Advertisement

ಕೋವಿಡ್ ಸೋಂಕು ಹಿನ್ನೆಲೆ- ಪರಪ್ಪನ ಅಗ್ರಹಾರಕ್ಕೆ ಗೃಹ ಸಚಿವ ಬಸವರಾಜ ಭೇಟಿ

09:10 PM Apr 29, 2021 | Team Udayavani |

ಬೆಂಗಳೂರು : ರಾಜ್ಯದ ಕಾರಾಗೃಹಗಳಲ್ಲಿ ಕೋವಿಡ್ ಸೋಂಕು ಹರಡದಂತೆ ಕಟ್ಟೆಚ್ಚರ ವಹಿಸುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

Advertisement

ರಾಜ್ಯದ ಕಾರಾಗೃಹಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆ ಗುರುವಾರ  ಸಂಜೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ ಸಚಿವರು, ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳು ಕುರಿತು ಪರಿಶೀಲನೆ ನಡೆಸಿದರು.

ಕಾರಾಗೃಹಕ್ಕೆ ಭೇಟಿ ನೀಡಿದ ಬಳಿಕ ಕಾರಾಗೃಹದ ಆಸ್ಪತ್ರೆಗೆ ಭೇಟಿ ನೀಡಿದರು‌.  100 ಹಾಸಿಗೆಯ ಆಸ್ಪತ್ರೆಯಲ್ಲಿನ ವೈದ್ಯಕೀಯ ವ್ಯವಸ್ಥೆಗಳನ್ನು ಅವಲೋಕಿಸಿದರು. ಕಾರಾಗೃಹದ ವೈದ್ಯಾಧಿಕಾರಿಗಳಿಂದ ಅಲ್ಲಿನ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆಗಳ ಕುರಿತು ಮಾಹಿತಿ ಪಡೆದರು. ಸೋಂಕು  ಕಾರಾಗೃಹದಲ್ಲಿನ ಇತರ ಕೈದಿಗಳಿಗೆ ಹರಡದಂತೆ ಕಟ್ಟೆಚ್ಚರವಹಿಸುವಂತೆ ವೈದ್ಯಾಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ನಂತರ ಕಾರಾಗೃಹದಲ್ಲಿನ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು.  ಈ ಸಂದರ್ಭದಲ್ಲಿ ಬಾನೂಲಿ ಮೂಲಕ ಕಾರಾಗೃಹದ ಎಲ್ಲ ಕೈದಿಗಳನ್ನು ಉದ್ದೇಶಿಸಿ ಮಾತನಾಡಿದರು.  ಕೋವಿಡ್ ಎರಡನೆಯ ಅಲೆಯ ವಿರುದ್ಧ ನಮ್ಮ ಹೋರಾಟ ಸಾಗುತ್ತಿದೆ.  ಈ ಸೋಂಕು ತಗುಲದಂತೆ ಮುನ್ನೆಚ್ವರಿಕೆ ವಹಿಸಿ ಎಂದು ಅವರು ಕೈದಿಗಳಿಗೆ  ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೈದಿಗಳ ಜತೆ ಸಮಾಲೋಚನೆ ನಡೆಸಿದರು.  ಅವರ ಅಹವಾಲುಗಳನ್ನು ಆಲಿಸಿದರು. ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುತ್ತಿರುವ ಕುರಿತು ಕೈದಿಗಳಿಗೆ ಸಚಿವರು ಮಾಹಿತಿ ನೀಡಿದರು.  ಕೈದಿಗಳ ಅಹವಾಲುಗಳನ್ನು ಆಲಿಸಿ ಅವುಗಳನ್ನು ಬಗೆಹರಿಸುವ ಸಂಬಂಧ ಮಂಡಳಿಯೊಂದನ್ನು ರಚಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

Advertisement

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು,  ರಾಜ್ಯದಲ್ಲಿ ಒಟ್ಟು 49 ಕಾರಾಗೃಹ ಗಳಿವೆ.  ಅವುಗಳಲ್ಲಿ 240 ಕೈದಿಗಳಿಗೆ ಕೋವಿಡ್ ಸೋಂಕು ತಗುಲಿದೆ.  ಕೋವಿಡ್ ರೋಗ ಲಕ್ಷಣಗಳು ಕಂಡುಬಂದ ಕೈದಿಗಳನ್ನು ತಕ್ಷಣವೇ ತಪಾಸಣೆಗಳ ಪಡಿಸಲಾಗುತ್ತಿದೆ. ಸೋಂಕು ತಗುಲಿರುವ ಕೈದಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೋವಿಡ್ ನಿಂದ ಗುಣಮುಖರಾದ ನಂತರವೇ ಅವರನ್ನು ಕೇಂದ್ರ ಕಾರಾಗ್ರಹಕ್ಕೆ ಕರೆಸಿಕೊಡಲಾಗುತ್ತಿದೆ.  ಹೊಸ ಕೈದಿಗಳು ಕಾರಾಗ್ರಹಕ್ಕೆ ಬಂದರೆ ಅವರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತಿದೆ. ನಂತರ ಅವರನ್ನು ಆರ್ ಟಿ ಪಿ ಸಿ ಆರ್ ಟೆಸ್ಟಿಗೆ ಒಳಪಡಿಸಲಾಗುತ್ತದೆ.  ಟೆಸ್ಟ್ನಲ್ಲಿ ನೆಗೆಟಿವ್ ವರದಿ ಬಂದ ನಂತರವಷ್ಟೇ ಅವರಿಗೆ ಕಾರಾಗೃಹ ದೊಳಗೆ  ಪ್ರವೇಶ ಅವಕಾಶ ಕಲ್ಪಿಸಲಾಗುತ್ತಿದೆ. ಈ ರೀತಿ ಎಲ್ಲ ಕಾರಾಗೃಹಗಳಲ್ಲಿ ಕೋವಿಡ್ ವಿಚಾರವಾಗಿ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ ಎಂದು ಬಸವರಾಜ ಬೊಮ್ಮಾಯಿ ವಿವರಿಸಿದರು.

ಕಾರಾಗೃಹ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೋವಿಡ್ ವಿರುದ್ಧ ಹೋರಾಟಕ್ಕೆ 5 ಕೋಟಿ : ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಕೋವಿಡ್  ಹೋರಾಟಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣ ಮತ್ತು ಸೋಂಕು ನಿವಾರಕ ಔಷಧೋಪಚಾರಗಳಿಗಾಗಿ  5 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಿದ್ದಪಡಿಸಲಾಗುತ್ತಿದೆ. ಎರಡು ಕೋಟಿ ರೂಪಾಯಿ ಮೊತ್ತದ ಯೋಜನೆಯನ್ನು ಐದು ಕೋಟಿಗೆ ಹೆಚ್ಚಿಸಲಾಗಿದೆ.  ಎಸ್ ಡಿ ಆರ್ ಎಫ್ ನಿಧಿ ಅಡಿ ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವ ಬಸವರಾಜ್ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next