Advertisement

Will: ಉಯಿಲು ಬರೆದಿಡದಿದ್ದರೆ ಕುಟುಂಬದ ಭವಿಷ್ಯಕ್ಕೆ ಹೇಗೆ ತೊಂದರೆಯಾಗುತ್ತದೆ?

05:14 PM Jan 02, 2024 | Team Udayavani |

ವಿಲ್ (ಉಯಿಲು) ಎನ್ನುವುದು ವ್ಯಕ್ತಿಯು ತನ್ನ ಮರಣದ ನಂತರ ತನಗೆ ಸೇರಿದ ಆಸ್ತಿ, ಸ್ವತ್ತುಗಳನ್ನು ಹಂಚುವ ಕಾನೂನುಬದ್ಧ ದಾಖಲೆಯಾಗಿದ್ದು, ಅವರ ಇಚ್ಛೆಗೆ ವಿರುದ್ಧವಾಗಿರುವುದನ್ನು ಕಾನೂನು ಬದ್ಧವಾಗಿಯೇ ತಡೆಯುತ್ತದೆ. ವಿಲ್ ಅನ್ನು ಆಲೋಚಿಸಿ ಕಾರ್ಯಗತಗೊಳಿಸಿದಾಗ, ಮೃತ ವ್ಯಕ್ತಿಯ ಸಮಾಧಿಯೊಳಗಿನ ಧ್ವನಿಯಂತೆ ಕೆಲಸ ಮಾಡಲಿದ್ದು, ಮೃತ ವ್ಯಕ್ತಿಯ ಪ್ರೀತಿ ಪಾತ್ರರಿಗೆ ಸುರಕ್ಷತಾ ಭರವಸೆ ನೀಡುತ್ತದೆ ಮತ್ತು ಅವರ ಕುಟುಂಬದ ಪರಂಪರೆಯನ್ನು ಸಂರಕ್ಷಿಸುತ್ತದೆ. ಆದರೆ ನಮ್ಮಲ್ಲಿ ಬಹಳಷ್ಟು ಜನ ಇದರ ತಿಳಿವಳಿಕೆ ಕೊರತೆಯಿಂದಲೋ, ಬದುಕಿನ ಭರವಸೆಯಿಂದಲೋ ವಿಲ್‌ ಅನ್ನು ಕಡೆಗಣಿಸುತ್ತಾರೆ.

Advertisement

ಅಂತಹದ್ದೇ ಒಂದು ಪ್ರಕರಣದ ಉದಾಹರಣೆಯನ್ನು ಇಲ್ಲಿ ನೋಡೋಣ. ಮನೆಯಲ್ಲಿ ಗೃಹಿಣಿಯಾಗಿ ಮತ್ತು ಎರಡು ಅಪ್ರಾಪ್ತ ವಯಸ್ಸಿನ ಮಕ್ಕಳ ತಾಯಿಯಾಗಿದ್ದ ಮೈಸೂರಿನ ಪ್ರಿಯಾ ತನ್ನ ಕುಟುಂಬದ ಯೋಗಕ್ಷೇಮದ ಬಗ್ಗೆ ಯಾವಾಗಲೂ ಕಾಳಜಿ ಹೊಂದಿದ್ದರು. ಆದಾಗ್ಯೂ ಅವರು ನಮ್ಮಲ್ಲಿನ ಹಲವರಂತೆ ವಿಲ್ ಅನ್ನು ನಿರ್ಲಕ್ಷಿಸಿದ್ದರು. ಬದುಕಲು ಸಾಕಷ್ಟು ಆಯುಷ್ಯವಿತ್ತು. ಆದರೆ ವಿಧಿ ಯಾರ ಬದುಕಿನಲ್ಲಿ ಹೇಗೆ ಆಟ ಆಡುತ್ತದೆ ಎನ್ನಲು ಸಾಧ್ಯವಿಲ್ಲ. ದುರಂತವೆಂದರೆ, ಕಾರು ಅಪಘಾತದಲ್ಲಿ ಪ್ರಿಯಾ ತೀರಿಕೊಳ್ಳುತ್ತಾರೆ. ಮಕ್ಕಳಿಗೆ ತಾಯಿಯನ್ನು ಕಳೆದುಕೊಂಡ ದುಃಖ ಒಂದು ಕಡೆಯಾದರೆ, ಸ್ವತ್ತಿನ ಸಂಕಷ್ಟ ಇನ್ನೊಂದು ಕಡೆ.

ವಿಲ್ ಇಲ್ಲದಿದ್ದರೆ ಏನಾಗುತ್ತದೆ?

ವ್ಯಕ್ತಿಯೊಬ್ಬರು ವಿಲ್ ಬರೆದಿಡದೆ ಮರಣ ಹೊಂದಿದರೆ, ಅದನ್ನು ಕಾನೂನುಬದ್ಧವಾಗಿ “ಇಂಟೆಸ್ಟೇಟ್” ಎಂದು ಪರಿಗಣಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ಮರಣ ಹೊಂದಿದ ವ್ಯಕ್ತಿಯ ಸ್ವತ್ತುಗಳು ಮತ್ತು ಎಸ್ಟೇಟ್‌ಗಳು ಆ ವ್ಯಕ್ತಿಯು ವಾಸಿಸುವ ಅಥವಾ ಸ್ವತ್ತುಗಳನ್ನು ಹೊಂದಿರುವ ರಾಜ್ಯ ಅಥವಾ ದೇಶದ ಸ್ಥಳೀಯ ಕಾನೂನುಗಳಿಗೆ ಒಳಪಟ್ಟಿರುತ್ತದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ವ್ಯಕ್ತಿಯ ವೈಯಕ್ತಿಕ ಇಚ್ಛೆಗೆ ವಿರುದ್ಧವಾಗಿ ಸ್ವತ್ತುಗಳ ಹಂಚಿಕೆಯಾಗಬಹುದು.

ಪ್ರಿಯಾ ಮರಣದ ನಂತರ ವಿಲ್ ಇಲ್ಲದೆ, ಅವರ ಪತಿ ಸುಕೇಶ್ ಹಲವಾರು ಸವಾಲುಗಳನ್ನು ಎದುರಿಸಿದರು. ಮೊತ್ತ ಮೊದಲನೆಯದಾಗಿ, ಪ್ರಿಯಾ ಸ್ವಂತವಾಗಿ ಗಳಿಸಿದ್ದ ಮನೆ ಮತ್ತು ಹೂಡಿಕೆ ಸೇರಿದಂತೆ ಪ್ರಿಯಾ ಅವರ ಎಲ್ಲ ಆಸ್ತಿಯನ್ನು ಹೇಗೆ ವಿತರಿಸಬೇಕು ಎಂಬುದರ ಕುರಿತು ಸ್ಪಷ್ಟ ಮಾರ್ಗದರ್ಶನ ಇರಲಿಲ್ಲ. ಹೀಗಾಗಿ ಅವರ ಕುಟುಂಬಕ್ಕೆ ಅವರ ಇಚ್ಛೆ ಏನೆಂಬುದು ಖಚಿತವಾಗದೆ ಆಸ್ತಿ ಹಂಚಿಕೆ ವಿಚಾರದಲ್ಲಿ ಕತ್ತಲೆಯಲ್ಲಿ ಉಳಿಯುವಂತಾಯಿತು. ಈ ಸ್ಪಷ್ಟತೆಯ ಕೊರತೆಯು ಪ್ರಿಯಾ ಪ್ರೀತಿಪಾತ್ರರರ ನಡುವೆ ಗೊಂದಲ ಮತ್ತು ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿ ಕೌಟಂಬಿಕ ಸಂಬಂಧದಲ್ಲಿ ಬಿರುಕಿಗೆ ಕಾರಣವಾಯಿತು. ವಿಶೇಷವಾಗಿ ಆಕೆಯ ಪಾಲಕರು ಮತ್ತು ಗಂಡನ ಮನೆಯವರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಯಿತು. ಆಕೆಯನ್ನು ಬೆಳೆಸಿದವರು, ವಿದ್ಯಾಭ್ಯಾಸ ಕೊಡಿಸಿದವರು ಮತ್ತು ಅವಳ ಜೀವನದುದ್ದಕ್ಕೂ ಅವಳ ಪರವಾಗಿ ನಿಂತವರು ಆಕೆಯ ಪೋಷಕರು. ಹೀಗಾಗಿ ಅವರು ಆಕೆ ಸ್ವಂತವಾಗಿ ಸಂಪಾದಿಸಿದ್ದ ಅವಳ ಆಸ್ತಿಯ ಮಾಲಿಕತ್ವದಲ್ಲಿ ಪಾಲು ಬಯಸಿದ್ದರು. ಆದಾಗ್ಯೂ, ಆಕೆಯ ಅತ್ತೆ ಮನೆಯವರು ಈಗ ಆಕೆ ತಮ್ಮ ಕುಟುಂಬದ ಭಾಗವಾಗಿರುವುದರಿಂದ, ತಾವೇ ಆಕೆಯ ಆಸ್ತಿಯ ನಿಜವಾದ ಮಾಲೀಕರು ಎಂದು ವಾದಿಸಿದರು. ಇದು ಪ್ರಿಯಾಳ ಪೋಷಕರು ನ್ಯಾಯಾಲಯದ ಮೊಕದ್ದಮೆ ಹೂಡಲು ಕಾರಣವಾಯಿತು, ಅವರು ದುರದೃಷ್ಟವಶಾತ್ ಪ್ರಕರಣದಲ್ಲಿ ಸೋತರು.

Advertisement

ಪ್ರಿಯಾ ಮದುವೆಯಾದ ಕಾರಣ, ಹಿಂದೂ ಉತ್ತರಾಧಿಕಾರ ಕಾಯಿದೆ 1956 ರ ಪ್ರಕಾರ, ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳು ಈಗ ಆಕೆಯ ಪತಿ, ಮಕ್ಕಳು ಮತ್ತು ಆಕೆಯ ಅತ್ತೆಯಾಗಿದ್ದು, ಆಕೆಯ ಪೋಷಕರಿಗೆ ಏನೂ ಸಿಗಲಿಲ್ಲ.

ವಿಲ್ ಹೊಂದುವ ಪ್ರಯೋಜನಗಳೇನು?

ವ್ಯಕ್ತಿಯೊಬ್ಬರು ತಾವು ಜೀವಂತವಾಗಿರುವಾಗಲೇ ವಿಲ್ ಮಾಡಿಸಿಡುವುದರಿಂದ ಹಲವಾರು ಪ್ರಯೋಜನಗಳಿವೆ. ಕುಟುಂಬದ ಚರಾಸ್ತಿಯಿಂದ ಹಿಡಿದು ಹಣಕಾಸಿನ ಸ್ವತ್ತುಗಳವರೆಗೆ ಯಾರು ಏನನ್ನು ಪಡೆಯುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲು ಇದು ಸಹಕಾರಿ. ಅವರ ಆಸ್ತಿಗಳು ಇಚ್ಛೆಯಂತೆ ಹಂಚಿಕೆಗೊಳ್ಳುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಇದು ಕಾನೂನು ತೊಡಕುಗಳನ್ನು ಕಡಿಮೆ ಮಾಡುತ್ತದೆ ಮತ್ತು ಪರೀಕ್ಷಾ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ, ಕುಟುಂಬಗಳನ್ನು ಆಸ್ತಿ ಸಂಬಂಧಿತ ಕಾನೂನು ಜಗಳಗಳಿಂದ ದೂರ ಉಳಿಸುತ್ತದೆ. ಹೆಚ್ಚಿನ ಕಾನೂನು ಶುಲ್ಕವನ್ನು ಪಾವತಿಸುವ ಮತ್ತು ನ್ಯಾಯಾಲಯಗಳಿಗೆ ಅಲೆದಾಡುವ ಸಮಯವನ್ನು ಉಳಿಸುತ್ತದೆ.

ಪ್ರಿಯಾ ಅವರ ಕುಟುಂಬದ ಪ್ರಕರಣವನ್ನೇ ತೆಗೆದುಕೊಂಡರೆ ಆಸ್ತಿ ಪರೀಕ್ಷಾ ಪ್ರಕ್ರಿಯೆಯು ಸುದೀರ್ಘ ಮತ್ತು ಅತ್ಯಂತ ದುಬಾರಿಯಾಯಿತು. ಕಾನೂನು ಶುಲ್ಕಕ್ಕಾಗಿಯೇ ಅವರ ಎಸ್ಟೇಟ್‌ನ ಅಲ್ಪ ಭಾಗವನ್ನು ಕಳೆದುಕೊಳ್ಳುವಂತಾಯ್ತು. ಸುಕೇಶ್ ತನ್ನ ಹೆಂಡತಿಯನ್ನು ಕಳೆದುಕೊಂಡ ದುಃಖ ಎದುರಿಸುವ ಜೊತೆಗೆ ತಮ್ಮ ಕುಟುಂಬದ ಆರ್ಥಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದರು ಮತ್ತು ಪ್ರಿಯಾ ಪೋಷಕರು ಸಂಕಷ್ಟದ ಸ್ಥಿತಿ ತಲುಪಿದ್ದರು. ಇದಲ್ಲದೆ, ಈ ದುರಂತವು ಸುಕೇಶ್ ಅವರ ಅಪ್ರಾಪ್ತ ಮಕ್ಕಳ ಬಗ್ಗೆ ಯೋಚಿಸುವಂತೆ ಮಾಡಿತು. ಅವರನ್ನು ಈಗ ಯಾರು ನೋಡಿಕೊಳ್ಳುತ್ತಾರೆ ಎಂಬ ಪ್ರಶ್ನೆ ಉದ್ಬವವಾಯಿತು.

ವಿಲ್ ಬರೆದಿಡುವುದನ್ನು ಯಾಕೆ ಕಡೆಗಣಿಸಬಾರದೆಂದರೆ, ಅಪ್ರಾಪ್ತ ಮಕ್ಕಳ ಯೋಗಕ್ಷೇಮ ಮತ್ತು ಭವಿಷ್ಯದಲ್ಲಿ ಅದರ ಪಾತ್ರವಿದೆ. ಪೋಷಕರಿಬ್ಬರೂ ವಿಲ್ ಇಲ್ಲದೆ ಮರಣ ಹೊಂದಿದರೆ, ಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದನ್ನು ನ್ಯಾಯಾಲಯವು ನಿರ್ಧರಿಸಬೇಕಾಗಬಹುದು. ಈ ನಿರ್ಧಾರವು ಭಾವನಾತ್ಮಕವಾಗಿ ನಷ್ಟ ಉಂಟುಮಾಡಬಹುದು ಮತ್ತು ಪೋಷಕರ ಇಚ್ಛೆಗೆ ಹೊಂದಿಕೆಯಾಗದಿರಬಹುದು. ವಿಲ್‌ ನಲ್ಲಿ ಪಾಲಕತ್ವದ ನಿಬಂಧನೆಗಳನ್ನು ಸೇರಿಸುವ ಮೂಲಕ, ಪೋಷಕರು ತಮ್ಮ ಮಕ್ಕಳನ್ನು ಕಾಳಜಿ ವಹಿಸಲು ವಿಶ್ವಾಸಾರ್ಹ ವ್ಯಕ್ತಿಯನ್ನು ಆಯ್ಕೆ ಮಾಡಬಹುದು, ಅವರು ಆಯ್ಕೆ ಮಾಡಿದ ಮತ್ತು ನಂಬುವ ವ್ಯಕ್ತಿಯಿಂದ ತಮ್ಮ ಮಕ್ಕಳನ್ನು ಬೆಳೆಯುತ್ತಾರೆ ಎಂಬ ನೆಮ್ಮದಿಯನ್ನು ಪಡೆಯಬಹುದು.

ವಿಲ್‌ ಕಡೆಗಣಿಸುವ ಹಲವರಲ್ಲಿ ಒಬ್ಬರಾದ ಪ್ರಿಯಾ ಅವರ ಕಥೆಯು ವಿಲ್ ಅನ್ನು ರಚಿಸುವುದು ಕೇವಲ ನೈತಿಕ ಕರ್ತವ್ಯವಲ್ಲ ಆದರೆ ಭವಿಷ್ಯದ ಕ್ರಿಯೆಯಾಗಿದೆ ಎಂಬುದಕ್ಕೆ ಉತ್ತಮ ಉದಾರಹಣೆಯಾಗಿದೆ.  ಜೀವನದಲ್ಲಿ ಊಹಿಸಲಾಗದ್ದು ಮತ್ತು ನಮ್ಮ ಕೈಯ್ಯಲ್ಲಿ ಇಲ್ಲದೆ ಇರುವುದು ಸಾವು. ಹೀಗಾಗಿ ನಾವು ಬದುಕಿರುವಾಗಲೇ ನಮ್ಮನ್ನು ನಂಬಿಕೊಂಡಿರುವವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಆ ನಿಟ್ಟಿನಲ್ಲಿ ವಿಲ್‌ ನಿರ್ಲಕ್ಷಿಸುವ ಸಂಗತಿಯಲ್ಲ.

ವಿಷ್ಣು ಚುಂಡಿ, ಸ್ಥಾಪಕ ಮತ್ತು ಸಿಇಒ, ಆಸಾನ್ ವಿಲ್

Advertisement

Udayavani is now on Telegram. Click here to join our channel and stay updated with the latest news.

Next