Advertisement

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿಗೆ ಯಶಸ್ಸು ಸಿಕ್ಕಿದ್ದು ಹೇಗೆ?

12:18 AM Mar 21, 2022 | Team Udayavani |

ಕೇವಲ 8 ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಆಮ್‌ ಆದ್ಮಿ ಪಾರ್ಟಿ (ಆಪ್‌) ದೆಹಲಿಯಲ್ಲಿ ಎರಡು ಬಾರಿ ಅಧಿಕಾರಕ್ಕೆ ಬರುವುದರ ಜೊತೆಗೆ, ನೆರೆಯ ರಾಜ್ಯವಾದ ಪಂಜಾಬ್‌ನಲ್ಲೂ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ.

Advertisement

ಮೋದಿಯವರಿಗೆ ಪ್ರಧಾನಿ ಪಟ್ಟಕ್ಕೇರಲು ಹೇಗೆ ಗುಜರಾತ್‌ ಮಾಡೆಲ್‌ ಎಂಬುದು ಆಸರೆಯಾಯಿತೋ ಅದೇ ರೀತಿ ಕೇಜ್ರಿವಾಲ್‌ಗೆ ಪಂಜಾಬ್‌ ಗದ್ದುಗೆಯನ್ನು ವಶಪಡಿಸಿಕೊಳ್ಳಲು ದೆಹಲಿ ಮಾಡೆಲ್‌ ಆಸರೆಯಾಗಿದೆ. ಜೊತೆಗೆ, ಕಾಂಗ್ರೆಸ್‌ನ ಒಳಜಗಳ, ಶಿರೋಮಣಿ ಅಕಾಲಿದಳದ ಹಿಂದಿನ ವೈಫ‌ಲ್ಯಗಳೂ ಪಂಜಾಬ್‌ ಜನತೆಯ ಗಮನ ಆಪ್‌ನತ್ತ ಹೊರಳಲು ಸಹಕಾರಿಯಾಗಿದೆ.

ಅದು 2019. ಪಂಜಾಬ್‌ನ ಚುನಾವಣೆಗೆ ಎಲ್ಲಾ ಪಕ್ಷಗಳು ರಂಗತಾಲೀಮು ಆರಂಭಿಸಿದ್ದ ಕಾಲವದು. ಅದೇ ಸಮಯದಲ್ಲಿ ಘಟಾನುಘಟಿ ಪಕ್ಷಗಳ ಜೊತೆಗೆ ಪೈಪೋಟಿ ನಡೆಸಲು ಬಂದ ಆಮ್‌ ಆದ್ಮಿ ಪಾರ್ಟಿ ಕೂಡ ತಾಲೀಮು ಆರಂಭಿಸಿತು.

“ಆಮ್‌ ಆದ್ಮಿ ಪಾರ್ಟಿ’ಯ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್‌ನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಪಂಜಾಬ್‌ ಜನತೆಗೆ ಕೊಡಬಹುದಾದ ಸೌಕರ್ಯಗಳನ್ನು ಪ್ರಕಟಿಸಲಾರಂಭಿಸಿದರು. ಹೊಸ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ರೂಪಿಸಿದ ಕಾರ್ಯತಂತ್ರವೇ ಮಿಷನ್‌ ಪಂಜಾಬ್‌.

ಮಿಷನ್‌ ಪಂಜಾಬ್‌ನಡಿ, ಕೆಲವು ಜನಪ್ರಿಯ ಸೌಲಭ್ಯಗಳನ್ನು ಪ್ರಕಟಿಸುವ ಮೂಲಕ ಜನರ ಮನಸ್ಸನ್ನು ಸೆಳೆಯಲು ಮುಂದಾದರು. ಆ ನಿಟ್ಟಿನಲ್ಲಿ ಪಂಜಾಬ್‌ ಜನತೆಗೆ ನೀಡಿದ ಮೂರು ಪ್ರಮುಖ ವಾಗ್ಧಾನಗಳು ಆ ರಾಜ್ಯದ ಜನರನ್ನು ಆ ಪಕ್ಷದ ಕಡೆಗೆ ಸೆಳೆಯುವಲ್ಲಿ ಸಫ‌ಲವಾದವು.

Advertisement

ಇವುಗಳಲ್ಲಿ ಮೊದಲನೆಯ ವಾಗ್ಧಾನ.. ಜನತೆಗೆ ಉತ್ತಮ ಆರೋಗ್ಯ ಸೇವೆಗಳು ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದು. ಇದು ದೆಹಲಿ ಮಾದರಿಯ ಅಭಿವೃದ್ಧಿಯಲ್ಲಿ ಸಾಬೀತಾಗಿರುವ ಸಂಗತಿಗಳು. ದೆಹಲಿಯಲ್ಲಿ ಕೇಜ್ರಿವಾಲ್‌ ಸರ್ಕಾರ ಸ್ಥಾಪಿಸಿರುವ ಮೊಹಲ್ಲಾ ಕ್ಲಿನಿಕ್‌ ಹಾಗೂ ಸರ್ಕಾರಿ ಶಾಲೆಗಳ ಉನ್ನತೀಕರಣಗಳು ಇಡೀ ದೇಶದಲ್ಲಿ ಈಗಾಗಲೇ ಸದ್ದು ಮಾಡಿವೆ. ಇದು, ಜನರನ್ನು ಸಹಜವಾಗಿಯೇ ಆಕರ್ಷಿಸಿತು.

ಅವರು ಘೋಷಿಸಿದ ಎರಡನೇ ಸೌಲಭ್ಯವೆಂದರೆ, ಪಂಜಾಬ್‌ನ ಜನಸಂಖ್ಯೆಯ ಶೇ. 70ರಷ್ಟಿರುವ ರೈತರಿಗೆ ಉಚಿತ ವಿದ್ಯುತ್‌ ನೀಡುವ ಭರವಸೆ. ನೆನಪಿಡಿ, ಪಂಜಾಬ್‌ನಲ್ಲಿ ಹೀಗೆ ಉಚಿತ ವಿದ್ಯುತ್‌ ನೀಡುವುದು ಸುಲಭದ ಮಾತಲ್ಲ. ಮೊದಲೇ ಅಲ್ಲಿನ ರಾಜ್ಯ ಬೊಕ್ಕಸ ನಷ್ಟದಲ್ಲಿದೆ. ಇನ್ನು, ಪಂಜಾಬ್‌ ವಿದ್ಯುತ್‌ ಸರಬರಾಜು ಕಂಪನಿ ಸತತವಾಗಿ ನಷ್ಟ ದಾಖಲಿಸುತ್ತಿವೆ. 2021-22ರ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲೇ 20.730 ಕೋಟಿ ರೂ. ನಷ್ಟ ದಾಖಲಿಸಿವೆ. ಅದರ ಬೆನ್ನಲ್ಲೇ 2021ರ ಜೂ. 23ರಂದು ಆಡಳಿತಾರೂಢ ಕಾಂಗ್ರೆಸ್‌ ಪಕ್ಷವು, ರೈತರಿಗೆ ಪ್ರತಿ ತಿಂಗಳು 200 ಯೂನಿಟ್‌ ವಿದ್ಯುತ್ತನ್ನು ಉಚಿತವಾಗಿ ನೀಡುವುದಾಗಿ ಪ್ರಕಟಿಸಿತ್ತು. ಆಗಲೇ, ರಾಜ್ಯದ ಆರ್ಥಿಕ ತಜ್ಞರು ಹುಬ್ಬೇರಿಸಿದ್ದರು. ಅಲ್ಲಿಗೆ, ಜನರ ಒಲವು ಗಳಿಸಲು ಎಲ್ಲಾ ಪಕ್ಷಗಳೂ ವಿದ್ಯುತ್ತಿನ ಕಂಬಕ್ಕೆ ಪ್ರದಕ್ಷಿಣೆ ಹಾಕಲಾರಂಭಿಸಿದ್ದವು. ಹೀಗೆ, ವಿದ್ಯುತ್‌ ಎಂಬುದು ಮತಯಾಚನೆಯ ಪ್ರಮುಖ ಆಮಿಷವಾಗಿ ಪರಿಗಣಿಸಿದ ಕಾಲದಲ್ಲೇ ಕೇಜ್ರಿವಾಲ್‌, ಪ್ರತಿ ರೈತರ ಮನೆಗೆ 300 ಯೂನಿಟ್‌ ವಿದ್ಯುತ್‌ ನೀಡುವುದಾಗಿ ಪ್ರಕಟಿಸಿದರು.

ಇನ್ನು, ಕೇಜ್ರಿವಾಲ್‌ ಬಿಟ್ಟ ಮೂರನೇ ಅಸ್ತ್ರವೇನೆಂದರೆ ಅದು ಪಂಜಾಬ್‌ನಲ್ಲಿರುವ 18 ವರ್ಷ ಮೇಲ್ಪಟ್ಟ ಪಂಜಾಬಿ ಮಹಿಳೆಯರಿಗೆ ಮಾಸಿಕವಾಗಿ 1,000 ರೂ. ಸಹಾಯಧನ ನೀಡುವ ಯೋಜನೆ. ಪಂಜಾಬಿ ಮಹಿಳೆಯರಿಗೆ ಆತ್ಮಗೌರವದಿಂದ ಜೀವಿಸಲು ಈ ಮಾಸಿಕ ಸಹಾಯಧನ ಕೊಂಚವಾದರೂ ನೆರವಾಗಲಿದೆ ಎಂದರು ಕೇಜ್ರಿವಾಲ್‌. ಅದು ಚುನಾವಣೆಯಲ್ಲಿ ಕೆಲಸ ಮಾಡಿತು. ಏಕೆಂದರೆ, ಕೇಜ್ರಿವಾಲ್‌ರವರ ಈ ಯೋಜನೆ ಮುಖ್ಯವಾಗಿ ನೆರವಾಗಲಿದ್ದಿದ್ದು ಪಂಜಾಬ್‌ನ ಗ್ರಾಮೀಣ ಭಾಗದಲ್ಲಿರುವ ಬಡ ಹೆಣ್ಣುಮಕ್ಕಳಿಗೆ. ಇದರ ಬೆನ್ನಲ್ಲೇ ಇಂಡಿಯಾ ಟುಡೇ ನಡೆಸಿದ ಸರ್ವೇಯಲ್ಲಿ ಇದು ಸಾಬೀತಾಗಿತ್ತು. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಕರ್ತಾರ್‌ಪುರದ ಸರಾಯ್‌ ಖಾಸ್‌ ಹಳ್ಳಿ ಹಾಗೂ ಇನ್ನಿತರ ಹಳ್ಳಿಗಳ ಹಲವಾರು ಗ್ರಾಮೀಣ ಮಹಿಳೆಯರು ತಿಂಗಳಿಗೆ 1 ಸಾವಿರ ರೂ. ಸಹಾಯ ಧನ ಬಂದರೆ ತಮಗೆ, ತಮ್ಮ ಕುಟುಂಬಕ್ಕೆ ನೆರವಾಗುತ್ತದೆ ಎಂದರು. ಮೂವರು, ನಾಲ್ವರು ಮಹಿಳೆಯರಿರುವ ಬಡಕುಟುಂಬಕ್ಕೆ ಈ ಯೋಜನೆ ನಿಜಕ್ಕೂ ಚೇತೋಹಾರಿ.

ಬೊಕ್ಕಸದ ಮೇಲೆ ಇದು ಹೊರೆಯಾಗುತ್ತದೆಂದು ಹಲವಾರು ಮಂದಿ ಅಭಿಪ್ರಾಯಪಟ್ಟರೂ ಅದಕ್ಕೆ ಸಮಾಧಾನಕರ ಉತ್ತರ ಕೊಟ್ಟ ಕೇಜ್ರಿವಾಲ್‌, ಈ ಹೊರೆಯನ್ನು ಭ್ರಷ್ಟಾಚಾರದಿಂದಾಗಿ ವಾರ್ಷಿಕವಾಗಿ ಆಗುತ್ತಿರುವ 20 ಲಕ್ಷ ಕೋಟಿ ರೂ. ನಷ್ಟವನ್ನು ತಡೆಯುತ್ತೇವೆ. ಆ ಹಣವನ್ನು ಈ ಯೋಜನೆಗೆ ಬಳಸುತ್ತೇವೆ ಎಂದು ತಿಳಿಸಿದರು. ಈ ಮೂಲಕ, ಒಂದು ಬಾಣದಿಂದ ಎರಡು ಹಕ್ಕಿ ಹೊಡೆಯುವ ಆಶಯ ವ್ಯಕ್ತಪಡಿಸಿದರು ಕೇಜ್ರಿವಾಲ್‌.

ಕೇಜ್ರಿವಾಲ್‌ರವರ ಈ ಸಿದ್ಧತೆಯ ಜೊತೆಗೆ ಆ ಪಕ್ಷದ ಗೆಲುವಿಗೆ ನೆರವಾದ ಕಾರಣಗಳನ್ನು ಇಲ್ಲಿ ಉಲ್ಲೇಖೀಸಲೇಬೇಕು. ಮೇಲಿನ ಈ ಮೂರು ರೀತಿಯ ಅಸ್ತ್ರಗಳನ್ನು ಬಿಟ್ಟ ಮೇಲೆ ಕೇಜ್ರಿವಾಲ್‌ಗೆ ನೆರವಾಗಿದ್ದು ಕಾಂಗ್ರೆಸ್‌ನ ಆಂತರಿಕ ಕಿತ್ತಾಟ. ಅಲ್ಲಿ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಹಾಗೂ ಪಂಜಾಬ್‌ನ ಅಂದಿನ ಸಿಎಂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ನಡುವಿನ ಹದಗೆಟ್ಟ ಸಂಬಂಧ, ಕಾಂಗ್ರೆಸ್‌ ಹೈಕಮಾಂಡ್‌ನ‌ ತಪ್ಪು ನಿರ್ಧಾರಗಳು ಆ ಪಕ್ಷದ ವರ್ಚಸ್ಸನ್ನು ನೆಲಸಮ ಮಾಡಿತು. ಅದನ್ನು ನೀಗಲು, ಕಾಂಗ್ರೆಸ್‌ ಹೈಕಮಾಂಡ್‌ ಚರಣ್‌ಜಿತ್‌ ಸಿಂಗ್‌ ಛನ್ನಿ ಎಂಬ ದಲಿತ ಸಿಖ್‌ ಸಮುದಾಯದ ವ್ಯಕ್ತಿಯನ್ನು ಸಿಎಂ ಹುದ್ದೆಗೆ ಕೂರಿಸಿದರೂ, ಛನ್ನಿಯವರ ಆಪ್ತ ಸಂಬಂಧಿಕರು ಅಕ್ರಮ ಮರಳು ಕಳ್ಳಸಾಗಣೆ ಆರೋಪಗಳಿಗೆ ಒಳಗಾಗಬೇಕಾಯಿತು. ಅದು ನಿಜವೋ, ತಪ್ಪೋ.. ಆದರೆ, ಅದು ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಜನರು ಸಂಪೂರ್ಣವಾಗಿ ವಿಮುಖವಾಗಲು ಕಾರಣವಾಯಿತು. ಒಂದು ಕಡೆ ಹೀಗಾದರೆ, ಮತ್ತೂಂದು ಕಡೆ, ಚುನಾವಣಾ ಪ್ರಚಾರದ ಆರಂಭದಲ್ಲಿ ಛನ್ನಿ ಸರ್ಕಾರ ಅರವಿಂದ ಕೇಜ್ರಿವಾಲ್‌ಗೆ ರ್ಯಾಲಿಗಳನ್ನು ನಡೆಸದಂತೆ ಅವರನ್ನು ತಡೆಯುವಂಥ ಕ್ರಮಗಳನ್ನು ಕೈಗೊಂಡಿದ್ದು ಜನರನ್ನು ಕೆರಳಿಸಿತು. ಇದು ಕೇಜ್ರಿವಾಲ್‌ರವರ ಕಡೆಗೆ ಜನರ ಸಹಾನುಭೂತಿ ಹರಿದುಬರುವಂತೆ ಮಾಡಿತು.

ಈ ಎಲ್ಲಾ ಕಾರಣಗಳಿಂದಾಗಿ ಆಡಳಿತಾರೂಢ ಕಾಂಗ್ರೆಸ್‌ ಬಗ್ಗೆ ಜನರಿಗೆ ವಾಕರಿಕೆ ಬಂದಿತ್ತು. ಕೃಷಿ ಕಾಯ್ದೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮುನಿಸಿಕೊಂಡಿದ್ದ ಪಂಜಾಬ್‌ ಜನತೆಗೆ ಮೊದಲೇ ಬಿಜೆಪಿ ಕಡೆ ಒಲುಮೆ ಇರಲಿಲ್ಲ. ಹಾಗಾಗಿ, ಕಾಂಗ್ರೆಸ್‌ ತೊರೆದು ಬಂದು “ಪಂಜಾಬ್‌ ಲೋಕ್‌ ಕಾಂಗ್ರೆಸ್‌’ ಪಕ್ಷ ಕಟ್ಟಿದ ಅಮರಿಂದರ್‌ ಸಿಂಗ್‌ ಬಿಜೆಪಿ ಜತೆಗೆ ಕೈ ಜೋಡಿಸಿದ್ದು ಜನರಿಗೆ ಹಿಡಿಸಲಿಲ್ಲ. ಮತ್ತೂಂದೆಡೆ, ಕೃಷಿ ಕಾಯ್ದೆಗಳ ವಿಚಾರದಲ್ಲಿ ಬಿಜೆಪಿ ಜೊತೆ ಮುನಿಸಿಕೊಂಡು “ಮುಂದಾಲೋಚನೆಯಿಂದ’ ಎನ್‌ಡಿಎಯಿಂದ ಹೊರಬಂದು ಬಿಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಂಡು ಪಂಜಾಬ್‌ ಚುನಾವಣಾ ಅಖಾಡಕ್ಕೆ ಧುಮುಕಿದ ಶಿರೋಮಣಿ ಅಕಾಲಿ ದಳದ ಕಡೆಗೂ ಜನರಿಗೆ ಮನಸ್ಸು ಹರಿಯಲಿಲ್ಲ.

ಈಗಾಗಲೇ ಅಕಾಲಿದಳ, ಕಾಂಗ್ರೆಸ್‌ ಸರ್ಕಾರಗಳನ್ನು ನೋಡಿದ್ದ ಜನರು, ಆಮ್‌ ಆದ್ಮಿ ಪಕ್ಷಕ್ಕೊಂದು ಅವಕಾಶ ಕೊಡಲು ಮುಂದಾದರು. 2014ರ ಚುನಾವಣೆಯಲ್ಲಿ ಮೋದಿ ಮೇಲೆ ಭರವಸೆಯಿಟ್ಟು ಇಡೀ ದೇಶದ ಜನತೆ ಹೇಗೊಂದು ಅವಕಾಶ ಕೊಟ್ಟರೋ ಹಾಗೆಯೇ ಕೇಜ್ರಿವಾಲ್‌ಗೆ ಪಂಜಾಬ್‌ ಜನರು ಅವಕಾಶ ಕೊಟ್ಟರು.

-ಚೇತನ್‌ ಒ.ಆರ್‌.

Advertisement

Udayavani is now on Telegram. Click here to join our channel and stay updated with the latest news.

Next