Advertisement

ಚಕ್ರಾ ಅಭಯಾರಣ್ಯದಲ್ಲಿ ಸ್ಥಾಪನೆಯಾದೀತೇ ಮಂಕಿ ಪಾರ್ಕ್‌?

01:05 PM Oct 26, 2019 | Team Udayavani |

„ಕುಮುದಾ ನಗರ

Advertisement

ಹೊಸನಗರ: ಮುಳುಗಡೆಯ ತವರು ನಗರ ಹೋಬಳಿಯಿಂದ ಹೊರಟ ಮಂಕಿಪಾರ್ಕ್‌ ಸ್ಥಾಪನೆಯ ಮೊದಲ ಕೂಗು ಮಲೆನಾಡ ಹೆಬ್ಟಾಗಿಲು ಶಿವಮೊಗ್ಗದಲ್ಲಿ ಗಟ್ಟಿಯಾಗಿಯೇ ದಾಖಲಾಗಿದೆ. ನಗರ ಹೋಬಳಿಯ ಜನರು ಮಾತ್ರವಲ್ಲದೆ ಸಾಗರ, ತೀರ್ಥಹಳ್ಳಿ ಭಾಗದ ರೈತರು ಕೂಡ ಧ್ವನಿಗೂಡಿಸಿರುವುದು ಕೂಡ ಕೂಗಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ.

ಹೌದು ಮಂಗಗಳ ಹಾವಳಿ ಬಗ್ಗೆ ಬಹಳಷ್ಟು ಸಮಯದಿಂದ ಅಲ್ಲಲ್ಲಿ ಕೂಗು ಕೇಳಿಬರುತ್ತಿತ್ತೇ ಹೊರತು ಪ್ರತಿಭಟನೆಯ ಹಾದಿ ಕಂಡುಬಂದಿರಲಿಲ್ಲ. ಇದೀಗ ಮೊದಲ ಬಾರಿಗೆ ರೈತಾಪಿ ವರ್ಗ ದೊಡ್ಡಮಟ್ಟದ ಹೋರಾಟ ನಡೆಸಿ ಮಂಗಗಳ ಉಪಟಳ ಮತ್ತು ರೈತರ ಯಾತನೆಯನ್ನು ಸರ್ಕಾರದ ಮಟ್ಟಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಪಾರಂಪರಿಕವಾಗಿ ಕೃಷಿಯನ್ನೇ ನಂಬಿ ಬದುಕುತ್ತಿರುವ ಈ ಭಾಗದ ಜನರು ಅಡಕೆ, ತೆಂಗು, ಬಾಳೆ, ಕಬ್ಬು, ಭತ್ತ, ಏಲಕ್ಕಿ, ಕಾಳುಮೆಣಸು, ಗೇರು ಬೆಳೆಯನ್ನೆ ನಂಬಿಕೊಂಡಿದ್ದಾರೆ. ಇತ್ತೀಚಿನ ವರ್ಷದಲ್ಲಿ ಆಗುತ್ತಿರುವ ಮಂಗಗಳ ಹಾವಳಿಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಎಂಬುದು ರೈತರ ಅಳಲು.

10 ಸಾವಿರ ಕೋಟಿ ನಷ್ಟ?: ಮಂಕಿಪಾರ್ಕ್‌ ಸ್ಥಾಪನೆಯಾಗಲೇಬೇಕು ಎಂದು ಹೋರಾಟದ ನೇತೃತ್ವ ವಹಿಸಿದ್ದ ನಿಟ್ಟೂರಿನ ಶೋಧಾ ಫಾರ್ಮರ್ ಪ್ರೊಡ್ನೂಸರ್‌ ಕಂಪನಿ ಮಂಗಗಳ ಹಾವಳಿಯಿಂದ ನಷ್ಟವನ್ನು ಅಂದಾಜಿಸಿದೆ. ನಗರ ಹೋಬಳಿಯಲ್ಲಿ ಒಂದರಲ್ಲೇ ಬರುವ 9 ಗ್ರಾಪಂ ವ್ಯಾಪ್ತಿಯಲ್ಲಿ ಅಂದಾಜು 9 ಸಾವಿರ ಮನೆಗಳಿವೆ. ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ ಎಂದರೂ ರೂ.50 ಸಾವಿರ ನಷ್ಟವಾಗುತ್ತದೆ.

Advertisement

ಜಿಲ್ಲೆಗೆ ಅಳವಡಿಸಿಕೊಂಡಲ್ಲಿ ವರ್ಷಕ್ಕೆ 800 ರಿಂದ 1000 ಕೋಟಿ ನಷ್ಟ ಉಂಟಾಗಿದೆ. ಕಳೆದ ಹತ್ತು ವರ್ಷದಲ್ಲಿ 10 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದೆ.

ಗಾಯದ ಮೇಲೆ ಬರೆ!: ಲಿಂಗನಮಕ್ಕಿ, ಚಕ್ರಾ, ಸಾವೇಹಕ್ಲು, ಮಾಣಿ ಹೀಗೆ ಸಾಲು ಸಾಲು ಜಲವಿದ್ಯುತ್‌ ಯೋಜನೆಗಳಿಂದ ಬಡ ರೈತರು ತತ್ತರಿಸಿ ಹೋಗಿದ್ದಾರೆ.

5 ದಶಕ ಜಾರಿದರೂ ಅದರ ಪರಿಣಾಮದಿಂದ ಹೊರಬರಲು ಸಾಧ್ಯವಾಗಿಲ್ಲ. ಈ ನಡುವೆ ಕಸ್ತೂರಿ ರಂಗನ್‌ ವರದಿ, ಗಾಡ್ಗಿಳ್‌ ವರದಿ, ವನ್ಯಜೀವಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಕಠಿಣ ಕಾನೂನು ರೈತರನ್ನು ಹೈರಾಣಾಗಿಸಿದೆ. ಕಾಡುಪ್ರಾಣಿಗಳ ಹಾವಳಿಗೆ ಸಿಲುಕಿ ಹಲವು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಮಂಗಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಯಾವುದೇ ಮಾರ್ಗ ಅನುಸರಿಸಿದರೂ ಸಾಧ್ಯವಾದಿರುವುದು ರೈತರ ತಲೆನೋವಿಗೆ ಕಾರಣ.

ಮಂಕಿಪಾರ್ಕ್‌ ಸ್ಥಾಪನೆ ಸಾಧ್ಯವೇ?: ಮಂಕಿಪಾರ್ಕ್‌ ಸ್ಥಾಪನೆ ಸುಲಭದ ಮಾತಂತೂ ಖಂಡಿತಾ ಅಲ್ಲ. ಭಾರತದಲ್ಲಿ ಪ್ರತ್ಯೇಕ ಮಂಕಿಪಾರ್ಕ್‌ಗಳು ಇಲ್ಲವೆನ್ನಬಹುದು. ಮಂಗಗಳ ಉಪಟಳ ಜಾಸ್ತಿಯಾದಾಗ ಮಂಗಳನ್ನು ಹಿಡಿದು ವನ್ಯಜೀವಿ ಪರಿಸರದಲ್ಲಿ ತಂದು ಬಿಡುವುದು ಒಂದು ರೂಢಿ.

ಒಂದು ಹತ್ತಿಪ್ಪತ್ತು ಮಂಗಗಳಾದರೇ ಸರಿ. ಸಾವಿರಾರು ಸಂಖ್ಯೆಯಲ್ಲಿದ್ದರೆ ಅವುಗಳನ್ನು ಸೆರೆ ಹಿಡಿಯುವುದೇ ಒಂದು ಸವಾಲು. ಅಲ್ಲದೆ ಅಪಾರ ಪ್ರಮಾಣದಲ್ಲಿ ಒಂದಡೆ ಕೂಡಿ ಹಾಕುವುದು ಮತ್ತೂಂದು ಸವಾಲು. ದೆಹಲಿ ರಾಜ್ಯದಲ್ಲಿ ಉಪಟಳ ನೀಡುತ್ತಿದ್ದ ಮಂಗಗಳನ್ನು ಕೋರ್ಟ್‌ ಆದೇಶದ ಪ್ರಕಾರ ಹೊರವಲಯದ ಅಸೋಲ್‌ ಭಟ್ಟಿ ವನ್ಯಧಾಮದಲ್ಲಿ ಇರಿಸಲಾಗಿತ್ತು. ಇದೇ ರೀತಿಯ ಪ್ರಯತ್ನಗಳು ಇತರೆ ರಾಜ್ಯಗಳಲ್ಲೂ ಕೂಡ ನಡೆದಿತ್ತು. ಇಂಡೋನೇಷ್ಯಾದಲ್ಲಿ ನೈಸರ್ಗಿಕ ವನ್ಯಧಾಮ ಪವಿತ್ರ ಮಂಕಿಪಾರ್ಕ್‌ ಇದೆ. ಇದು ಬಿಟ್ಟರೇ ಟೋಕಿಯೋ ದೇಶದ ಹೊರವಲಯದಲ್ಲೂ ಮಂಕಿಪಾರ್ಕ್‌ ಕಾರ್ಯ ನಿರ್ವಹಿಸುತ್ತಿದೆ.

ಮಲೆನಾಡಲ್ಲಿ ಮುಂದೇನು: ಈಗಾಗಲೇ ಮಲೆನಾಡಲ್ಲಿ ಮಂಗಗಳ ಸಂತತಿ ಜಾಸ್ತಿಯಾಗಿರುವುದು ಸ್ಪಷ್ಟ. ಭತ್ತ, ರಾಗಿ, ಜೋಳ, ಅಡಕೆ, ಬಾಳೆ, ಏಲಕ್ಕಿ, ಹೀಗೆ ಯಾವುದೇ ಬೆಳೆಯನ್ನು  ರೈತರ ಕೈಗೆ ಸೇರದಂತೆ ವಾನರಗಳು ಉಪಟಳ ನೀಡುತ್ತಿವೆ. ಮಲೆನಾಡ ಭಾಗದಲ್ಲಿ ಮಂಗಗಳ ಉಪಟಳ ಜಾಸ್ತಿಯಾಯ್ತು ಎಂದರೆ ಅವುಗಳನ್ನು ಸೆರೆಹಿಡಿದು ಕಾಡು ಪ್ರದೇಶಕ್ಕೆ ಬಿಟ್ಟು ಬರಲಾಗುತ್ತಿತ್ತು.

ಶಿವಮೊಗ್ಗ ಜಿಲ್ಲೆ ಆಗುಂಬೆ ಮತ್ತು ಹುಲಿಕಲ್‌ ಕಾಡು ಪ್ರದೇಶಗಳಿಗೆ ಹೆಚ್ಚಿನ ರವಾನೆಯಾಗುತ್ತಿತ್ತು. ಏಳೆಂಟು ವರ್ಷಗಳ ಹಿಂದೆ ಹುಲಿಕಲ್‌ ಪ್ರದೇಶದಲ್ಲಿ ಮಂಗಗಳ ಮಾರಣ ಹೋಮ ನಡೆದಿದೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮಂಗಗಳ ಸಂಖ್ಯೆ ಮತ್ತು ಉಪಟಳ ಎರಡು ಜಾಸ್ತಿಯಾಗಿದ್ದು ರೈತರನ್ನು ಹೈರಾಣಾಗಿಸಿದೆ.

ಮಂಕಿಪಾರ್ಕ್‌ ಎಲ್ಲಿ ಎಂಬ ಜಿಜ್ಞಾಸೆ: ಮಂಕಿಪಾರ್ಕ್‌
ಸ್ಥಾಪನೆಯಾಗುವುದಾದಲ್ಲಿ ಎಲ್ಲಿ ಆಗಬೇಕು ಎಂಬ ಜಿಜ್ಞಾಸೆ ಕೂಡ ಇದೆ. ಈ ಬಗ್ಗೆ ವನ್ಯಜೀವಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ವನ್ಯಜೀವಿ ಪ್ರದೇಶದಲ್ಲಿ ಸಮಸ್ಯೆಗಳು ಬರುತ್ತವೆ. ಒಂದು ಸಾವಿರ ಎಕರೆ ಕಂದಾಯ ಭೂಮಿ ಇದ್ದರೆ ಗುರುತಿಸಿ ಅಲ್ಲಿ ಮಂಕಿಪಾರ್ಕ್‌ ಸಂಬಂಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಇದು ಸಾಧ್ಯವೆ ಎಂಬುದು ಶೋಧಾ ಸಂಸ್ಥೆಯ ಪ್ರಶ್ನೆಯಾಗಿದೆ. ಜನರಿಗೆ ವಾಸಿಸಲು  ಹಕ್ಕುಪತ್ರ ಸಿಗದೆ ಪರದಾಡುತ್ತಿದ್ದಾರೆ.

ಇನ್ನು ಒಂದು ಸಾವಿರ ಎಕರೆ ಕಂದಾಯ ಭೂಮಿ ಸಿಗಲು ಸಾಧ್ಯವೇ? ಅಲ್ಲದೆ ಮಂಗಗಳು ಕಾಡು ಪ್ರಾಣಿಗಳು ವನ್ಯಜೀವಿ ಪ್ರದೇಶದಲ್ಲೇ ಅವಕಾಶ ನೀಡಬೇಕು. ಅದು ಬಿಟ್ಟು ಮನುಷ್ಯರನ್ನು ಒಕ್ಕಲೆಬ್ಬಿಸಿ ಮಂಕಿಪಾರ್ಕ್‌ ನಿರ್ಮಾಣ ಮಾಡುವುದು ಹಾಸ್ಯಾಸ್ಪದ ಎಂಬುದು ಶೋಧಾ ಸಂಸ್ಥೆಯ ಅಭಿಪ್ರಾಯ.

ಕೊಡಚಾದ್ರಿ ತಪ್ಪಲಿನ ಚಕ್ರಾ ಅಭಯಾರಣ್ಯ ಸೂಕ್ತ:
ಇನ್ನು ಮಂಕಿಪಾರ್ಕ್‌ ಸ್ಥಾಪಿಸುವುದಾದಲ್ಲಿ ಕೊಡಚಾದ್ರಿ ತಪ್ಪಲಿನ ಚಕ್ರಾ ಅಭಯಾರಣ್ಯ ಪ್ರದೇಶ ಸೂಕ್ತ. ದಟ್ಟ ವನ್ಯಜೀವಿ ಇರುವ ತಾಣ. ಸರ್ಕಾರ ಮತ್ತು ವನ್ಯಜೀವಿ ಇಲಾಖೆ ಮುಂದಾಗಲಿ ಎಂದು ಸಂಸ್ಥೆ ಒತ್ತಾಯಿಸಿದೆ.

ಒಟ್ಟಾರೆ ಮಂಕಿಪಾರ್ಕ್‌ ಸ್ಥಾಪನೆಯಾಗಲೇಬೇಕು ಎಂದು ಒತ್ತಾಯಿಸಿ ನಿಟ್ಟೂರಿನ ಶೋಧಾ ಸಂಸ್ಥೆಯ ನೇತೃತ್ವದಲ್ಲಿ ನಡೆದ ಜಾಥಾ ಯಶಸ್ವಿಯಾಗಿದೆ. ಸರ್ಕಾರ ಸಂಬಂಧ ಪಟ್ಟ ಇಲಾಖೆಯೊಂದಿಗೆ ಮಾತುಕತೆ ನಡೆಸಲು ಸಿದ್ಧವಾಗಿದೆ. ಆದರೆ ಸರ್ಕಾರದ ಸ್ಪಂದನೆ ಯಾವ ರೀತಿ ಇರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next