Advertisement

ದೃಶ್ಯ ಮಾಧ್ಯಮಕ್ಕೆ ಮೌಡ್ಯವೇ ಬಂಡವಾಳ

03:10 PM Dec 27, 2019 | Naveen |

ಹೊಸದುರ್ಗ: ಸೂರ್ಯಗ್ರಹಣ-ಚಂದ್ರಗ್ರಹಣಗಳು ಪ್ರಕೃತಿಯ ಸಹಜ ಕ್ರಿಯೆಗಳು. ಆದರೆ ಇದನ್ನೇ ಬಂಡವಾಳವನ್ನಾಗಿಸಿಕೊಂಡ ದೃಶ್ಯಮಾಧ್ಯಮಗಳು ಜನರನ್ನು ಮೂಢರನ್ನಾಗಿಸಿ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಕೆಲಸ ಮಾಡುತ್ತಿವೆ ಎಂದು ಸಾಣೇಹಳ್ಳಿ ಮಠದ ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ತಾಲೂಕಿನ ಸಾಣೇಹಳ್ಳಿ ಮಠದ ಎಂ.ಎಂ. ಕಲ್ಬುರ್ಗಿ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಶ್ರೀ ಶಿವಕುಮಾರ ಕಲಾ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಹಳಗನ್ನಡ ಕಾವ್ಯ: ರಸಾಭಿವ್ಯಕ್ತಿ ಕಮ್ಮಟದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ದೃಶ್ಯ ಮಾಧ್ಯಮಗಳ ಕಾರ್ಯವೈಖರಿ ಯುವ ಸಮೂಹದ ಚಿಂತನಾ ಸಾಮರ್ಥ್ಯವನ್ನೇ ಕುಗ್ಗಿಸುತ್ತಿವೆ. ಕಲೆ, ಸಾಹಿತ್ಯ, ಸಂಸ್ಕೃತಿಗಳು ಬದುಕಿನ ಸತ್ವವನ್ನು ಹೆಚ್ಚಿಸುತ್ತವೆ. ಯುವಕರು ದೃಶ್ಯ ಮಾಧ್ಯಮಗಳು, ವಿದ್ಯುನ್ಮಾನ ಮಾಧ್ಯಮಗಳಿಗೆ ಅಂಟಿಕೊಂಡು ಪುಸ್ತಕಗಳಿಂದ ವಿಮುಖರಾಗುತ್ತಿದ್ದಾರೆ. ಇದು ಅವರ ವ್ಯಕ್ತಿತ್ವ ಹನನಕ್ಕೆ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

“ಹಳೆಯ ಅಂಗಿ ತೊಡು, ಹೊಸ ಪುಸ್ತಕ ಕೊಳ್ಳು’ ಎನ್ನುವ ಮಾತಿನಂತೆ ಹೊಸ ಹೊಸ ಪುಸ್ತಕಗಳನ್ನು ಓದುವುದನ್ನು ಮೈಗೂಡಿಸಿಕೊಂಡು ಕವಿಗಳ, ಲೇಖಕರ ಅಂತರಂಗವನ್ನು ಭೇದಿಸಬೇಕು. ಪುಸ್ತಕಗಳ ಓದಿನಿಂದ ಅಧ್ಯಾಪಕರೂ ವಿಮುಖರಾಗುತ್ತಿರುವುದು ದುರ್ದೈವ. ವಿರಾಮ ಚಿಹ್ನೆಗಳನ್ನು ಎಲ್ಲಿ, ಯಾವಾಗ ಬಳಸಬೇಕೆಂಬುದರ ಪರಿಜ್ಞಾನವೇ ಕಡಿಮೆಯಾಗುತ್ತಿದೆ ಎಂದರು.

ಕಮ್ಮಟದ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ಹಳಗನ್ನಡಕ್ಕೆ ಹಿಡಿದಿರುವ ಗ್ರಹಣವನ್ನು ಮುಕ್ತಗೊಳಿಸಬೇಕಿದೆ. ಹಳಗನ್ನಡ ಕಬ್ಬಿಣದ ಕಡಲೆಯೆಂದು ಯುವಕರಲ್ಲಿ ಬಿಂಬಿಸಲಾಗಿದೆ. ಆದರೆ ಸ್ವಲ್ಪ ಮನಸ್ಸು ಕೊಟ್ಟು ಓದಿದರೆ ಅದು ಸುಲಿದ ಬಾಳೆಹಣ್ಣಾಗುವುದು. ಹಳಗನ್ನಡವನ್ನು ಮುನ್ನಲೆಗೆ ತರಬೇಕು ಎನ್ನುವ ಕಾರಣದಿಂದ ನಾನು 30-40 ಹಳಗನ್ನಡದ ನಾಟಕಗಳನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದೇನೆ. ಆದರೆ ಅದಕ್ಕೆ ಸಿಗಬೇಕಾದ ಸಹಕಾರ ಸಿಗಲಿಲ್ಲ ಎಂದು ವಿಷಾದಿಸಿದರು.

Advertisement

ಇಂಥ ಕಮ್ಮಟಗಳನ್ನು ಕರ್ನಾಟಕದಾದ್ಯಂತ ಹಮ್ಮಿಕೊಳ್ಳಬೇಕು. ರನ್ನ, ಪೊನ್ನ, ಕುಮಾರವ್ಯಾಸ, ರಾಘವಾಂಕ ಮುಂತಾದ ಕವಿಗಳಿಗೆ ಹಾಗೂ ಲೇಖಕರಿಗೆ ಕನ್ನಡಿಗರು ಋಣಿಯಾಗಿರಬೇಕು. ಓದುಗರಿಲ್ಲದೆ ಕವಿಗಳು, ಲೇಖಕರು ನೊಂದು ಬೆಂದಿದ್ದಾರೆ. ಇಂಥ ದುರಂತಗಳನ್ನು ತಪ್ಪಿಸಿಕೊಳ್ಳಲು ಕಮ್ಮಟಗಳು ಅವಕಾಶ ನೀಡಬೇಕು ಎಂದರು.

ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ. ವಸಂತಕುಮಾರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ಇಂದಿನ ಯುವ ಸಮೂಹವನ್ನು ಹೊಸ ಚಿಂತನೆಗೆ ಹಚ್ಚಿದ್ದಾರೆ. “ಶಿವ’ ಎಂದರೆ ಕಲ್ಯಾಣ ಮತ್ತು ಒಳಿತು ಎಂದರ್ಥ. ಎಲ್ಲರಿಗೂ ಒಳಿತಾಗಲಿ ಎನ್ನುವುದು ಪೂಜ್ಯರ ಹೆಬ್ಬಯಕೆ. ಆ ಕಾರಣದಿಂದ ಇಂಥ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆಯತ್ತಿವೆ. ಈ ಮೂಲಕ ನಮ್ಮಂಥವರಿಗೆ ವೈಚಾರಿಕವಾಗಿ, ನೈತಿಕವಾಗಿ, ಅಧ್ಯಾತ್ಮಿಕವಾಗಿ ಆತ್ಮಬಲವನ್ನು ತುಂಬುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ್‌, ಅದ್ಯಾಪಕ ದ್ಯಾಮೇಶ್‌ ಹಾಜರಿದ್ದರು. ಆರಂಭದಲ್ಲಿ ಶಿವಸಂಚಾರದ ಎಚ್‌.ಎಸ್‌ ನಾಗರಾಜ್‌ ವಚನ ಪ್ರಾರ್ಥನೆ ನಡೆಸಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next