Advertisement

ಭಗವಂತನನ್ನು ಸಂಪ್ರೀತಗೊಳಿಸುವುದು ಹೇಗೆ?

09:15 AM Jun 02, 2019 | Vishnu Das |

ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ ಅರ್ಪಿಸುವ ಹವಿಸ್ಸು ದೇವರ ಪಾದವನ್ನು ಸೇರಲು ನಮ್ಮೊಳಗೆ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆಯನ್ನು ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ವ್ರತ ಮೊದಲಾದ ಪೂಜಾವಿಧಾನಗಳಿಗೆ ಮೂಲ. ಜ್ಞಾನವಿಲ್ಲದವನು ಕತ್ತಲನ್ನು ಓಡಿಸಲಾರ; ಬೆಳಕನ್ನು ಅನುಭವಿಸಲಾರ.

Advertisement

ದಾಸನಾಗು, ವಿಶೇಷನಾಗು ಎಂಬುದು ದಾಸರ ಪದ್ಯದ ಒಂದು ಸಾಲು. ದೇವರು ಕಷ್ಟಕ್ಕೆ ಬೇಕೋ ಸುಖಕ್ಕೇ ಬೇಕೋ? ಎಂದು ಕೇಳಿಕೊಂಡರೆ ನಾವು ಬಯಸುವುದು ಸಂಕಟ ಬಂದಾಗ ವೆಂಕಟರಮಣ. ಆದರೆ, ಆತ ಎಲ್ಲಾ ಕಾಲದಲ್ಲಿಯೂ ಎಲ್ಲೆಲ್ಲಿಯೂ ಇದ್ದಾನಾದ್ದರಿಂದ ಕಷ್ಟಕ್ಕೂ, ಸುಖಕ್ಕೂ ಎರಡಕ್ಕೂ ಆತ ಬೇಕು. ಸರ್ವಾಂತರ್ಯಾಮಿಯಾದ ದೇವನ ಮೇಲೆ ಎಲ್ಲರಿಗೂ ವಿಶ್ವಾಸ. ಬಂದುದೆಲ್ಲಾ ಬರಲಿ, ಶ್ರೀಹರಿಯ ದಯೆಯೊಂದಿರಲಿ ಎಂಬ ಮಾತಿನಂತೆ ಕಾಯುವವನ ಅಭಯ ಹಸ್ತ ಸದಾ ನಮ್ಮ ಮೇಲಿರಲಿ ಎಂಬುದು ಎಲ್ಲರ ಆಶಯ, ಇದ್ದೇ ಇದೆ ಎಂಬುದು ನಂಬಿಕೆ. ಅದೇ ಗೆಲುವು. ದೇವರು ಎಂದರೆ ಮನುಷ್ಯನ ಸಂತೃಪ್ತಸ್ಥಿತಿಯ ಅದೃಶ್ಯರೂಪ. ಏನೇ ಅಂದರೂ ಮನುಷ್ಯನೊಳಗೆ ಸರ್ವಾಂತರ್ಯಾಮಿ ಆದ ದೇವರು ಇದ್ದಾನೆಯೇ ಹೊರತು, ಮನುಷ್ಯ ದೇವರಾಗಲಾರ. ದೇವರ ಒಲವಿಗಾಗಿ ಪರಿಪರಿಯಾಗಿ ಪೂಜಿಸುವ ನಾವು ಬಯಸುವುದು ಆತನ ಅನುಗ್ರಹ ಮತ್ತು ಅದರಿಂದ ದೊರೆಯುವ ಸಂತೃಪ್ತ ಜೀವನವನ್ನು ಮಾತ್ರ.

ದೇವರು ಸಂಪ್ರೀತನಾದರೆ ನಮಗೆ ಸಿದ್ಧಿ ದೊರೆಯುವುದು ಎಂಬುದು ನಮ್ಮ ಬಲವಾದ ನಂಬಿಕೆ. ಈ ನಂಬಿಕೆ ನಮ್ಮ ಬದುಕಿನ ಶಕ್ತಿ ಕೂಡ. ದೇವರನ್ನು ಪೂಜಿಸಲು ಹಲವು ಬಗೆಗಳಿವೆ. ಆತನನ್ನು ಒಲಿಸಿಕೊಳ್ಳಲು ಕೆಲವು ಮಾರ್ಗಗಳಿವೆ. ಆದರೆ, ಯಾವುದರಿಂದ ದೇವರು ಸಂಪ್ರೀತನಾಗುತ್ತಾನೆ ಅಥವಾ ಒಲಿಯುತ್ತಾನೆ ಎಂಬುದು ಸದಾ ಕಾಡುವ ಪ್ರಶ್ನೆಯೇ. ಭಾಗವತದಲ್ಲಿ ಒಂದು ಮಾತಿದೆ.

ನ ದಾನಂ ನ ತಪೋ ನೇಜ್ಯಾ ನ ಶೌಚಂ ವೃತಾನಿ ಚ|
ಪ್ರಿಯತೇಮಲಯಾ ಭಕ್ತಯ ಹರಿರನ್ಯದ್‌ ವಿಡಂಬನಮ… ||

ಇದರ ಅರ್ಥ-ಪರಮಾತ್ಮನನ್ನು ದಾನವಾಗಲೀ, ತಪಸ್ಸಾಗಲೀ, ಯಜ್ಞವಾಗಲೀ. ಶುಚಿತ್ವವಾಗಲೀ, ವ್ರತಗಳಾಗಲೀ ಸಂತೋಷಗೊಳಿಸುವುದಿಲ್ಲ. ನಿರ್ಮಲವಾದ ಭಕ್ತಿಯಿಂದಲೇ ಅವನು ಸಂತುಷ್ಟನಾಗುತ್ತಾನೆ. ಬೇರೆ ಎಲ್ಲವೂ ಹಾಸ್ಯಾಸ್ಪದ ಎಂದು.

Advertisement

ಅಂದರೆ, ಭಕ್ತಿಯೇ ದೇವರು ಮತ್ತು ಭಕ್ತಿಯಿಂದಲೇ ದೇವರು. ವ್ಯಕ್ತಿಯಲ್ಲಿ ಭಕ್ತಿಯೇ ಇಲ್ಲವಾದರೆ, ಪೂಜೆ, ಯಜ್ಞ, ತಪಸ್ಸು, ವ್ರತ ಎಲ್ಲವನ್ನೂ ಮಾಡಿದರೂ ನಿಷ್ಪ್ರಯೋಜಕ ಎಂಬುದು ಇದರ ಮತಿತಾರ್ಥ. ಆಡಂಬರವಿಲ್ಲದ, ಶುದ್ದವಾದ ಭಕ್ತಿ ನಮ್ಮೊಳಗೆ ಹುಟ್ಟಬೇಕು. ಯಜ್ಞಮಾಡಿಯೇ ದೇವರನ್ನು ಸಂಪ್ರೀತಿಗೊಳಿಸುತ್ತೇನೆ ಎಂಬುದು ನಮ್ಮೊಳಗಿನ ಅಹಂ ಅಷ್ಟೆ. ಯಜ್ಞದಲ್ಲಿ ಅರ್ಪಿಸುವ ಹವಿಸ್ಸು ದೇವರ ಪಾದವನ್ನು ಸೇರಲು ನಮ್ಮೊಳಗೆ ಆಳವಾದ ಭಕ್ತಿ ಇರಲೇಬೇಕು. ಏಕಾಗ್ರತೆಯನ್ನು ಹೊಂದಿದ ಭಕ್ತಿಯೇ ಯಜ್ಞ, ತಪಸ್ಸು, ವ್ರತ ಮೊದಲಾದ ಪೂಜಾವಿಧಾನಗಳಿಗೆ ಮೂಲ. ಜ್ಞಾನವಿಲ್ಲದವನು ಕತ್ತಲನ್ನು ಓಡಿಸಲಾರ; ಬೆಳಕನ್ನು ಅನುಭವಿಸಲಾರ. ಹಾಗೆಯೇ, ಭಕ್ತಿಯೇ ಇಲ್ಲದವನು ಸಂಪತ್ತನ್ನು ದೇವರ ಪಾದಕ್ಕೆ ಸುರಿದರೂ ದೇವರು ಮೆಚ್ಚಲಾರ. ಸಂಪತ್ತಿಗೆ ಸೋಲುವ ಸ್ವಭಾವ ಮನುಷ್ಯನದ್ದು; ದೇವರದ್ದಲ್ಲ. ಆತ ಆನಂದಗೊಳ್ಳುವುದು ನಿಜಭಕ್ತಿಗೆ. ನಿರ್ಮಲವಾದ ಭಕ್ತಿಗೆ ಮನಸ್ಸು ಪರಿಶುದ್ಧವಾಗಬೇಕು, ಇಂದ್ರಿಯ ಲಾಲಸೆಗಳನ್ನು ನಿಗ್ರಹಿಸುವ, ಏಕಾಗ್ರತೆಯನ್ನು ಸಾಧಿಸುವ ಛಲ ಇರಬೇಕು. ಭಕ್ತಿ ಎಂಬುದು ನಿಷ್ಕಲ್ಮಶವಾದ ಪ್ರೀತಿ ಮತ್ತು ದೃಢವಾದ ನಂಬಿಕೆ. ಈ ಭಕ್ತಿ ದೇವರ ಅರಿವು; ನಿಜ ಬದುಕಿನ ಅರಿವು ಕೂಡ.

ವಿಷ್ಣು ಭಟ್‌ ಹೊಸ್ಮನೆ

Advertisement

Udayavani is now on Telegram. Click here to join our channel and stay updated with the latest news.

Next