Advertisement
ತಾಲೂಕಿನ ನಗರ ಹೋಬಳಿಯ ಇಂದಿನ ದೈನೇಸಿ ಸ್ಥಿತಿ ಇದು. ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಯ ಹಿನ್ನಿರಿನ ಜೀವಾಳವಾಗಿರುವ ಈ ಹೋಬಳಿಯಲ್ಲಿ ಆಗುವ ವ್ಯಾಪಕ ಮಳೆಯೇ ಶರಾವತಿ ವಿದ್ಯುದಾಗಾರದ ಶಕ್ತಿ. ಅಷ್ಟೇ ಅಲ್ಲ ವಾರಾಹಿ ಯೋಜನೆಯ ಮಾಣಿ, ಪಿಕಪ್, ಖೈರಗುಂದ, ಚಕ್ರಾ ಮತ್ತು ಸಾವೇಹಕ್ಲು ಸೇರಿ ಐದು ಡ್ಯಾಂಗಳೂ ಇಲ್ಲಿಯೇ ಇವೆ. ದೇಶದ ಪ್ರತಿಷ್ಠಿತ ವಾರಾಹಿ ಭೂಗರ್ಭ ವಿದ್ಯುದಾಗಾರ ಕೂಡ ಇದೆ ನಗರ ಹೋಬಳಿಯ ನಿಡಗೊಡು ಗ್ರಾಮದಲ್ಲಿದೆ. ನಾಡಿನ ಬೆಳಕಿಗಾಗಿ ಇಷ್ಟೆಲ್ಲ ಯೋಜನೆಗಳಿಗೆ ತಮ್ಮ ಜಮೀನು, ಮನೆಯನ್ನೆಲ್ಲ ತ್ಯಾಗ ಮಾಡಿದ ಇಲ್ಲಿನ ಜನ ಮಾತ್ರ ಇಂದಿಗೂ ನಲುಗುತ್ತಲೇ ಇದ್ದಾರೆ. ಅರಣ್ಯ ಹಕ್ಕು ಕಾಯ್ದೆ ಇವರ ಬದುಕಿನ ಮೂಲಕ್ಕೇ ಕೊಡಲಿ ಪೆಟ್ಟು ನೀಡಿದೆ.
Related Articles
Advertisement
ಏನದು ಅರಣ್ಯ ಹಕ್ಕು ಕಾಯ್ದೆ: ತಾವು ವಾಸಿಸುತ್ತಿರುವ ಭೂಮಿಯ ಮೇಲೆ ಯಾವುದೇ ಹಿಡಿತವಿಲ್ಲದ ಕುಟುಂಬಗಳಿಗೆ ಭೂಮಿಯ ಹಕ್ಕುಪತ್ರ ನೀಡುವ ಸಂಬಂಧ ಅರಣ್ಯ ಹಕ್ಕು ಕಾಯ್ದೆಯಡಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ ಅದಕ್ಕೆ ತಾವು ವಾಸಿಸುವ ಭೂಮಿಯ 75 ವರ್ಷದ ದಾಖಲೆಗಳನ್ನು ಸಲ್ಲಿಸಿದರೆ ಹಕ್ಕುಪತ್ರ ಪಡೆದುಕೊಳ್ಳಬಹುದು. ಆದರೆ 75 ವರ್ಷದ ಸಾಕ್ಷಿಗಳನ್ನು ಎಲ್ಲಿಂದ ತರುವುದು ಎಂಬುದೇ ಇಲ್ಲಿಯ ಜನರ ಸಮಸ್ಯೆಯಾಗಿದೆ.
ನಗರ ಹೋಬಳಿ ಬಗ್ಗೆ ತಾತ್ಸಾರ: ನಗರ ಹೋಬಳಿ ಮುಳುಗಡೆ ಪ್ರದೇಶವಾಗಿರುವ ಕಾರಣ 75 ವರ್ಷದ ಸಾಕ್ಷಾಧಾರ ಅಸಾಧ್ಯ. ಕಾನೂನಿನಲ್ಲಿರುವ ಕಲಂ4/8ರಲ್ಲಿ ವಿಫುಲ ಅವಕಾಶವಿದ್ದರೂ ಕೂಡ ನಿರಾಕರಿಸಲಾಗುತ್ತಿದೆ. ಐತಿಹಾಸಿಕ ಅನ್ಯಾಯಗಳನ್ನು ನೀಗಿಸುವ ನಿಟ್ಟಿನಲ್ಲಿ ಬಂದ ಕಾನೂನು ಜಾರಿಗೊಳಿಸುವಲ್ಲಿ ಇಲಾಖೆಗಳು ನಿರ್ಲಕ್ಷ್ಯ ತೋರುತ್ತಿರುವುದು ವಿಪರ್ಯಾಸವಾಗಿದೆ.
ನಗರ ಹೋಬಳಿಯ ಬಹುತೇಕ ಕಂದಾಯ ಭೂಮಿಗಳನ್ನು ಪಿಎಫ್ ಎಂದು ನಮೂದಿಸಿ 1980 ರಲ್ಲಿ ಅಧಿಸೂಚನೆ ಹೊರಡಿಸಿದ್ದು, 2019ರಲ್ಲಿ ಮೀಸಲು ಅರಣ್ಯ ಎಂದು ಘೋಷಿಸುವ ತಯಾರಿ ಮಾಡಲಾಗುತ್ತಿದೆ. ಇಲ್ಲಿಯ ಜನರ ಅಹವಾಲು ಕೇಳದೆ, ಸಮಸ್ಯೆ ಇತ್ಯರ್ಥ ಪಡಿಸದೆ ಮೀಸಲು ಅರಣ್ಯ ಎಂದು ಘೋಷಿಸಿದಲ್ಲಿ ಈ ಭಾಗದ ಜನರ ಹಕ್ಕು ಮರೀಚಿಕೆಯಾಗುವುದರಲ್ಲಿ ಸಂದೇಶವಿಲ್ಲ ಎಂದು ನಗರ ಹೋಬಳಿಯ ನಿವಾಸಿಗಳು ಆರೋಪಿಸುತ್ತಾರೆ.
ಕೆಪಿಸಿ ವ್ಯಾಪ್ತಿ ನಿವಾಸಿಗಳ ಹಕ್ಕುಪತ್ರ: ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಂ ಕಟ್ಟುವ ವೇಳೆ ಭೂಸ್ವಾಧಿಧೀನ ಪ್ರಕ್ರಿಯೆಯಲ್ಲಿ ಇಡೀ ಸರ್ವೆ ನಂಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮುಳುಗಡೆಯಾಗದ ಮತ್ತು ಕೆಪಿಸಿಯ ಅನುಪಯುಕ್ತ ಪ್ರದೇಶದಲ್ಲಿ ಸಂತ್ರಸ್ಥರು ಮನೆ ಜಮೀನು ಮಾಡಿಕೊಂಡಿದ್ದಾರೆ. ಆರ್ಟಿಸಿಯಲ್ಲಿ ಕೆಪಿಸಿ ಎಂದೇ ನಮೂದಾಗಿದ್ದು, ಈ ಮೀಸಲು ಪ್ರದೇಶಗಳನ್ನು ಕೂಡ ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಪ್ರಸ್ತಾವನೆ ತಯಾರಾಗುತ್ತಿದೆ. ಒಂದು ವೇಳೆ ಇಲ್ಲಿಯ ನೈಜ ಸ್ಥಿತಿ ಬಗ್ಗೆ ಅರಿತುಕೊಳ್ಳದೆ ಹಸ್ತಾಂತರಿಸಿದಲ್ಲಿ ಸುಮಾರು 1,864 ಕುಟುಂಬಗಳು ಮತ್ತೆ ಸಂತ್ರಸ್ಥರಾಗುವುದು ಕಟ್ಟಿಟ್ಟ ಬುತ್ತಿ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ವಾರಾಹಿ ಯೋಜನೆಯ ಚಕ್ರಾ ವಾರಾಹಿ ಮುಳುಗಡೆ ಸಂದರ್ಭದಲ್ಲೂ ಮೀಸಲು ಅರಣ್ಯಕ್ಕಾಗಿ 20 ಸಾವಿರ ಎಕರೆ ಪ್ರದೇಶಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ನಂತರ ಜನರಿಂದ ವಿರೋಧ ವ್ಯಕ್ತವಾಗಿ ಪ್ರಸ್ತಾವನೆ ತಡೆಹಿಡಿಯಲಾಗಿದೆ. ಆದರೆ ಯಾವುದೇ ಸಮಸ್ಯೆ ನೀಗಿಸುವಲ್ಲಿ ಸ್ಥಳೀಯ ಇಲಾಖೆಗಳು ಕಾಳಜಿ ತೋರುತ್ತಿಲ್ಲ ಎಂಬುದು ನಗರ ಹೋಬಳಿ ನಾಗರಿಕರ ವೇದಿಕೆ ಆರೋಪ.
•ಕುಮುದ ಬಿದನೂರು