶ ಮೂರ್ತಿ

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಹಿರಿಯ ಲೇಖಕ, ಕವಿ

Advertisement

Udayavani is now on Telegram. Click here to join our channel and stay updated with the latest news.

Next