Advertisement

ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳಿ : ಲಲಿತಾ ನಾಯಕ್‌

12:33 PM May 27, 2019 | Naveen |

ಹೊಸನಗರ: ಎಲೆ ಮರೆ ಕಾಯಿಯಂತೆ ಸುಪ್ತವಾಗಿರುವ ಸ್ತ್ರೀಯ ಸಾಹಿತ್ಯಕ ಮನಸ್ಸು ಹೆಚ್ಚು ಹೆಚ್ಚು ಕೃತಿ ರೂಪದಲ್ಲಿ ಬರಲಿ ಎಂದು ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯಕ ಆಶಿಸಿದರು.

Advertisement

ತಾಲೂಕಿನ ಕಾರಣಗಿರಿ ಸಿದ್ಧಿ ವಿನಾಯಕ ಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ನಡೆದ ಮೂರನೇ ಜಿಲ್ಲಾ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆ ಎಂದಿಗೂ ಬಿಡುವಿಲ್ಲದ ಕೆಲಸಗಾರ್ತಿ. ಆಕೆಗೆ ದಿನದ 24 ಗಂಟೆಯೂ ಸಾಲದಾಗಿದೆ. ಅಂತಹದ್ದರಲ್ಲಿ ಮಹಿಳೆ ಮನೆ ಕೆಲಸ ಮತ್ತು ಕಚೇರಿ ಕೆಲಸಗಳ ಮಧ್ಯೆಯೂ ಬಿಡುವು ಮಾಡಿಕೊಂಡು ಸಾಹಿತ್ಯದಲ್ಲಿ ತನ್ನ ಛಾಪು ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.

ಮಹಿಳೆಯರು ಸಾಹಿತ್ಯವನ್ನು ಗ್ರಹಿಸಿ, ಅದರ ಒಳ ತುಡಿತವನ್ನು ಅರ್ಥೈಸಿಕೊಂಡು ಸಾಹಿತ್ಯ ರಚಿಸಬೇಕಿದೆ. ಕೇವಲ ಬರೆಯುವುದೆಲ್ಲ ಸಾಹಿತ್ಯ ಆಗಬಾರದು ಎಂದು ತಿಳಿಸಿದರು.

ವಿಧೆವೆಯರು ಅಮಂಗಲಿಯರಲ್ಲ: ನಾವಿಂದು ವಿಧವೆಯರನ್ನು ಅಮಂಗಲಿಯರು ಎಂದು ಕಾಣುತ್ತಿದ್ದೇವೆ. ಸಮಾಜದಲ್ಲಿ ಅವರಿಗೆ ಇನ್ನೂ ಸಮಾನ ಸ್ಥಾನಮಾನ ಸಿಕ್ಕಿಲ್ಲ. ಈ ಪದ್ಧತಿ ಹೋಗಬೇಕು. ವಿಧವೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕಿದೆ ಎಂದ ಅವರು, ಜಾಗೃತಿ ಮೂಡಿಸುವ ಕೆಸಲದಲ್ಲಿ ನಮ್ಮ ಸಾಹಿತ್ಯ, ಪತ್ರಿಕೋದ್ಯಮ, ದೂರದರ್ಶನ ಸಾಂಘಿಕವಾಗಿ ಕೆಲಸ ಮಾಡಿದರೆ ಸಾಧ್ಯವಿದೆ ಎಂದು ಹೇಳಿದರು.

Advertisement

ಹೆಚ್ಚುತ್ತಿರುವ ಅಧಿಕಾರ ದಾಹ: ರಾಷ್ಟ್ರದಲ್ಲಿ ಅಧಿಕಾರದ ದಾಹ ಎಲ್ಲೆ ಮೀರಿ ಸಾಗುತ್ತಿದೆ. ಅಧಿಕಾರ ಪಡೆಯುವಲ್ಲಿ ಎಂತಹ ಸಾಹಸಕ್ಕೂ ಹಿಂಜರಿಯದ ಸ್ವಭಾವ ನಮ್ಮಲ್ಲಿ ಮನೆ ಮಾಡಿದೆ. ಜಾತಿ ಜಾತಿಗಳ ನಡುವೆ ವೈಷಮ್ಯ, ಮೇಲು ಕೀಳು ಭಾವನೆಗಳ ಹೊಯ್ದಾಟ, ನಿರಂತರ ಕಾದಾಟ ನಡೆಯುತ್ತಿವೆ. ನಮ್ಮ ದೇಶದಲ್ಲಿ ಬಡವರು ಅತ್ಯಂತ ಕನಿಷ್ಟ ಮಟ್ಟದದ ಬದುಕು ಸಾಗಿಸುತ್ತಿದ್ದಾರೆ ಎಂದರು.

ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಲಗಾಮು ಇಲ್ಲವಾಗಿದೆ. ಭ್ರಷ್ಟಾಚಾರ ಮೀತಿ ಮೀರಿದರೆ ಶ್ರೀ ಸಾಮಾನ್ಯನಿಗೆ ಉಳಿಗಾಲವಿಲ್ಲ. ಈ ಭ್ರಷ್ಟಾಚಾರದ ಭೂತವನ್ನು ಹಿಡಿದಿಡಬೇಕಾಗಿದೆ. ಆ ಕುರಿತು ನಾವೆಲ್ಲಾ ಒಟ್ಟಾಗಿ ಬೀದಿಗಿಳಿದು ಹೋರಾಟ ನಡೆಸುವ ಅನಿವಾರ್ಯತೆ ಸೃಷ್ಟಿ ಆಗಬಲ್ಲದಾಗಿದೆ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ. ಶಂಕರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೆಳಕಿಗೆ ಬಾರದ ಗ್ರಾಮೀಣ ಭಾಗದ ಮಹಿಳೆಯರು ಸಾಹಿತ್ಯಕ ಬರವಣಿಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಇಂತಹ ಸಮ್ಮೇಳನಗಳನ್ನು ಹಳ್ಳಿಯಲ್ಲಿ ನಡೆಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಕಸಾಪ ಗೌರವ ಕಾರ್ಯದರ್ಶಿ ಎಂ.ಎಸ್‌. ಸುಂದರ ರಾಜ್‌, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಆರ್‌.ಎಸ್‌. ಈಶ್ವರಪ್ಪ, ಕಾರಣಿಗಿರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ, ಸಾಹಿತಿ ಹನಿಯಾ ರವಿ ಇದ್ದರು.

ಬೆಳಗ್ಗೆ ಹನಿಯಾ ರವಿ ರಾಷ್ಟ್ರ ಧ್ವಜಾರೋಹಣ, ಕಾರಣಗಿರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರಭಾಕರ್‌ ನಾಡಧ್ವಜಾರೋಹಣ, ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಬಿ.ಶಂಕರಪ್ಪ ಪರಿಷತ್ತು ಧ್ವಜಾರೋಹಣ ನೆರವೇರಿಸಿದರು.

ಸರ್ವಾಧ್ಯಕ್ಷರ ಮೆರವಣಿಗೆ: ಕಾರಣಿಗಿರಿ ವೃತ್ತದಿಂದ ದೇವಸ್ಥಾನದ ತನಕ ನಡೆದ ಸರ್ವಾಧ್ಯಕ್ಷರ ಮೆರವಣಿಗೆಯಲ್ಲಿ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಲೇಖಕಿಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಪುಸ್ತಕ ಬಿಡುಗಡೆ: ಸಾಹಿತ್ಯ ಸಮ್ಮೇಳನದಲ್ಲಿ ಶ್ರದ್ಧಾಂಜಲಿ, ಅಮೃತಧಾರೆ, ಮೌಲ್ಯ ಮಣಿಗಳು ಕವಿಕಾವ್ಯ ಮಾಲೆ, ಚೈತ್ರ ಎಂಬ ಪುಸ್ತಕ ಲೋಕಾರ್ಪಣೆ ಆದವು.

ಗೋಷ್ಠಿ: ಸಮ್ಮೇಳನದಲ್ಲಿ 4 ಗೋಷ್ಠಿಗಳು ನಡೆದವು. ಪ್ರಸ್ತುತ ವಿದ್ಯಮಾನ; ಮಹಿಳಾ ಸಾಹಿತ್ಯ, ಸರ್ವಾಧ್ಯಕ್ಷರ ಸಾಹಿತ್ಯ ಅವಲೋಕನ, ಮಹಿಳಾ ಹಕ್ಕುಗಳು ಮತ್ತು ಮಾನವೀಯ ಮೌಲ್ಯಗಳು, ನಂತರ ಡಾ| ಶೈಲಜಾ ಹೊಸಳ್ಳೇರ ಅವರ ಅಧ್ಯಕ್ಷತೆಯಲ್ಲಿ ನಡೆದ‌ ಕವಿಗೋಷ್ಠಿಯಲ್ಲಿ 40 ಕವಯತ್ರಿಯರು ಕವನ ವಾಚನ ಮಾಡಿದರು.

ಸನ್ಮಾನ-ಸಮಾರೋಪ: ಸಂಜೆ ಶಿಕಾರಿಪುರ ಬಸವಾಶ್ರಮದ ಮಾತಾ ಶರಣಾಂಬಿಕೆ ಸಾನ್ನಿಧ್ಯದಲ್ಲಿ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯದರ್ಶಿ ಗಂಗಾಧರಯ್ಯ ಸ್ವಾಗತಿಸಿದರು. ಅಧ್ಯಕ್ಷ ಕೆ.ಇಲಿಯಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಸಾಪ ಕಾರ್ಯಾಧ್ಯಕ್ಷ ಮ.ಸ. ನಂಜುಂಡಸ್ವಾಮಿ ಅಭಿನಂದನಾ ನುಡಿ, ಗೌರವ ಕೋಶಾಧ್ಯಕ್ಷೆ ಚಂದ್ರಕಲಾ ಅರಸ್‌ ಸರ್ವಾಧ್ಯಕ್ಷರ ನುಡಿ ಸಮರ್ಪಣೆ ಸಲ್ಲಿಸಿದರು. ಚನ್ನಬಸಪ್ಪ ನ್ಯಾಮತಿ ಕಾರ್ಯಕ್ರಮ ನಿರೂಪಿಸಿದರು. ಶಿವಕುಮಾರ ವಂದಿಸಿದರು.

ಈ ವೇಳೆ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಾರು 22ಕ್ಕೂ ಹೆಚ್ಚು ಮಹಿಳೆಯರನ್ನು ಸನ್ಮಾನಿಸಲಾಯಿತು.

ರಾತ್ರಿ ಜಿಲ್ಲಾ ಲೇಖಕಿಯರ ಸಂಘದ ಅಭಿನಯ ತಂಡದ ಶಶಿಕಲಾ ಬಿಲ್ಲೇಶ್ವರ ನಿರ್ದೇಶನದಲ್ಲಿ ಕೆರೆಗೆ ಹಾರ ಜಾನಪದ ಗೀತ ರೂಪಕ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next