Advertisement

ಬಾಬಾ ದತ್ತುಪುತ್ರಿ ಹನಿಪ್ರೀತ್ ಕೊನೆಗೂ ಹರ್ಯಾಣ ಪೊಲೀಸರ ಬಲೆಗೆ

04:11 PM Oct 03, 2017 | Sharanya Alva |

ಪಂಚಕುಲಾ(ಹರ್ಯಾಣ): ಜೈಲುಶಿಕ್ಷೆ ಅನುಭವಿಸುತ್ತಿರುವ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ನ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಳನ್ನು ಕೊನೆಗೂ ಹರ್ಯಾಣ ಪೊಲೀಸರು ಮಂಗಳವಾರ ಚಂಡೀಗಢ್ ರಾಷ್ಟ್ರೀಯ ಹೆದ್ದಾರಿ ಸಮೀಪ ಬಂಧಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

ಕಳೆದ ಕೆಲವು ತಿಂಗಳಿನಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ಹನಿಪ್ರೀತ್ ಸಿಂಗ್ ಇಂದು ಬೆಳಗ್ಗೆ ಹಲವು ಟಿವಿ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದಳು. ಸಿಂಗ್ ದತ್ತು ಪುತ್ರಿ ಹನಿಪ್ರೀತ್ ವಿರುದ್ಧ ದೇಶದ್ರೋಹ ಹಾಗೂ ರೇಪ್ ಪ್ರಕರಣದಲ್ಲಿ ಜೈಲುಶಿಕ್ಷೆಗೆ ಗುರಿಯಾಗಿದ್ದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಬಾಬಾ ತಪ್ಪಿಸಿಕೊಂಡು ಹೋಗಲು ನೆರವು ನೀಡಲು ಯತ್ನಿಸಿದ್ದ ಆರೋಪ ದಾಖಲಾಗಿದೆ.

ಅಲ್ಲದೇ ಆಗಸ್ಟ್ 25ರಂದು ಅತ್ಯಾಚಾರ ಪ್ರಕರಣ ಆರೋಪದಡಿ ರಾಮ್ ರಹೀಮ್ ಸಿಂಗ್ ದೋಷಿ ಎಂದು ಕೋರ್ಟ್ ತೀರ್ಪು ಪ್ರಕಟಿಸಿದಾಗ ಡೇರಾ ಬೆಂಬಲಿಗರನ್ನು ಛೂ ಬಿಟ್ಟು ಹಿಂಸಾಚಾರ ಭುಗಿಲೇಳುವಂತೆ ಮಾಡಿರುವ ಆರೋಪವನ್ನು ಕೂಡಾ ಹನಿಪ್ರೀತ್ ಎದುರಿಸುತ್ತಿದ್ದಾಳೆ.

ಹನಿಪ್ರೀತ್ ನಮ್ಮ ವಶದಲ್ಲಿರುವುದಾಗಿ ಪಂಚಕುಲಾ ಡಿಸಿಪಿ ಮನೋಜ್ ಸಿಂಗ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.  ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಕಳೆದ ವಾರ ಹನಿಪ್ರೀತ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next