Advertisement

ಕುದುರೆ ವ್ಯಾಪಾರ ತಡೆಯಲು ಬೇಕು ಕಠಿನ ಶಾಸನ

01:31 AM Jul 15, 2019 | sudhir |

ಶಾಸಕರು ರಾಜೀನಾಮೆ ನೀಡಿದ ಪರಿಣಾಮವಾಗಿ ಕರ್ನಾಟಕದ ರಾಜಕೀಯ ಅತಂತ್ರ ಸ್ಥಿತಿಯಲ್ಲಿರುವಾಗಲೇ ಪಕ್ಕದ ಗೋವಾದಲ್ಲಿ ಕಾಂಗ್ರೆಸಿನ ಹತ್ತು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.ಇದಾದ ಬಳಿಕ ಗೋವಾ ಮಂತ್ರಿಮಂಡಲ ಪುನಾರಚನೆಗೊಂಡು ಪಕ್ಷಾಂತರ ಮಾಡಿರುವ ಕೆಲವರಿಗೆ ಸಚಿವ ಹುದ್ದೆಯೂ ಸಿಕ್ಕಿದೆ. ಇದೇ ವೇಳೆ ಅಲ್ಪಮತದ ಬಿಜೆಪಿಗೆ ಸರಕಾರ ರಚಿಸಲು ಸಹಾಯ ಮಾಡಿದ್ದ ಜಿಎಫ್ಪಿಯನ್ನು ಬಿಜೆಪಿ ಬಹುತೇಕ ಒದ್ದು ಹೊರ ಹಾಕಿದೆ. ಕಾಂಗ್ರೆಸ್‌ ಶಾಸಕರ ಪಕ್ಷಾಂತರದಿಂದಾಗಿ ಬಿಜೆಪಿ ಬಲ 17ರಿಂದ 27ಕ್ಕೇರಿ ಸ್ಪಷ್ಟ ಬಹುಮತ ಲಭಿಸಿದ್ದು, ಈಗ ಅದಕ್ಕೆ ಸರಕಾರ ರಚಿಸಲು ಯಾರ ಬೆಂಬಲದ ಅಗತ್ಯವಿಲ್ಲ. ತಾಂತ್ರಿಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಗೋವಾದಲ್ಲಿ ಸಂಭವಿಸಿದ್ದೆಲ್ಲ ಸರಿಯಿರಬಹುದು. ಆದರೆ ನೈತಿಕವಾಗಿ?
ಇತ್ತ ಕರ್ನಾಟಕಕ್ಕೆ ಬರುವುದಾದರೆ ಕಾಂಗ್ರೆಸ್‌ನ ಹತ್ತು ಮತ್ತು ಜೆಡಿಎಸ್‌ನ ಮೂವರು ರಾಜೀನಾಮೆ ನೀಡಿದ್ದಾರೆ. ಈ 13 ಶಾಸಕರಿಗೆ ರಾಜೀನಾಮೆ ನೀಡುವಾಗ ತಮ್ಮನ್ನು ಆರಿಸಿ ಕಳುಹಿಸಿದ ಮತದಾರರಿಗೆ ದ್ರೋಹ ಬಗೆಯುತ್ತಿದ್ದೇವೆ ಎಂಬ ಭಾವನೆ ಲವಲೇಷವೂ ಕಾಡಲಿಲ್ಲವೆ?ಎಲ್ಲರೂ ರಾಜೀನಾಮೆ ಬಿಸಾಕಿ ಮುಂಬಯಿ ವಿಮಾನ ಏರಿದರು. ರಾಜೀನಾಮೆ ಬಳಿಕ ನಡೆಯುತ್ತಿರುವ ರಾಜಕೀಯ ಪ್ರಹಸನಗಳನ್ನು ಇಡೀ ದೇಶ ಹೇವರಿಕೆಯಿಂದ ನೋಡುತ್ತಿದೆ. ಇದ್ಯಾವುದರ ಪರಿವೆ ಇಲ್ಲದೆ ಎಲ್ಲಾ ಮೂರು ಪಕ್ಷಗಳ ನಾಯಕರು ಹೇಗಾದರೂ ಸರಿ ಶಾಸಕರನ್ನು ಹಿಡಿದಿಟ್ಟುಕೊಳ್ಳಬೇಕೆಂಬ ಉದ್ದೇಶದಿಂದ ನಾನಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದರಲ್ಲಿ ಹಣದ ಪಾತ್ರ ಇಲ್ಲ ಎಂದರೆ ನಂಬುವಷ್ಟು ಮುಗ್ಧರಲ್ಲ ಜನರು.
ಇನ್ನು ಪಶ್ಚಿಮ ಬಂಗಾಳದಲ್ಲೂ 100ಕ್ಕೂ ಮಿಕ್ಕಿದ ಶಾಸಕರು ಬಿಜೆಪಿಗೆ ಹಾರಲು ತಯಾರಾಗಿದ್ದಾರೆಂದು ವರದಿ. ಇತ್ತೀಚೆಗಷ್ಟೆ ಮೂವರು ಶಾಸಕರು ಹಾಗೂ 50 ಕೌನ್ಸಿಲರ್‌ಗಳು ಬಿಜೆಪಿ ಸೇರಿದ್ದರು. ಕೆಲ ಸಮಯದ ಹಿಂದೆ ತೆಲುಗು ದೇಶಂ ಪಕ್ಷದ ನಾಲ್ವರು ರಾಜ್ಯಸಭಾ ಸದಸ್ಯರು ಸಾಮೂಹಿಕವಾಗಿ ಬಿಜೆಪಿ ಸೇರ್ಪಡೆಯಾಗಿರುವ ಘಟನೆ ಇನ್ನೂ ಹಸಿರಾಗಿದೆ. ಹೀಗೆ ಬಿಜೆಪಿ ಎಲ್ಲ ಪಕ್ಷಗಳಿಂದ ಶಾಸಕರನ್ನು, ಸಂಸದರನ್ನು, ಪದಾಧಿಕಾರಿಗಳನ್ನು ಮುಕ್ತವಾಗಿ ಬರಮಾಡಿಕೊಳ್ಳುತ್ತಿದೆ. ಇದಕ್ಕೆ ಯಾವೆಲ್ಲ ವಿಧಾನಗಳನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದು ರಹಸ್ಯವೇನಲ್ಲ.
ಚುನಾಯಿತ ಜನಪ್ರತಿನಿಧಿಗಳ ಪಕ್ಷಾಂತರವನ್ನು ತಡೆಯಲು ನಮ್ಮಲ್ಲೊಂದು ಕಾಯಿದೆ ಇದೆ. ಆದರೆ ಅದು ಈಗ ಹಲ್ಲಿಲ್ಲದ ಹಾವಿನಂತಾಗಿದೆ. ಪಕ್ಷಾಂತರ ನಿಷೇಧ ಎಂಬ ಈ ಕಾಯಿದೆ ಒಬ್ಬೊಬ್ಬರೇ ಪಕ್ಷಾಂತರ ಮಾಡುವುದನ್ನು ತಡೆಯುತ್ತದೆ. ಸಾಮೂಹಿಕವಾಗಿ ಪಕ್ಷಾಂತರ ಮಾಡುವರಿಗೆ ಈ ಕಾಯಿದೆ ಅನ್ವಯವಾಗುವುದಿಲ್ಲ. ಸಂಸದ ಅಥವಾ ಶಾಸಕ ಪಕ್ಷದ ಸಚೇತಕಾಜ್ಞೆ ಉಲ್ಲಂ ಸಿದರೆ ಅವರನ್ನು ಅನರ್ಹಗೊಳಿಸಬಹುದು ಎನ್ನುತ್ತದೆ ಈ ಕಾಯಿದೆ. ಆದರೆ ಮೂರನೇ ಎರಡರಷ್ಟು ಸಂಸದರು ಅಥವಾ ಶಾಸಕರು ಪಕ್ಷಾಂತರ ಮಾಡಿದರೆ ಅದನ್ನು ಪಕ್ಷ ವಿಭಜನೆ ಎಂದು ಪರಿಗಣಿಸಲಾಗುವುದು. ಅವರಿಗೆ ಪಕ್ಷಾಂತರ ನಿಷೇಧ ಕಾಯಿದೆ ಅನ್ವಯವಾಗುವುದಿಲ್ಲ. ಅವರು ಪ್ರತ್ಯೇಕ ಗುಂಪು ರಚಿಸಿಕೊಳ್ಳಬಹುದು ಇಲ್ಲವೇ ಇನ್ನೊಂದು ಪಕ್ಷದಲ್ಲಿ ವಿಲಯನ ಹೊಂದಬಹುದು. ಇದರಿಂದಾಗಿ ದೊಡ್ಡ ಮೊತ್ತದ ಹಣ ಇರುವ ಪಕ್ಷ ಯಾವುದೇ ಚುನಾಯಿತ ಸರಕಾರವನ್ನು ಪತನಗೊಳಿಸಿ ತನ್ನದೇ ಸರಕಾರವನ್ನು ಸ್ಥಾಪಿಸಬಹುದು ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಈ ವ್ಯವಸ್ಥೆಯಲ್ಲಿ ಶಾಸಕರು ಅಕ್ಷರಶಃ ಬಿಕರಿಗಿರುವ ಸರಕುಗಳಂತಾಗಿದ್ದಾರೆ. ಯಾರು ಹೆಚ್ಚು ಬೆಲೆ ಕೊಡುತ್ತಾರೋ ಅಲ್ಲಿಗೆ ಹೋಗುತ್ತಾರೆ. ಇಂಥ ಅನೈತಿಕ ರಾಜಕಾರಣದಿಂದ ಶೋಷಣೆಗೊಳಗಾಗಿರುವುದು ಮಾತ್ರ ಪ್ರಜಾತಂತ್ರ.
ಈಗಿರುವ ಕಾಯಿದೆ ಪ್ರಜಾತಂತ್ರದ ಈ ಮಾದರಿಯ ಶೋಷಣೆಯನ್ನು ತಡೆಯಲು ಸಂಪೂರ್ಣ ವಿಫ‌ಲಗೊಂಡಿರುವುದರಿಂದ ಇನ್ನಷ್ಟು ಕಠಿನ ಶಾಸನವನ್ನು ತರುವ ಅಗತ್ಯವಿದೆ. ಜನಾದೇಶಕ್ಕೆ ದ್ರೋಹ ಬಗೆಯುವವರು ಅದಕ್ಕೆ ತಕ್ಕ ಬೆಲೆ ತೆರುವಂತಾಗಬೇಕು. ಪಕ್ಷಾಂತರದ ಸಂದರ್ಭದಲ್ಲಿ ಅವರನ್ನು ಆರಿಸಿ ಕಳುಹಿಸಿದ ಮತದಾರರಿಗೂ ಇದನ್ನು ಪ್ರಶ್ನಿಸುವ ಇಲ್ಲವೇ ತಡೆಯುವ ಹಕ್ಕು ದೊರೆಯಬೇಕು. ಆರಿಸಿ ಕಳುಹಿಸಿದವರಿಗೆ ವಾಪಾಸು ಕರೆಸುವ ಹಕ್ಕು ಕೂಡಾ ಇರಬೇಕೆಂಬ ಬೇಡಿಕೆಯನ್ನು ಪರಿಶೀಲಿಸಲು ಇದು ಸಕಾಲ. ರಾಜಕೀಯದ ಕುದುರೆ ವ್ಯಾಪಾರ ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ಪ್ರಜಾತಂತ್ರದ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next