Advertisement

Hosanagara: ಹೆಜ್ಜೇನು ದಾಳಿಯಿಂದ ಏಳು ಮಂದಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ

10:52 PM Oct 26, 2024 | Esha Prasanna |

ಹೊಸನಗರ: ಎರಡೆರಡು ಬಾರಿ ಹೆಜ್ಜೇನು ದಾಳಿಗೆ ಒಳಗಾಗಿ ಒಟ್ಟು 7 ಮಂದಿ ಗಾಯಗೊಂಡು ಅವರಲ್ಲಿ  ಒಬ್ಬರಿಗೆ ಗಂಭೀರವಾಗಿರುವ ಘಟನೆ ತಾಲೂಕಿನ ಚಿಕ್ಕಪೇಟೆ ನಗರದಲ್ಲಿ ನಡೆದಿದೆ.

Advertisement

ಶನಿವಾರ ಬೆಳಿಗ್ಗೆ ಚಿಕ್ಕಪೇಟೆ ಸೇತುವೆ ಬಳಿಯ ಬಾಷಾ ಎಂಬುವವರ ಮನೆ ಸಮೀಪ ಹೆಜ್ಜೇನು ದಾಳಿ ಮಾಡಿದ್ದು, ಬಾಷಾ, ಅವರ ಪತ್ನಿ ಆಸ್ಮಾ, ಇಬ್ಬರು ಮಕ್ಕಳಾದ ಆರೀಫ್ ಮತ್ತು ಅನೀಫ್ ಮೇಲೆ ಹೆಜ್ಜೇನು ದಾಳಿ ನಡೆಸಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಿ ನಾಲ್ವರಿಗೆ ಚಿಕಿತ್ಸೆ ನೀಡಲಾಯಿತು.

ಮತ್ತೊಮ್ಮೆ ದಾಳಿ:
ಸಂಜೆ 5 ಗಂಟೆ ವೇಳೆಗೆ ಅದೇ ಜಾಗದಲ್ಲಿ ಹೆಜ್ಜೇನು ದಾಳಿ ನಡೆಸಿದೆ. ಬೆಳಿಗ್ಗೆ ದಾಳಿಗೆ ಒಳಗಾಗಿದ್ದ ಬಾಷಾ ಪುತ್ರ ಆರೀಫ್ ಮೇಲೆ, ಪಕ್ಕದ ಮನೆ ಯಾಸಿನ್ ಮೇಲೆ ಮತ್ತೆ ಹೆಜ್ಜೇನು ದಾಳಿ ನಡೆಸಿದೆ. ಈ ವೇಳೆ ಹಾಸಿಗೆ ದುರಸ್ತಿಗಾಗಿ ಶಿವಮೊಗ್ಗದ ಮಂಜುನಾಥ ಬಡಾವಣೆ ನಿವಾಸಿ ಹುಸೇನ್ ಸಾಬ್ (68) ಮತ್ತು ಅವರ ಪುತ್ರ ಬಾಬಾ ಸಾಬ್ ಎಂಬುವವರ ಮೇಲೆ ಕೂಡ ಹೆಜ್ಜೇನು ದಾಳಿ ನಡೆಸಿದೆ.

ವೃದ್ಧ ಹುಸೇನ್ ಸಾಬ್ ಮೇಲೆ ತೀವ್ರ ದಾಳಿಯಾಗಿದ್ದು ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ನಗರ ಆಸ್ಪತ್ರೆಗೆ ದಾಖಲಿಸಲಾಯಿತು. ಭಾರೀ ಪ್ರಮಾಣದಲ್ಲಿ ಜೇನು ಕಚ್ಚಿದ್ದರಿಂದ ಸ್ಥಳೀಯರ ಸಹಕಾರದಿಂದ ಅವರ ದೇಹದಿಂದ 500ಕ್ಕೂ ಹೆಚ್ಚು ಮುಳ್ಳು ಹೊರತೆಗೆಯಲಾಗಿದೆ. ಬಳಿಕ ಹೊಸನಗರ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next