Advertisement

ಕೊಡಚಾದ್ರಿ ಗಿರಿಯಲ್ಲಿ ಹೊಸ ವರ್ಷ ಸಂಭ್ರಮಕ್ಕೆ ಬ್ರೇಕ್‌?

07:46 PM Dec 26, 2019 | Naveen |

„ಕುಮುದಾ ನಗರ
ಹೊಸನಗರ:
ಚಾರಣಿಗರ ನೆಚ್ಚಿನ ಸ್ಪಾಟ್‌, ಮೂಕಾಂಬಿಕೆ ಭಕ್ತರ ಧಾರ್ಮಿಕ ಶ್ರದ್ಧಾಕೇಂದ್ರ ಭುವನಗಿರಿ ಕೊಡಚಾದ್ರಿ ಗಿರಿಯಲ್ಲಿ ಪ್ರವಾಸಿಗರ ವರ್ಷಾಚರಣೆ ನಿರ್ಬಂಧಿ ಸುವ ಸಾಧ್ಯತೆ ಹೆಚ್ಚಿದೆ. ಮೂಕಾಂಬಿಕ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅಲ್ಲದೆ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಪ್ರದೇಶ ಹೊಂದಿರುವ ಕೊಡಚಾದ್ರಿ ಗಿರಿಗೆ ಬರುವ ಪ್ರವಾಸಿಗರು ಅಲ್ಲಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಿ ಸಂಭ್ರಮದೊಂದಿಗೆ ಹೊಸವರ್ಷ ಸ್ವಾಗತಿಸುತ್ತಿದ್ದರು. ಅಲ್ಲದೆ ಅಲ್ಲಲ್ಲಿ ಬೆಂಕಿ ಹಾಕಿ ಸಂಭ್ರಮಿಸಿದ್ದು ಉಂಟು. ಆದರೆ ಈ ಬಾರಿ ಇದಕ್ಕೆಲ್ಲ ಬ್ರೇಕ್‌ ಹಾಕಲು ಕೊಲ್ಲೂರು ವಿಭಾಗದ ವನ್ಯ ಜೀವಿ ವಲಯ ನಿರ್ಧಾರ ಮಾಡಿದೆ.

Advertisement

ತಂಗಲು ಅವಕಾಶ ಬೇಡ: ಈ ಸಂಬಂಧ ಹೊಸನಗರ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವ ಕೊಲ್ಲೂರು ವನ್ಯ ಜೀವಿ ವಿಭಾಗ ಇದೇ ತಿಂಗಳ ಡಿ.28ರಿಂದ ಜನವರಿ 1 ತನಕ ಪ್ರವಾಸಿಗರಿಗೆ ಕೊಡಚಾದ್ರಿ ಪ್ರವಾಸಿ ಮಂದಿರದಲ್ಲಿ ತಂಗಲು ಅವಕಾಶ ನೀಡದಂತೆ ಮನವಿ ಮಾಡಿದೆ. ತಂಗಲು ಅವಕಾಶ ನೀಡಿದಲ್ಲಿ ಮೋಜು ಮಸ್ತಿಯ ಜೊತೆಗೆ ಬೆಂಕಿ ಶಿಬಿರ ಆಯೋಜಿಸುವ ಸಾಧ್ಯತೆ ಇದೆ. ಕೊಡಚಾದ್ರಿ ಗಿರಿಯ ಸುತ್ತಲೂ ಶೋಲಾ ಅರಣ್ಯ ಮತ್ತು ಹುಲ್ಲುಗಾವಲು ಇದ್ದು ಅನಾಹುತಕ್ಕೆ ದಾರಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿರುವ ಕೊಲ್ಲೂರು ವನ್ಯಜೀವಿ ಅರಣ್ಯ ವಿಭಾಗ ಪ್ರವಾಸಿ ಮಂದಿರದಲ್ಲಿ ಅವಕಾಶ ನೀಡದಂತೆ ಹೊಸನಗರ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದೆ.

ನಿರ್ಬಂಧ ಸಾಧ್ಯತೆ: ಕೊಡಚಾದ್ರಿ ಗಿರಿಯ ಸಂರಕ್ಷಣೆ ಸಲುವಾಗಿ ವನ್ಯಜೀವಿ ಇಲಾಖೆ ನೀಡಿರುವ ಮನವಿ ಲೋಕೋಪಯೋಗಿ ಇಲಾಖೆ ಪುರಸ್ಕರಿಸುವ ಸಾಧ್ಯತೆ ಇದ್ದು, ವರ್ಷಾಂತ್ಯದಲ್ಲಿ ಕೊಡಚಾದ್ರಿಗಿರಿಯ ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ ತಂಗುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಪ್ರವಾಸಿಗರು ಹೆಚ್ಚು: ವರ್ಷಾಂತ್ಯದಲ್ಲಿ ಕೊಡಚಾದ್ರಿ ಗಿರಿಗೆ ಹರಿದು ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚು. ಅಲ್ಲದೆ ಮೂಲ ಮೂಕಾಂಬಿಕೆಯ ನೆಲವೀಡು ಆಗಿರುವ ಕಾರಣ ಕೇರಳ ಮತ್ತು ಇತರ ರಾಜ್ಯದಿಂದ ಕೊಲ್ಲೂರಿಗೆ ಬರುವ ಭಕ್ತಾ ದಿಗಳು ಕೂಡ ಕೊಡಚಾದ್ರಿಗೆ ಹರಿದು ಬರುತ್ತಾರೆ. ಆದರೆ ಭಕ್ತಾ ದಿಗಳು ಹೆಚ್ಚಾಗಿ ಹಗಲು ಸಮಯದಲ್ಲಿ ಬಂದು ದರ್ಶನಗೈದು ವಾಪಾಸಾಗುತ್ತಾರೆ. ಆದರೆ ಪ್ರವಾಸಿಗರು ರಾತ್ರಿ ತಂಗಿ ಬೆಳಿಗ್ಗೆ ಸೂರ್ಯೋದಯ ನೋಡಿಕೊಂಡು ವಾಪಾಸಾಗುತ್ತಾರೆ.

ಕೊಡಚಾದ್ರಿಯಲ್ಲಿ ಮುಂಜಾಗೃತ ಕ್ರಮ: ಕೊಡಚಾದ್ರಿಯಲ್ಲಿ ಪ್ರವಾಸಿ ಮಂದಿರ ಹೊರತು ಪಡಿಸಿ ಬೇರೆಲ್ಲೂ ಟೆಂಟ್‌ ಹಾಕಿ ತಂಗಲು ಅವಕಾಶವಿಲ್ಲ. ಈಗಾಗಲೇ ಪ್ರವಾಸಿ ಮಂದಿರಕ್ಕೆ ಅವಕಾಶ ನೀಡದಂತೆ ಮನವಿ ಮಾಡಲಾಗಿದೆ. ವರ್ಷಾಚರಣೆ ವೇಳೆ ಯಾವುದೇ ಮೋಜು ಮಸ್ತಿ, ಬೆಂಕಿ ಹಾಕಿ ಸಂಭ್ರಮಿಸದಂತೆ ವನ್ಯಜೀವಿ ಇಲಾಖೆ ನಿಗಾ ಇಟ್ಟಿದೆ. ಅಲ್ಲದೆ ಪ್ರವಾಸಿಗರ ನೆಚ್ಚಿನ ಸ್ಪಾಟ್‌ ಸರ್ವಜ್ಞಪೀಠದ ಪರಿಸರ ಬಗ್ಗೆ ಕೂಡ ಇಲಾಖೆ ಗಮನ ಹರಿಸಿದೆ. ಒಟ್ಟಿನಲ್ಲಿ ಈ ವರ್ಷ ಕೊಡಚಾದ್ರಿ ಗಿರಿಯಲ್ಲಿ ಡಿ.31 ಮತ್ತು ವರ್ಷಾಚರಣೆ ಆಚರಿಸಬೇಕು ಎಂಬ ನಿರೀಕ್ಷೆ ಹೊತ್ತ ಪ್ರವಾಸಿಗರ ಆಸೆಗೆ ವನ್ಯಜೀವಿ ಇಲಾಖೆ ತಣ್ಣೀರು ಎರಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next