Advertisement

ಪಿಡಿಒಗಳ ವಿರುದ್ಧ ಸಿಇಒ ಆಕ್ರೋಶ

10:10 AM Aug 18, 2019 | Naveen |

ಹೊನ್ನಾಳಿ: ಪಿಡಿಒಗಳು ಸಭೆಗೆ ಬರುವ ಮುನ್ನ ಎಲ್ಲ ಮಾಹಿತಿಯನ್ನು ತೆಗೆದುಕೊಂಡು ಬರಬೇಕು. ಹಾಗೆಯೇ ಸಭೆಗೆ ಬಂದರೆ ಮಾಹಿತಿ ನೀಡುವುದಾದರೂ ಹೇಗೆ ಎಂದು ಜಿಪಂ ಸಿಇಒ ಬಸವರಾಜೇಂದ್ರ ಪಿಡಿಒಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಶನಿವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಅನೇಕರು ಪದವಿ, ಸ್ನಾತಕೋತ್ತರ ಪದವಿ ಪಡೆದು ಪಿಡಿಒಗಳಾಗಿ ನೇಮಕವಾಗಿದ್ದೀರಿ. ಸಭೆಗೆ ಬರುವ ಮುನ್ನ ಎಲ್ಲಾ ಮಾಹಿತಿಯನ್ನು ತೆಗೆದುಕೊಂಡು ಬರುವಷ್ಟು ತಿಳಿವಳಿಕೆ ನಿಮಗಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಶೌಚಾಲಯ ನಿರ್ಮಾಣ, ವಸತಿ ಯೋಜನೆಯಡಿ ಮನೆಗಳ ನಿರ್ಮಾಣ, ನರೇಗಾ ಸೇರಿದಂತೆ ಇತರ ಮಾಹಿತಿ ಕೇಳಿದರೆ ಮಾಡುತ್ತೇವೆ ಸಾರ್‌, ನಾಳೆ ಮಾಡುತ್ತೇವೆ ಎಂದು ಉತ್ತರ ಕೊಡುತ್ತೀರಿ. ಈಗ ಮಾಡಿರುವ ಗುರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಮರ್ಪಕವಾಗಿ ಪಿಡಿಒಗಳು ಸಭೆಗೆ ನೀಡುತ್ತಿಲ್ಲ. ಇದು ಹೀಗೆಯೇ ಮುಂದುವರಿದರೆ ಪಿಡಿಒಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗುತ್ತದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕ್ರಿಯಾ ಯೋಜನೆ ತಯಾರು ಮಾಡಿಕೊಂಡು ಪ್ರಗತಿ ಪರಿಶೀಲನಾ ಸಭೆಗೆ ಹಾಜರಾಗಬೇಕು ಕೈ ಬೀಸಿಕೊಂಡು ಬಂದು ಇಲ್ಲಿ ಕುಳಿತರೆ ಏನು ಪ್ರಯೋಜನ ಎಂದ ಅವರು, ಮಂತ್ರಿಗಳು, ಮುಖ್ಯಮಂತ್ರಿಗಳ ಪರಿಶೀಲನಾ ಸಭೆ ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡಾಗ ಸಭೆಯ ಹಿಂದಿನ ದಿನ ರಾತ್ರಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ನಾವುಗಳು ತುಂಬಾ ಅಲರ್ಟ್‌ ಇರುತೇವೆ. ಒಂದೊಂದು ಬಾರಿ ಊಟ ಮಾಡಿರುವುದಿಲ್ಲ. ತಳ ಮಟ್ಟದಲ್ಲಿ ನೀವುಗಳು ಉತ್ತಮ ಕೆಲಸ ಮಾಡಿದರೆ ಸಂಪೂರ್ಣ ಮಾಹಿತಿ ನಮಗೆ ದೊರಕುತ್ತದೆ ಎಂದು ಹೇಳಿದರು. ನಾವಿರುವುದು ಜನ ಸಾಮಾನ್ಯರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಜವಾದ ಫಲಾನುಭವಿಗಳಿಗೆ ಸೌಲತ್ತುಗಳ ಸಿಗುವಂತೆ ಮಾಡಬೇಕು ಎಂದರು. ವಸತಿ ಯೋಜನೆಯಲ್ಲಿ ಕೇವಲ ಶೇ.12 ರಷ್ಟು ಕಾರ್ಯಗತವಾಗಿದೆ ಎಂದು ತಿಳಿದು ಬಂದಿದೆ. ಇದು ಅಕ್ಷರಶಃ ದುರದೃಷ್ಟಕರ ಸರ್ಕಾರದಿಂದ ಕಾಲಕಾಲಕ್ಕೆ ಅನುದಾನ ಬರುತ್ತದೆ. ಕಾಮಗಾರಿಗಳು ನಡೆಯದೇ ಹೋದಲ್ಲಿ ಅನುದಾನ ಹಿಂದಕ್ಕೆ ಹೋಗುತ್ತದೆ. ಇದರಿಂದ ಬಡ ಬಗ್ಗರಿಗೆ ಅನ್ಯಾಯವಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ತಾಪಂ ಉಪಾಧ್ಯಕ್ಷ ಎಸ್‌.ಪಿ.ರವಿಕುಮಾರ ಮಾತನಾಡಿ, ನ್ಯಾಮತಿ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಮೋಟರ್‌ ಕೆಟ್ಟು 15 ದಿನಗಳು ಗತಿಸಿದರೂ ದುರಸ್ತಿ ಮಾಡಿಸಿರುವುದಿಲ್ಲ. ಪಟ್ಟಣಕ್ಕೆ ನೀರು ಸರಬರಾಜು ಮಾಡಿರುವುದಿಲ್ಲ. ಸೂಕ್ತ ಕ್ರಮ ತೆಗೆದುಕೊಳ್ಳಲು ಸಿಇಒ ಅವರಿಗೆ ಹೇಳಿದರು.

ಸಿಒಇ ಪಿಡಿಒಗೆ ತರಾಟೆ ತೆಗೆದುಕೊಂಡು ತಕ್ಷಣ ಮೋಟರ್‌ ದುರಸ್ತಿ ಮಾಡಿಸಿ ನೀರು ಸರಬರಾಜು ಮಾಡಲು ಆದೇಶಿಸಿದರು. ಇದೇ ಸಂದರ್ಭದಲ್ಲಿ ಸಭೆಗೆ ಆಗಮಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ಮಳೆಯಿಂದ ಹಾನಿಗೊಳಗಾದ ಮನೆಗಳನ್ನು ಸಮರ್ಪಕವಾಗಿ ಪರಿಶೀಲಿಸಿ ಪರಿಹಾರ ನೀಡಬೇಕಾಗಿದೆ. ಮಳೆಯಿಂದ ನೆನೆದ ಮನೆ ಸಂಪೂರ್ಣ ಕುಸಿದಿದ್ದರೂ ಗ್ರಾಮ ಲೆಕ್ಕಿಗರೂ ಸರಿಯಾಗಿ ಪರಿಶೀಲಿಸದೆ ಬಡವರಿಗೆ ರೂ.4, 5 ಸಾವಿರ ಚೆಕ್‌ಗಳನ್ನು ಬರೆದು ಕೈ ತೊಳೆದುಕೊಂಡಿದ್ದಾರೆ. ಇದು ಸಲ್ಲದು ಎಂದು ಹೇಳಿದರು.

Advertisement

ಚೀಲೂರು ಗ್ರಾಪಂ ಪಿಡಿಒ ವೇದಾವತಿ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ ಮನೆ ಬಿದ್ದವರಿಗೆ ತಾರತಮ್ಯ ಮಾಡಿದ್ದಾರೆ ಪೂರ್ಣ ಬಿದ್ದವರಿಗೂ ರೂ.10 ಸಾವಿರ ಭಾಗಶಃ ಮನೆ ಬಿದ್ದವರಿಗೂ ಅಷ್ಟೇ ಹಣದ ಚೆಕ್‌ ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅಂತಹ ಎಲ್ಲಾ ಪ್ರಕರಣಗಳನ್ನು ನನ್ನ ಗಮನಕ್ಕೆ ತರಬೇಕು ಎಂದರು. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖಾ ಪ್ರಗತಿಯನ್ನು ಸಭೆಯ ಗಮನಕ್ಕೆ ತಂದರು. ಎಪಿಒಗಳಾದ ಆನಂದ್‌, ಶಶಿಧರ್‌, ಮುಖ್ಯ ಯೋಜನಾಧಿಕಾರಿ ಎನ್‌.ಲೋಕೇಶ್‌, ಹೊನ್ನಾಳಿ ತಾಲೂಕು ಇಒ ಗಂಗಾಧರಮೂರ್ತಿ, ನ್ಯಾಮತಿ ತಾಲೂಕು ಇಒ ಪ್ರೇಮ್‌ಕುಮಾರ್‌, ಯೋಜನಾ ಮೌಲ್ಯಮಾಪನಾಧಿಕಾರಿ ಶಾರದದೊಡ್ಡಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next